My Blog List

Monday, October 5, 2009

ಇಂದಿನ ಇತಿಹಾಸ History Today ಅಕ್ಟೋಬರ್ 02

ಇಂದಿನ ಇತಿಹಾಸ

ಅಕ್ಟೋಬರ್ 02


ಹೊಗೆ ಉಗುಳುತ್ತ ಸಾಗುತ್ತಿದ್ದ ಆಟೊಗಳಿಗೆ ಪರ್ಯಾಯವಾಗಿ ದೆಹಲಿಯಲ್ಲಿ ಸೌರ ವಿದ್ಯುತ್ ಚಾಲಿತ ಸೋಲಾರ್ ಎಲೆಕ್ಟ್ರಿಕ್ ರಿಕ್ಷಾಗಳು ರಸ್ತೆಗೆ ಇಳಿದವು. ದುರ್ಗಾಪುರ ಮೂಲದ ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಎಂಇಆರ್ಐ) ಅಭಿವೃದ್ಧಿಪಡಿಸಿದ ಈ ರಿಕ್ಷಾಗಳಿಗೆ `ಸೋಲೆಕ್ಷಾ' ಎಂದು ಹೆಸರಿಸಲಾಯಿತು..

ಇಂದು ಅಂತಾರಾಷ್ಟ್ರೀಯ ಅಹಿಂಸಾ ದಿನ. ಮಹಾತ್ಮ ಗಾಂಧಿ ಜನ್ಮದಿನ. ಭಾರತದ `ರಾಷ್ಟ್ರಪಿತ' ಗೌರವಕ್ಕೆ ಪಾತ್ರರಾದ ಮೋಹನದಾಸ ಕರಮಚಂದ್ ಗಾಂಧಿ (1869-1948) ಅವರು ಈದಿನ ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದರು. ಗಾಂಧೀಜಿ ಅವರು ಪ್ರತಿಪಾದಿಸಿದ ಶಾಂತಿ ಮತ್ತು ಭ್ರಾತೃತ್ವದ ತತ್ವಕ್ಕೆ ಗೌರವ ನೀಡುವ ಸಲುವಾಗಿ 191 ಸದಸ್ಯ ಬಲದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಅಕ್ಟೋಬರ್ 2ನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಆಚರಿಸುವ ನಿರ್ಣಯವನ್ನು 2007ರ ಜೂನ್ 17ರಂದು ಸರ್ವಾನುನುಮತದಿಂದ ಅಂಗೀಕರಿಸಿತು. ಭಾರತದ ಇನ್ನೊಬ್ಬ ಮುತ್ಸದ್ಧಿ ಲಾಲ್ ಬಹಾದುರ್ ಶಾಸ್ತ್ರಿ (1904-1966) ಅವರು ಹುಟ್ಟಿದ್ದು ಕೂಡಾ ಇದೇ ದಿನ. ಜವಾಹರಲಾಲ್ ನೆಹರೂ ಬಳಿಕ 1964ರಿಂದ 1966ರವರೆಗೆ ಭಾರತದ ಪ್ರಧಾನಿಯಾಗಿದ್ದ ಶಾಸ್ತ್ರಿ, 1965ರ ಭಾರತ ಪಾಕ್ ಸಮರಕಾಲದಲ್ಲಿ ರಾಷ್ಟ್ರಕ್ಕೆ `ಜೈ ಜವಾನ್ ಜೈ ಕಿಸಾನ್' ಘೋಷಣೆ ನೀಡಿದ ಧುರೀಣ.

2014: ನವದೆಹಲಿ: ದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಕೈಯಲ್ಲಿ ಪೊರಕೆ ಹಿಡಿದುಕೊಂಡು ಸ್ವತಃ ಗುಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಸ್ವಚ್ಛ ಭಾರತ' ಅಭಿಯಾನಕ್ಕೆ ಚಾಲನೆ ನೀಡಿದರು. 2019ರಲ್ಲಿ ರಾಷ್ಟ್ರಪಿತನ 150ನೇ ಜನ್ಮದಿನ ಆಚರಿಸುವ ವೇಳೆಗೆ ಮಹಾತ್ಮಾ ಗಾಂಧೀಜಿಯವರ ಕಸಮುಕ್ತ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವ ಸಾಮೂಹಿಕ ಚಳವಳಿಯಾಗಿ 'ಸ್ವಚ್ಛ ಭಾರತ ಅಭಿಯಾನ' ರೂಪುಗೊಂಡಿದೆ. ಬಳಿಕ ಪ್ರಧಾನಿಯವರು 30 ಲಕ್ಷ ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ನೌಕರರಿಂದ ಸ್ವಚ್ಛ ಭಾರತದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿ ವಾರಾಣಸಿಗೆ ಭೇಟಿ ನೀಡಿದ್ದ ವೇಳೆ ಅವರು 'ಸ್ವಚ್ಛ ಭಾರತ'ದ ಕನಸು ಬಿತ್ತಿದ್ದರು. ಸ್ವಾತಂತ್ರ್ಯದಿನಾಚರಣೆ ಭಾಷಣದ ವೇಳೆ ಸ್ವಚ್ಛ ಭಾರತಕ್ಕಾಗಿ ಅಭಿಯಾನ ಮಾಡುವುದಾಗಿ ಘೋಷಿಸಿದ್ದರು.. ಪರಿಸರದ ಸ್ವಚ್ಛತೆಗಾಗಿ ವಾರಕ್ಕೆ 2 ಗಂಟೆಯಂತೆ ವರ್ಷಕ್ಕೆ ಕನಿಷ್ಠ 100 ಗಂಟೆ ಮೀಸಲಿಡಬೇಕು. ರಸ್ತೆ ಬದಿ ತ್ಯಾಜ್ಯ ಚೆಲ್ಲುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ವಿನಂತಿಸಿತು. ದೇಶಾದ್ಯಂತ 31 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಸ್ವಚ್ಛತೆಯ ಶಪಥ ಸ್ವೀಕರಿಸಿದರು. ರಜಾ ದಿನವಾದರೂ ಕಚೇರಿಗೆ ಹಾಜರಾದ ಸರ್ಕಾರಿ ನೌಕರರು, ಕಚೇರಿ ಹಾಗೂ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದಾಗಿ ಪ್ರಮಾಣವಚನ ಸ್ವೀಕರಿಸಿದರು. ಕೇವಲ ರಸ್ತೆ, ಕಟ್ಟಡಗಳಲ್ಲಿನ ಕಸ ತೆಗೆಯುವುದಷ್ಟೇ ಈ ಅಭಿಯಾನದ ಉದ್ದೇಶವಲ್ಲ. ನದಿ, ಸರೋವರ, ಕೆರೆ... ಮತ್ತಿತರ ಜಲಾಶಯಗಳನ್ನು ಸ್ವಚ್ಛಗೊಳಿಸುವುದೂ ಪ್ರಮುಖ ಆದ್ಯತೆ. 2019ರ ವೇಳೆಗಿನ ಗುರಿ 1.04 ಕೋಟಿ ಮನೆಗಳಲ್ಲಿ ಶೌಚಾಲಯ 2.6 ಲಕ್ಷ ಸಾರ್ವಜನಿಕ ಶೌಚಾಲಯ ನಿರ್ಮಾಣ. 2.5 ಲಕ್ಷ ಸಮುದಾಯ ಶೌಚಾಲಯ ನಿರ್ಮಾಣ. 1,96,009 ಕೋಟಿ ರೂಪಾಯಿ ಅಂದಾಜು ವೆಚ್ಚ 1,34,000 ಕೋಟಿ ರೂ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ 62,009 ಕೋಟಿ ರೂಪಾಯಿ ನಗರಾಭಿವೃದ್ಧಿ ಸಚಿವಾಲಯದಿಂದ ಈಗಿನ ಸ್ಥಿತಿ 1.31 ಕೋಟಿ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯವಿಲ್ಲ (2011ರ ಗಣತಿ)

2014: ನವದೆಹಲಿ: ಕೊಳಕು ಸ್ಥಳಗಳ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಮತ್ತು ಅವುಗಳು ಹೇಗೆ ಸ್ವಚ್ಛಗೊಂಡವು ಎಂಬುದನ್ನು ತೋರಿಸುವ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯನ್ನು ಆಗ್ರಹಿಸಿದರು. ದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ 'ಸ್ವಚ್ಛ ಭಾರತ ಅಭಿಯಾನ'ಕ್ಕೆ ಚಾಲನೆ ನೀಡಿದ ಬಳಿಕ ಬೃಹತ್ ಜನಸ್ತೋಮವನ್ನು ಉದ್ಧೇಶಿಸಿ ಮಾತನಾಡಿದ ಮೋದಿ ಮೊತ್ತ ಮೊದಲಿಗೇ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 'ರಾಷ್ಟ್ರವ್ಯಾಪಿ ಅಭಿಯಾನವನ್ನು ಇನ್ನಷ್ಟು ವ್ಯಾಪಿಸುವಂತೆ ಮಾಡಲು 'ಮೈಗವ್' (MyGov) ಮೊಬೈಲ್ ಅಪ್ಲಿಕೇಷನ್, ಫೇಸ್ ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಬಳಸಿಕೊಳ್ಳುವಂತೆ ಅವರು ಜನತೆಗೆ ಕರೆ ನೀಡಿದರು. 'ಸ್ವಚ್ಛ ಭಾರತ' ಅಭಿಯಾನದ ಯಶಸ್ಸು ನನ್ನ ಸರ್ಕಾರದ್ದು ಎಂದು ನಾನು ಪ್ರತಿಪಾದಿಸುವುದಿಲ್ಲ. ಎಲ್ಲ ಸರ್ಕಾರಗಳೂ ತಮ್ಮ ತಮ್ಮ ಕೊಡುಗೆ ಕೊಟ್ಟಿವೆ ಅವರೆಲ್ಲರನ್ನೂ ಅಭಿನಂದಿಸುವೆ' ಎಂದು ಅವರು ನುಡಿದರು. 'ಈ ಕಾರ್ಯಕ್ರಮ ಯಶಸ್ವಿಯಾಗಬೇಕೆಂಬ ಆಶಯದೊಂದಿಗೆ ನಾನು ವಿವಿಧ ಪಕ್ಷಗಳು, ವಿವಿಧ ಸಂಘಟನೆಗಳು, ಚಿತ್ರನಟರು, ಆಧ್ಯಾತ್ಮಿಕ ಕ್ಷೇತ್ರದ ಧುರೀಣರು ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಮುಖರಿಗೆ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ವಿನಂತಿ ಮಾಡಿದ್ದೇನೆ. ಈ ಕಾರ್ಯಕ್ರಮವನ್ನು ಯಾರೂ ರಾಜಕೀಯಗೊಳಿಸಬಾರದು' ಎಂದು ಅವರು ಕೋರಿದರು. 'ಪ್ರತಿದಿನ ನಾವು 2 ಗಂಟೆಗಳನ್ನು ಭಾರತವನ್ನು ಸ್ವಚ್ಛಗೊಳಿಸುವುದಕ್ಕಾಗಿ ಮೀಸಲಿಡೋಣ. ಬಾಪೂಜಿ ನಮಗೆ ಕ್ವಿಟ್ ಇಂಡಿಯಾ ಮತ್ತು ಕ್ಲೀನ್ ಇಂಡಿಯಾ ಎಂಬ ಎರಡು ಘೊಷಣೆಗಳನ್ನು ನೀಡಿದರು. ಕ್ಲೀನ್ ಇಂಡಿಯಾ ಕನಸು ಇನ್ನೂ ನನಸಾಗಿಲ್ಲ.'ಮಹಾತ್ಮಾ ಗಾಂಧಿಯವರು ಪ್ರತಿಯೊಂದು ಗ್ರಾಮವನ್ನೂ ಸ್ವಚ್ಛಗೊಳಿಸಲಿಲ್ಲ. ಆದರೆ ಪ್ರತಿಯೊಬ್ಬರಿಗೂ ಪ್ರೇರಣೆ ನೀಡಿದರು. ಈ ಕೆಲಸ ಮಾಡುವವರನ್ನು ನಾವು ಗುರುತಿಸಬೇಕು. ಇದು ರಾಜಕೀಯವಲ್ಲ. ದೇಶಪ್ರೇಮವೊಂದೇ ಇದರ ಹಿಂದಿನ ಪ್ರೇರಣೆ' ಎಂದು ನುಡಿದ ಪ್ರಧಾನಿ 'ಈ ಕಾರ್ಯದಲ್ಲಿ ನಾನು ಏಕಾಂಗಿಯಲ್ಲ, ನನೊಂದಿಗೆ 125 ಕೋಟಿ ಜನರಿದ್ದಾರೆ' ಎಂದು ಜನರ ಹಷೋದ್ಘಾರಗಳ ಮಧ್ಯೆ ನುಡಿದರು. 'ಗೋವಾ ರಾಜ್ಯಪಾಲರು, ಬಾಬಾ ರಾಮ್ೇವ್, ಶಶಿ ತರೂರ್, ಕಮಲಹಾಸನ್, ಸಲ್ಮಾನ್ ಖಾನ್, ಪ್ರಿಯಾಂಕಾ ಛೋಪ್ರಾ, ತೆಂಡೂಲ್ಕರ್, ಅನಿಲ್ ಅಂಬಾನಿ, ತಾರಕ್ ಮೆಹ್ತಾ ಮತ್ತಿತರರನ್ನೆಲ್ಲ ನಾನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಭಾರತಕ್ಕೆ ಸ್ವಚ್ಛಗೊಳಿಸುವುದಕ್ಕೇ 6500 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ ಎಂದು ವಿಶ್ವ ಸ್ವಾಸ್ಥ್ಯಸಂಸ್ಥೆಯೇ ಹೇಳಿದೆ' ಎಂದು ಮೋದಿ ಹೇಳಿದರು. ಕ್ವಿಟ್ ಇಂಡಿಯಾ ಸಾಮೂಹಿಕ ಚಳವಳಿಯಾಗಿತ್ತು, ಕ್ಲೀನ್ ಇಂಡಿಯಾ ಕೂಡಾ ಸಾಮೂಹಿಕ ಚಳವಳಿಯಾಗಬೇಕು ಎಂದು ಹಾರೈಸಿದ ಪ್ರಧಾನಿ, ಕ್ಲೀನ್ ಇಂಡಿಯಾ ಚಳವಳಿಯು ನಮಗೆ ಕ್ವಿಟ್ ಇಂಡಿಯಾ ಚಳವಳಿಯಂತೆಯೇ ಹುಮ್ಮಸ್ಸು ನೀಡಬೇಕು ಎಂದರು. 'ನನ್ನನ್ನು ಅಥವಾ ನನ್ನ ಸರ್ಕಾರವನ್ನು ನಂಬಬೇಡಿ. ಮಹಾತ್ಮಾ ಗಾಂಧಿಯವರ ಸ್ವಚ್ಛ ಭಾರತದ ಕನಸನ್ನು ನಂಬಿ. ಗ್ರಾಮೀಣ ಭಾರತದ ಶೇಕಡಾ 60 ಮಂದಿ ಈಗಲೂ ಬಯಲಲ್ಲೇ ಶೌಚ ಮಾಡಬೇಕಾಗಿದೆ. ಮಹಾತ್ಮಾ ಗಾಂಧೀಜಿಯವರ ಜೊತೆಗೆ ನಿಮ್ಮ ಕೈಗಳನ್ನು ಮತ್ತು ತಲೆಗಳನ್ನು ಜೋಡಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ' ಎಂದು ಹೇಳಿದ ಮೋದಿ ಬಳಿಕ ಪ್ರಮಾಣ ವಚನವನ್ನು ಬೋಧಿಸಿದರು. ಚಿತ್ರ ನಟ ಸಲ್ಮಾನ್ ಖಾನ್ ವೇದಿಕೆಯಲ್ಲಿ ಪ್ರಧಾನಿ ಜೊತೆಗಿದ್ದರು. ವಾಲ್ಮೀಕಿ ಬಸ್ತಿಯಲ್ಲಿ ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಬಳಿಕ ವಾಕಥಾನ್ ಮೂಲಕ ಸಮಾರಂಭ ಸ್ಥಳಕ್ಕೆ ಅವರು ಆಗಮಿಸಿದರು. ಸ್ವಚ್ಛ ಭಾರತದ ಲಾಂಛನವನ್ನು ವಿನ್ಯಾಸ ಮಾಡಿದ ಘೊಷಣೆಯನ್ನು ಸೃಷ್ಟಿಸಿದ ಭಾಗ್ಯಶ್ರೀ ಸೇಥ್ ಅವರಿಗೆ ಪ್ರಧಾನಿ ಬಹುಮಾನ ನೀಡಿದರು. ಲಾಂಛನ ವಿನ್ಯಾಸ ಸ್ಪರ್ಧೆಯಲ್ಲಿ 1000 ಮಂದಿ ಮತ್ತು ಘೊಷಣೆ ರಚನೆ ಸ್ಪರ್ಧೆಯಲ್ಲಿ 5000 ಮಂದಿ ಪಾಲ್ಗೊಂಡಿದ್ದರು. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರೂ ಈ ಸಂದರ್ಭದಲ್ಲಿ ಮಾತನಾಡಿ ಸ್ವಚ್ಛತೆ ರಾಜಕೀಯ ಸ್ವಾತಂತ್ರ್ಯ್ಕತಲೂ ಮಹತ್ವದ್ದು ಎಂದು ಹೇಳಿದರು.

2014: ನವದೆಹಲಿ: ಆಮ್​ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಹೃದಯ ಭಾಗದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿಯ ಸಣ್ಣ ವಸತಿ ಪ್ರದೇಶವೊಂದರ ಚರಂಡಿಯನ್ನು ಸ್ವಚ್ಛಗೊಳಿಸಲು ಕಸಗುಡಿಸುವವರಿಗೆ ನೆರವಾದರು. ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಉದ್ಘಾಟಿಸಿದ ದಿನವನ್ನೇ ತಮ್ಮ ಈ ಕಾಯಕಕ್ಕೆ ಆರಿಸಿಕೊಂಡ ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿ ಕಡಿಮೆ ಆದಾಯದ ಪ್ರದೇಶ ಎಂದೇ ಪರಿಚಿತವಾಗಿರುವ ಬಿ.ಆರ್. ಕ್ಯಾಂಪಿನಲ್ಲಿ ಹಲವಾರು ಮಂದಿ ಕಾರ್ಮಿಕರ ಜೊತೆಗೂಡಿಕೊಂಡು ಚರಂಡಿ ಸ್ವಚ್ಛಗೊಳಿಸಿದರು. ಬಳಿಕ ಕಾಮಿಕರ ಜೊತೆಗೇ ಕೇಜ್ರಿವಾಲ್ ಚಹಾ ಸೇವಿಸಿದರು. ಬಿ.ಆರ್. ಕ್ಯಾಂಪ್ ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ ಅವರು ಗೆದ್ದಿರುವ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಎಎಪಿ ಕಾರ್ಯಕರ್ತರು ಪೊರಕೆಗಳನ್ನು ಹಿಡಿದುಕೊಂಡು ರಾಜಧಾನಿಯ ಹಲವಾರು ಭಾಗಗಳಲ್ಲಿ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತಕ್ಕೆ ತಮ್ಮ ಬದ್ಧತೆಯನ್ನು ಯಾವುದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಸೇರದೆಯೇ ಪ್ರದರ್ಶಿಸಿದರು.

2014: ಪಣಜಿ: ಮಹದಾಯಿ ಜಲವಿವಾದ ಮಂಡಳಿಯ ಮುಂದೆ ರಾಜ್ಯದ ಹಿತಾಸಕ್ತಿ ಕಾಪಾಡುವ ಸಲುವಾಗಿ ಮಹದಾಯಿ ನದಿ ನೀರಿನ ಬಗ್ಗೆ ಅಧ್ಯಯನ ಮಾಡಲು ಸಂಸ್ಥೆಯೊಂದರ ನೇಮಕಾತಿಗೆ ಗೋವಾ ಸರ್ಕಾರ ಒಪ್ಪಿಗೆ ನೀಡಿತು. ಮಹದಾಯಿ ನದಿ ನೀರಿನ ಅಧ್ಯಯನ ಕಾರ್ಯವನ್ನು ಡಿಎಚ್​ಐ (ಇಂಡಿಯಾ) ಜಲ ಮತ್ತು ಪರಿಸರ ಖಾಸಗಿ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದ್ದು ಇದಕ್ಕಾಗಿ 1.34 ಕೋಟಿ ರೂಪಾಯಿಗಳನ್ನು ನೀಡಿತು. ಡಿಎಚ್​ಐ ಸಂಸ್ಥೆಯು ಮಹದಾಯಿ ನದಿಯ ಜೀವ ವೈವಿಧ್ಯ, ಸಸ್ಯಗಳು, ಪರಿಸರ ಬಗ್ಗೆ ಅಧ್ಯಯನ ಮಾಡಲಿದೆ. ಮಹಾದಾಯಿ ಮತ್ತು ಜುವಾರಿ ನದಿಗಳ ಹಿನ್ನೀರು ಪ್ರದೇಶಗಳ(ಸಮುದ್ರ ಸೇರುವ ಪ್ರದೇಶ)ಬಗೆಗೂ ಸಂಸ್ಥೆಯು ಸಮೀಕ್ಷೆ ನಡೆಸಲಿದೆ.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಸೂಪರ್ ಹೆವಿ (ಪ್ಲಸ್ 91ಕೆಜಿ) ಸೆಮಿ ಫೈನಲ್​ನಲ್ಲಿ ಕಝುಕಸ್ಥಾನದ ಡೈಚ್ಕೊ ಅವರಿಂದ ಪರಾಭವಗೊಳ್ಳುವುದರೊಂದಿ ಭಾರತದ ಬಾಕ್ಸರ್ ಸತೀಶ ಕುಮಾರ್ ಅವರು ಕಂಚಿನ ಪದಕ್ಕೆ ತೃಪ್ತಿ ಪಡಬೇಕಾಯಿತು. ಒಲಿಂಪಿಕ್ ಪದಕವಿಜೇತ ಹಾಗೂ ವಿಶ್ವಚಾಂಪಿಯನ್ ಡೈಚ್ಕೊ ವಿರುದ್ಧ ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿ ಸೆಣಸಿದರೂ, 25ರ ಹರೆಯದ ಸತೀಶ ಕುಮಾರ್ ಪರಾಭವ ಅನುಭವಿಸಬೇಕಾಯಿತು. ಏನಿದ್ದರೂ ಭಾರತದ ಪುರುಷ ಬಾಕ್ಸರ್​ಗಳು ಖಾಲಿ ಕೈಯಲ್ಲಿ ವಾಪಸಾಗುವುದಿಲ್ಲ ಎಂಬುದನ್ನು ಸತೀಶ ಕುಮಾರ್ ಖಚಿತ ಪಡಿಸಿದರು. ಸತೀಶ ಕುಮಾರ್ ಅವರ ಕಂಚಿನ ಪದಕದೊಂದಿಗೆ ಭಾರತದ ಪದಕ 51ಕ್ಕೆ ಏರಿತು. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 35 ಕಂಚಿನ ಪದಕಗಳು ಸೇರಿವೆ.

2014: ಬೆಂಗಳೂರು: ಗಾಂಧೀಜಿ ಅನುಯಾಯಿಗಳು ಸ್ವಾರ್ಥಿಗಳಲ್ಲ. ಕಾರಣ ಗಾಂಧಿ ಹೆಸರಲ್ಲಿ ಜಾತಿ ವಿಷ ಬೀಜ ಬಿತ್ತಬೇಡಿ. ಅಹಿಂಸಾ ಹೋರಾಟ ಬಾಂಬ್ಗಿಂತಲೂ ಪ್ರಭಾವಶಾಲಿಯಾದುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.. ರಾಜ್ಯ ಸರ್ಕಾರ ಇದೇ ವರ್ಷ ಪ್ರದಾನ ಮಾಡುತ್ತಿರುವ ಪ್ರತಿಷ್ಠಿತ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಚೊಚ್ಚಲ ಗಾಂಧಿ ಸೇವಾ ಪ್ರಶಸ್ತಿಯನ್ನು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ಹೋರಾಟಗಾರ ಎಸ್.ಎನ್. ಸುಬ್ಬರಾವ್ ಅವರಿಗೆ ಸಿದ್ದರಾಮಯ್ಯ ಪ್ರದಾನ ಮಾಡಿದರು.

2014:  ಟೋಕಿಯೊ: ಹಾಲಿ ಡೇವಿಸ್ ಕಪ್ ವಿಜೇತರಾದ ಲಿಯಾಂಡರ್ ಪೇಸ್-ರೋಹನ್ ಬೋಪಣ್ಣ ಜೋಡಿ ಜಪಾನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಇವಾನ್ ಡೋಡಿಕ್- ಮರ್ಸಿಲಾ ಮಿಲೋ ಜೋಡಿ ವಿರುದ್ಧ ನೇರ ಸೆಟ್ಗಳಿಂದ ಸೋತು ಹೊರನಡೆದರು.ಈದಿನ ನಡೆದ ಪಂದ್ಯದಲ್ಲಿ ಭಾರತದ ಶ್ರೇಯಾಂಕ ರಹಿತ ಜೋಡಿ ೨ನೇ ಶ್ರೇಯಾಂಕದ ಕ್ರೊಷಿಯಾ-ಬ್ರೆಜಿಲ್ ಜೋಡಿ ವಿರುದ್ಧ ೫೧ ನಿಮಿಷಗಳ ಹೋರಾಟದಲ್ಲಿ ೩-೬, ೨-೬ ಅಂತರದಿಂದ ಪರಾಭವಗೊಂಡಿತು.

2014: ಇಂಚೋನ್: ಭಾರತದ ಇಂದ್ರಜೀತ್ ಸಿಂಗ್ ೧೭ನೇ ಏಷ್ಯನ್ ಕ್ರೀಡಾಕೂಟದ ಶಾಟ್ ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ೧೯.೬೩ ಮೀಟರ್ ದೂರಕ್ಕೆ ಎಸೆದ ಇಂದ್ರಜೀತ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸೌದಿ ಅರೇಬಿಯಾದ ಸುಲ್ತಾನ್ ಅಬ್ದುಲ್ವಾಜೀದ್ ಅಲ್ಹೆಬ್ಶಿ ೧೯.೯೯ ಮೀಟರ್ ದೂರಕ್ಕೆಸೆದು ಸ್ವರ್ಣ ಗೆದ್ದುಕೊಂಡರೆ, ಚೀನಾ ತೈಪೆಯ ಛಾಂಗ್ ಮಿಂಗ್ ಹುವಾಂಗ್ ೧೯.೯೭ ಮೀಟರ್ ದೂರಕ್ಕೆಸೆದು ಬೆಳ್ಳಿ ತಮ್ಮದಾಗಿಸಿಕೊಂಡರು.

2014: ಇಂಚೋನ್: ಕರ್ನಾಟಕದ ಪೂವಮ್ಮ ಒಳಗೊಂಡ ಭಾರತ ರಿಲೆ ತಂಡಕ್ಕೆ ಚಿನ್ನ ಇಂಚೋನ್: ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್ನ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟ್‌ಔಟ್ನಲ್ಲಿ ೪-೨ ಗೋಲುಗಳ ಅಂತರದಿಂದ ಮಣಿಸಿ ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ಭಾರತ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಡುವ ಅರ್ಹತೆ ಪಡೆದುಕೊಂಡಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡವು. ನಂತರ ನಡೆದ ಪೆನಾಲ್ಟಿ ಶೂಟ್‌ಔಟ್ನಲ್ಲಿ ಭಾರತ ೪ ಗೋಲುಗಳನ್ನು ಯಶಸ್ವಿಯಾಗಿ ಗಳಿಸಿ ಗೆಲುವಿನ ನಗೆ ಬೀರಿತು. ಪೆನಾಲ್ಟಿಯಲ್ಲಿ ಗುರ್ವಿಂದರ್ ಮೊದಲ ಗೋಲುಗಳಿಸಿದರೆ, ರೂಪಿಂದರ್ ಪಾಲ್ ೨ನೇ ಗೋಲು ಗಳಿಸಿ ೨-೦ ಮುನ್ನಡೆ ತಂದುಕೊಟ್ಟರು. ೩ನೇ ಅವಕಾಶದಲ್ಲಿ ಭಾರತಕ್ಕೆ ಗೋಲು ಸಿಗಲಿಲ್ಲವಾದರೂ ೪ ಮತ್ತು ೫ನೇ ಅವಕಾಶದಲ್ಲಿ ಇನ್ನರಡು ಗೋಲುಗಳಿಸುವುದರೊಂದಿಗೆ ೧೯೯೮ರ ಬಳಿಕ ಇನ್ನೊಮ್ಮೆ ಸ್ವರ್ಣ ಸಂಭ್ರಮ ಅನುಭವಿಸಿತು. ಭಾರತ ಬ್ಯಾಂಕಾಕ್ ಏಷ್ಯಾಡ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಗೆಲುವು ಸಾಧಿಸಿ ಚಿನ್ನ ತನ್ನದಾಗಿಸಿಕೊಂಡಿತ್ತು. ಆ ಗೇಮ್ಸ್ನಲ್ಲಿ ಪಾಕಿಸ್ತಾನ ಕಂಚಿಗೆ ತೃಪ್ತಿಪಟ್ಟುಕೊಂಡಿತ್ತು. * ರಿಲೆಯಲ್ಲಿ ಬಂಗಾರ: ಅಚ್ಚರಿ ಎನ್ನುವಂತೆ ಭಾರತದ ಮಹಿಳಾ ರಿಲೇ ತಂಡ ೪ಗಿ೪೦೦ ವಿಭಾಗದಲ್ಲಿ ಚಿನ್ನ ಸಂಪಾದಿಸಿತು. ಪ್ರಿಯಾಂಕ ಪನ್ವಾರ್, ಟಿಂಟು ಲೂಕಾ, ಮನ್ದೀಪ್ ಕೌರ್ ಮತ್ತು ಕರ್ನಾಟಕದ ಎಂ. ಪೂವಮ್ಮ ಅವರನ್ನೊಳಗೊಂಡ ತಂಡ ಹೊಸ ಕೂಟ ದಾಖಲೆ ನಿರ್ವಿ?ಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದೆ. ಭಾರತ ೩ನಿಮಿಷ ೨೮.೬೮ ಸೆಕೆಂಡ್ಗಳಲ್ಲಿ ಗುರಿ ತಲುಪಿತು. ಜಪಾನ್ ಬೆಳ್ಳಿ ಪದಕ ಸಂಪಾದಿಸಿದರೆ, ಚೀನಾ ಕಂಚಿನ ಪದಕ ಗೆದ್ದುಕೊಂಡಿತು.

 2014: ಇಂಚೋನ್:: ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಕಂಚಿನ ಪದಕ ಖಚಿತಪಡಿಸಿಕೊಂಡರು. ೭೫ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಸೆಮಿಫೈನಲ್ನಲ್ಲಿ ಕಜಕ್ಸ್ತಾನದ ಝಾನಿಬೆಕ್ ಅಲಿಮ್?ನುಲಿ ವಿರುದ್ಧ ೨-೧ ಅಂತರದಿಂದ ಗೆಲುವು ಸಾಧಿಸಿ ಕಂಚು ಗೆದ್ದುಕೊಂಡರು.

2008: ಭಾರತದದ್ಯಂತ ಈದಿನ ಧೂಮಪಾನ ನಿಷೇಧ ಜಾರಿಗೆ ಬಂದಿತು. ಹೋಟೆಲ್, ಉಪಾಹಾರ ಗೃಹ, ಪಬ್, ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಧೂಮಪಾನಿಗಳ ವ್ಯಾಪ್ತಿಯಿಂದ ಹೊರಗಿಡಲಾಯಿತು. ಹುಕ್ಕಾ ಬಾರುಗಳು, ಖಾಸಗಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳಲ್ಲಿ ಸಹ ಧೂಮಪಾನ ನಿಷೇಧ ಜಾರಿಗೊಳಿಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯ, ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆ 2003ರ (ಜಾಹೀರಾತು, ವ್ಯಾಪಾರ ನಿಯಂತ್ರಣ ಹಾಗೂ ಉತ್ಪಾದನೆ, ಪೂರೈಕೆ ಹಾಗೂ ವಿತರಣೆ) ಅನ್ವಯ ನಿಷೇಧ ವಿಧಿಸಲು ಅಧಿಸೂಚನೆ ಹೊರಡಿಸಿತು. ಜಾರ್ಖಂಡ್, ದೆಹಲಿ, ಛತ್ತೀಸ್ ಗಢಗಳು ತಮ್ಮ ರಾಜ್ಯದಲ್ಲಿ ಈ ಮೊದಲೇ ಇದ್ದ ನಿಷೇಧವನ್ನು ಮುಂದುವರೆದವು. ಆರೋಗ್ಯ ಸಚಿವ ಎ. ರಾಮದಾಸ್, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ನಿಷೇಧ ವಿಧಿಸುವಂತೆ ಸೂಚಿಸಿ ಪತ್ರ ಬರೆದಿದ್ದರು.

2008: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸೆನೆಟ್ ಬಹುಮತದೊಂದಿಗೆ ಒಪ್ಪಿಗೆ ನೀಡಿತು. ಇದರೊಂದಿಗೆ ಒಪ್ಪಂದದ ವಿರುದ್ಧ ಮಂಡಿಸಲಾಗಿದ್ದ ಮಸೂದೆಯನ್ನು ಧ್ವನಿಮತದಿಂದ ತಿರಸ್ಕರಿಸಲಾಯಿತು.. ಇದರಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಧ್ಯಕ್ಷ ಜಾರ್ಜ್ ಬುಷ್ ಅವರು 2005ರಲ್ಲಿ ಮಾಡಿಕೊಂಡ ಈ ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ಸಿನ ಸಮ್ಮತಿಯ ಮುದ್ರೆ ಬಿದ್ದಂತಾಯಿತು. ಇದು ಯುಪಿಎ ಸರ್ಕಾರ ಮತ್ತು ಬುಷ್ ಆಡಳಿತಕ್ಕೆ ಸಂದ ಜಯ ಎಂದೇ ಭಾವಿಸಲಾಯಿತು.. ಒಪ್ಪಂದಕ್ಕೆ ಸಂಬಂಧಿಸಿದ ಮಸೂದೆ ಮೇಲೆ ಸೆನೆಟಿನಲ್ಲಿ ಇಡೀ ರಾತ್ರಿ ಸುದೀರ್ಘ ಚರ್ಚೆ ನಡೆದು ಬೆಳಿಗ್ಗೆ ಮತದಾನಕ್ಕೆ ಹಾಕಿದಾಗ ಪರವಾಗಿ 86 ಮತ್ತು ವಿರುದ್ಧವಾಗಿ 13 ಮತಗಳು ಚಲಾವಣೆಗೊಂಡವು. ಇದೇ ಸಂದರ್ಭದಲ್ಲಿ ಒಪ್ಪಂದವನ್ನು ವಿರೋಧಿಸಿ ಇಬ್ಬರು ಡೆಮಾಕ್ರಟಿಕ್ ಸೆನೆಟರುಗಳು ಮಂಡಿಸಿದ್ದ `ಕಿಲ್ಲರ್ ಮಸೂದೆ'ಯನ್ನು ಬಹುತೇಕ ಸದಸ್ಯರು ತಿರಸ್ಕರಿಸಿದರು.

2008: ಗುಜರಾತಿನ ಅಬ್ದುಲ್ ಗಣಿ ಅಬ್ದುಲಾ ಭಾಯಿ ಖುರೇಶಿ, ಜಮ್ಮು ಹಾಗೂ ಕಾಶ್ಮೀರದ ಗುಲಾಂ ಅಹ್ಮದ್ ಭಟ್ ಅವರಿಗೆ 2008ನೇ ಸಾಲಿನ ಕಬೀರ್ ಪುರಸ್ಕಾರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಕೋಮು ಗಲಭೆಯ ಸಂದರ್ಭದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಇವರಿಬ್ಬರು ನೀಡಿದ ಕಾಣಿಕೆ ಪರಿಗಣಿಸಿ ಈ ಪುರಸ್ಕಾರ ನೀಡಲಾಯಿತು. 2006 ಹಾಗೂ 2007ರಲ್ಲಿ ನಡೆದ ಕೋಮು ಗಲಭೆ ಸಂದರ್ಭದಲ್ಲಿ ವಡೋದರಾ ನಿವಾಸಿ ಖುರೇಶಿ ಅವರು ಎರಡು ಹಿಂದೂ ಕುಟುಂಬಗಳನ್ನು ಹಾಗೂ ಒಬ್ಬ ಯುವಕನನ್ನು ರಕ್ಷಿಸಿದ್ದರು.

2008: ಹೊಗೆ ಉಗುಳುತ್ತ ಸಾಗುತ್ತಿದ್ದ ಆಟೊಗಳಿಗೆ ಪರ್ಯಾಯವಾಗಿ ದೆಹಲಿಯಲ್ಲಿ ಸೌರ ವಿದ್ಯುತ್ ಚಾಲಿತ ಸೋಲಾರ್ ಎಲೆಕ್ಟ್ರಿಕ್ ರಿಕ್ಷಾಗಳು ರಸ್ತೆಗೆ ಇಳಿದವು. ದುರ್ಗಾಪುರ ಮೂಲದ ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಎಂಇಆರ್ಐ) ಅಭಿವೃದ್ಧಿಪಡಿಸಿದ ಈ ರಿಕ್ಷಾಗಳಿಗೆ `ಸೋಲೆಕ್ಷಾ' ಎಂದು ಹೆಸರಿಸಲಾಯಿತು.. ಪ್ರಾಯೋಗಿಕವಾಗಿ ದೆಹಲಿ ರಸ್ತೆಯ ಮೇಲೆ ಇಳಿದ ಈ ರಿಕ್ಷಾಗಳಿಗೆ ಕೇಂದ್ರ ವಿಜ್ಞಾನ ಸಚಿವ ಕಪಿಲ್ ಸಿಬಲ್ ಚಾಲನೆ ನೀಡಿದರು. ಸುಮಾರು 200 ಕೆ.ಜಿ ತೂಕದ ಈ ರಿಕ್ಷಾಗಳು ಸೋಲಾರ್ (ಸೌರಶಕ್ತಿ) ಬ್ಯಾಟರಿಗಳ ಮೇಲೆ ಚಲಿಸುತ್ತವೆ. ಪ್ರತಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇವುಗಳಿಗಿದೆ. ದೆಹಲಿಯಲ್ಲಿ ಇವು ಯಶಸ್ವಿಯಾದರೆ ದೇಶದ ಇತರ ನಗರಗಳಲ್ಲಿಯೂ ಸೋಲಾರ್ ರಿಕ್ಷಾ ಬಳಕೆಗೆ ಬರಲಿವೆ.

2007: ಅಧಿಕಾರ ಹಸ್ತಾಂತರಕ್ಕೆ ಒತ್ತಡ ಹೇರುವ ಸಲುವಾಗಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ಸಚಿವರು ಈದಿನ ರಾತ್ರಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು. ಈ ಬೆಳವಣಿಗೆಯಿಂದಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ತಾರಕಕ್ಕೆ ಏರಿತು. ಯಡಿಯೂರಪ್ಪ ನಿವಾಸದಲ್ಲಿ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಕೂಡಲೇ ಬಿಜೆಪಿ ಸಚಿವರೆಲ್ಲರೂ ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ಕ್ಕೆ ತೆರಳಿದರು. ಅಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡರು ಮೂರು ಪುಟಗಳ ಪತ್ರದ ಜೊತೆಗೆ ಸಚಿವರ ರಾಜೀನಾಮೆ ಪತ್ರಗಳನ್ನು ಕುಮಾರಸ್ವಾಮಿ ಅವರಿಗೆ ಸಲ್ಲಿಸಿದರು. ಇಪ್ಪತ್ತು ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆದ ಒಪ್ಪಂದವನ್ನು ನೆನಪಿಸಿದ ಸದಾನಂದಗೌಡರು, `ಒಪ್ಪಂದದಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಪತ್ರ ಮತ್ತು ಯಡಿಯೂರಪ್ಪನವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಆ ಮೂಲಕ ಅಧಿಕಾರ ಹಸ್ತಾಂತರ ಸುಗಮವಾಗಿ ಜರುಗಲು ಅನುವು ಮಾಡಿಕೊಡಬೇಕು' ಎಂದು ಕೋರಿದರು.

2007: ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯ ಮಹಾ ಅಧಿವೇಶನವು ವಿಶ್ವ ಅಹಿಂಸಾದಿನವನ್ನಾಗಿ ಆಚರಿಸಿತು. ಈ ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಜಾಗತಿಕ ನಿಶ್ಯಸ್ತ್ರೀಕರಣದ ಕನಸನ್ನು ಸಾಕಾರಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ವಿಫಲವಾಗಿದೆ. ಕೆಲವು ರಾಷ್ಟ್ರಗಳಿಂದಾಗಿ ಇಡೀ ಜಗತ್ತಿಗೆ ಭಯೋತ್ಪಾದನೆ ಹರಡುತ್ತಿದೆ ಎಂದು ಹೇಳಿದರು.

2007: ಪಾಕಿಸ್ಥಾನದ ಗುಪ್ತಚರ ಇಲಾಖೆ ಐ ಎಸ್ ಐ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಶ್ಫಾಕ್ ಪರ್ವೇಜ್ ಕಿಯಾನಿ ಅವರನ್ನು ಪಾಕಿಸ್ಥಾನ ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಹೊಸ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೇನಾ ಮುಖ್ಯಸ್ಥರ ಹುದ್ದೆಯನ್ನು ಬಿಟ್ಟುಕೊಡುವುದಾಗಿ ಅಧ್ಯಕ್ಷ ಪರ್ವೇಜ್ ಮುಷರಫ್ ಘೋಷಿಸಿದ್ದು, ನಂತರ ಅಶ್ಫಾಕ್ ಪರ್ವೇಜ್ ಕಿಯಾನಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವರು.

2007: ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪಶ್ಚಿಮ ತೀರದಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.4ರಷ್ಟಿದ್ದ ಈ ಭೂಕಂಪದ ಕೇಂದ್ರ, ಕರಾವಳಿ ಪಟ್ಟಣ ಬೆಂಗಕುಲುವಿನಿಂದ 160 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ 20 ಕಿ.ಮೀ. ಆಳದಲ್ಲಿತ್ತು.

2007: ಮಹಾತ್ಮ ಗಾಂಧಿ ಅವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಕೊಡಲು ಸಾಧ್ಯವಾಗದೇ ಇದ್ದುದಕ್ಕೆ ಭಾರತವು 138ನೇ ಗಾಂಧಿ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ `ನೊಬೆಲ್ ಪ್ರತಿಷ್ಠಾನ' ಖೇದ ವ್ಯಕ್ತಪಡಿಸಿತು. ಗಾಂಧಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಕೊಡಲು ಒಟ್ಟು ಐದು ಬಾರಿ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ `ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ- ಪೂರ್ಣ ಪ್ರಮಾಣದಲ್ಲಿ ಮಾನವೀಯ ಸಂಕಷ್ಟಗಳ ಪರಿಹಾರದ ಕಾರ್ಯಕರ್ತರೂ ಅಲ್ಲ' ಎಂದು ಆಯ್ಕೆ ಸಮಿತಿ ಅಭಿಪ್ರಾಯ ಪಟ್ಟು ಪ್ರಸ್ತಾಪವನ್ನು ತಳ್ಳಿ ಹಾಕಿತ್ತು. ಇಷ್ಟು ವರ್ಷ ಕಳೆದ ನಂತರ ನೊಬೆಲ್ ಸಮಿತಿಗೆ ತನ್ನ ತಪ್ಪಿನ ಅರಿವಾಗಿದೆ. `ಗಾಂಧಿಗೆ ನೊಬೆಲ್ ಪ್ರಶಸ್ತಿ ನಿರಾಕರಿಸಿದ್ದು ತಪ್ಪು' ಎಂದು ಸ್ವೀಡನ್ನಿನ ನೊಬೆಲ್ ಪ್ರತಿಷ್ಠಾನದ ಕಾರ್ಯ ನಿರ್ವಾಹಕ ನಿರ್ದೇಶಕ ಮೈಕೆಲ್ ಸೊಲಾಮ್ ಖಾಸಗಿ ವಾಹಿನಿಯೊಂದರಲ್ಲಿ ಒಪ್ಪಿಕೊಂಡರು. ಮಹಾತ್ಮ ಗಾಂಧಿ ಅವರು 1937, 1938, 1939, 1947 ಮತ್ತು ಸಾಯುವುದಕ್ಕೇ ಕೆಲವೇ ದಿನ ಮೊದಲು ಅಂದರೆ ಜನವರಿ 1948ರಲ್ಲಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. 1948ರಲ್ಲಿ `ಪ್ರಶಸ್ತಿ ಗಳಿಸುವ ಅರ್ಹರು ಯಾರೂ ಇಲ್ಲ' ಎಂದು ತೀರ್ಮಾನಿಸಿದ್ದ ಸಮಿತಿ ಯಾರಿಗೂ ಪ್ರಶಸ್ತಿ ನೀಡಿರಲಿಲ್ಲ. ನೊಬೆಲ್ ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಇಲ್ಲದಿರುವುದು ಪ್ರಮುಖ ಕೊರೆತೆಯೇ ಆಗಿದೆ. ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಗಾಂಧಿ ಇರಲೇಬೇಕಿತ್ತು. ಅವರಿಲ್ಲದೆ ಬಹು ದೊಡ್ಡ ಶೂನ್ಯ ಆವರಿಸಿದೆ. ಕ್ಷಮಿಸಲಾರದ ತಪ್ಪು ಇದು ಎಂದು ನೊಬೆಲ್ ವಸ್ತು ಸಂಗ್ರಹಾಲಯದ ಕ್ಯುರೇಟರ್ ಡಾ. ಆಂಡರ್ಸ್ ಬರನಿ ಹೇಳಿದರು.

2007: ವಾಷಿಂಗ್ಟನ್ನಿನ ಸಾಗರೋತ್ತರ ವ್ಯವಹಾರ ಸಚಿವಾಲಯವು ತನ್ನ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಾಷಿಂಗ್ಟನ್ನಿನಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ (ಸಿಡಿಒ)ಭಾರತೀಯ ರಾಯಭಾರಿ ಕಚೇರಿಯಲ್ಲಿ ಏಳು ವರ್ಷಗಳ ಕಾಲ ಸಮುದಾಯ ವ್ಯವಹಾರಗಳ ವಿಭಾಗದಲ್ಲಿ ಕೆಲಸ ಮಾಡಿರುವ ಕನ್ನಡತಿ ಆರತಿ ಕೃಷ್ಣ ಅವರನ್ನು ನೇಮಿಸಿರುವುದಾಗಿ ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ಪ್ರಕಟಿಸಿದರು.

2006: ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಅಮೆರಿಕದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಆಂಡ್ರ್ಯೂ ಜೆಡ್. ಫೈರ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಕ್ರೆಗ್ ಸಿ.ಮೆಲ್ಲೋ ಅವರು ಆಯ್ಕೆಯಾದರು. ವೈರಸ್ಸಿನಿಂದ ಹಬ್ಬುವ ಕಾಯಿಲೆಗಳ ವಿರುದ್ಧ ದೇಹದಲ್ಲಿನ ಆರ್ ಎನ್ ಎ ವಹಿಸುವ ಮಹತ್ವದ ಪಾತ್ರವನ್ನು ಆವಿಷ್ಕರಿಸಿರುವುದಕ್ಕಾಗಿ ಇವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ತಮ್ಮ ಸಂಶೋಧನಾ ಪ್ರಬಂಧವನ್ನು ಫೈರ್ ಮತ್ತು ಮೆಲ್ಲೋ 1998ರಲ್ಲೇ ಸವಿವರವಾಗಿ ಪ್ರಕಟಿಸಿದ್ದರು. ಈ ಜೋಡಿಯಲ್ಲಿ ಫೈರ್ ಅವರಿಗೆ ಈಗ ಇನ್ನೂ ಕೇವಲ 47 ವರ್ಷವಾಗಿದ್ದರೆ, ಮೆಲ್ಲೋ ಇನ್ನೂ ಒಂದು ವರ್ಷ ಚಿಕ್ಕವರು.

2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ 29-9-2006ರಂದು ನೆಲಕ್ಕೆ ಅಪ್ಪಳಿಸಿದ ಬ್ರೆಜಿಲ್ ಜೆಟ್ ವಿಮಾನದಲ್ಲಿದ್ದ 115 ಜನರ ಪೈಕಿ ಯಾರೊಬ್ಬರೂ ಈವರಗೆ ಬದುಕಿ ಉಳಿದಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಪ್ರಕಟಿಸಿದರು. ಬ್ರೆಜಿಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತಫೋರ್ಟ್ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು.

2006: ಬಹು ನಿರೀಕ್ಷಿತ ಮೆಟ್ರೊ ರೈಲು ಯೋಜನೆಯ ಕಾಮಗಾರಿ ಬೆಂಗಳೂರಿನಲ್ಲಿ ವಿಜಯದಶಮಿಯ ದಿನವಾದ ಈದಿನ ಮಹಾತ್ಮ ಗಾಂಧಿ ರಸೆಯಲ್ಲಿ ಆರಂಭಗೊಂಡಿತು. ಪೂಜೆ ನಡೆಸಿ ನಂತರ ಕಾಮಗಾರಿಗೆ ಚಾಲನೆ ನೀಡಲಾಯಿತು.

2006: ಮೈಸೂರಿನ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್- ಶ್ರೀ ಸಂಸ್ಥಾನ ಗೋಕರ್ಣವು ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಭಾರತೀಯ ಗೋವು ತಳಿ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ರೂಪಿಸಿದ `ಕಾಮದುಘಾ' ಭಾಗವಾಗಿ ಏರ್ಪಡಿಸಿದ್ದ ಗೋ ಸಂಸತ್ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪಾಲ್ಗೊಂಡು ರಾಮಚಂದ್ರಾಪುರ ಮಠದ ಗೋವು ತಳಿ ಸಂರಕ್ಷಣಾ ಕಾರ್ಯಕ್ಕೆ ಸರ್ಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಗೋವು ತಳಿ ಸಂರಕ್ಷಣೆಗಾಗಿ 2.70 ಕೋಟಿ ರೂಪಾಯಿಗಳನ್ನು ಸಮ್ಮಿಶ್ರ ಸರ್ಕಾರವು ಮುಂಗಡಪತ್ರದಲ್ಲಿ ತೆಗೆದಿರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

2006: ನಿವೃತ್ತ ಸೇನಾ ದಂಡನಾಯಕ ಸರಯೂದ್ ಚಲನೊಂಟ್ ಅವರು ಥಾಯ್ಲೆಂಡಿನ ಹಂಗಾಮಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು. ಸೆಪ್ಟೆಂಬರ್ 19ರಂದು ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ಪ್ರಧಾನಿ ತಕ್ ಸಿನ್ ಶಿನವಾತ್ರ ಅವರನ್ನು ಪದಚ್ಯುತಗೊಳಿಸಲಾಗಿತ್ತು.

1985: ಚಿತ್ರ ನಟ ರಾಕ್ ಹಡ್ಸನ್ ಅವರು ಕ್ಯಾಲಿಫೋರ್ನಿಯಾದ ಬೆವೆರ್ಲಿ ಹಿಲ್ಸಿನಲ್ಲಿ ತಮ್ಮ 59ನೇ ವಯಸಿನಲ್ಲಿ ಏಡ್ಸ್ ರೋಗದ ಪರಿಣಾಮವಾಗಿ ಮೃತರಾದರು. ಈ ರೋಗಕ್ಕೆ ಬಲಿಯಾದ ಮೊತ್ತ ಮೊದಲ ಗಣ್ಯ ವ್ಯಕ್ತಿ ಇವರು.

1967: ತುರ್ ಗುಡ್ ಮಾರ್ಷಲ್ ಅವರು ಅಮೆರಿಕದ ಸುಪ್ರೀಂ ಕೋರ್ಟಿನ ಅಸೋಸಿಯೇಟ್ ಜಸ್ಟೀಸ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರದ ಉನ್ನತ ಕೋರ್ಟ್ ಹುದ್ದೆಗೆ ನೇಮಕ ಗೊಂಡ ಮೊದಲ ಆಫ್ರಿಕನ್-ಅಮೆರಿಕನ್ ಎಂಬ ಹೆಗ್ಗಳಿಕೆ ಇವರದಾಯಿತು.

1950: ಚಾರ್ಲ್ಸ್ ಎಂ ಶುಜ್ ಅವರು ರಚಿಸಿದ ಕಾಮಿಕ್ ಸ್ಟ್ರಿಪ್ `ಪೀನಟ್ಸ್' ಮೊತ್ತ ಮೊದಲ ಬಾರಿಗೆ ಒಂಭತ್ತು ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಯಿತು.

1946: ಭಾರತದ ಖ್ಯಾತ ಚಿತ್ರನಟಿ ಆಶಾ ಪರೇಖ್ ಜನ್ಮದಿನ.

No comments:

Advertisement