Monday, May 12, 2008

ಇಂದಿನ ಇತಿಹಾಸ History Today ಮೇ 12

ಇಂದಿನ ಇತಿಹಾಸ

ಮೇ 12

`ಲೇಡಿ ವಿದ್ದಿ ಲ್ಯಾಂಪ್' ಎಂದೇ ಖ್ಯಾತರಾದ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಈದಿನ ಇಟಲಿಯಲ್ಲಿ ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ 17ನೇ ವಯಸ್ಸಿನಲ್ಲೇ ದಾದಿ (ನರ್ಸಿಂಗ್) ವೃತ್ತಿಯನ್ನು ಬದುಕಿನ ವೃತ್ತಿಯಾಗಿ ಅಂಗೀಕರಿಸಿ ಸಮಾಜದಲ್ಲಿ ಹಿಂದುಳಿದವರು, ಆರ್ಥಿಕವಾಗಿ ಬಡವರಾದವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವ ಸಂಕಲ್ಪ ಮಾಡಿದರು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಮತ್ತು ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಬೆಂಬಲಿಗರು ವಾಣಿಜ್ಯ ರಾಜಧಾನಿ ಕರಾಚಿಯ ಪ್ರಮುಖ ಬೀದಿಗಳಲ್ಲಿ ಗುಂಡಿನ ಕಾಳಗದಲ್ಲಿ ತೊಡಗಿದ್ದರಿಂದ ಕನಿಷ್ಠ 30 ಜನ ಮೃತರಾಗಿ 150ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ಢಾಕಾದ ಮೀರ್ ಪುರದಲ್ಲಿ ನಡೆದ ಏರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡವು ಸಂಘಟಿತ ಹೋರಾಟ ನೀಡಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

2007: ಉತ್ತರ ಪ್ರದೇಶದ ಸುಲ್ತಾನಪುರ, ಪ್ರತಾಪಗಢ ಹಾಗೂ ಬಾರಾಬಂಕಿ ಜಿಲ್ಲೆಗಳಲ್ಲಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ 31 ಮಂದಿ ಬಲಿಯಾದರು.

2006: ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರು ದೋಹಾದಲ್ಲಿ ಐಎಎಎಫ್ ಸೂಪರ್ ಟೂರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಗಾಟ್ಲಿನ್ ಅವರು 100 ಮೀಟರ್ ದೂರವನ್ನು 9.76 ಸೆಕೆಂಡುಗಳಲ್ಲಿ ಕ್ರಮಿಸಿ ಈ ದಾಖಲೆ ಸ್ಥಾಪಿಸಿದರು. ಗಾಟ್ಲಿನ್ ಸಾಧನೆಯೊಂದಿಗೆ ಜಮೈಕಾದ ಅಸಾಫಾ ಪೊವೆಲ್ ನಿರ್ಮಿಸಿದ್ದ 9.77 ಸೆಕೆಂಡ್ಗಳ ದಾಖಲೆ ಅಳಿಸಿಹೋಯಿತು.

2006: ಕನ್ನಡದ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರು 2005ನೇ ಸಾಲಿನ `ಭಾಷಾ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿ ಅಗ್ರಹಾರ ಕೃಷ್ಣಮೂರ್ತಿ ಅವರ ಆಯ್ಕೆಯನ್ನು ಕೇಂದ್ರ ಸಂಸ್ಕೃತಿ ನಿರ್ದೇಶನಾಲಯ ಅನುಮೋದಿಸಿತು.

2006: ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ತಿಂಗಳ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಸಾರಿಗೆ ಸಚಿವ ಸ್ವರೂಪ್ಸಿಂಗ್ ನಾಯಕ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2006: ನೇಪಾಳದ ಪ್ರಜಾಸತ್ತೆ ಪರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದವರ ವಿರುದ್ಧ ಮಹತ್ವದ ಕ್ರಮ ಕೈಗೊಂಡ ಜಿ.ಪಿ. ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮಾಜಿ ಗೃಹ ಸಚಿವ ಕಮಲ್ ಥಾಪಾ, ಮಾಜಿ ಸಂಪರ್ಕ ಖಾತೆಯ ರಾಜ್ಯ ಸಚಿವ ಶ್ರೀಶ್ ಶಂಶೇರ್ ರಾಣಾ ಮತ್ತು ಮಾಜಿ ವಿದೇಶಾಂಗ ಸಚಿವ ರಮೇಶನಾಥ ಪಾಂಡೆ ಅವರನ್ನು ಬಂಧಿಸಿತು. ನೇಪಾಳಿ ದೊರೆ ಆಳ್ವಿಕೆಯ ಭದ್ರತಾ ಸಂಸ್ಥೆಗಳ ಉನ್ನತ ಅಧಿಕಾರಿಗಳಾಗಿದ್ದ ಸೇನಾ ಮುಖ್ಯಸ್ಥ ಪ್ಯಾರ್ ಜಂಗ್ ಥಾಪಾ, ಸಶಸ್ತ್ರ ಪೊಲೀಸ್ ಪಡೆದ ಮುಖ್ಯಸ್ಥ ಸಹಬೀರ್ ಥಾಪಾ, ನೇಪಾಳಿ ಪೊಲೀಸ್ ಮುಖ್ಯಸ್ಥ ಶ್ಯಾಮ್ ಭಕ್ತ ಥಾಪಾ, ಮತ್ತು ರಾಷ್ಟ್ರೀಯ ತನಿಖಾ ವಿಭಾಗದ ದೇವೀರಾಮ್ ಶರ್ಮ ಅವರನ್ನು ಅಮಾನತುಗೊಳಿಸಿತು.

2006: ನೇಪಾಳದ ಸಣ್ಣ ಗ್ರಾಮ ಧುಲ್ಲುಬಾಷ್ಕೋಟ್-6 ಬಗ್ಲುಂಗ್ನ 14 ವರ್ಷದ ಬಾಲಕ ಖಗೇಂದ್ರ ಥಾಪಾ ಮಗರ್ ನ ಹೆಸರು `ಭೂಮಿಯ ಮೇಲಿನ ಅತಿಕುಳ್ಳ ಮನುಷ್ಯ' ಎಂಬುದಾಗಿ ಶೀಘ್ರದಲ್ಲೇ ಗಿನ್ನಿಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ನಮೂದಾಗಲಿದೆ. ಖಗೇಂದ್ರ ಥಾಪಾ ಮಗರ್ ನ ತೂಕ ಕೇವಲ 4.5 ಕಿ.ಗ್ರಾಂ.ಗಳಾಗಿದ್ದು, ಎತ್ತರ ಕೇವಲ 20 ಅಂಗುಲಗಳು. ಮಾಸ್ಟರ್ ಮಗರ್ ನ ಹೆಸರು ಈವರೆಗೆ ಭೂಮಿ ಮೇಲಿನ ಅತ್ಯಂತ ಕುಳ್ಳ ಎಂಬುದಾಗಿ ಹೆಸರು ಪಡೆದಿದ್ದ ನವದೆಹಲಿಯ ಮೊಹಮ್ಮದ್ ಅಲಿ ಸ್ಥಾನದಲ್ಲಿ ನಮೂದಾಗಲಿದೆ ಎಂದು ಖಗೇಂದ್ರ ಥಾಪಾ ಮಗರ್ ಅಕಾಡೆಮಿಯ ಅಧ್ಯಕ್ಷ ಮಿನ್ ಬಹಾದುರ್ ರಾಣಾ ಅವರನ್ನು ಉಲ್ಲೇಖಿಸಿ `ದಿ ಹಿಮಾಲಯನ್ ಟೈಮ್ಸ್' ವರದಿ ಮಾಡಿತು.

1994: ಬಿಸಿ ಕಾವಲಿಗೆ ದೋಸೆ ಅಂಟದಂತೆ ಲೇಪಿಸಬಹುದಾದ `ಟೆಫ್ಲಾನ್' ಎಂಬ ಪ್ಲಾಸ್ಟಿಕ್ಕನ್ನು ಡ್ಯೂಪಾಂಟ್ ಸಂಸ್ಥೆಗಾಗಿ ದುಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಂಡು ಹಿಡಿದ ರಾಸಾಯನಿಕ ತಜ್ಞ ರಾಯ್. ಜೆ. ಪ್ಲುಂಕೆಟ್ ತಮ್ಮ 83ನೇ ವಯಸ್ಸಿನಲ್ಲಿ ಮೃತರಾದರು. ಎರಡನೇ ವಿಶ್ವಸಮರದ ಸಂದರ್ಭದಲ್ಲಿ ಈ ಹೊಸ ಪ್ಲಾಸ್ಟಿಕ್ಕನ್ನು ಲೋಹದ ಉಪಕರಣಗಳ ಸಂರಕ್ಷಣೆಗಾಗಿ ಬಳಸಲಾಯಿತು. ರೇಡಿಯೋ ವಿಕಿರಣ (ರೇಡಿಯಾಕ್ಟಿವ್) ವಸ್ತುಗಳ ಉತ್ಪಾದನೆಯಲ್ಲೂ ಬಳಸಲಾಯಿತು. ಡ್ಯೂಪಾಂಟ್ ಸಂಸ್ಥೆಯು 1960ರಲ್ಲಿ ಟೆಫ್ಲಾನ್ ಬಳಿದ ನಾನ್ ಸ್ಟಿಕ್ ಅಡಿಗೆ ಸಲಕರಣೆಗಳನ್ನು ತನ್ನ ಟ್ರೇಡ್ ಮಾರ್ಕ್ ಹಾಕಿ ಬಿಡುಗಡೆ ಮಾಡಿತು.

1987: ಭಾರತದ ಎರಡನೆಯ ವಿಮಾನವಾಹಕ ನೌಕೆ `ಐಎನ್ಎಸ್ ವಿರಾಟ್' ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.

1954: ಕಲಾವಿದ ಕುಮಾರ ದಾಸ ಡಿ.ಜನನ.

1952: ಸ್ವತಂತ್ರ ಭಾರತದ ಮೊತ್ತ ಮೊದಲನೆಯ ಸಂಸತ್ ಅಧಿವೇಶನ ಆರಂಭವಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಮರುದಿನ ಸರ್ಕಾರವನ್ನು ರಚಿಸಿದರು. ರಾಜೇಂದ್ರ ಪ್ರಸಾದ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಕ್ರಮವಾಗಿ ಪ್ರಥಮ ಅಧ್ಯಕ್ಷ, ಉಪಾಧ್ಯಕ್ಷರಾದರು.

1949: ಕಲಾವಿದ ಶ್ರೀನಿವಾಸನ್ ಟಿ.ಟಿ. ಜನನ.

1938: ಕಲಾವಿದ ಬಸವರಾಜು ತು.ಮ. ಜನನ.

1937: ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಬ್ರಿಟನ್ನಿನ ದೊರೆ 6ನೇ ಜಾರ್ಜ್ ಕಿರೀಟಧಾರಣೆ ನಡೆಯಿತು.

1935: ಮದ್ಯವ್ಯಸನದಿಂದ ಸ್ವಯಂ ಮುಕ್ತಿ ಪಡೆಯಲು ನೆರವಾಗುವ `ಆಲ್ಕೋಹಾಲಿಕ್ಸ್ ಅನಾನಿಮಸ್' ಸಂಘಟನೆ ಸ್ಥಾಪನೆಗೆ ನ್ಯೂಯಾರ್ಕಿನಲ್ಲಿ ನಡೆದ ಸಭೆಯೊಂದರಲ್ಲಿ ಸ್ಟಾಕ್ ಬ್ರೋಕರ್ ವಿಲಿಯಂ ಗ್ರಿಫಿತ್ ವಿಲ್ಸನ್ ಮತ್ತು ಸರ್ಜನ್ ರಾಬರ್ಟ್ ಹೊಲ್ ಬ್ರೂಕ್ ಸ್ಮಿತ್ ನಾಂದಿ ಹಾಡಿದರು.

1926: ಕಲಾವಿದ ದ್ವಾರಕಾನಾಥ್ ಟಿ.ವಿ. ಜನನ.

1919: ಖ್ಯಾತ ವಿಮರ್ಶಕ ಕೆ. ನರಸಿಂಹ ಮೂರ್ತಿ (1919-1999) ಅವರು ಕೃಷ್ಣಮೂರ್ತಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಮಂಚೇನಹಳ್ಳಿಯಲ್ಲಿ ಜನಿಸಿದರು. ಹೈಸ್ಕೂಲು ಓದುತ್ತಿರುವಾಗಲೇ ಪದ್ಯರಚನೆ ಆರಂಭಿಸಿದ ನರಸಿಂಹಮೂರ್ತಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಲೇ ಸಾಹಿತ್ಯ ಕೃಷಿಯನ್ನೂ ಮುಂದುವರೆಸಿ ಗಮನಾರ್ಹ ಕೃತಿಗಳನ್ನು ನೀಡಿದರು. ಆರ್. ಕಲ್ಯಾಣಮ್ಮನವರ ಪತ್ರಿಕೆ `ಸರಸ್ವತಿ' ಮದ್ರಾಸಿನ (ಈಗಿನ ಚೆನ್ನೈ) ಇಂಗ್ಲಿಷ್ ಪತ್ರಿಕೆ `ಮೈ ಮ್ಯಾಗಜಿನ್', `ಅರುಣ', `ಸುಬೋಧ', `ಪ್ರಬುದ್ಧ ಕರ್ನಾಟಕ'ಗಳಲ್ಲಿ ಅವರ ಕಥೆಗಳು, ಲೇಖನಗಳು ಪ್ರಕಟವಾಗಿದ್ದವು. ವಿಶ್ವದ ಹಲವು ಭಾಷೆಗಳ ಅತ್ಯುತ್ತಮ ಕೃತಿಗಳನ್ನೂ ಕನ್ನಡಿಗರಿಗೆ ಅವರು `ಕನ್ನಡಪ್ರಭ' ಪತ್ರಿಕೆಯ ಸಾಹಿತ್ಯ ಲೋಕ ಅಂಕಣದ ಮೂಲಕ ಪರಿಚಯಿಸಿದ್ದಾರೆ. 1999ರ ಜೂನ್ 12ರಂದು ಅವರು ನಿಧನರಾದರು.

1899: ಮೂಗೂರು ಅಮೃತಪ್ಪನವರಿಂದ ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿ, ನೃತ್ಯಕ್ಕೊಂದು ಕ್ರಮಬದ್ಧ ಪದ್ಧತಿಯನ್ನು ಅಳವಡಿಸಿ ಮೂಗೂರು ಶೈಲಿ ಎಂಬ ಒಂದು ಪರಂಪರೆಯನ್ನೇ ಹುಟ್ಟು ಹಾಕಿದ ಕಲಾವಿದೆ ಮೂಗೂರು ಜೇಚಮ್ಮ (12-5-1899ರಿಂದ 15-8-1983) ಅವರು ಮೈಸೂರು ಜಿಲ್ಲೆಯ ಮೂಗೂರಿನಲ್ಲಿ ಜನಿಸಿದರು.

1895: ಚಿಂತಕ ಜಿಡ್ಡು ಕೃಷ್ಣಮೂರ್ತಿ ಈದಿನ ಮದನಪಲ್ಲಿಯಲ್ಲಿ ಜನಿಸಿದರು.

1820: `ಲೇಡಿ ವಿದ್ದಿ ಲ್ಯಾಂಪ್' ಎಂದೇ ಖ್ಯಾತರಾದ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಈದಿನ ಇಟಲಿಯಲ್ಲಿ ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ 17ನೇ ವಯಸ್ಸಿನಲ್ಲೇ ದಾದಿ (ನರ್ಸಿಂಗ್) ವೃತ್ತಿಯನ್ನು ಬದುಕಿನ ವೃತ್ತಿಯಾಗಿ ಅಂಗೀಕರಿಸಿ ಸಮಾಜದಲ್ಲಿ ಹಿಂದುಳಿದವರು, ಆರ್ಥಿಕವಾಗಿ ಬಡವರಾದವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವ ಸಂಕಲ್ಪ ಮಾಡಿದರು. 1854ರ ಅಕ್ಟೋಬರ್ 21ರಂದು ಕ್ರಿಮಿಯನ್ ಯುದದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ನೈಟಿಂಗೇಲ್ ತನ್ನ 38 ಮಂದಿ ದಾದಿಯರ ತಂಡದೊಂದಿಗೆ ತೆರಳಿ ಸೇವೆ ಸಲ್ಲಿಸಿದರು. ಫ್ಲಾರೆನ್ಸ್ ನೈಟಿಂಗೇಲ್ ಸೇವೆಯನ್ನು ಜನ ಮರೆಯಲಿಲ್ಲ. ಆಕೆಯ ನೆನಪಿಗಾಗಿ ಲಂಡನ್ನ ವಾಟರ್ಲೂ ಅರಮನೆಯಲ್ಲಿ ಆಕೆಯ ಬೃಹತ್ ಪ್ರತಿಮೆಯನ್ನು ನಿಲ್ಲಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement