My Blog List

Wednesday, May 21, 2008

ಇಂದಿನ ಇತಿಹಾಸ History Today ಮೇ 21

ಇಂದಿನ ಇತಿಹಾಸ

ಮೇ 21

ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಎಲ್ಟಿಟಿಇ ಆತ್ಮಾಹುತಿ ದಳದ ವ್ಯಕ್ತಿಯೊಬ್ಬ ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿ ಬಾಂಬ್ ಸ್ಫೋಟಿಸಿ ಹತ್ಯೆಗೈದ. ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಈ ಘಟನೆ ನಡೆಯಿತು.

2007: ಕಲಾನಿಧಿ ಮಾರನ್ ಮಾಲೀಕತ್ವದ `ಸನ್ ಟಿವಿ ನೆಟ್ ವರ್ಕ್' ಪ್ರತಿಸ್ಪರ್ಧಿ `ರಾಜ್ ಟಿವಿ'ಯು `ಕಳೈಗನಾರ್ ಟಿವಿ' ಎಂಬ ಹೊಸ ಚಾನೆಲನ್ನು ಶೀಘ್ರವೇ ಆರಂಭಿಸುವುದಾಗಿ ಪ್ರಕಟಿಸಿತು.

2007: ಕಾರ್ಯನಿರತ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರವು ಎರಡು ಪ್ರತ್ಯೇಕ ಹೊಸ ವೇತನ ಮಂಡಳಿಗಳನ್ನು ನ್ಯಾಯಮೂರ್ತಿ ಕೆ. ನಾರಾಯಣ ಕುರುಪ್ ಅಧ್ಯಕ್ಷತೆಯಲ್ಲಿ ರಚಿಸಿತು.

2007: ನಟ ಸಂಜಯದತ್ ನಿವಾಸದಿಂದ ಎಕೆ 47 ಬಂದೂಕು ಹಾಗೂ ಮದ್ದು ಗುಂಡುಗಳನ್ನು ಹೊರಗೆ ಸಾಗಿಸಿದ್ದ ಆರೋಪಿ ಮನ್ಸೂರ್ ಅಹಮದ್ ಎಂಬಾತನಿಗೆ ವಿಶೇಷ ಟಾಡಾ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂಪಾಯಿಗಳ ದಂಡ ವಿಧಿಸಿತು.

2007: ವಿದೇಶಕ್ಕೆ ಅಕ್ರಮವಾಗಿ ಭಾರಿ ಮೊತ್ತದ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ನೈಜೀರಿಯಾದ ರಾಜತಾಂತ್ರಿಕನೊಬ್ಬನನ್ನು ಆದಾಯ ತೆರಿಗೆ ಅಧಿಕಾರಿಗಳು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಆತನಿಂದ 2.27 ದಶಲಕ್ಷ (22.7 ಕೋಟಿ) ಅಮೆರಿಕನ್ ಡಾಲರುಗಳನ್ನು (ಅಂದಾಜು 10 ಕೋಟಿ ರೂಪಾಯಿ) ವಶ ಪಡಿಸಿಕೊಂಡರು.

2006: ಯುರೋಪಿನಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ಆರ್ಸೆಲರ್ ಸಂಸ್ಥೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ವಿಶ್ವದಲ್ಲಿಯೇ ಅತಿ ದೊಡ್ಡದಾದ ಉಕ್ಕು ತಯಾರಿಕೆಯ ಪ್ರಶ್ನಾತೀತ ಸಂಸ್ಥೆಯಾಗುವ ನಿರ್ಧಾರವನ್ನು ಮಿತ್ತಲ್ ಸ್ಟೀಲ್ ಸಂಸ್ಥೆ ಪ್ರಕಟಿಸಿತು.

2006: ಭಾರತದ ತಾರಾಪುರ ಪರಮಾಣು ವಿದ್ಯುತ್ ಯೋಜನೆಯ ಎರಡನೆಯ ಅತಿದೊಡ್ಡ ರಿಯಾಕ್ಟರ್ ಘಟಕವು ಮಹಾರಾಷ್ಟ್ರದ ತಾರಾಪುರದಲ್ಲಿ ಈದಿನ ಬೆಳಗ್ಗೆ 10.44 ಗಂಟೆಗೆ ಕಾರ್ಯಾರಂಭ ಮಾಡಿತು. ತಾರಾಪುರ ಪರಮಾಣು ವಿದ್ಯುತ್ ಯೋಜನೆಯ ಆವರಣವು ಒಟ್ಟು 4 ಪರಮಾಣು ರಿಯಾಕ್ಟರ್ ಘಟಕಗಳನ್ನು ಹೊಂದಿದೆ.

1994: ಮನಿಲಾದಲ್ಲಿ `ಮಿಸ್ ಯುನಿವರ್ಸ್' (ಭುವನ ಸುಂದರಿ) ಕಿರೀಟ ಧರಿಸಿದ ಸುಶ್ಮಿತಾ ಸೇನ್ ಈ ಸಾಧನೆ ಮಾಡಿದ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಎಲ್ಟಿಟಿಇ ಆತ್ಮಾಹುತಿ ದಳದ ವ್ಯಕ್ತಿಯೊಬ್ಬ ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿ ಬಾಂಬ್ ಸ್ಫೋಟಿಸಿ ಹತ್ಯೆಗೈದ. ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಈ ಘಟನೆ ನಡೆಯಿತು.

1964: ಅತಿ ಕಿರಿಯ ವಯಸಿನಲ್ಲೇ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ವಿಜಯ ಕುಮಾರ ಅತ್ರಿ (21-5-1964ರಿಂದ 30-5-2000) ಅವರು ಎನ್. ಗಣೇಶ್- ಬಿ.ಎನ್. ನಾಗರತ್ನಮ್ಮ ದಂಪತಿಯ ಮಗನಾಗಿ ಕನಕಪುರದದಲ್ಲಿ ಜನಿಸಿದರು. ರಾಮಕೃಷ್ಣಾಶ್ರಮದ ಕಾರ್ಯಕ್ರಮಗಳಿಂದ ಹಾಡುಗಾರಿಕೆ ಆರಂಭಿಸಿದ ಅವರು 300ಕ್ಕೂ ಹೆಚ್ಚು ಕ್ಯಾಸೆಟ್ಟುಗಳಲ್ಲಿ ಹಾಡಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಹೆಂಡತಿಯ ಊರಾದ ಶೃಂಗೇರಿಯ ಬಳಿ `ಉಳುಮೆ ಬೈಲು' ಜೈ ಶಂಕರ್ ಯುವಕ ಸಂಘದ ಕಾರ್ಯಕ್ರಮದಲ್ಲಿ ಹಾಡಿದ ಮರುದಿನ ತುಂಗಾನದಿಯಲ್ಲಿ ಆಕಸ್ಮಿಕಕ್ಕೆ ಒಳಗಾಗಿ ಕುಟುಂಬದ ಐವರು ಸದಸ್ಯರೊಂದಿಗೆ ಅಸು ನೀಗಿದ್ದು ಒಂದು ದೊಡ್ಡ ದುರಂತ.

1963: ಕಲಾವಿದ ಶೇಖನ ಗೌಡ ಕೆ.ಪಿ. ಜನನ.

1954: ಕಲಾವಿದ ಚಂದ್ರಕಾಂತ್ ಎಂ. ಜನನ.

1943: ಕಲಾವಿದ ವಿ.ಎಂ. ನಾಗರಾಜ್ ಜನನ.

1932: ಕಾದಂಬರಿಗಾರ್ತಿ ಸುನೀತಾ ಕೃಷ್ಣಸ್ವಾಮಿ (21-5-1932ರಿಂದ 14-8-2000) ಅವರು ಮೈಸೂರಿನಲ್ಲಿ ಸುಬ್ಬರಾವ್- ಪಾರ್ವತಮ್ಮ ದಂಪತಿಯ ಮಗಳಾಗಿ ಈದಿನ ಜನಿಸಿದರು.

1928: ಕಲಾವಿದ ಶ್ರೀನಿವಾಸಯ್ಯ ಕೆ.ಟಿ. ಜನನ.

1927: ಅಟ್ಲಾಂಟಿಕ್ ಸಾಗರದ ಮೇಲಿನಿಂದ ಮೂವತ್ತಮೂರುವರೆ ತಾಸುಗಳಲ್ಲಿ ಏಕವ್ಯಕ್ತಿ ವಿಮಾನ ಹಾರಾಟವನ್ನು ಪೂರ್ಣಗೊಳಿಸಿದ ಚಾರ್ಲ್ಸ್ ಎ ಲಿಂಡ್ ಬರ್ಗ್ ತಮ್ಮ `ಸ್ಪಿರಿಟ್ ಆಫ್ ಸೇಂಟ್ ಲೂಯಿ' ವಿಮಾನವನ್ನು ಲೆ ಬರ್ಗರ್ ವಿಮಾನನಿಲ್ದಾಣದಲ್ಲಿ ಇಳಿಸಿದರು.

1921: ಸೋವಿಯತ್ ಒಕ್ಕೂಟದ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂದ್ರೇಯಿ ಸಖರೋವ್ (1921-89) ಜನ್ಮದಿನ. ಇವರು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಸರ್ಕಾರದ ಜೊತೆಗಿನ ತಮ್ಮ ಭಿನ್ನಮತದಿಂದಾಗಿ ಜಾಗತಿಕ ಖ್ಯಾತಿ ಗಳಿಸಿದ್ದರು.

1960: ರಷ್ಯದ ಈಜುಗಾರ್ತಿ ವ್ಲಾಡಿಮೀರ್ ಸಾಲ್ನಿಕೋವ್ ಜನ್ಮದಿನ. ನಾಲ್ಕು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದ ಈಕೆ 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 15 ನಿಮಿಷಗಳ ಒಳಗೆ ಕ್ರಮಿಸಿದ ಮೊದಲಿಗರೆನಿಸಿದರು.

1787: ಲಾರ್ಡ್ಸ್ಸ್ ಕ್ರಿಕೆಟ್ ಮೈದಾನದಲ್ಲಿ ಮೊತ್ತ ಮೊದಲ ಕ್ರಿಕೆಟ್ ಪಂದ್ಯ ನಡೆಯಿತು. ಈ ಪಂದ್ಯ ವೈಟ್ ಕಂಡ್ಯೂಟ್ ಕ್ಲಬ್ ಹಾಗೂ ಮಿಡ್ಲ್ ಸೆಕ್ಸ್ ಮಧ್ಯೆ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement