My Blog List

Tuesday, April 22, 2008

ಇಂದಿನ ಇತಿಹಾಸ History Today ಏಪ್ರಿಲ್ 22

ಇಂದಿನ ಇತಿಹಾಸ

ಏಪ್ರಿಲ್ 22

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ ಮಹಾಜನ್ (56) ಅವರ ಮೇಲೆ ಒಡಹುಟ್ಟಿದ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗ್ದೆದು ಗುಂಡು ಹಾರಿಸಿದರು. ತೀವ್ರವಾಗಿ ಗಾಯಗೊಂಡ ಪ್ರಮೋದ್ ಮಹಾಜನ್ ಅವರನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಮುಂಬೈಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಬೈಯ ವರ್ಲಿಯ ಪ್ರಮೋದ್ ಮಹಾಜನ್ ಮನೆಯಲ್ಲೇ ಈ ಗುಂಡು ಹಾರಾಟದ ಘಟನೆ ನಡೆಯಿತು.


2007: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸಿ ಗೋ ಹತ್ಯೆಯನ್ನು ದೇಶದಾದ್ಯಂತ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರವೇ ಗೋಹತ್ಯಾ ನಿಷೇದ ಮಸೂದೆ ಜಾರಿಗೊಳಿಸಬೇಕು ಎಂದು ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ಅವರ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.

2007: ಭಾರತ -ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದ ಕ್ಷಿಪಣಿ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದು ಬ್ರಹ್ಮೋಸ್ನ 10ನೇ ಪ್ರಾಯೋಗಿಕ ಪರೀಕ್ಷೆ.

2007: ಕ್ರಿಕೆಟ್ ಜಗತ್ತಿನ ಧ್ರುವತಾರೆ, ದಾಖಲೆಗಳ ವೀರ ವೆಸ್ಟ್ ಇಂಡೀಸ್ ನ ಬ್ರಯನ್ ಲಾರಾ ಬಾರ್ಬಡಾಸ್ ನಲ್ಲಿ ನಡೆದ ಎರಡನೇ ಹಂತದ ಕೊನೆಯ ಪಂದ್ಯದಲ್ಲಿ ತಮ್ಮ ವಿಶ್ವಕಪ್ ನ ಕೊನೆಯ ಪಂದ್ಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಇತಿಶ್ರೀ ಹಾಡಿದರು.

2007: ಬುದ್ಧಿ ಮಾಂದ್ಯ ಮಕ್ಕಳ ಮಧುರಂ ನಾರಾಯಣನ್ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ (81) ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಅವರು ತಮಿಳುನಾಡಿನ ವಾಯುಪಡೆ ಮತ್ತು ಹಿರಿಯರ ಸೇವಾ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಸ್ಥಾಪಿಸಿದ ಮಧುರಂ ನಾರಾಯಣನ್ ಕೇಂದ್ರಕ್ಕಾಗಿ 2004ರಲ್ಲಿ ಅವರನ್ನು ರಾಷ್ಟ್ರಪತಿಗಳು ಗೌರವಿಸಿದ್ದರು.

2007: ಬೆಂಗಳೂರು ಉದ್ಯಾನನಗರಿಯಲ್ಲಿ ಏಪ್ರಿಲ್ 21ರ ನಡುರಾತ್ರಿ ಸುರಿದ ಭಾರಿ ಮಳೆಗೆ ರಾಜಧಾಮಿಯ ನಿವಾಸಿಗಳು ತತ್ತರಿಸಿದರು. ಭಾರತಿ ನಗರದ ದೊಡ್ಡ ಚರಂಡಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದು ಸೇರಿ ಇಬ್ಬರು ಮೃತರಾದರು. ಮಧ್ಯರಾತ್ರಿ 12.30 ರಿಂದ ಸತತ ಮೂರು ಗಂಟೆಗಳ ಕಾಲ ಮಳೆ ಬಂದಿದ್ದು, ಒಟ್ಟಾರೆ 75 ಮಿ.ಮೀ (7.5 ಸೆಂ.ಮೀ) ಮಳೆಯಾಯಿತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 48 ಮಿ.ಮೀ (4.8 ಸೆಂ.ಮೀ) ಮಳೆ ಸುರಿದು, ನಗರದಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಯಿತು.

2007: ದೊರೆಯ ಆಸ್ತಿಪಾಸ್ತಿ ರಾಷ್ಟ್ರೀಕರಣ ಮಾಡುವ ತನ್ನ ಬದ್ಧತೆಯನ್ನು ಈಡೇರಿಸುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಆಪಾದಿಸಿ ನೇಪಾಳದ ಮಾವೋವಾದಿಗಳು ಕಠ್ಮಂಡುವಿನಲ್ಲಿ ದೊರೆಯ ಆಸ್ತಿಪಾಸ್ತಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಆರಂಭಿಸಿದರು. ದೊರೆಯ ಆಸ್ತಿಪಾಸ್ತಿ ವಶಕ್ಕೆ ಕಾನೂನು ರೂಪಿಸುವಲ್ಲಿ ಸಂಸತ್ತು ವಿಫಲವಾಗಿದೆ. ಹಾಗಾಗಿ ಈಗ ಯಂಗ್ ಕಮ್ಯೂನಿಸ್ಟ್ ಲೀಗ್ ಆ ಕಾರ್ಯ ಮಾಡಿ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸುವುದು ಎಂದು ಸಿಪಿಎನ್ ಮಾವೋವಾದಿ ಹಿಟ್ ಮನ್ ಶಾಕ್ಯದ ಕೇಂದ್ರೀಯ ಸಮಿತಿ ತಿಳಿಸಿತು.

2007: ಬಾಂಗ್ಲಾದೇಶದ ಸೇನೆ ಬೆಂಬಲಿತ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಹಸೀನಾ ಅವರ ಪುನರಾಗಮನಕ್ಕೆ ನಿಷೇಧ ವಿಧಿಸಿದ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ಹಸೀನಾ ಅವರನ್ನು ಬ್ರಿಟನ್ ಬಿಟ್ಟು ಹೊರಡದಂತೆ ನಿರ್ಬಂಧಿಸಿತು. ಆಕೆಯನ್ನು ಢಾಕಾಗೆ ಒಯ್ಯಬೇಕಿದ್ದ ಬ್ರಿಟಿಷ್ ಏರ್ವೇಸ್ ಸಂಸ್ಥೆಯು ಟಿಕೆಟ್ ಹೊಂದ್ದಿದರೂ ಹಸೀನಾ ಅವರಿಗೆ ವಿಮಾನ ಏರಲು ಅವಕಾಶ ನಿರಾಕರಿಸಿತು. ಢಾಕಾಗೆ ಹೊರಡುವ ವಿಮಾನದ ನಿರ್ಗಮನ ವೇಳೆಯಿಂದ 90 ನಿಮಿಷಗಳಷ್ಟು ಮೊದಲೇ ಹಸೀನಾ ಹೀಥ್ರೂ ವಿಮಾನ ನಿಲ್ದಾಣ ತಲುಪ್ದಿದರು.

2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ ಮಹಾಜನ್ (56) ಅವರ ಮೇಲೆ ಒಡಹುಟ್ಟಿದ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗ್ದೆದು ಗುಂಡು ಹಾರಿಸಿದರು. ತೀವ್ರವಾಗಿ ಗಾಯಗೊಂಡ ಪ್ರಮೋದ್ ಮಹಾಜನ್ ಅವರನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಮುಂಬೈಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಬೈಯ ವರ್ಲಿಯ ಪ್ರಮೋದ್ ಮಹಾಜನ್ ಮನೆಯಲ್ಲೇ ಈ ಗುಂಡು ಹಾರಾಟದ ಘಟನೆ ನಡೆಯಿತು.

2006: ವರನಟ ಡಾ. ರಾಜ್ ಕುಮಾರ್ ಅವರ ಉತ್ತರಕ್ರಿಯೆಯನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೊ ಸಮಾಧಿ ಬಳಿ ಕುಟುಂಬ ಸದಸ್ಯರು ವಿಧಿವತ್ತಾಗಿ ನೆರವೇರಿಸಿದರು.

2006: ಗಣ್ಯ ವ್ಯಕ್ತಿಗಳಿಂದ ಹತ್ಯೆಗೀಡಾದ ರೂಪದರ್ಶಿ ಜೆಸ್ಸಿಕಾಲಾಲ್ ಅವರ ತಂದೆ ಅಜಿತ್ ಕುಮಾರ್ ಲಾಲ್ ಅವರು ನವದೆಹಲಿಯಲ್ಲಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾದ ಒಂದು ತಿಂಗಳ ಬಳಿಕ ನಿಧನರಾದರು. 1999ರ ಏಪ್ರಿಲ್ 29ರಂದು ಹೋಟೆಲಿನಲ್ಲಿ ಹರ್ಯಾಣ ಸಚಿವ ವಿನೋದ ಶರ್ಮಾ ಅವರ ಪುತ್ರ ಮನು ಶರ್ಮಾ ಮತ್ತು ಇತರರು ಮದ್ಯ ಸರಬರಾಜು ಮಾಡಲು ನಿರಾಕರಿಸಿದ್ದಕ್ಕಾಗಿ ಜೆಸ್ಸಿಕಾಲಾಲ್ ಅವರನ್ನು ಗುಂಡಿಟ್ಟು ಕೊಂದಿದ್ದರು. 2000ನೇ ಇಸವಿಯಲ್ಲಿ ಆಕೆಯ ತಾಯಿ ಮೃತಳಾಗಿದ್ದಳು. ತಂದೆ ಅಂದಿನಿಂದಲೇ ಅಸ್ವಸ್ಥರಾಗಿದ್ದರು.. 2006ರ ಫೆಬ್ರುವರಿ 21ರಂದು ದೆಹಲಿಯ ನ್ಯಾಯಾಲಯವೊಂದು ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿದ ಬಳಿಕ ಆಕೆಯ ತಂದೆ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದರು.

1994: ಅಮೆರಿಕದ 37ನೇ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ತಮ್ಮ 81ನೇ ವಯಸಿನಲ್ಲಿ ನ್ಯೂಯಾರ್ಕಿನ ಆಸ್ಪತ್ರೆಯೊಂದರಲ್ಲಿ ಮೃತರಾದರು.

1970: ಅಮೆರಿಕವು ಮೊತ್ತ ಮೊದಲ `ಅರ್ಥ್ ಡೇ' (ಭೂ ದಿನ) ಆಚರಿಸಿತು. ಕೈಗಾರಿಕೀಕರಣದ ದುಷ್ಪರಿಣಾಮ ಮತ್ತು ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಪ್ರಥಮ ಪ್ರಯತ್ನ ಇದಾಗಿತ್ತು.

1967: ಕಲಾವಿದ ರವೀಂದ್ರ ಎಲ್. ಜನನ.

1965: ಕಲಾವಿದೆ ಶಾಂತಲಕ್ಷ್ಮಿ ಜನನ.

1950: ಕಲಾವಿದ ಗಂಗಾಧರ ಸ್ವಾಮಿ ಜನನ.

1949: ಕಲಾವಿದ ವಸಂತ ಲಕ್ಷ್ಮಿ ಬೇಲೂರು ಜನನ.

1945: ಹಾಸ್ಯನಟರಾಗಿ ಪ್ರಖ್ಯಾತರಾಗಿರುವ ಎಂ.ಎಸ್. ಉಮೇಶ್ ಅವರು ಎ.ಎಲ್. ಶ್ರೀಕಂಠಯ್ಯ ಮತ್ತು ತಾಯಿ ನಂಜಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಮಗುವಾಗಿದ್ದಾಗಲೇ ರಂಗಪ್ರವೇಶ ಮಾಡಿ ರಂಗಭೂಮಿಯತ್ತ ಒಲವು ಬೆಳೆಸಿಕೊಂಡ ಉಮೇಶ್, ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಅನಕೃ ಅವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಪಾತ್ರಧಾರಿಯಾಗಿ ರಂಗಪ್ರವೇಶಿಸಿದರು. ಮುಂದೆ ಕಥಾ ಸಂಗಮ ಚಲನ ಚಿತ್ರದ ತಿಮ್ಮರಾಯಿ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರವೇಶಿಸಿ ಉತ್ತಮ ನಟನಾಗಿ ಮಿಂಚಿದರು.

1921: ಕಲಾವಿದ ದೇವಪ್ಪಯ್ಯ ಅಪ್ಪಯ್ಯ ಜನನ.

1904: ಜ್ಯೂಲಿಯಸ್ ರಾಬರ್ಟ್ ಒಪ್ಪೆನ್ಹೀಮರ್ (1904-67) ಜನ್ಮದಿನ. ಈತ ಅಣುಬಾಂಬ್ ಅಭಿವೃದ್ಧಿ ಕಾಲದಲ್ಲಿ (1943-45) ಲಾಸ್ ಅಲಮೋಸ್ ಲ್ಯಾಬೋರೇಟರಿ ಹಾಗೂ ಪ್ರಿನ್ಸ್ ಟನ್ನ ಇನ್ ಸ್ಟಿಟ್ಯೂಟ್ ಫಾರ್ ಅಡ್ವಾನ್ಸಡ್ ಸ್ಟಡಿಯ ನಿರ್ದೇಶಕನಾಗಿದ್ದ.

1500: ಪೆಡ್ರೊ ಅಲ್ವರೆಝ್ ಕಾಬ್ರೆಲ್ ಬ್ರೆಜಿಲನ್ನು ಶೋಧಿಸಿದ. ಆತ ಇದಕ್ಕೆ `ಐಲ್ಯಾಂಡ್ ಆಫ್ ಟ್ರು ಕ್ರಾಸ್' ಎಂದು ಹೆಸರು ಇಟ್ಟ. ನಂತರ ದೊರೆ ಮ್ಯಾನ್ಯುಯೆಲ್ `ಹೋಲಿ ಕ್ರಾಸ್' ಎಂಬುದಾಗಿ ಮರುನಾಮಕರಣ ಮಾಡಿದ. ಅಂತಿಮವಾಗಿ ಅದಕ್ಕೆ ಈಗಿನ ಬ್ರೆಜಿಲ್ ಎಂಬ ಹೆಸರು ಬಂತು. ಇದಕ್ಕೆ ಅಲ್ಲಿ ಸಿಗುವ `ಪೌ-ಬ್ರೆಸಿಲ್' ಎಂಬ ಬಣ್ಣದ ಮರ (ಡೈವುಡ್) ಕಾರಣ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement