My Blog List

Thursday, November 19, 2020

ಭ್ರಷ್ಟಾಚಾರದ ಆರೋಪ: ಬಿಹಾರ ಶಿಕ್ಷಣ ಸಚಿವ ಮೇವಾಲಾಲ್ ಚೌಧರಿ ರಾಜೀನಾಮೆ

ಬಿಹಾರದ ಕಳಂಕಿತ ಶಿಕ್ಷಣ ಸಚಿವ ಮೇವಾಲಾಲ್ ಚೌಧರಿ ರಾಜೀನಾಮೆ

ಪಾಟ್ನಾ: ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಬಿಹಾರ ಶಿಕ್ಷಣ ಸಚಿವ ಮೇವಾಲಾಲ್ ಚೌಧರಿ ಅವರು ಮುಖ್ಯಮಂತ್ರಿ ನಿತೀ ಕುಮಾರ್ ಅವರ ಸಂಪುಟ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಗಳ ನಂತರ 2020 ನವೆಂಬರ್ 19ರ  ಗುರುವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.

ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಮಂಗಳವಾರ ಶಿಕ್ಷಣ ಖಾತೆಯನ್ನು ಪಡೆದ ಚೌಧರಿ ಅವರು  ಮಧ್ಯಾಹ್ನ ಗಂಟೆಗೆ ಅಧಿಕಾರ ವಹಿಸಿಕೊಂಡ ಕೂಡಲೇ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ಎಂದು ಸುದ್ದಿ  ಮೂಲಗಳು ತಿಳಿಸಿವೆ. ರಾಜೀನಾಮೆಗೆ ಮುನ್ನ ಚೌಧರಿ ಮುಖ್ಯಮಂತ್ರಿ ನಿತೀಶ ಕುಮಾರ್ ಜೊತೆಗೆ ಮಾತನಾಡಿದ್ದರು.

ಮುಖ್ಯಮಂತ್ರಿ ನಿತೀಶ ಕುಮಾರ್ ನೇತೃತ್ವದ ಜೆಡಿಯುಗೆ ಸೇರಿದ ಚೌಧರಿ ಅವರನ್ನು, ಭಾಗಲ್ಪುರದ ಬಿಹಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರು ಮತ್ತು ತಂತ್ರಜ್ಞರನ್ನು ನೇಮಕ ಮಾಡುವಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಐದು ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ಆರೋಪಿ ಎಂಬುದಾಗಿ ಹೆಸರಿಸಲಾಗಿತ್ತು. ಆಗ ಚೌಧರಿಯವರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.

"ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದಾಗ ಅಥವಾ ನ್ಯಾಯಾಲಯವು ಆದೇಶ ನೀಡಿದಾಗ ಮಾತ್ರ ಆರೋಪ ಸಾಬೀತಾಗುತ್ತದೆ ಮತ್ತು ನನ್ನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಇವೆರಡರಲ್ಲಿ ಯಾವುದು ಕೂಡಾ ಇಲ್ಲಎಂದು ಚೌಧರಿ ಅವರು ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ಬುಧವಾರ ವರದಿ ಮಾಡಿತ್ತು.

ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದುದಲ್ಲದೆ, ಇದೇ ವಿಷಯದಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದರೂ ಸಹ ಚೌಧರಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಕ್ಕಾಗಿ ಬಿಹಾರದ ಪ್ರಮುಖ ಪ್ರತಿಪಕ್ಷ ಆರ್ಜೆಡಿ ಮತ್ತು ಅದರ ಮಿತ್ರಪಕ್ಷಗಳು ನಿತೀಶ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದವು.

ಚೌಧರಿ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಮೊದಲ ಬಾರಿಗೆ ಸಚಿವರಾಗಿರುವ ಚೌಧರಿ ಅವರು ಭಾರತೀಯ ದಂಡ ಸಂಹಿತೆಯಡಿ ಮೋಸ ಮತ್ತು ಅಪ್ರಾಮಾಣಿಕತೆ (ಸೆಕ್ಷನ್ ೪೨೦), ಮತ್ತು ಕ್ರಿಮಿನಲ್ ಪಿತೂರಿ (೧೨೦ ಬಿ) ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಆರ್ಜೆಡಿ ನಾಯಕ ತೇಜಸ್ವೀ ಯಾದವ್ ಹೇಳಿದ್ದರು.

ಭಾಗಲ್ಪುg ಜಿಲ್ಲೆಯ ಸಬೋರ್ ಬಿಹಾರ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಅವಧಿಯಲ್ಲಿ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ೬೭ ವರ್ಷದ ಚೌಧರಿ ಅವರನ್ನು ೨೦೧೭ ರಲ್ಲಿ ಜೆಡಿಯುನಿಂದ ಅಮಾನತುಗೊಳಿಸಲಾಗಿತ್ತು.

ಸಹಾಯಕ ಪ್ರಾಧ್ಯಾಪಕರು ಮತ್ತು ಕಿರಿಯ ವಿಜ್ಞಾನಿಗಳ ನೇಮಕದಲ್ಲಿನ ಕೆಲವು ವೈಪರೀತ್ಯಗಳ ಬಗ್ಗೆ ಆಗಿನ ಉಪ ಕುಲಪತಿಯವರು ನೀಡಿದ ವರದಿಯ ಆಧಾರದಲ್ಲಿ ಅವರ ವಿರುದ್ಧ ೨೦೧೭ರ ಫೆಬ್ರುವರಿ ತಿಂಗಳಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಸಂದರ್ಭದಲ್ಲಿ ಮಹಾಮೈತ್ರಿ ಸರ್ಕಾರವಿತ್ತು. ವಿರೋಧ ಪಕ್ಷವಾಗಿದ್ದ ಬಿಜೆಪಿ ಸಮಯದಲ್ಲಿ ಚೌಧರಿ ವಿರುದ್ಧ ಬಲವಾಗಿ ದನಿ ಎತ್ತಿತ್ತು.

೨೦೧೫ ಬಿಹಾರ ಚುನಾವಣೆಯಲ್ಲಿ ಜೆಡಿಯು ಟಿಕೆಟ್ನಲ್ಲಿ ಸ್ಪರ್ಧಿಸುವ ಸಲುವಾಗಿ ಚೌಧರಿ ಕೆಲಸ ತ್ಯಜಿಸಿದ್ದರು ಮತ್ತು ಮುಂಗರ್ ಜಿಲ್ಲೆಯ ತಾರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚೌಧರಿ ಅವರು ಪುನರಾಯ್ಕೆಗೊಳ್ಳುವ ಮೂಲಕ ತಮ್ಮ ಸ್ಥಾನ ಉಳಿಸಿಕೊಂಡಿದ್ದರು. ಬಳಿಕ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಶಿಕ್ಷಣ ಸಚಿವರನ್ನಾಗಿ ಮಾಡಲಾಗಿತ್ತು.

೨೦೧೨ ರಲ್ಲಿ ೧೬೧ ಸಹಾಯಕ ಪ್ರಾಧ್ಯಾಪಕರು ಮತ್ತು ಕಿರಿಯ ವಿಜ್ಞಾನಿಗಳ ನೇಮಕದಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ಬೆಳಕು ಚೆಲ್ಲಿತ್ತು.

No comments:

Advertisement