My Blog List

Wednesday, August 17, 2022

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

 ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ;

ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

ಚೆನ್ನೈ: ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಬಲ್ ಟಾಪ್ ಕ್ಯಾನುಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ವಿತರಣೆ ನಡೆಯುತ್ತಿರುವ ಬಗ್ಗೆ 2022 ಆಗಸ್ಟ್‌ 16ರ ಮಂಗಳವಾರ ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್, ಪರಿಣಾಮಕಾರಿ ಪರ್ಯಾಯ ಪ್ಯಾಕೇಜಿಂಗ್ ಪರಿಹಾರಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಪಿಟಿ ಆಶಾ ಅವರನ್ನು ಒಳಗೊಂಡ ಪೀಠವು, ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಇದನ್ನು ಗಮನಿಸಿ, "ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹವಾಗಿರುವ ಕುಡಿಯುವ ನೀರು ಪರಿಸರದ ಯೋಗಕ್ಷೇಮಕ್ಕೆ ಹಾನಿಕರವಷ್ಟೇ ಅಲ್ಲ, ನಮ್ಮ ಆರೋಗ್ಯದ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ" ಎಂದು ಹೇಳಿತು.

ʼಕಳಪೆ ಗುಣಮಟ್ಟವನ್ನು ಹೊಂದಿರುವ ಬಾಟಲಿಗಳಲ್ಲಿ ನೀರನ್ನು ದೀರ್ಘಕಾಲದವರೆಗೆ ಸಂಗ್ರಹಿಸುವುದರಿಂದ ಪ್ಲಾಸ್ಟಿಕ್ ಕಣಗಳು ನೀರಿನೊಂದಿಗೆ ಮಿಶ್ರಣಗೊಂಡು ಉತ್ತಮ ನೀರು ವಿಷಕಾರಿಯಾಗಿ ಪರಿವರ್ತನೆಗೊಳ್ಳುತ್ತದೆʼ ಎಂದು ನ್ಯಾಯಾಲಯವು ಗಮನಿಸಿತು. ಎಲ್ಲ ಸ್ಥಳಗಳಲ್ಲಿ ಬಬಲ್ ಟಾಪ್ ವಾಟರ್ ಕ್ಯಾನ್ ಬಳಕೆ ತಮಿಳುನಾಡಿನಲ್ಲಿ ಸಾಮಾನ್ಯವಾಗಿದೆ, ಇದು ಜೀವಕ್ಕೆ ಹೆಚ್ಚು ಅಪಾಯಕಾರಿಯಾಗಿದೆ ಎಂದೂ ನ್ಯಾಯಾಲಯ ಹೇಳಿತು.

ರಾಜ್ಯದಲ್ಲಿ ಕುಡಿಯುವ ನೀರನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನೀರಿನ ಕ್ಯಾನುಗಳನ್ನು ಹೇಗೆ ಸ್ವಚ್ಛಗೊಳಿಸಲಾಗುತ್ತದೆ ಎಂಬುದರ ಕುರಿತು ವಾಸ್ತವಸ್ಥಿತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ನೀರಿನ ಕ್ಯಾನ್‌ನುಗಬಾಳಿಕೆ ಅವಧಿ, ನೀರಿನ ಕ್ಯಾನುಗಳಲ್ಲಿ ಎಷ್ಟು ದಿನ ನೀರು ಸಂಗ್ರಹಿಸಲಾಗುತ್ತದೆ ಮತ್ತು ಈ ನೀರಿನ ಕ್ಯಾನುಗಳ ನಾಶಕ್ಕೆ ಅನುಸರಿಸುತ್ತಿರುವ ಕಾರ್ಯವಿಧಾನದ ಬಗ್ಗೆಯೂ ನ್ಯಾಯಾಲಯ ವಿಚಾರಿಸಿತು. ಈ ಬಗ್ಗೆ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ ಎಂಬುದನ್ನು ಸೂಚಿಸುವಂತೆಯೂ ನ್ಯಾಯಾಲಯವು ರಾಜ್ಯಕ್ಕೆ ನಿರ್ದೇಶಿಸಿತು.

ಸ್ಯಾಚೆಟ್‌ಗಳ ಬದಲಿಗೆ ಬಾಟಲಿಗಳಲ್ಲಿ ಹಾಲನ್ನು ನೀಡುವ ಕಾರ್ಯಸಾಧ್ಯತೆಯ ಬಗೆಗೂ ನ್ಯಾಯಾಲಯವು ವಿಚಾರಿಸಿತು. ರಾಜ್ಯ ಸರ್ಕಾರದ ಸಹಕಾರಿ ಸಂಸ್ಥೆಯಾದ ಎಎವಿಐಎನ್‌ (AAVIN) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಮೂಲಕ ಬಾಟಲಿಗಳಲ್ಲಿ ಹಾಲು ಖರೀದಿಸಲು ಗ್ರಾಹಕರಿಗೆ ಆಯ್ಕೆಯನ್ನು ನೀಡಬಹುದು ಅಥವಾ ಸ್ಯಾಚೆಟ್‌ಗಳಲ್ಲಿನ ಹಾಲಿನ ಪೂರೈಕೆಯನ್ನು ನಿರ್ಮೂಲನೆ ಮಾಡಲು ಅವಧಿಯನ್ನು ನೀಡಬಹುದು ಎಂದು ನ್ಯಾಯಾಲಯ ಸೂಚಿಸಿತು. ಅಪಾಯಕಾರಿಯಲ್ಲದ ಟೆಟ್ರಾ ಪ್ಯಾಕ್‌ಗಳಲ್ಲಿ ಹಾಲನ್ನು ಮಾರಾಟ ಮಾಡಲು AAVIN ಗೆ ನ್ಯಾಯಾಲಯ ನಿರ್ದೇಶಿಸಿತು.

ಅದೇ ರೀತಿ ಸ್ಯಾಚೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಇತರ ನಿಬಂಧನೆಗಳು ಮತ್ತು ಖಾದ್ಯಗಳನ್ನು ಬದಲಿಗಳಲ್ಲಿ ಪ್ಯಾಕ್ ಮಾಡಬಹುದು ಎಂದು ನ್ಯಾಯಾಲಯ ಸೂಚಿಸಿತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು, ಡಿಎಂಎಸ್ ಕಾಂಪ್ಲೆಕ್ಸ್, ತೆನಾಂಪೇಟೆ, ಅವರನ್ನೂ ಪಕ್ಷವಾಗಿ ಪ್ರಕರಣಕ್ಕೆ ಸೇರ್ಪಡೆ ಮಾಡಿದ ನ್ಯಾಯಾಲಯ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ತಮ್ಮ ಸಲಹೆಗಳನ್ನು ನೀಡುವಂತೆ ಅವರಿಗೆ ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು
ಆಗಸ್ಟ್ 29 ರಂದು ಕೈಗೆತ್ತಿಕೊಳ್ಳುವಂತೆಯೂ ಪೀಠ ನಿರ್ದೇಶಿಸಿತು.

No comments:

Advertisement