Thursday, October 1, 2009

ಇಂದಿನ ಇತಿಹಾಸ History Today ಅಕ್ಟೋಬರ್ 01

ಇಂದಿನ ಇತಿಹಾಸ

ಅಕ್ಟೋಬರ್  01



 ವಿಶ್ವದ ಅತೀ ಕುಬ್ಜ ಮನುಷ್ಯ ಗುಲ್ ಮೊಹಮ್ಮದ್ (36) ನಿಧನ. 56.16 ಸೆಂ.ಮೀ. ಎತ್ತರವಿದ್ದ ಗುಲ್ ಮೊಹಮ್ಮದ್ ಈ ವಿಶೇಷತೆಯಿಂದಾಗಿಯೇ 1992ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದರು.

ವಿಶ್ವ ಹಿರಿಯರ ದಿನ. ಬಾಳಿನ ಮುಸ್ಸಂಜೆಯಲ್ಲಿ ಹೆಜ್ಜೆ ಹಾಕುತ್ತಿರುವ ಹಿರಿಯರಿಗೆ ಗೌರವ ಸಲ್ಲಿಸುವ  ದಿನವಿದು. ಹಿರಿಯರ ಸಮಸ್ಯೆಗಳಿಗೆ ಹಾಗೂ ಅವರನ್ನು ನಿರ್ಲಕ್ಷಿಸುವುದರಿಂದ ಉದ್ಭವಿಸುವ ಸಮಸ್ಯೆಗಳಿಗೆ ಉತ್ತರ ಕಂಡು ಕೊಳ್ಳುವ ಯತ್ನವನ್ನು ಈದಿನ ವಿಶ್ವಾದ್ಯಂತ ಮಾಡಲಾಗುತ್ತದೆ.


2014: ಇಂಚೋನ್: ಏಷ್ಯಾಡ್ ಮಹಿಳಾ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್​ನಲ್ಲಿ ತೀರ್ಪಗಾರರ ಪಕ್ಷಪಾತದಿಂದ ಸೋಲು ಕಂಡಿದ್ದ ಮಣಿಪುರಿ ಬಾಕ್ಸರ್ ಸರಿತಾ ದೇವಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿ ದಿಟ್ಟತನ ಮೆರೆದರು.. ಸರಿತಾ ತೋರಿದ ಆಕ್ರೋಶ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟದ ಕೆಂಗಣ್ಣಿಗೂ ಗುರಿಯಾಗಿದ್ದು, ನಿಷೇಧ ಶಿಕ್ಷೆಗೊಳಗಾಗುವ ಭೀತಿಯಿದೆ. ಏತನ್ಮಧ್ಯೆ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿಕೋಮ್​ಸ್ವರ್ಣ ಪದಕಕ್ಕೆ ಕೊರಳೊಡ್ಡಿ ಬೀಗಿದರು. ಕೂಟದ 13ನೇ ದಿನ ಭಾರತ ತಲಾ ಒಂದು ಚಿನ್ನ, ಬೆಳ್ಳಿ, 2 ಕಂಚು ಜಯಿಸಿತು. 800 ಮೀಟರ್ ಓಟದಲ್ಲಿ ಪಿಟಿ ಉಷಾ ಶಿಷ್ಯೆ ಟಿಂಟು ಲೂಕಾ ಬೆಳ್ಳಿ ಹಾಗೂ ಜಾವೆಲಿನ್ ಥ್ರೋನಲ್ಲಿ ಅನು ರಾಣಿ ಕಂಚು ಗೆದ್ದುಕೊಂಡರು. ಮಹಿಳಾ ಹಾಕಿ ತಂಡ ಕೂಡ ಕಂಚಿನ ಸಾಧನೆ ಮಾಡಿತು. ಆದರೂ ಭಾರತ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಿಂದ (ಚಿನ್ನ-7, ಬೆಳ್ಳಿ-9, ಕಂಚು-34, ಒಟ್ಟು-50) 11ಕ್ಕೆ ಜಾರಿತು..
 
2014: ಫ್ರಾಂಕ್​ಫರ್ಟ್: ತಮ್ಮ ಅಮೆರಿಕ ಭೇಟಿಯನ್ನು ಮುಗಿಸಿ ಸ್ವದೇಶಕ್ಕೆ ವಾಪಸಾಗುವ ಮಾರ್ಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾಂಕ್​ಫರ್ಟ್​ಗೆ ಆಗಮಿಸಿದರು. ಅಮೆರಿಕ ಭೇಟಿಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದ ಬಳಿಕ ಭಾರತ ಮತ್ತು ಅಮೆರಿಕ ಭಯೋತ್ಪಾಕದರ ಸ್ವರ್ಗವನ್ನು ಧ್ವಂಸಗೊಳಿಸಲು ಜಂಟಿ ಪ್ರಯತ್ನಗಳನ್ನು ಮಾಡಲು ಒಪ್ಪಂದಕ್ಕೆ ಬಂದಿವೆ. ಇದರ ಜೊತೆಗೆ ರಕ್ಷಣೆ, ಇಂಧನ, ಆರ್ಥಿಕ ಕ್ಷೇತ್ರ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೂ ಮೋದಿ ಹಾಗೂ ಬರಾಮ ಒಪ್ಪಿಕೊಂಡಿದ್ದಾರೆ. ಹಿಂದಿನ ದಿನ ಅಮೆರಿಕ-ಭಾರತ ವ್ಯವಹಾರ ಮಂಡಳಿ (ಯುಎಸ್​ಐಬಿಸಿ) ಏರ್ಪಡಿಸಿದ್ದ ಕೊನೆಯ ಅಧಿಕೃತ ಕಾರ್ಯಕ್ರಮದ ಕೊನೆಯಲ್ಲಿ 'ಥ್ಯಾಂಕ್ ಯೂ ಅಮೆರಿಕಾ' (ಅಮೆರಿಕವೇ ನಿನಗೆ ಧನ್ಯವಾದ) ಎಂದು ಹೇಳುವುದರೊಂದಿಗೆ ಪ್ರಧಾನಿಯವರು ತಮ್ಮ ಐದು ದಿನಗಳ ಅಮೆರಿಕಾ ಪ್ರವಾಸವನ್ನು ಮುಕ್ತಾಯಗೊಳಿಸಿದರು. 'ನನ್ನ ಭೇಟಿ ಅತ್ಯಂತ ಯಶಸ್ವಿಯಾಗಿದೆ' ಎಂದು ಈ ಸಂದರ್ಭದಲ್ಲಿ ಮೋದಿ ಹೇಳಿದರು. ವಾಷಿಂಗ್ಟನ್​ನ ಶ್ವೇತಭವನದ ಓವಲ್ ಕಚೇರಿಯಲ್ಲಿ ಮೋದಿ ಅವರು ಒಬಾಮಾ ಅವರನ್ನು ಭೇಟಿ ಮಾಡಿದರು. ಭೇಟಿಯ ಕೊನೆಗೆ ಉಭಯ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಭಾರತ-ಅಮೆರಿಕ ಬಾಂಧವ್ಯವನ್ನು ಇನ್ನೂ ಎತ್ತರಕ್ಕೆ ಒಯ್ಯುವ ವಚನ ನೀಡಿದರು. ಭೇಟಿಯ ಬಳಿಕ ಅಮೆರಿಕ ಅಧ್ಯಕ್ಷರು ಮತ್ತು ಪ್ರಧಾನಿ ಒಟ್ಟಿಗೇ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸ್ಮಾರಕಕ್ಕೆ ಭೇಟಿ ನೀಡಿದರು. ಅಮೆರಿಕ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಅವರು ನ್ಯೂಯಾರ್ಕ್​ನಲ್ಲಿ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆ ಮಹಾಧಿವೇಶನವನ್ನು ಉದ್ಧೇಶಿಸಿ ಮಾತನಾಡಿದರು. ಸೆಪ್ಟೆಂಬರ್ 28ರಂದು ಬಿಗ್ ಆಪಲ್​ನ ಮ್ಯಾಡಿಸನ್ ಸ್ಕೆವೕರ್ ಗಾರ್ಡನ್​ನಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಾರತೀಯ ಮೂಲಕ ಅಮೆರಿಕನ್ ಸಮುದಾಯವನ್ನು ಉದ್ಧೇಶಿಸಿ ಮಾತನಾಡಿ 'ಮೋಡಿ' ಮಾಡಿದರು. ಈ ಭೇಟಿ ಅವಧಿಯಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸ, ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಮತ್ತು ನೇಪಾಳೀ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಜೊತೆಗು ಪ್ರಧಾನಿ ರ್ಚಚಿಸಿದರು. ಮೋದಿ ಅವರು ಅಮೆರಿಕದ ಉನ್ನತ ಉದ್ಯಮಿಗಳು, ಬಿಲ್ ಮತ್ತು ಹಿಲರಿ ಕ್ಲಿಂಟನ್, ನ್ಯೂಯಾರ್ಕ್ ಮೇಯರ್ ಮೈಕೆಲ್ ಬ್ಲೂಮ್​ಗ್ ಅವರಂತಹ ಅಮೆರಿಕದ ಖ್ಯಾತ ನಾಯಕರನ್ನು ಭೇಟಿ ಮಾಡಿದರು. ಒಟ್ಟಾರೆಯಾಗಿ 50ಕ್ಕೂ ಹೆಚ್ಚು ಮಂದಿ ಅಮೆರಿಕದ ಶಾಸನಕರ್ತರು, ಭಾರತೀಯ ಮೂಲದ ದಕ್ಷಿಣ ಕರೋಲಿನಾದ ಗವರ್ನರ್ ನಿಕ್ಕಿ ಹಾಲೀ ಸೇರಿದಂತೆ ಮೂವರು ಗವರ್ನರ್​ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪ್ರವಾಸ ಕಾಲದಲ್ಲಿ ಮೋದಿ ಅವರು ನ್ಯೂಯಾರ್ಕ್​ನ 9/11ಭಯೋತ್ಪಾದಕ ದಾಳಿಯ ಸ್ಮಾರಕ ಮತ್ತು ವಾಷಿಂಗ್ಟನ್ ಡಿಸಿಯ ಮಹಾತ್ಮಾ ಗಾಂಧಿ ಪ್ರತಿಮೆ ಸ್ಥಳಕ್ಕೂ ಭೇಟಿ ನೀಡಿದರು.

2014:  ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಎಂ.ಸಿ. ಮೇರಿ ಕೋಮ್​ಅವರು ಮಹಿಳೆಯರ ಫ್ಲೈವೈಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದುಕೊಂಡರು. ಐದು ಬಾರಿ ವಿಶ್ವಚಾಂಪಿಯನ್ ಆಗಿದ್ದ ಮೇರಿ ಅವರು ಕಝುಕಿಸ್ಥಾನದ ಝೈನಾ ಶೆಕೆರ್ಬೆಕೋವಾ ಅವರನ್ನು 2-0 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿದರು.

2014: ಬರೇಲಿ: ಸೇನಾ ಹೆಲಿಕಾಪ್ಟರ್ ಒಂದು ಇಲ್ಲಿನ ವಾಯುನೆಲೆಯಿಂದ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಇಬ್ಬರು ಪೈಲಟ್​ಗಳು ಮತ್ತು ಒಬ್ಬ ಎಂಜಿನಿಯರ್ ಮೃತರಾದರು. ಘಟನೆ ಈದಿನ ಬೆಳಗ್ಗೆ ಘಟಿಸಿದ್ದು, ಮೂವರು ಅಧಿಕಾರಿಗಳು ಮೃತರಾಗಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಹೆಲಿಕಾಪ್ಟರ್ ತನ್ನ ಮಾಮೂಲಿ ಹಾರಾಟಕ್ಕೆ ಹೊರಟಿತ್ತು ಎಂದು ಸುದ್ದಿ ಮೂಲಗಳು ತಿಳಿಸಿದವು. ಹೆಲಿಕಾಪ್ಟರ್ ಗಗನಕ್ಕೇ ಏರಿದ ಕೆಲವೇ ಕ್ಷಣಗಳಲ್ಲಿ ತೊಂದರೆಯಲ್ಲಿ ಸಿಲುಕಿದಂತೆ ಕಾಣಿಸಿತು. ಬೆನ್ನಲ್ಲೇ ಅದರಲ್ಲಿ ಬೆಂಕಿ ಕಾಣಿಸಿಕೊಂಡು ವಾಯುನೆಲೆಯಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಹೆಲಿಕಾಪ್ಟರ್​ನಲ್ಲಿ ಇದ್ದ ಇಬ್ಬರು ಪೈಲಟ್​ಗಳು ಮತ್ತು ಒಬ್ಬ ಎಂಜಿನಿಯರ್ ದುರಂತದಲ್ಲಿ ಅಸು ನೀಗಿದರು. ಸೇನೆಯ ಹಿರಿಯ ಆಡಳಿತಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

2014:  ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ, 4 ವರ್ಷ ಸಜೆಯ ಅಮಾನತು ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ರಜಾಕಾಲೀನ ಪೀಠವು ಅಕ್ಟೋಬರ್ 7ಕ್ಕೆ ಮುಂದೂಡಿತು. 'ಪ್ರಕರಣದ ವಿಚಾರಣೆಯನ್ನು ರಜಾಕಾಲದ ಪೀಠ ನಡೆಸುವುದು ಸೂಕ್ತವಲ್ಲ, ಸಾಮಾನ್ಯ ಪೀಠವೇ ನಡೆಸುವುದು ಸೂಕ್ತ' ಎಂಬುದಾಗಿ ಈದಿನ ಜಾಮೀನು ಕೋರಿಕೆ ಅರ್ಜಿ ತಮ್ಮ ಮುಂದೆ ಬಂದಾಗ ರಜಾಕಾಲೀನ ಪೀಠದ ನ್ಯಾಯಮೂರ್ತಿ ರತ್ನಕಲಾ ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು. ಹಿಂದಿನ ದಿನ ಬೆಳಗ್ಗೆ ಅಧೀನ ನ್ಯಾಯಾಲಯದಲ್ಲಿ ಪ್ರಕರಣದ ಸರ್ಕಾರಿ ಅಭಿಯೋಜಕರಾಗಿದ್ದ ಭವಾನಿಸಿಂಗ್ ತಮಗೆ ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಮುಂದುವರಿಯಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ದೊರೆತಿಲ್ಲ ಎಂದು ಹೇಳಿದ್ದನ್ನು ಪರಿಗಣಿಸಿದ ನ್ಯಾಯಾಲಯ ಅಭಿಯೋಜಕರಿಲ್ಲದೆ ಪ್ರಕರಣದ ವಿಚಾರಣೆ ನಡೆಸಿದಲ್ಲಿ ಅದು ಏಕಪಕ್ಷೀಯವಾಗುತ್ತದೆ ಎಂದು ಅಭಿಪ್ರಾಯಪಟ್ಟು ಅ.6ಕ್ಕೆ ವಿಚಾರಣೆ ಮುಂದೂಡಿತ್ತು. ನಂತರ, ತಮಿಳುನಾಡಿನ ಸಂಸದ, ಹಾಗೂ ವಕೀಲರು ವಿಶೇಷ ಪೀಠ ರಚಿಸಿ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಕೋರಿ ರಿಜಿಸ್ಟ್ರಾರ್​ಗೆ ಸಲ್ಲಿಸಿದ ಮನವಿಗೆ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದ್ದರು.

2014:  ಬೆಂಗಳೂರು: ವಿಶೇಷ ನ್ಯಾಯಾಲಯವು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ. ಜಯಲಲಿತಾ ಅವರು ತಮಗೆ ವಿಧಿಸಿರುವ 4 ವರ್ಷಗಳ ಸೆರೆವಾಸವನ್ನು ಪ್ರಶ್ನಿಸುವುದರ ಜೊತೆಗೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ರಜಾಕಾಲೀನ ಪೀಠವು ಅಕ್ಟೋಬರ್ 7ಕ್ಕೆ ಮುಂದೂಡಿದ್ದನ್ನು ಪ್ರತಿಭಟಿಸಿ ಜಯಲಲಿತಾ ಬೆಂಬಲಿಗ ವಕೀಲರು ಕರ್ನಾಟಕ ಹೈಕೋರ್ಟ್ ಹೊರಭಾಗದಲ್ಲಿ ಧರಣಿ ನಡೆಸಿದರು. ಜಯಲಲಿತಾ ಅವರ ಅವರ ಅರ್ಜಿಯು ರಜಾಕಾಲದ ನ್ಯಾಯಮೂರ್ತಿ ಅವರ ಪೀಠದ ಮುಂದೆ ಬಂದಾಗ, ಜಯಲಲಿತಾ ಪರ ವಕೀಲ ರಾಮ್ ಜೇಠ್ಮಲಾನಿ ಅವರು ಅಪರಾಧ ದಂಡ ಸಂಹಿತೆಯ (ಸಿಆರ್​ಪಿಸಿ) 389ನೇ ವಿಧಿಯಡಿಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಜಯಲಲಿತಾ ಅವರನ್ನು ಜಾಮೀನಿನಲ್ಲಿ ಬಿಡುಗಡ ಮಾಡಬೇಕು ಎಂದು ಕೋರಿದರು. ಶಿಕ್ಷೆಗೆ ಒಳಗಾದ ವ್ಯಕ್ತಿಯು ಸಲ್ಲಿಸುವ ಯಾವುದೇ ಮೇಲ್ಮನವಿಯನ್ನು ಬಾಕಿ ಇರಿಸಿಕೊಂಡು ಮೇಲ್ಮನವಿ ನ್ಯಾಯಾಲಯವು ಶಿಕ್ಷೆಯ ಜಾರಿಯನ್ನು ಅಮಾನತುಗೊಳಿಸಬಹುದು ಎಂದು ಅಪರಾಧ ದಂಡ ಸಂಹಿತೆಯ 389ನೇ ವಿಧಿಯು ಹೇಳುತ್ತದೆ. ಅಲ್ಲದೆ, ವ್ಯಕ್ತಿಯು ಸೆರೆಮನೆಯಲ್ಲಿದ್ದರೆ ಆತ ಅಥವಾ ಆಕೆಯನ್ನು ಜಾಮೀನಿನಲ್ಲಿ ಅಥವಾ ಸ್ವಯಂ ಖಾತರಿ ಆಧಾರದಲ್ಲಿ ಬಿಡುಗಡೆ ಮಾಡಬೇಕು ಎಂದೂ ಈ ವಿಧಿ ಹೇಳುತ್ತದೆ. ಏನಿದ್ದರೂ ಈ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ರಜಾಕಾಲದ ಪೀಠವು ನಡೆಸುವುದು ಸರಿಯಲ್ಲ, ಸಾಮಾನ್ಯ ಪೀಠವೇ ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿದ ನ್ಯಾಯಮೂರ್ತಿ ರತ್ನಕಲಾ ಅವರು ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಿದರು. ನ್ಯಾಯಾಲಯವು ವಿಚಾರಣೆ ಮುಂದೂಡಿದ್ದರಿಂದ ಅಸಮಾಧಾನಗೊಂಡ ಜಯಲಲಿತಾ ಬೆಂಬಲಿಗ ವಕೀಲರು ತತ್ ಕ್ಷಣವೇ ಹೈಕೋರ್ಟ್ ಹೊರಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

2014: ನವದೆಹಲಿ: ಎರಡು ಪ್ಯಾಸೆಂಜರ್ ರೈಲುಗಾಡಿಗಳು ಉತ್ತರ ಪ್ರದೇಶದ ಗೋರಖ್​ಪುರ ಸಮೀಪ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಕನಿಷ್ಠ 14 ಜನ ಮೃತರಾಗಿ 45 ಮಂದಿ ಗಾಯಗೊಂಡರು. 45 ಮಂದಿ ಗಾಯಾಳುಗಳ ಪೈಕಿ 12 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಂ ರೈಲ್ವೇ ವಕ್ತಾರ ಅನಿಲ್ ಸಕ್ಸೇನಾ ಹೇಳಿದರು. ವಾರಾಣಸಿಯಿಂದ ಗೋರಖ್​ಪುರಕ್ಕೆ ತೆರಳುತ್ತಿದ್ದ ಕೃಷಕ್ ಎಕ್ಸ್​ಪ್ರೆಸ್​ಲಖನೌದಿಂದ ಬರೌನಿಗೆ ಹೊರಟಿದ್ದ ಬರೌನಿ ಎಕ್ಸ್​ಪ್ರೆಸ್ ರೈಲುಗಾಡಿದೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ರಾತ್ರಿ 11 ಗಂಟೆ ವೇಳೆಗೆ ಗೋರಖ್​ಪುರದಿಂದ ಸುಮಾರು 7 ಕಿಮೀ ದೂರದಲ್ಲಿ ಈ ದುರಂತ ಘಟಿಸಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಲೋಕ್ ಸಿಂಗ್ ನುಡಿದರು. ಢಿಕ್ಕಿಯ ಪರಿಣಾಮವಾಗಿ ಬರೌನಿ ಎಕ್ಸ್​ಪ್ರೆಸ್​ನ ಮೂರು ಬಂಡಿಗಳು ಹಳಿಯಿಂದ ಹೊರಕ್ಕೆ ತಳ್ಳಲ್ಪಟ್ಟವು. ಸಿಗ್ನಲ್ ಗಮನಿಸದೇ ರೈಲು ಓಡಿಸಿದ್ದಕ್ಕಾಗಿ ಕೃಷಕ್ ಎಕ್ಸ್​ಪ್ರೆಸ್ ಚಾಲಕರನ್ನು ರೈಲ್ವೇಯು ಅಮಾನತುಗೊಳಿಸಿತು. ಘಟನೆಯ ಕಾರಣ ಪತ್ತೆಗಾಗಿ ರೈಲ್ವೇ ಸುರಕ್ಷತಾ ಕಮೀಷನರ್ ಪಿ.ಕೆ. ಬಾಜಪೇಯಿ ನೇತೃತ್ವದಲ್ಲಿ ತನಿಖೆಗೆ ಆಜ್ಞಾಪಿಸಲಾಯಿತು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿತು. ತಂಡವು ಜಪಾನನ್ನು 2-1 ಅಂತರದಲ್ಲಿ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಇಲ್ಲಿನ ಸಿಯೊನ್ಹಾಕ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಜಪಾನನ್ನು 2-1 ಅಂತರದಲ್ಲಿ ಸೋಲಿಸಿತು. ಇದರೊಂದಿಗೆ ಭಾರತದ ತಂಡ ಕಂಚಿನ ಪದಕವನ್ನು ಗೆದ್ದುಕೊಂಡದ್ದು ಮಾತ್ರವಲ್ಲ, 4 ವರ್ಷಗಳ ಹಿಂದೆ 2010ರಲ್ಲಿ ಜಪಾನ್​ನಿಂದ ಸೋಲುಂಡು ಕಂಚಿನ ಪದಕ ಕಳೆದುಕೊಂಡಿದ್ದುದರ ಸೇಡನ್ನು ತೀರಿಸಿಕೊಂಡಿತು. 2010ರ ಗುವಾಂಗ್ಝೊಹು ಕ್ರೀಡಾಂಗಣದಲ್ಲಿ ಜಪಾನ್ ಭಾರತವನ್ನು ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.

2014: ಚೆನ್ನೈ: ಶ್ರೀಲಂಕಾ ಅಧಿಕಾರಿಗಳ ವಶದಲ್ಲಿ ಇರುವ 20 ಮಂದಿ ಮೀನುಗಾರರು ಮತ್ತು 75 ದೋಣಿಗಳ ತತ್ ಕ್ಷಣ ಬಿಡುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರಿಗೆ ಬರೆದ ಪ್ರಥಮ ಪತ್ರದಲ್ಲಿ ಪನ್ನೀರಸೆಲ್ವಂ ಅವರು ಕಳೆದ ತಿಂಗಳು ಪ್ರತ್ಯೇಕ ಸಂದರ್ಭಗಳಲ್ಲಿ ಶ್ರೀಲಂಕಾ ಪಡೆಗಳು 20 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ ಬಗ್ಗೆ ಪ್ರಸ್ತಾಪಿಸಿದರು. ಶ್ರೀಲಂಕಾ ಸೆರೆಮನೆಗಳಲ್ಲಿ ಇರುವ ಭಾರತೀಯ ಮೀನುಗಾರರ ಬಿಡುಗಡೆಗೆ ಕೇಂದ್ರ ಸರ್ಕಾರ ಮತ್ತು ಹಿಂದಿನ ಮುಖ್ಯಮಂತ್ರಿ, ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ನಡೆಸಿದ ಪ್ರಯತ್ನಗಳನ್ನು ಅವರು ವಿವರಿಸಿದರು.

2007: ಆಡಳಿತಾರೂಢ ಡಿಎಂಕೆ ಹಾಗೂ ಡಿಪಿಎ ಸರ್ಕಾರದ ಕರೆಯ ಮೇರೆಗೆ ಸೇತು ಸಮುದ್ರಂ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಮಿಳ್ನಾಡು ರಾಜ್ಯದ ಬಹುತೇಕ ಕಡೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಜೊತೆಗೇ ಅಂಗಡಿಗಳು ಬಂದ್ ಆಚರಿಸಿದವು. ಈ ಸಂದರ್ಭದಲ್ಲಿ ಉಪವಾಸ ಕುಳಿತದ್ದಕ್ಕಾಗಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಈ ಛೀಮಾರಿ ಪರಿಣಾಮವಾಗಿ ಕರುಣಾನಿಧಿ ಉಪವಾಸವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದರು. ರಾಜ್ಯದೆಲ್ಲೆಡೆ `ಅಘೋಷಿತ ಬಂದ್' ಸ್ಥಿತಿ ಕಂಡುಬಂದಿತು. ಸುಪ್ರೀಂಕೋರ್ಟ್ ಛೀಮಾರಿ ಹಿನ್ನೆಲೆಯಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

2008: ಜೋಧಪುರ ಮೆಹರಂಗಡದ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರಾದವರ ಸಂಖ್ಯೆ 224ಕ್ಕೆ ಹೆಚ್ಚಿತು. ಈದಿನ 77 ಸಾವುಗಳು ವರದಿಯಾದವು. ದುರಂತ ನಡೆದ ಒಂದು ದಿನದ ನಂತರ ಬೆಟ್ಟದ ದೇವಾಲಯದ ಬಾಗಿಲು ತೆರೆದು ಭಕ್ತಾಧಿಗಳಿಗೆ ಮುಕ್ತಗೊಳಿಸಲಾಯಿತು. .

2008: ಭಾರತದ `ಸರ್ವೋದಯ ದಂಪತಿ' ಕೃಷ್ಣಮ್ಮಾಳ್ ಮತ್ತು ಶಂಕರಲಿಂಗಮ್ ಜಗನ್ನಾಥನ್ ದಂಪತಿ ಸೇರಿದಂತೆ ನಾಲ್ವರು ಸಾಮಾಜಿಕ ಕಾರ್ಯಕರ್ತರನ್ನು `2008ರ ರೈಟ್ ಲೈವ್ಲಿ ಹುಡ್ ಪುರಸ್ಕಾರ'ಕ್ಕೆ ಆಯ್ಕೆ ಮಾಡಲಾಯಿತು. `ಗಾಂಧಿ ವಿಚಾರಧಾರೆಗಳನ್ನು ತಮ್ಮ ಜೀವನದುದಕ್ಕೂ ಅಳವಡಿಸಿಕೊಂಡಿರುವುದನ್ನು ಗುರುತಿಸಿ ಜಗನ್ನಾಥನ್ ದಂಪತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು. ಜಗನ್ನಾಥನ್ ದಂಪತಿಯ ಈ ಸಾಮಾಜಿಕ ಸಮರ್ಪಣೆಯನ್ನು ಪ್ರಶಸ್ತಿ ಸಮಿತಿಯು ಭಾರತದ ಶಕ್ತಿ'ಎಂದು ಉಲ್ಲೇಖಿಸಿದರು. ಪರ್ಯಾಯನೊಬೆಲ್ ಪುರಸ್ಕಾರ' ಎಂದೇ ಕರೆಯಲ್ಪಡುವ ಈ ಪ್ರಶಸ್ತಿಯನ್ನು ಜಗನ್ನಾಥನ್ ದಂಪತಿಯ ಜೊತೆ ಅಮೆರಿಕದ ಪತ್ರಕರ್ತ ಅಮಿ ಗೂಡ್ ಮ್ಯಾನ್, ಜರ್ಮನಿಯ ಸ್ತ್ರೀರೋಗ ತಜ್ಞೆ ಮೋನಿಕಾ ಹೌಸೆರ್ ಹಾಗೂ ಸೋಮಾಲಿಯಾದ ಆಶಾ ಹಗಿ ಅವರು ಹಂಚಿಕೊಂಡರು..ಕೃಷ್ಣಮ್ಮಾಳ್ ಜಗನ್ನಾಥನ್, ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯವರು. 80 ವರ್ಷದ ಈ `ಸರ್ವೋದಯ ಕಾರ್ಯಕರ್ತೆ'ಗ' ಭಾರತ ಸರ್ಕಾರದ ಪ್ರತಿಷ್ಠಿತ `ಪದ್ಮಶ್ರೀ' ಮತ್ತು ಅಮೆರಿಕ ಸಿಯಾಟಲ್ ವಿವಿ ನೀಡುವ `ಒಪುಸ್ -2008' ಪ್ರಶಸ್ತಿ ಕೂಡ ಲಭಿಸಿವೆ. ಸರ್ವೋದಯ ನಾಯಕ ಶಂಕರಲಿಂಗಮ್ ಜಗನ್ನಾಥನ್ ಅವರನ್ನು ವಿವಾಹವಾದ ಈಕೆ ಗಾಂಧೀಜಿಯವರ `ಭೂದಾನ ಚಳುವಳಿ'ಯಲ್ಲಿ ಗಾಂಧಿವಾದಿ ವಿನೋದ ಭಾವೆಯವರ ಜೊತೆ ಪಾಲ್ಗೊಂಡಿದ್ದರು. 1981ರಲ್ಲಿ ನಾಗಪಟ್ಟಣಂ ಜಿಲ್ಲೆಯ ಕುಥೂರ್ ಹಳ್ಳಿಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್ ಎ ಎಪ್ ಟಿ ಐ)ಯನ್ನು ಆರಂಭಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

2008: ಅಮೆರಿಕದ ಲೀಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯ ಹಿನ್ನೆಲೆಯಲ್ಲಿ ಬ್ರಿಟನ್ ಶಾಖೆಯಲ್ಲಿನ 750 ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಬ್ಯಾಂಕಿನ ಆಡಳಿತಾಧಿಕಾರಿಗಳು ಘೋಷಿಸಿದರು.

2008: ಬ್ರಿಟನ್ ರಾಜಕುಮಾರಿ ಡಯಾನಾ ಸತ್ತು ದಶಕವೇ ಕಳೆದಿದ್ದರೂ, ತಾನು ಬಳಸುತ್ತಿದ್ದ ವಸ್ತುಗಳ ಮೂಲಕ ಆಕೆ ಜನಮಾನಸದಲ್ಲಿ ಜೀವಂತವಾಗಿರುವುದು ಬೆಳಕಿಗೆ ಬಂತು. ಹದಿಹರೆಯದ ವಯಸ್ಸಿನಲ್ಲಿ ಡಯಾನಾ ತನ್ನ ಪ್ರಿಯಕರ ರಾಜಕುಮಾರ ಚಾರ್ಲ್ಸ್ ಅವರಿಗೆ ಬರೆದ ಪ್ರೇಮಪತ್ರಗಳು ಈದಿನ ಇಂಗ್ಲೆಂಡ್ನ್ಲಲಿ ನಡೆದ ಹರಾಜಿನಲ್ಲಿ 12,000 ಪೌಂಡುಗಳಿಗೆ ಮಾರಾಟವಾದವು. ಈ ಪ್ರೇಮಪತ್ರಗಳನ್ನು ರೀಮನ್ ಡನ್ಸಿ ಎಂಬುವರು 12431 ಪೌಂಡುಗಳಿಗೆ ಖರೀದಿಸಿದರು. ಪತ್ರಗಳಲ್ಲಿ ರಾಜಕುಮಾರ ಚಾರ್ಲ್ಸ್ ಜೊತೆಗಿನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಇಬ್ಬರ ನಡುವಿನ ಮಾತುಕತೆಗಳೂ ಅಡಕವಾಗಿವೆ ಎನ್ನಲಾಗಿತ್ತು.

 2007: ಭಾರತೀಯ ಭೂಗರ್ಭ ಸರ್ವೇಕ್ಷಣಾಲಯದ `ಸಮುದ್ರಮಂಥನ' ಹಡಗಿನ ಬದಲಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಸಮುದ್ರ ತಳ ಸಮೀಕ್ಷೆ ಮತ್ತು ಸಂಶೋಧನೆಗೆ ನೆರವಾಗುವ ಹೊಸ  ಹಡಗನ್ನು ಭೂಗರ್ಭ ಸರ್ವೇಕ್ಷಣಾಲಯಕ್ಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ಮುನ್ಷಿ ಪ್ರಕಟಿಸಿದರು. ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಹೆಚ್ಚು ಕಾರ್ಯಕ್ಷಮತೆಯ ಹೊಸ ಸಂಶೋಧನಾ ಹಡಗಿನ ವೆಚ್ಚ 448ಕೋಟಿ. ರೂಪಾಯಿಗಳು.

2007: ರಾಷ್ಟ್ರದಲ್ಲಿಯೇ ಮೊತ್ತ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಮಡಿಲು' ಯೋಜನೆಗೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡುವ ಉದ್ದೇಶಕ್ಕಾಗಿ ರೂಪಿಸಲಾದ ಈ ಯೋಜನೆಯಡಿಯಲ್ಲಿ ಸಾಂಕೇತಿಕವಾಗಿ ಬೆಂಗಳೂರು ಸುತ್ತ ಮುತ್ತಲಿನ 26 ಮಹಿಳೆಯರಿಗೆ 'ಉಚಿತ ಆರೈಕೆ ಕಿಟ್' ವಿತರಿಸಲಾಯಿತು. ಯೋಜನೆಯಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಮಹಿಳೆಯರಿಗೆ ಅಗತ್ಯವಸ್ತುಗಳ ಕಿಟ್ ನೀಡಲಾಗುವುದು. ರಾಜ್ಯದ 6.5 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ.

2007: ಅಕ್ಟೋಬರ್ 2ರ ಸಂಜೆ ಒಳಗಾಗಿ ಅಧಿಕಾರ ಹಸ್ತಾಂತರ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಸಚಿವ ರಾಮಚಂದ್ರಗೌಡ ಅವರ ಮನೆಯಲ್ಲಿ ಈದಿನ ನಡೆದ ಸಭೆಯಲ್ಲಿ ಬಿಜೆಪಿಯ ಎಲ್ಲ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಈ ಪತ್ರಗಳನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಮ್ಮಿಶ್ರ ಸರ್ಕಾರ ಮುಂದುವರಿಯಲು ಕುಮಾರ ಸ್ವಾಮಿ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಜನತಾದಳ ಪಟ್ಟು ಹಿಡಿಯಿತು.

2007: ಹಬ್ಬ-ಹರಿದಿನಗಳ ಪೂರ್ವಭಾವಿಯಾಗಿ ನೀಡುವ ಬೋನಸ್ಸಿಗೆ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ದೇಶದ ಕೈಗಾರಿಕೆಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಇದರಿಂದ ಲಾಭವಾಗುವುದು. ಈ ತಿದ್ದುಪಡಿಯಿಂದಾಗಿ ಮಾಸಿಕ 10,000 ರೂಪಾಯಿಗಳವರೆಗೆ ವೇತನ ಪಡೆಯುವ ಉದ್ಯೋಗಿಗಳು ಸಹ ಬೋನಸ್ ಪಡೆಯಲು ಅರ್ಹರಾಗುವರು. ಈ ಹಿಂದೆ, ಮಾಸಿಕ 3,500 ರೂಪಾಯಿಗಳ ತನಕ ವೇತನ ಪಡೆಯುತ್ತಿದ್ದ ಕಾರ್ಮಿಕರು ಮಾತ್ರ ಈ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದರು.

2007: ಹನ್ನೊಂದು ವರ್ಷಗಳ ಹಿಂದೆ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣಯ್ಯ ಅವರನ್ನು ಹತ್ಯೆಗೈದಿದ್ದ ಆರೋಪದ ಮೇಲೆ ಮಾಜಿ ಸಂಸತ್ ಸದಸ್ಯ ಆನಂದ್ ಮೋಹನ್, ಆತನ ಪತ್ನಿ ಲವ್ಲಿ ಆನಂದ್ ಮತ್ತು ಅವರ ಐವರು ಸಹಚರರಿಗೆ ಪಟ್ನಾ ನ್ಯಾಯಾಲಯ 11 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಡಿಸೆಂಬರ್ 5, 1994ರಂದು ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಕೃಷ್ಣಯ್ಯ ಅವರನ್ನು ಗುಂಪೊಂದು ಹತ್ಯೆಗೈದಿತ್ತು. ಆ ಗುಂಪಿಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಶಿಯೋಹಾರ್ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಆನಂದ್ ಮೋಹನ್, ಸಂಸತ್ತಿನಲ್ಲಿ ವೈಶಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರ ಹೆಂಡತಿ ಲವ್ಲಿ ಆನಂದ್ ಅವರಿಗೆ ಶಿಕ್ಷೆ ವಿಧಿಸಲಾಯಿತು.

2007: ಗೋವುಗಳು ಮನುಷ್ಯರಿಗೆ ಎಲ್ಲ ರೀತಿಯಲ್ಲೂ ನೆರವಿಗೆ ಬರುವುದರಿಂದ ನಶಿಸುತ್ತಿರುವ ಗೋವುಗಳ ಸಾಕಣೆಗೆ ಒಲವು ತೋರಿಸಿ ರಕ್ಷಣೆಗೆ ಶ್ರಮಿಸಬೇಕು ಎಂದು ಕೃಷಿತಜ್ಞ ಡಾ. ನಾರಾಯಣರೆಡ್ಡಿ ಕೃಷ್ಣರಾಜಪುರದಲ್ಲಿ ವರ್ತೂರು ವಲಯ ಸಮಿತಿಯು ಏರ್ಪಡಿಸಿದ್ದ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ದೇವಸಂದ್ರ ರಾಮಕೃಷ್ಣಸ್ವಾಮಿ ವಿವೇಕಾನಂದ ಸಾಧನ ಕೇಂದ್ರದ ಸ್ಥಾಪಕ ಅಧ್ಯಕ್ಷ ಚಂದ್ರೇಶಾನಂದಜಿ ಸ್ವಾಮೀಜಿ, ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಹಾಗೂ ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.

1997: ವಿಶ್ವದ ಅತೀ ಕುಬ್ಜ ಮನುಷ್ಯ ಗುಲ್ ಮೊಹಮ್ಮದ್ (36) ನಿಧನ. 56.16 ಸೆಂ.ಮೀ. ಎತ್ತರವಿದ್ದ ಗುಲ್ ಮೊಹಮ್ಮದ್ ಈ ವಿಶೇಷತೆಯಿಂದಾಗಿಯೇ 1992ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದರು.

1995: ಖ್ಯಾತ ಕೈಗಾರಿಕೋದ್ಯಮಿ ಆದಿತ್ಯ ಬಿರ್ಲಾ ನಿಧನ.

1982: ಹೆಲ್ಮಟ್ ಕೊಹ್ಲ್ ಅವರು ಪಶ್ಚಿಮ ಜರ್ಮನಿಯ ಚಾನ್ಸಲರ್ ಆದರು.

1977: ಸಾಕರ್ ದಂತಕತೆಯಾದ ಬ್ರೆಝಿಲಿನ ಪೀಲೆ ಅವರು 1363 ಆಟಗಳಲ್ಲಿ 1281 ಗೋಲುಗಳನ್ನು ಪಡೆದ ಬಳಿಕ ಸ್ಪರ್ಧಾತ್ಮಕ ಫುಟ್ಬಾಲ್ ನಿಂದ ನಿವೃತ್ತರಾದರು.

1972: ಕೀನ್ಯಾದ ಪುರಾತತ್ವ ತಜ್ಞ ಹಾಗೂ ಮಾನವ ಜನಾಂಗದ ಅಧ್ಯಯನಕಾರ ಲೂಯಿ ಲೀಕಿ (1903-1972) ತಮ್ಮ 69ನೇ ವಯಸ್ಸಿನಲ್ಲಿ ಮೃತರಾದರು. ಅವರು ಪೂರ್ವ ಆಫ್ರಿಕಾದಲ್ಲಿಪಳೆಯುಳಿಕೆಗಳ ಕುರಿತು ನಡೆಸಿದ ಸಂಶೋಧನೆಗಳು ಮಾನವ ವಂಶದ ಹುಟ್ಟು ಹಿಂದೆ ನಂಬಿದ್ದಕ್ಕಿಂತಲೂ ಪುರಾತನವಾದದ್ದು ಹಾಗೂ ಮಾನವ ಅಭಿವೃದ್ಧಿ ಏಷ್ಯಾಕ್ಕೂ ಹೆಚ್ಚಾಗಿ ಆಫ್ರಿಕಾದಲ್ಲೇ ಕೇಂದ್ರೀಕೃತವಾಗಿತ್ತು ಎಂದೂ ಸಾಬೀತು ಮಾಡಿದವು.

1971: ಫ್ಲಾರಿಡಾದ ಓರ್ಲೆಂಡೋದಲ್ಲಿ `ವಾಲ್ಟ್ ಡಿಸ್ನಿ ವರ್ಡ್' ಆರಂಭವಾಯಿತು.

1953: ಆಂಧ್ರಪ್ರದೇಶ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಟಿ. ಪ್ರಕಾಶಂ ಮೊದಲ ಮುಖ್ಯಮಂತ್ರಿಯಾದರು. ಮದ್ರಾಸ್ ರಾಜ್ಯದ 11 ಜಿಲ್ಲೆಗಳನ್ನು ಸೇರಿಸಿ ರಚಿಸಲಾದ ಈ ರಾಜ್ಯಕ್ಕೆ ಕರ್ನೂಲ್ ರಾಜಧಾನಿಯಾಯಿತು. ಒಂದು ಜಿಲ್ಲೆಗೆ ಪ್ರಕಾಶಂ ಜಿಲ್ಲೆ ಎಂದೇ ಹೆಸರಿಡಲಾಯಿತು. ನಂತರ 1956ರ ನವೆಂಬರ್ 1ರಂದು ರಾಜ್ಯಗಳ ಪುನರ್ ವಿಂಗಡಣಾ ಸಮಿತಿಯ ಶಿಫಾರಸಿನಂತೆ ಹಿಂದಿನ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ 9 ಜಿಲ್ಲೆಗಳನ್ನು ಸೇರಿಸಿ ಆಂಧ್ರಪ್ರದೇಶವನ್ನು ವಿಸ್ತರಿಸಲಾಯಿತು. ಹೈದರಾಬಾದ್ ಅದರ ಹೊಸ ರಾಜಧಾನಿಯಾಯಿತು.

1953: ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ) ಜನನ.

 1947: ಸಾಹಿತಿ ಮಲೆಯೂರು ಗುರುಸ್ವಾಮಿ ಜನನ.

1938: ಮೈಕೆಲ್ ಫರೇರಾ ಜನ್ಮದಿನ. ಭಾರತದ ಖ್ಯಾತ ಬಿಲಿಯರ್ಡ್  ಆಟಗಾರರಾದ ಇವರು ಬಿಲಿಯರ್ಡಿನ `ವರ್ಲ್ಡ್ ಅಮೆಚೂರ್ ಪ್ರಶಸ್ತಿ'ಯನ್ನು ಮೂರು ಬಾರಿ ಗೆದ್ದಿದ್ದರು.

1931: ಸಾಹಿತಿ ಬಿ.ಆರ್. ನಾಗೇಶ್ ಜನನ.

1930: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ (1930-2000) ಜನ್ಮದಿನ.

1927: ಖ್ಯಾತ ತಮಿಳು ಚಿತ್ರ ನಟ ಶಿವಾಜಿ ಗಣೇಶನ್ (1927-2001) ಜನ್ಮದಿನ. ಇವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1912: ಸಾಹಿತಿ ವಿ.ಎಂ. ಇನಾಂದಾರ್ ಜನನ.

1912: ಸಾಹಿತಿ ಗೌರಮ್ಮ ಜನನ.

1895: ಪಾಕಿಸ್ಥಾನದ ಪ್ರಥಮ ಪ್ರಧಾನಿ ಲಿಯಾಖತ್ ಅಲಿ ಖಾನ್ (1895-1956) ಜನ್ಮದಿನ.

1885: ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರು ಎಂದೇ ಖ್ಯಾತರಾಗಿದ್ದ ಟಿ.ಎಸ್. ವೆಂಕಣ್ಣಯ್ಯ (1-10-1885ರಿಂದ 24-2-1939) ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಜನಿಸಿದರು.

1880: ಎಡಿಸನ್ ಲ್ಯಾಂಪ್ ವರ್ಕ್ಸ್ ನ್ಯೂಜೆರ್ಸಿಯಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ಬಲ್ಬ್ ತಯಾರಿ ಕಾರ್ಯವನ್ನು ಆರಂಭಿಸಿತು.

1854: ಭಾರತದಲ್ಲಿ ಮೊದಲ ಬಾರಿಗೆ ಅಂಚೆ ಚೀಟಿ ಪರಿಚಯ. ಅರ್ಧ ಮತ್ತು ಒಂದು ಆಣೆಯ ಈ ಅಂಚೆ ಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಭಾವಚಿತ್ರ ಮುದ್ರಿಸಲಾಗಿತ್ತು.

1847: ಬ್ರಿಟಿಷ್ ಸಮಾಜ ಸುಧಾರಕಿ ಹಾಗೂ ಭಾರತ ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರಾದ ಅನ್ನೀ ಬೆಸೆಂಟ್ (1847-1933) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement