Sunday, May 11, 2008

ಇಂದಿನ ಇತಿಹಾಸ History Today ಮೇ 11

ಇಂದಿನ ಇತಿಹಾಸ

ಮೇ 11

ಮನುಷ್ಯ ಮತ್ತು ಯಂತ್ರದ ನಡುವೆ ನಡೆದ ಆರು ಆಟಗಳ ಚೆಸ್ ಪಂದ್ಯದಲ್ಲಿ ಐಬಿಎಂ ಕಂಪ್ಯೂಟರ್ `ಡೀಪ್ ಬ್ಲೂ' ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿತು. ನ್ಯೂಯಾರ್ಕಿನಲ್ಲಿ ನಡೆದ ಈ ಪಂದ್ಯ ಮಾರ್ಚ್ 15ರಂದು ಆರಂಭವಾಗಿ, ಕ್ಯಾಸ್ಪರೋವ್ ಸೋಲಿನೊಂದಿಗೆ ಪರ್ಯವಸಾನಗೊಂಡಿತು.

2007: ದಲಿತರು, ಮುಸ್ಲಿಮರ ಜೊತೆಗೆ ಮೇಲ್ಜಾತಿಯ ಮಂದಿಯನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದ ಮಾಯಾವತಿ ಅವರು ಆಳುವ ಸಮಾಜವಾದಿ ಪಕ್ಷ ಮತ್ತು ಉತ್ತರ ಪ್ರದೇಶವನ್ನು ತನ್ನ ಭದ್ರ ನೆಲೆಯನ್ನಾಗಿ ಮಾಡಿಕೊಂಡಿದ್ದ ಭಾರತೀಯ ಜನತಾ ಪಕ್ಷವನ್ನು ಬದಿಗೆ ಸರಿಸಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರದತ್ತ ತರುವಲ್ಲಿ ಯಶಸ್ವಿಯಾದರು. ರಾಷ್ಟ್ರದ ರಾಜಕೀಯದ ದಿಕ್ಸೂಚಿಯಾಗಿರುವ ಈ ಬೃಹತ್ ರಾಜ್ಯಕ್ಕೆ ಮಾಯಾವತಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುವಂತಾಯಿತು. 403 ಬಲದ ವಿಧಾನಸಭೆಯಲ್ಲಿ 208 ಸ್ಥಾನ ಗೆದ್ದು ಅವರು ಪ್ರಚಂಡ ಬಹುಮತದ ಸಾಧನೆ ಮಾಡಿದರು. ಸಮಾಜವಾದಿ ಪಕ್ಷಕ್ಕೆ 97, ಬಿಜೆಪಿಗೆ 50, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ 21 ಸ್ಥಾನಗಳು ಲಭಿಸಿದರೆ 26 ಸ್ಥಾನಗಳೂ ಪಕ್ಷೇತರರು ಮತ್ತಿತರರ ಪಾಲಾದವು.

2007: ಸಚಿವರಾದ ಶರಣಬಸಪ್ಪ ದರ್ಶನಾಪೂರ ಮತ್ತು ಅಲ್ಕೋಡ್ ಹನುಮಂತಪ್ಪ ಅವರು ನಿಗದಿತ ಅವದಿಯಲ್ಲಿ ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವ ಆರೋಪ ಸಾಬೀತಾಗಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಇವರ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದರು.

2007: 2007ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಪತ್ರಕರ್ತೆ ಆರ್. ಪೂರ್ಣಿಮಾ ಆಯ್ಕೆಯಾದರು.

2006: ಫಿಜಿಯಲ್ಲಿ 2000 ಇಸವಿಯಲ್ಲಿ ರಕ್ತಪಾತಕ್ಕೆ ಕಾರಣವಾದ ಸೇನಾ ದಂಗೆಗೆ ಮಾಜಿ ಪ್ರಧಾನಿ ಸಿತವೇನಿ ರಬೂಕ ಕಾರಣ ಎಂದು ದೋಷಾರೋಪ ಹೊರಿಸಲಾಯಿತು. ಸೇನೆಯ ಮಾಜಿ ಮುಖ್ಯಸ್ಥ ಸಹ ಆಗಿದ್ದ ರಬೂಕ 1967 ಸೇರಿದಂತೆ ಎರಡು ಸಲ ಸೇನಾ ದಂಗೆಗೆ ಕಾರಣರಾಗಿದ್ದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿದ್ದ ಭಾರತೀಯ ಮೂಲದ ಮಹೇಂದ್ರ ಚೌಧರಿ ನೇತೃತ್ವದ ಸರ್ಕಾರವನ್ನು ರಚನೆಯಾದ ಆರು ತಿಂಗಳಲ್ಲೇ ಕೆಡವಲಾಗಿತ್ತು.

2006: ನಿವೃತ್ತ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಪ್ಯಾಟರ್ಸನ್ (71) ನ್ಯೂಯಾರ್ಕಿನ ನ್ಯೂಪಾಲ್ಟ್ಜಿನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. 1956ರಲ್ಲಿ ಆರ್ಕಿ ಮೂರೆ ಅವರನ್ನು ಪರಾಭವಗೊಳಿಸುವ ಮೂಲಕ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಡೆದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪ್ಯಾಟರ್ಸನ್ ಪಾತ್ರರಾಗಿದ್ದರು. 1959ರಲ್ಲಿ ಸ್ವೀಡನ್ನ ಇಂಗೆಮರ್ ಜೋಹಾನ್ಸನ್ ಎದುರು ನ್ಯೂಯಾರ್ಕಿನಲ್ಲಿ ಪರಾಭವಗೊಂಡಾಗ ಚಾಂಪಿಯನ್ ಶಿಪ್ ಕಳೆದುಕೊಂಡಿದ್ದ ಪ್ಯಾಟರ್ಸನ್ ಒಂದು ವರ್ಷದ ಬಳಿಕ ಪೋಲೋಗ್ರೌಂಡ್ಸಿನಲ್ಲಿ ಜೋಹಾನ್ಸನ್ ಅವರನ್ನು ಪರಾಭವಗೊಳಿಸಿ ಪುನಃ ಚಾಂಪಿಯನ್ ಷಿಪ್ ದಕ್ಕಿಸಿಕೊಂಡ ಮೊದಲ ಹೆವಿ ವೇಯ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1972ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದರು.

2006: ನ್ಯೂಯಾರ್ಕ್ ಟೈಮ್ಸ್ ನ ನಿರ್ವಾಹಕ ಸಂಪಾದಕ, ಪುಲಿಟ್ಜರ್ ಪ್ರಶಸ್ತಿ ವಿಜೇತ ವರದಿಗಾರ ಎ.ಎಂ. ರೋಸೆಂಥಾಲ್ (84) ನ್ಯೂಯಾರ್ಕಿನಲ್ಲಿ ನಿಧನರಾದರು. ಅವರು ಭಾರತದಲ್ಲೂ ಪತ್ರಿಕೆಯ ವಿದೇಶೀ ಬಾತ್ಮೀದಾರರಾಗಿ ದುಡಿದಿದ್ದರು.

2006: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸತತ ಏಳನೇ ಬಾರಿಗೆ ಗೆದ್ದು ಅಧಿಕಾರ ಪಡೆಯುವ ಮೂಲಕ ಎಡರಂಗವು ವಿಶ್ವದಾಖಲೆ ನಿರ್ಮಾಣ ಮಾಡಿತು. ಜ್ಯೋತಿ ಬಸು ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಬುದ್ಧದೇವ ಭಟ್ಟಾಚಾರ್ಯರಿಗೆ ರಾಜ್ಯದ ಮತದಾರರು ಮತ್ತೆ ಮಣೆ ಹಾಕಿದರು. ಕೇರಳದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವನ್ನು ಸಿಪಿಎಂ ನೇತೃತ್ವದ ಎಡರಂಗ ಮೈತ್ರಿಕೂಟ ಅಧಿಕಾರದಿಂದ ಕೆಳಗಿಳಿಸಿತು. ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆಯನ್ನು ಸೋಲಿಸಿದ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಅಸ್ಸಾಮಿನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಪುದುಚೆರಿಯಲ್ಲಿ ಕಾಂಗ್ರೆಸ್ ಮೈತ್ರ್ರಿಕೂಟ ವಿಜಯ ಸಾಧಿಸಿತು. ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 4 ಲಕ್ಷಗಳಿಗೂ ಅಧಿಕ ಮತಗಳ ಅಂತರದಿಂದ ವಿಜಯಿಯಾದರು.

1944: ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಜನಪ್ರಿಯರಾದ ಬಾಬು ಕೃಷ್ಣಮೂರ್ತಿ ಅವರು ವೆಂಕಟೇಶ ಶಾಸ್ತ್ರಿ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. `ಮಂಗಳ' ಪತ್ರಿಕಾ ಸಂಪಾದಕರಾದ ಬಾಬು ನೇತೃತ್ವದಲ್ಲಿ ಬಾಲಮಂಗಳ, ಬಾಲ ಮಂಗಳ ಚಿತ್ರಕಥಾ, ಗಿಳಿವಿಂಡು ಪತ್ರಿಕೆಗಳು ಹೊರಬಂದವು. ಸ್ವಾತ್ರಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಕುರಿತು ಸಂಶೋಧನೆ ನಡೆಸಿ ರಚಿಸಿದ `ಅಜೇಯ' ಬಾಬುಗೆ ಅಪಾರ ಖ್ಯಾತಿ ತಂದು ಕೊಟ್ಟಿತು. `ಅದಮ್ಯ', 'ಸಿಡಿಮದ್ದು', 'ನೆತ್ತರು', 'ನೇಣುಗಂಬ', `ರುಧಿರಾಭಿಷೇಕ' ಇತ್ಯಾದಿ ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ನೀಡುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕ್ರಾಂತಿಕಾರಿಗಳ ಬಗ್ಗೆ ಬೆಳಕು ಚೆಲ್ಲುವ ಗ್ರಂಥಗಳು. ಪ್ರಸ್ತುತ ಕರ್ಮವೀರ ಸಾಪ್ತಾಹಿಕದ ಸಂಪಾದಕತ್ವದ ಹೊಣೆಗಾರಿಕೆ. ರಾಜ್ಯ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿವೆ.

1998: ಭಾರತವು ರಾಜಸ್ತಾನದ ಪೋಖ್ರಾನಿನಲ್ಲಿ ಮೂರು ಅಣ್ವಸ್ತ್ರಗಳ ಪರೀಕ್ಷಾ ಸ್ಫೋಟ ನಡೆಸಿತು. 1998ರ ಮೇ 13ರಂದು ಇನ್ನೆರಡು ಅಣ್ವಸ್ತ್ರಗಳನ್ನು ಸ್ಫೋಟಿಸಲಾಯಿತು. `ಆಪರೇಷನ್ ಶಕ್ತಿ' ಎಂಬುದಾಗಿ ಈ ಸ್ಫೋಟಗಳನ್ನು ಕರೆಯಲಾಯಿತು.

1997: ಮನುಷ್ಯ ಮತ್ತು ಯಂತ್ರದ ನಡುವೆ ನಡೆದ ಆರು ಆಟಗಳ ಚೆಸ್ ಪಂದ್ಯದಲ್ಲಿ ಐಬಿಎಂ ಕಂಪ್ಯೂಟರ್ `ಡೀಪ್ ಬ್ಲೂ' ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿತು. ನ್ಯೂಯಾರ್ಕಿನಲ್ಲಿ ನಡೆದ ಈ ಪಂದ್ಯ ಮಾರ್ಚ್ 15ರಂದು ಆರಂಭವಾಗಿ, ಕ್ಯಾಸ್ಪರೋವ್ ಸೋಲಿನೊಂದಿಗೆ ಪರ್ಯವಸಾನಗೊಂಡಿತು. ಕ್ಯಾಸ್ಪರೋವ್ ಎರಡು ಆಟಗಳಲ್ಲಿ ಸೋತು ಒಂದನ್ನು ಗೆದ್ದರು. ಉಳಿದ ಮೂರು ಆಟಗಳು ಡ್ರಾ ಆದವು.

1944: ಕಲಾವಿದ ವಜ್ರಮುನಿ ಜನನ.

1935: ಕಲಾವಿದೆ ವಾಸಂತಿ ಕದಿರೆ ಜನನ.

1934: ಕಲಾವಿದ ಗುಂಡಾಭಟ್ಟ ಜೋಶಿ ಜನನ.

1916: ಕರ್ನಾಟಕ ಸಂಗೀತಕ್ಕೆ ಅವಧಾನ ಪದ್ಧತಿಯ (ಎರಡೂ ಕೈಯಲ್ಲೂ ಬೇರೆ ಬೇರೆ ಗತಿಯ ತಾಳ ಹಾಕುವ ಪದ್ಧತಿ) ಪಲ್ಲವಿಗಳನ್ನು ಪರಿಚಯಿಸಿದ ಮೇರು ಕಲಾವಿದ ಪಲ್ಲವಿ ಎಸ್. ಚಂದ್ರಪ್ಪ (11-5-1916ರಿಂದ 22-10-1986) ಅವರು ಬಿ. ಶೇಷಪ್ಪ- ಮುನಿಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಜನಿಸಿದರು.

1857: ಮೇ 10ರಂದು ಐರೋಪ್ಯ ಅಧಿಕಾರಿಗಳನ್ನು ಕೊಂದ ಮೀರತ್ತಿನ ಸಿಪಾಯಿಗಳ ದಂಡೊಂದು ದೆಹಲಿಯನ್ನು ವಶಪಡಿಸಿಕೊಂಡು ಕೆಂಪುಕೋಟೆಯಿಂದ ಕೊನೆಯ ಮೊಘಲ್ ದೊರೆ ಬಹಾದುರ್ ಶಹಾರನ್ನು `ಶಹೆನ್ ಶಾಹ್-ಎ- ಹಿಂದುಸ್ತಾನ್' (ಚಕ್ರವರ್ತಿ) ಎಂದು ಘೋಷಿಸಿತು. ಈ ಘಟನೆ ಸಿಪಾಯಿಗಳ ದಂಗೆಗೆ ರಚನಾತ್ಮಕ ರಾಜಕೀಯ ಅರ್ಥವನ್ನು ನೀಡಿತು. ಬ್ರಿಟಿಷರ ವಿರುದ್ಧ ಬಂಡ್ದೆದವರಿಗೆ ಸ್ಫೂರ್ತಿಯನ್ನೂ ನೀಡಿತು.

ಕ್ರಿ.ಪೂ. 330: ರೋಮನ್ ದೊರೆ ಕಾನ್ ಸ್ಟಾಂಟಿನ್ ರೋಮ್ ಸಾಮ್ರಾಜ್ಯದ ರಾಜಧಾನಿ ಬೈಝಾಂಟಿಯಮ್ ನ್ನು ಸ್ಥಾಪಿಸಿದ. ಆತನ ಗೌರವಾರ್ಥ ಈ ನಗರಕ್ಕೆ ಕಾನ್ ಸ್ಟಾಂಟಿನೋಪಲ್ ಎಂದು ಹೆಸರಿಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement