ಗ್ರಾಹಕರ ಸುಖ-ದುಃಖ

My Blog List

Wednesday, October 22, 2008

ಇಂದಿನ ಇತಿಹಾಸ History Today ಅಕ್ಟೋಬರ್

ಇಂದಿನ ಇತಿಹಾಸ

ಅಕ್ಟೋಬರ್ 22

ಆಂಡ್ರೆ ಜಾಕಿಸ್ ಗಾರ್ನೆರಿನ್ ಅವರು ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ಪ್ಯಾರಾಶೂಟ್ ಮೂಲಕ ಕೆಳಗಿಳಿದರು. ಪ್ಯಾರಿಸ್ಸಿನಲ್ಲಿ ಅವರು 2,200 ಮೀಟರ್ ಬಲೂನಿನಿಂದ ಪ್ಯಾರಾಶೂಟ್ ಮೂಲಕ ಕೆಳಕ್ಕೆ ಹಾರಿದರು. ಇವರು ಪ್ಯಾರಾಶೂಟಿನ ಸಂಶೋಧಕರಲ್ಲ. ಆದರೆ ಹೆಚ್ಚು ಎತ್ತರದಿಂದ ನೆಗೆಯಲು ಅನುಕೂಲವಾಗುವಂತೆ ಈ ಸಾಧನವನ್ನು ಸುಧಾರಿಸಿದರು. 

2007: ಭಾರತದಲ್ಲಿ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ನೀಡಿದ ಮಹತ್ವದ ಕೊಡುಗೆಗಾಗಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಲಂಡನ್ನಿನ ರಾಯಲ್ ಸೊಸೈಟಿಯಲ್ಲಿ `ಕಿಂಗ್ ಚಾರ್ಲ್ಸ್-2' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಯಲ್ ಸೊಸೈಟಿಯ ಅಧ್ಯಕ್ಷ ಲಾರ್ಡ್ ಮಾರ್ಟಿನ್ ರೀಸ್ ಅವರು ಕಲಾಂ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. 1997ರಲ್ಲಿ ಆರಂಭವಾದ ಪ್ರಶಸ್ತಿಯನ್ನು ಪಡೆದ ಎರಡನೇ ವ್ಯಕ್ತಿ ಎಂಬ ಹಿರಿಮೆಗೂ ಕಲಾಂ ಪಾತ್ರರಾದರು. ಈ ಹಿಂದೆ 1998ರಲ್ಲಿ ಜಪಾನಿನ ಸಾಮ್ರಾಟ ಅಖಿಹಿಟೋ ಅವರಿಗೆ ಈ ಗೌರವ ನೀಡಲಾಗಿತ್ತು. ಅನಿವಾಸಿ ಭಾರತೀಯ ಉದ್ಯಮಿ ಸ್ವರಾಜ್ ಪಾಲ್, ಇಂಗ್ಲೆಂಡಿನಲ್ಲಿರುವ ಭಾರತದ ಹಂಗಾಮಿ ಹೈ ಕಮಿಷನರ್ ಅಶೋಕ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. 

2007: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಾಲಿವುಡ್ ನಟ ಸಂಜಯ್ ದತ್ ಈದಿನ ತೀರ್ಪಿನ ಪ್ರತಿ ಪಡೆದು ಮುಂಬೈ ಟಾಡಾ ನ್ಯಾಯಾಲಯಕ್ಕೆ ಶರಣಾದರು. ನಂತರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪುಣೆಯ ಯೆರವಾಡ ಜೈಲಿಗೆ ಕರೆದೊಯ್ದರು. ಸಂಜಯ್ ದತ್ ಅವರಿಗೆ ನೀಡಲಾಗಿರುವ 4340 ಪುಟಗಳ ತೀರ್ಪಿನ ಒಟ್ಟು ಭಾರ 25 ಕಿಲೊ. ತೀರ್ಪಿನ ಪ್ರತಿ ಸಿಕ್ಕ ಕೂಡಲೆ ಟಾಡಾ ಕೋರ್ಟಿಗೆ ಶರಣಾಗಬೇಕು ಎಂದು ಈ ಮುನ್ನ ಅವರಿಗೆ ತಾತ್ಕಾಲಿಕ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಪ್ರತಿ ಸಿಕ್ಕ ನಂತರ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿತ್ತು.  

2007: ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವಶ್ರೀ ಪ್ರಶಸ್ತಿ'ಯನ್ನು ಸರ್ವಧರ್ಮ ಸಂಸತ್ತಿನ ಸಂಸ್ಥಾಪಕ ಸ್ವಾಮಿ ಅಗ್ನಿವೇಶ್ ಅವರಿಗೆ ಈದಿನ ಚಿತ್ರದುರ್ಗದ ಭರಮಣ್ಣ ನಾಯಕನ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು. ಶರಣ ಸಂಸ್ಕೃತಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

2007:  ಹಣಕ್ಕಾಗಿ 27 ಕೊಲೆ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಸುಪಾರಿ ಹಂತಕ ಶ್ಯಾಮ್ ಉರುಫ್ ಕಿಲ್ಲರ್ ಶ್ಯಾಮ್ ನನ್ನು ಬೆಂಗಳೂರಿನ ವಿಶೇಷ ಪೊಲೀಸ್ ತಂಡ ಬಂಧಿಸಿತು. ಏಳು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶ್ಯಾಮ್ ಕಳೆದ ಆಗಸ್ಟಿನಲ್ಲಿ ಕೋಲಾರ ಜೈಲಿನಿಂದ ಪರಾರಿಯಾಗಿದ್ದ. ಈತನ ಜೊತೆಗೆ ಶಬನಮ್ ಡೆವಲಪರ್ಸ್ ಉದ್ಯೋಗಿಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್ (30) ಹಾಗೂ ಹೊಸಕೋಟೆಯ ವಿಜಿ (29), ಆನಂದ (23), ಮಾರತ್ಹಳ್ಳಿಯ ಪ್ರಕಾಶ್ (34) ಎಂಬುವರು ಸಹ ಪೊಲೀಸರ ಬಲೆಗೆ ಬಿದ್ದರು. ಹೆದ್ದಾರಿಗಳಲ್ಲಿ ಲಾರಿ, ಕಾರನ್ನು ತಡೆದು ಚಾಲಕ ಪ್ರಯಾಣಿಕರನ್ನು ಕೊಲೆ ಮಾಡಿ ಹಣ ದೋಚುತ್ತಿದ್ದ ಶ್ಯಾಮ್ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮೈಸೂರು, ತುಮಕೂರು ಮತ್ತು ತಮಿಳುನಾಡಿನಲ್ಲಿ ಒಟ್ಟು 27 ಕೊಲೆ ಮತ್ತು ಅಷ್ಟೇ ಸಂಖ್ಯೆಯ ದರೋಡೆಗಳನ್ನು ಮಾಡಿದ ಆರೋಪವಿತ್ತು. ಇದರಲ್ಲಿ ಏಳು ಕೊಲೆ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಒಂದು ಪ್ರಕರಣದಲ್ಲಿ 10 ವರ್ಷ ಸಜೆ, ಎರಡು ಪ್ರಕರಣದಲ್ಲಿ ಏಳು ವರ್ಷ ಮತ್ತು ಒಂದು ಪ್ರಕರಣದಲ್ಲಿ ಆರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ.

2007: ಹು ಜಿಂಟಾವೊ ಅವರು ಮತ್ತು ಐದು ವರ್ಷಗಳ ಅವಧಿಗೆ ಚೀನಾ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

 2007: ಪರಿಸರಸ್ನೇಹಿ ಮತ್ತು ಅತಿ ಶೀಘ್ರವಾಗಿ ಅಡುಗೆ ಮಾಡುವ ಒಲೆಯನ್ನು ಪ್ರಚಾರ ಮಾಡಿದ ಹಾವೇರಿಯ ಮಂಜುನಾಥ ಪಂಚಾನನ ಮೈಸೂರಿನಲ್ಲಿ ಹೈಟೆಕ್ ಯಜ್ಞಕುಂಡವೊಂದನ್ನು ಸಿದ್ಧಪಡಿಸಿ ಆಸ್ತಿಕರ ಮನಗೆದ್ದರು.  ಮೈಸೂರಿನ ಜೆಎಸ್ಸೆಸ್ಸ್ ಅರ್ಬನ್ ಹಾತಿನಲ್ಲಿ ಈ ಹೈಟೆಕ್ ಹೋಮಕುಂಡ ಜನರ ಗಮನ ಸೆಳೆಯಿತು. ಜೇಡಿ ಮಣ್ಣಿನಿಂದ ತಯಾರಿಸಿದ ಹೂಮ ಕುಂಡಕ್ಕೆ ವಿದ್ಯುತ್ ಒಲೆಯನ್ನು ಸೇರಿಸಲಾಗಿದ್ದು, ಸ್ಪೀಕರ್ ಜೋಡಿಸಲಾಗಿದೆ. ಒಲೆಯ ಕೆಳಗೇ ಟೇಪ್ ಹಾಕುವ ಸೌಲಭ್ಯವೂ ಇದ್ದು ಹೋಮದ ಮಂತ್ರವನ್ನೂ ಕೇಳಬಹುದು. ಜೊತೆಗೆ ನೀವು ಲೋಬಾನ ಅಥವಾ ಪಂಚಾನನ ಅವರೇ ತಯಾರಿಸಿದ ಧೂಪವನ್ನು ಬಳಸಬಹುದು. ನಿಮ್ಮ ಮನೆಯಲ್ಲಿ ಗಣ ಹೋಮ ಮಾಡಬೇಕಾದರೆ ಗಣಹೋಮದ ಮಂತ್ರ, ಮೃತ್ಯುಂಜಯ ಹೋಮ ಮಾಡಿಸಬೇಕು ಎಂದರೆ ಮೃತ್ಯುಂಜಯ ಹೋಮದ ಮಂತ್ರದ ಕ್ಯಾಸೆಟ್ ಹಾಕಬಹುದು. ಜೊತೆಗೆ ಐದು ಮಂತ್ರಗಳು ಇರುವ ಕ್ಯಾಸೆಟ್ಟನ್ನೂ ಮಂಜುನಾಥ ಹಾಕಿಕೊಡುತ್ತಾರೆ. ಧೂಪವನ್ನು ಹಾಕಿದಾಗ ಒಲೆಯಿಂದ ಹೊಗೆ ಬರುತ್ತದೆ. ಆದರೆ ಪಂಚಾನನ ಅವರು ಸಿದ್ಧಪಡಿಸಿದ ವಿವಿಧ ಮರಗಳ ಪುಡಿಯನ್ನು ಹಾಕಿದಾಗ ಮಾತ್ರ ಈ ಒಲೆಯಲ್ಲಿ ಸುವಾಸನೆ ಬರುತ್ತದೆ. ನೀವೇ ಬೇರೆ ಸುವಾಸನೆ ಪುಡಿಯನ್ನು ಹಾಕಿದರೆ ಹೊಗೆ ಮಾತ್ರ ಬರುತ್ತದೆ. ಸುವಾಸನೆ ಬರುವುದಿಲ್ಲ. ಪಂಚಾನನ ಅವರು ಹಾವೇರಿಯ ಪುರೋಹಿತರ ಸಲಹೆ ಪಡೆದು ಈ ಹೋಮಕುಂಡವನ್ನು ಸೃಷ್ಟಿಸಿದ್ದಾರೆ. ಅವರ ಸಲಹೆ ಮೇರೆಗೇ ಸುವಾಸನೆ ಬರುವಂತಹ ಮರಗಳ ಪುಡಿಯ ಮಿಶ್ರಣ ಸಿದ್ಧ ಪಡಿಸಿದ್ದಾರೆ. ಈ ಹೋಮಕುಂಡವನ್ನು ಬಳಸಿ ಬೆಳಿಗ್ಗೆ ಮತ್ತು ಸಂಜೆ ಹೊಗೆ ಹಾಕಿದರೆ ಮನೆಯಲ್ಲಿ ಆರೋಗ್ಯ ನೆಲೆಸುತ್ತದೆ. ಮುಖ್ಯವಾಗಿ ಸೊಳ್ಳೆ ಮತ್ತು ಇತರ ಕೀಟಗಳು ಬರುವುದಿಲ್ಲ ಎಂಬುದು ಪಂಚಾನನ ಅವರ ಪ್ರತಿಪಾದನೆ. ಮೂಲತಃ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನವರಾದ ಮಂಜುನಾಥ ಪಂಚಾನನ ಕೇವಲ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದವರು. ಉದ್ಯೋಗ ಹುಡುಕಿಕೊಂಡು ಹಾವೇರಿಗೆ ಬಂದ ಅವರು ಮರಗೆಲಸವನ್ನು ಮಾಡುತ್ತಾ ಎಲೆಕ್ಟ್ರಿಕಲ್ ಎಂಜಿನಿಯರಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಹಲವಾರು ಯಂತ್ರಗಳನ್ನು ಸಿದ್ಧಪಡಿಸಿದರು. ಪರಿಸರ ಸ್ನೇಹಿ ಒಲೆ, ಕಾಲಿಂಗ್ ಬೆಲ್, ತಾರಾಲಯ, ಇಸ್ತ್ರಿ ಪೆಟ್ಟಿಗೆ ಮುಂತಾದವುಗಳನ್ನು ಹೊಸ ಮಾದರಿಯಲ್ಲಿ ರೂಪಿಸಿದರು. ಇವರ ವಿನೂತನ ಎಲೆಕ್ಟ್ರಿಕಲ್ ಹೋಮ ಕುಂಡವನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. (ಮಂಜುನಾಥ ಪಂಚಾನನ ದೂರವಾಣಿ 9900437066)

2007: ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ, ಮೂಲತಃ ವಿಜಾಪುರ ಜಿಲ್ಲೆಯವರಾದ ಅಶೋಕ ಬಾದರದಿನ್ನಿ ಅವರನ್ನು ಸಾಣೇಹಳ್ಳಿಯ ಶಿವಕುಮಾರ ಕಲಾಸಂಘವು ಕೊಡಮಾಡುವ 2007ರ ಶಿವಕುಮಾರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಬಾದರದಿನ್ನಿ ಅವರ ನಾಟಕಗಳು ಹೊಸ ವ್ಯಾಖ್ಯೆಗೆ, ನವೀನ ಸಂಯೋಜನೆಗೆ, ಹದವಾದ ಸಂಗೀತ ಬಳಕೆಗೆ, ಅನನುಭವಿ ಕಲಾವಿದರ ಪ್ರತಿಭಾ ಪೋಷಣೆಗೆ, ಸಂಘಟನೆಯ ಸಂದರ್ಭದಲ್ಲಿ ಮಿತವಾದ ವೆಚ್ಚಕ್ಕೆ, ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿವೆ. ಬೆಂಗಳೂರೇತರ ರಂಗಭೂಮಿಯ ಚಾಂಪಿಯನ್ ಎಂದೇ ಹೆಸರಾದ ಇವರ ನಾಟಕಗಳು ಕೇರಳ, ಮುಂಬೈ, ನವದೆಹಲಿಯಲ್ಲೂ ಪ್ರದರ್ಶನ ಕಂಡಿವೆ. `ಅಭಿಜ್ಞಾನ ಶಾಕುಂತಲಾ, ಮೃಚ್ಛ ಕಟಿಕ, ಮ್ಯಾಕಬೆತ್, ಕಿಂಗ್ ಲಿಯರ್, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್, ಈಡಿಪಸ್, ಸಂಕ್ರಾಂತಿ, ತುಘಲಕ್, ಸಿಂಗಾರೆವ್ವ ಮತ್ತು ಅರಮನೆ, ವಿಶ್ವಬಂಧು ಮರುಳಸಿದ್ಧ, ಮರಣವೇ ಮಹಾನವಮಿ, ಶರಣಸತಿ, ಲಿಂಗಪತಿ, ಉದ್ಭವ' ಇವು ಬಾದರ  ದಿನ್ನಿ ನಿರ್ದೇಶಿಸಿದ್ದ ಪ್ರಮುಖ ನಾಟಕಗಳು. 

2007:  ಪವರ್ ಲಿಫ್ಟರ್ ವೀರೇಶ್ ರಾವ್ (33) ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 2007ರ ಸಾಲಿನ ದಸರಾ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಸ್ಪರ್ಧೆ 125 ಕೆ.ಜಿ. ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ದ್ವಿತೀಯ ಸ್ಥಾನ ಹಾಗೂ ಬೆಳ್ಳಿ ಪದಕ ಪಡೆದಿದ್ದರು. ರಾಜ್ಯ ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಹಲವು ಬಾರಿ ಭಾಗವಹಿಸಿದ್ದ ವೀರೇಶ್ ರಾವ್ ಅನೇಕ ಬಹುಮಾನಗಳನ್ನು ಪಡೆದು ಉತ್ತಮ ಪವರ್ ಲಿಫ್ಟರ್ ಎನಿಸಿದ್ದರು.

2006: ಗುಜರಾತಿನ ಕಛ್ ಜಿಲ್ಲೆಯ ಲುನಾ ಗ್ರಾಮದ ರಾಣಾದಲ್ಲಿ ಭೂಮಿಯ ಆಚಿನ ಕಾಯವೊಂದು ಅಪ್ಪಳಿಸಿ ಉಂಟಾಗಿರಬಹುದಾದ ವೃತ್ತಾಕಾರದ ಕುಳಿಯೊಂದನ್ನು ಪತ್ತೆ ಹಚ್ಚಿರುವುದಾಗಿ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರಜ್ಞರಾದ ಆರ್. ವಿ. ಕಾರಂತ್ ಮತ್ತು ಎಂ.ಎಸ್. ಗಾಧವಿ ಅವರು `ಕರೆಂಟ್ ಸೈನ್ಸ್' ಪತ್ರಿಕೆಗೆ ಬರೆದ ಲೇಖನದಲ್ಲಿ ಪ್ರಕಟಿಸಿದರು. ವೇದಗಳ ಕಾಲದಲ್ಲಿ ಭೂಮಿಯ ಹೊರಗಿನ ಕಾಯವೊಂದು ಈ ಪ್ರದೇಶಕ್ಕೆ ಅಪ್ಪಳಿಸಿ ಈ ಕುಳಿಯ ರಚನೆಯಾಗಿರಬಹುದು ಎನ್ನಲಾಗಿದೆ. ಕುಳಿ ಪತ್ತೆಯಾದ ನಿವೇಶನವು ಪ್ರಾಚೀನ ಹರಪ್ಪ ನಾಗರಿಕತೆಗೆ ಸಂಬಂಧಿಸಿದ ಕುರುಹುಗಳಿರುವ ನಿವೇಶನಕ್ಕೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲೂ ಸುಮಾರು 4000-5000 ವರ್ಷಗಳ ಹಿಂದೆ ಉರಿಯುತ್ತಿರುವ ಅನ್ಯ ಕಾಯವೊಂದು ಪಶ್ಚಿಮ ಭಾರತದ ಪ್ರದೇಶವೊಂದಕ್ಕೆ ಅಪ್ಪಳಿಸಿತ್ತು ಎಂಬ ಬಗೆಗೆ ಮಾಹಿತಿಗಳು ಲಭ್ಯವಿವೆ. ಮಹಾರಾಷ್ಟ್ರದ ಲೊನಾರ್ ಹಾಗೂ ರಾಜಸ್ಥಾನದ ರಾಮಗಢ ಎಂಬಲ್ಲಿ ಇದೇ ತರಹದ ರಚನೆಗಳು ಪತ್ತೆಯಾಗಿದ್ದು, ಲುನಾದಲ್ಲಿ ಪತ್ತೆಯಾದ ಈ `ಕುಳಿ' ದೇಶದಲ್ಲಿ ಪತ್ತೆಯಾದ ಮೂರನೇ ಕುಳಿಯಾಗಿದೆ.

1938: ಚೆಸ್ಟರ್ ಎಫ್. ಕಾರ್ಲ್ ಸನ್ ತನ್ನ ಸಹಾಯಕನೊಬ್ಬನ ನೆರವಿನೊಂದಿಗೆ `ಜೆರೋಗ್ರಫಿ'ಯನ್ನು ಪ್ರದರ್ಶಿಸಿದ. ಇಂದು ಇದು ಫೊಟೋ ಕಾಪಿಯಿಂಗ್ ಅಥವಾ ಜೆರಾಕ್ಸಿಂಗ್ ಎಂದೇ ಖ್ಯಾತಿ ಪಡೆದಿದೆ. ಹತ್ತು ವರ್ಷಗಳ ಬಳಿಕ 1948 ರಲ್ಲಿ ಹಾಲೋಯಿಡ್ ಕಂಪೆನಿಯು (ಮುಂದೆ ಇದೇ ಜೆರಾಕ್ಸ್ ಕಂಪೆನಿ ಎಂದೇ ಖ್ಯಾತಿ ಪಡೆಯಿತು) ಜೆರಾಗ್ರಫಿ ಕುರಿತು ಸಾರ್ವಜನಿಕವಾಗಿ ಪ್ರಕಟಿಸಿತು. 1950ರಿಂದ ಜೆರಾಕ್ಸ್ ಪ್ರತಿಗಳು ಲಭಿಸಲಾರಂಭವಾದವು. ಜೆರಾಕ್ಸ್ ಎಂಬುದು ಜೆರಾಗ್ರಫಿ ಪದದಿಂದ ಬಂದಿದ್ದು, ಗ್ರೀಕಿನಲ್ಲಿ `ಒಣಬರಹ' (ಕನ್ನಡದಲ್ಲಿ `ನೆರಳಚ್ಚು') ಎಂಬ ಅರ್ಥವಿದೆ. ಈಗ ಅದು ಕಂಪೆನಿಯ `ಟ್ರೇಡ್ ಮಾರ್ಕ್' ಆಗಿದೆ.

1873: ಸ್ವಾಮೀ ರಾಮತೀರ್ಥರ (1873-1906) ಜನನ. ವೇದವಿದ್ವಾಂಸರಾದ ಇವರು ಆಧ್ಯಾತ್ಮಿಕವಾದಿಯಾಗಿದ್ದು, ವೈಯಕ್ತಿಕ ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕರಾಗಿದ್ದರು.

1797: ಆಂಡ್ರೆ ಜಾಕಿಸ್ ಗಾರ್ನೆರಿನ್ ಅವರು ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ಪ್ಯಾರಾಶೂಟ್ ಮೂಲಕ ಕೆಳಗಿಳಿದರು. ಪ್ಯಾರಿಸ್ಸಿನಲ್ಲಿ ಅವರು 2,200 ಮೀಟರ್ ಬಲೂನಿನಿಂದ ಪ್ಯಾರಾಶೂಟ್ ಮೂಲಕ ಕೆಳಕ್ಕೆ ಹಾರಿದರು. ಇವರು ಪ್ಯಾರಾಶೂಟಿನ ಸಂಶೋಧಕರಲ್ಲ. ಆದರೆ ಹೆಚ್ಚು ಎತ್ತರದಿಂದ ನೆಗೆಯಲು ಅನುಕೂಲವಾಗುವಂತೆ ಈ ಸಾಧನವನ್ನು ಸುಧಾರಿಸಿದರು. ಇವರ ಪ್ಯಾರಾಶೂಟನ್ನು ಬಿಳಿ ಕ್ಯಾನ್ವಾಸಿನಿಂದ ಮಾಡಲಾಗಿತ್ತು. ಅದರ ವ್ಯಾಸ 23 ಅಡಿಗಳಾಗಿದ್ದವು.

1764: ಹೆಕ್ಟರ್ ಮುನ್ರೋ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯು ಪಟ್ನಾದಿಂದ 120 ಕಿ.ಮೀ. ಪಶ್ಚಿಮಕ್ಕಿರುವ ಬಕ್ಸಾರ್ ಕದನದಲ್ಲಿ ಮೀರ್ ಕಾಸಿಮನನ್ನು ಪರಾಭವಗೊಳಿಸಿತು. ಮೀರ್ ಕಾಸಿಮ್ ಪಲಾಯನ ಮಾಡಿ, 1777 ರಲ್ಲಿ ಸಾಮಾನ್ಯನಂತೆ ಮೃತನಾದ.

1746: ಕಾಲೇಜ್ ಆಫ್ ನ್ಯೂಜೆರ್ಸಿ ಸ್ಥಾಪನೆಗೊಂಡಿತು. 1896 ರಲ್ಲಿ ಇದನ್ನು ಪ್ರಿನ್ಸ್ ಟನ್ ಯುನಿವರ್ಸಿಟಿಯಾಗಿ ಮಾರ್ಪಡಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement