Friday, July 10, 2020

ಮತ್ತೊಂದು ಎನ್‌ಕೌಂಟರ್: ಕುಖ್ಯಾತ ರೌಡಿ ಪನ್ನಾ ಸಾವು

ಮತ್ತೊಂದು ಎನ್ಕೌಂಟರ್: ಕುಖ್ಯಾತ ರೌಡಿ ಪನ್ನಾ ಸಾವು

ಲಕ್ನೋ: ಉತ್ತರ ಪ್ರದೇಶದ ಬಹ್ರೆಚ್ ಜಿಲ್ಲೆಯ ಅಹಿರನ್ಪೂರ್ವ ಗ್ರಾಮದಲ್ಲಿ ವಿಶೇಷ ಪೊಲೀಸ್ ಪಡೆ 2020 ಜುಲೈ 09ರ ಗುರುವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಕುಖ್ಯಾತ ರೌಡಿ ಪನ್ನಾ ಯಾದವ್ ಸಾವನ್ನಪ್ಪಿದ್ದಾನೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್ ಪುರ ನಿವಾಸಿ ಪನ್ನಾ ಯಾದವ್ ಕೊಲೆ, ದೊಂಬಿ ಮತ್ತು ಹಫ್ತಾ ವಸೂಲಿ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ನಾಲ್ಕನೇ ಪೊಲೀಸ್ ಎನ್ಕೌಂಟರ್ ಇದಾಗಿದೆ.

ಗ್ಯಾಂಗ್ಸ್ಟರ್ ವಿಕಾಸ್ ದುಬೆ ಉತ್ತರ ಪ್ರದೇಶ ಪೊಲೀಸರ ಗುಂಡಿಗೆ ಶುಕ್ರವಾರ ಬೆಳಿಗ್ಗೆ ಬಲಿಯಾಗಿದ್ದಾನೆ. ದುಬೆಯ ಇಬ್ಬರು ಸಹಚರರನ್ನು ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಗುರುವಾರ ಹತ್ಯೆಯಾಗಿದ್ದರು.

ಪನ್ನಾ ಯಾದವ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೋರಖ್ ಪುರ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ, ಗುರುವಾರ ರಾತ್ರಿ ಬಹ್ರೆಚ್ ಜಿಲ್ಲೆಯ ಅಹಿರನ್ಪೂರ್ವ ಗ್ರಾಮದಲ್ಲಿ ಕುಖ್ಯಾತ ರೌಡಿ ಪನ್ನಾ ಯಾದವ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪನ್ನಾ ಯಾದವ್ ಸಾವಿಗೀಡಾಗಿದ್ದಾನೆ ಎಂದು ತಿಳಿಸಿದರು.

No comments:

Advertisement