My Blog List

Sunday, December 27, 2020

ಯುಪಿಎ ಅಧ್ಯಕ್ಷರಾಗಲು ಆಸಕ್ತಿ ಇಲ್ಲ: ಪವಾರ್

 ಯುಪಿಎ ಅಧ್ಯಕ್ಷರಾಗಲು ಆಸಕ್ತಿ ಇಲ್ಲ: ಪವಾರ್

ಮುಂಬೈ: ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಅಧ್ಯಕ್ಷರಾಗುವ ಯಾವುದೇ ಯಾವುದೇ ಆಸಕ್ತಿ ತಮಗೆ ಇಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ 2020 ಡಿಸೆಂಬರ್ 27ರ ಭಾನುವಾರ ಸ್ಪಷ್ಟ ಪಡಿಸಿದರು.

ಶರದ್ ಪವಾರ್ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಸ್ಥಾನವನ್ನು ವಹಿಸಿಕೊಳ್ಳಬಹುದು ಎಂಬ ಊಹಾಪೋಹಗಳನ್ನು ಎನ್ಸಿಪಿ ನಾಯಕ ಖಂಡತುಂಡವಾಗಿ ತಳ್ಳಿಹಾಕಿದರು.

ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಕುರಿತು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಒಂದು ದಿನ ಮುಂಚಿತವಾಗಿ ಪವಾರ್ ಅವರು ಸುದ್ದಿ ಸಂಸ್ಥೆ ಒಂದಕ್ಕೆ ವಿಚಾರವನ್ನು ತಿಳಿಸಿದರು.

ಯುಪಿಎ ಅಧ್ಯಕ್ಷರಾಗಲು ನನಗೆ ಸಮಯ ಅಥವಾ ಒಲವು ಇಲ್ಲ. ಅಂತಹ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಪ್ರಶ್ನೆಯೂ ಇಲ್ಲಎಂದು ಪವಾರ್ ಹೇಳಿದರು.

ಸೋನಿಯಾ ಗಾಂಧಿಯಿಂದ ಯುಪಿಎ ಆಡಳಿತವನ್ನು ಪವಾರ್ ವಹಿಸಿಕೊಳ್ಳಬಹುದೆಂಬ ಮಾಧ್ಯಮಗಳ ಊಹಾಪೋಹಗಳನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಹಿಂದೆ ತಳ್ಳಿಹಾಕಿತ್ತು.

"ಅಂತಹ ಯಾವುದೇ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಯುಪಿಎ ಪಾಲುದಾರರಲ್ಲಿ ಯಾವುದೇ ಚರ್ಚೆಯಿಲ್ಲ ಎಂದು ಸ್ಪಷ್ಟಪಡಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಬಯಸಿದೆಎಂದು ಮುಖ್ಯ ವಕ್ತಾರ ಮಹೇಶ್ ತಪಾಸೆ ಹೇಳಿದ್ದರು. "ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ವರದಿಗಳು, ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನದಿಂದ ಗಮನವನ್ನು ಬೇರೆಡೆ ಸೆಳೆಯಲು ಪಟ್ಟಭದ್ರ ಹಿತಾಸಕ್ತಿಗಳು ನಡೆಸಿರುವ ಕಸರತ್ತಿನಂತೆ ಕಾಣುತ್ತಿದೆಎಂದು ಅವರು ಹೇಳಿದರು.

ಆದಾಗ್ಯೂ, ಡಿಸೆಂಬರ್ ೧೨ ರಂದು ಪವಾರ್ ಅವರ ೮೦ ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಮಹಾರಾಷ್ಟ್ರ ಮಿತ್ರ ಪಕ್ಷ ಕಾಂಗ್ರೆಸ್ಸಿನ ಕಾಲೆಳೆದು, ಪಕ್ಷದದರ್ಬಾರ್ ಕೂಟದಿಂದಾಗಿ  ೧೯೯೦ ದಶಕದಲ್ಲಿ ಪ್ರಬಲ ಮರಾಠಾ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲಎಂದು ಹೇಳಿದ್ದರು.

"ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು" ಎಂಬುದಾಗಿ ಶಿವಸೇನೆ ನಾಯಕ ಸಂಜಯ್ ರೌತ್ ಅವರು ನೀಡಿದ ನಿಗೂಢ ಪ್ರತಿಕ್ರಿಯೆಯಿಂದ ಊಹಾಪೋಹಗಳಿಗೆ ನೀರೆರೆದಿತ್ತು.

ಡಿಸೆಂಬರ್ ೧೨ ರಂದು ೮೦ ನೇ ವರ್ಷಕ್ಕೆ ಕಾಲಿಟ್ಟ ಮಾಜಿ ಕೇಂದ್ರ ಸಚಿವರು ದೊಡ್ಡ ರಾಷ್ಟ್ರೀಯ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷಗಳಾದ ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದ್ದವು.

"ರಾಜಕೀಯವು ಅನಿರೀಕ್ಷಿತವಾಗಿದೆ, ಮುಂದೆ ಏನಾಗಲಿದೆ ಎಂಬುದು ನಿಮಗೆ ಎಂದಿಗೂ ತಿಳಿಯುವುದಿಲ್ಲಎಂದು ಶಿವಸೇನಾ ಸಂಸದ ರೌತ್ ಹೇಳಿದ್ದರು.

No comments:

Advertisement