My Blog List

Wednesday, April 28, 2010

ಇಂದಿನ ಇತಿಹಾಸ History Today ಏಪ್ರಿಲ್ 28

ಇಂದಿನ ಇತಿಹಾಸ

ಏಪ್ರಿಲ್ 28

ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬದುಕುಳಿದ ಏಕೈಕ ಆರೋಪಿ ಹಾಗೂ ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಅವರನ್ನು ಸಿಬಿಐ ಮತ್ತು ಇಂಟರ್‌ಪೋಲ್‌ನ 'ಬೇಕಾದ ವ್ಯಕ್ತಿ' ಪಟ್ಟಿಯಿಂದ ತೆರವುಗೊಳಿಸಲಾಯಿತು. ಇದು ಭಾರತದಲ್ಲಿ ತೀವ್ರ ಸ್ವರೂಪದ ರಾಜಕೀಯ ಸಂಚಲನ ಮೂಡಿಸಿತು.

2009: ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಬದುಕುಳಿದ ಏಕೈಕ ಆರೋಪಿ ಹಾಗೂ ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಅವರನ್ನು ಸಿಬಿಐ ಮತ್ತು ಇಂಟರ್‌ಪೋಲ್‌ನ 'ಬೇಕಾದ ವ್ಯಕ್ತಿ' ಪಟ್ಟಿಯಿಂದ ತೆರವುಗೊಳಿಸಲಾಯಿತು. ಇದು ಭಾರತದಲ್ಲಿ ತೀವ್ರ ಸ್ವರೂಪದ ರಾಜಕೀಯ ಸಂಚಲನ ಮೂಡಿಸಿತು. ಈಚೆಗಷ್ಟೇ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರನ್ನು ದೋಷಮುಕ್ತಗೊಳಿಸಿದ್ದ ಸಿಬಿಐ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಬಿಜೆಪಿ ಮತ್ತು ಎಡಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಳೆದ 5 ವರ್ಷಗಳ ಸಿಬಿಐ ಕಾರ್ಯಗಳ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದವು. ಕ್ವಟ್ರೋಚಿ ವಿಷಯದಲ್ಲಿ ಸಿಬಿಐ ಈ ಮೊದಲಿನಿಂದಲೂ ಉದಾಸೀನ ಧೋರಣೆಯನ್ನೇ ತಳೆಯುತ್ತ ಬಂದಿತ್ತು. ಭಾರತದ ಹೊರಗೆ ಎರಡು ಬಾರಿ ಕ್ವಟ್ರೋಚಿ ಅವರನ್ನು ಬಂಧಿಸಿದಾಗಲೂ ಅವರನ್ನು ಗಡಿಪಾರು ಮಾಡಿಸಿಕೊಳ್ಳುವಲ್ಲೂ ಸಿಬಿಐ ದಿವ್ಯ ತಾಳಿ, ವೈಫಲ್ಯ ಅನುಭವಿಸಿತ್ತು. ಇದೀಗ ಸಿಬಿಐ ನೀಡಿದ ಸೂಚನೆ ಮೇರೆಗೆ ಇಂಟರ್‌ಪೋಲ್ ತನ್ನ ರೆಡ್‌ಕಾರ್ನರ್ ನೋಟಿಸ್ ಪಟ್ಟಿಯಿಂದ ಕ್ವಟ್ರೋಚಿ ಅವರ ಹೆಸರನ್ನು ತೆಗೆದುಹಾಕಿದ್ದು ಬೆಳಕಿಗೆ ಬಂತು.

2009: ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ಜೆಡಿಎಸ್ ಕಾರ್ಯಕರ್ತನೊಬ್ಬ ಚಪ್ಪಲಿ ಎಸೆದ ಪ್ರಕರಣ ಚನ್ನರಾಯಪಟ್ಟಣದಲ್ಲಿ ನಡೆಯಿತು. ಪ್ರಚಾರ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ ಅವರ ಮೇಲೆ ಹೊಳೆನರಸೀಪುರ ತಾಲ್ಲೂಕಿನ ಕುಂಚೇವು ಕೋಡಿಹಳ್ಳಿ ಗ್ರಾಮದ ಚಂದ್ರಶೇಖರ್ (33) ಎಂಬಾತ ಚಪ್ಪಲಿ ಎಸೆದ. ಅದು ರಕ್ಷಣಾ ಪರಿಧಿಯೊಳಗೆ ಬಿದ್ದಿತು. ಈ ಅನಿರೀಕ್ಷಿತ ಘಟನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ವಿಚಲಿತರಾದರು. ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದರು.

2009: ತನ್ನ ನೆಲದಿಂದ ತಾಲಿಬಾನ್ ಉಗ್ರರನ್ನು ಹೊರಗಟ್ಟುವ ಕಾರ್ಯವನ್ನು ಪಾಕ್ ರಕ್ಷಣಾಪಡೆಗಳು ತೀವ್ರಗೊಳಿಸಿ ವಾಯವ್ಯ ಪ್ರಾಂತ್ಯದಲ್ಲಿ 70 ಉಗ್ರರನ್ನು ಹತ್ಯೆ ಮಾಡಿದವು. ಪಾಕ್ ರಕ್ಷಣಾ ಪಡೆಗಳು ದಿರ್ ಜಿಲ್ಲೆಯ ಕಾಲ್ಪಾನಿ ಮತ್ತು ಅಕಖೇಲ್‌ದರ ಪರ್ವತಗಳ ಮೇಲೆ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿದ್ದು, ತಾಲಿಬಾನ್ ಉಗ್ರರು ತಾವು ಆಕ್ರಮಿಸಿಕೊಂಡ ಬುನೆರ್ ಮತ್ತು ಇತರೆ ಪ್ರದೇಶಗಳನ್ನು ಬಿಡದೇ ಅನ್ಯ ಮಾರ್ಗವಿಲ್ಲ' ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿದರು.

2009: 2011ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಗಳು ಭಾರತದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿತು. ಇದೇ ವೇಳೆ ಭದ್ರತೆಯ ಕಾರಣದಿಂದ ಪಾಕಿಸ್ಥಾನದಲ್ಲಿ ಪಂದ್ಯಗಳನ್ನು ನಡೆಸದಿರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಲಾಹೋರಿನಲ್ಲಿ ಇದ್ದ ಕೇಂದ್ರ ಕಚೇರಿಯನ್ನು ಮುಚ್ಚಲು ತೀರ್ಮಾನಿಸಲಾಯಿತು.

2009: 64 ಕೋಟಿ ರೂಪಾಯಿಗಳ ಬೊಫೋರ್ಸ್ ಹಗರಣಲ್ಲಿ ಕ್ವಟ್ರೋಚಿ ಅವರು 7.32 ದಶಲಕ್ಷ ಡಾಲರ್ ಲಂಚ ಪಡೆದಿರುವುದು ನಿಜ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ವಿಸ್ ಅಧಿಕಾರಿಗಳು ನೀಡಿದ್ದು, ಅವುಗಳು ಸರ್ಕಾರದ ಬಳಿಯೇ ಇವೆ ಎಂದು ಸಿಬಿಐನ ಮಾಜಿ ನಿರ್ದೇಶಕ ಜೋಗಿಂದರ್ ಸಿಂಗ್ ನವದೆಹಲಿಯಲ್ಲಿ ಹೇಳಿದರು. '1997ರಲ್ಲಿ ನಾನು ಸ್ವಿಸ್ ಬ್ಯಾಂಕ್‌ಗಳಿಂದ 500 ಪುಟಗಳ ದಾಖಲೆಗಳನ್ನು ತಂದಿದ್ದೆ. ನಾನು ಸಿಬಿಐ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿದಾಗ ಒಂದು ಕೊಠಡಿ ತುಂಬ ಬೊಫೋರ್ಸ್‌ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದವು. ಆದರೆ ಅದುವರೆಗೆ ಯಾರೊಬ್ಬರೂ ಅದನ್ನು ಮುಟ್ಟಿರಲಿಲ್ಲ' ಎಂದು ಅವರು ತಿಳಿಸಿದರು. 'ಸಿಬಿಐ ಕೂಡ ಸ್ವತಂತ್ರ ತನಿಖಾ ಸಂಸ್ಥೆಯಲ್ಲ, ಸರ್ಕಾರ ಹೇಳಿದ್ದನ್ನು ಅದು ಮಾಡಲೇಬೇಕಾಗುತ್ತದೆ' ಎಂದು ಅವರು ಹೇಳಿದರು.

ಬೊಫೋರ್ಸ್ ಲಂಚ: ಪ್ರಮುಖ ಘಟನಾವಳಿ
1987: ಬೊಫೋರ್ಸ್ ಲಂಚ ಹಗರಣ ಬೆಳಕಿಗೆ
1997: ಸ್ವಿಸ್ ಬ್ಯಾಂಕ್‌ಗಳಿಂದ ಸುಮಾರು 500 ದಾಖಲೆಗಳು ಬಿಡುಗಡೆ. ವರ್ಷಗಳ ಕಾನೂನು ತೊಡಕುಗಳ ಬಳಿಕ ಸಿಬಿಐನಿಂದ ಇಟಲಿ ಉದ್ಯಮಿ ಕ್ವಟ್ರೋಚಿ, ಶಸ್ತ್ರಾಸ್ತ್ರ ವ್ಯಾಪಾರಿ ವಿನ್ ಛಡ್ಡಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಆಗಿನ ರಕ್ಷಣಾ ಕಾರ್ಯದರ್ಶಿ ಎಸ್. ಕೆ. ಭಟ್ನಾಗರ್ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲು.

2003: ಹೈಕೋರ್ಟ್ ಆದೇಶದ ಮೇರೆಗೆ ಕ್ವಟ್ರೋಚಿಯ ಎರಡು ಬ್ರಿಟಿಷ್ ಬ್ಯಾಂಕ್ ಖಾತೆಗಳ ಮುಟ್ಟುಗೋಲು.
2004ರ ಫೆ. 5: ರಾಜೀವ್ ಗಾಂಧಿ ಮತ್ತು ಇತರರ ಮೆಲಿನ ಲಂಚ ಆರೋಪಗಳು ದೆಹಲಿ ಹೈಕೋರ್ಟ್‌ನಿಂದ ವಜಾ.
2005ರ ಮೇ 31: ಬ್ರಿಟನ್‌ನ ಸಹೋದರರಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ ಅವರ ಮೆಲಿನ ಆರೋಪಗಳೂ ದೆಹಲಿ ಹೈಕೋರ್ಟ್‌ನಿಂದ ವಜಾ.

2009: ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದ ಏಕೈಕ ಉಗ್ರ ಅಜ್ಮಲ್ ಕಸಾಬ್ ವಯಸ್ಸು 20 ಅಥವಾ ಅದಕ್ಕಿಂತ ಹೆಚ್ಚು ಎಂಬುದು ಖಂಡಿತ! ದಾಳಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ಮಾಹಿತಿಯಿಂದ ಈ ಅಂಶ ದೃಢಪಟ್ಟಿದೆ. ಕಸಾಬ್ ವಯಸ್ಸು ಪತ್ತೆಗಾಗಿ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದ ವಿಶೇಷ ನ್ಯಾಯಾಧೀಶ ಎಂ.ಎಲ್.ತಹಿಲಿಯಾನಿ ಅವರು ಈ ವಿಷಯದಲ್ಲಿ ತೀರ್ಪು ನೀಡುವರು ಎಂದು ವಿಶೇಷ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ವಿಚಾರಣೆ ನಂತರ ಸುದ್ದಿಗಾರರಿಗೆ ತಿಳಿಸಿದರು. ತನ್ನ ವಯಸ್ಸು 18 ಎಂದು ಹೇಳಿದ್ದ ಕಸಾಬ್ ತನ್ನನ್ನು ಬಾಲಪರಾಧಿಗಳ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮುಂಬೈನ ಜೆ.ಜೆ.ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ಕಸಾಬ್‌ನ ದಂತ ಮತ್ತು ಮೂಳೆಯ ಬೆಳವಣಿಗೆಯನ್ನು ಮುಖ್ಯವಾಗಿ ಪರೀಕ್ಷಿಸಿ ಆತನ ವಯಸ್ಸು 20 ಅಥವಾ ಅದಕ್ಕಿಂತ ಹೆಚ್ಚು ಎಂಬುದನ್ನು ಸಾಬೀತುಪಡಿಸಿದರು.

2009: ವಿಶ್ವದ ಹಲವು ರಾಷ್ಟ್ರಗಳಲ್ಲಿ ಆತಂಕ ತಂದೊಡ್ಡಿದ ಹಂದಿ ಜ್ವರಕ್ಕೆ ಮೆಕ್ಸಿಕೊ ದೇಶವೊಂದರಲ್ಲೇ ಒಟ್ಟು 149 ಮಂದಿ ಬಲಿಯಾದರು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದ ಇಸ್ರೋದ ಪಿ ಎಸ್ ಎಲ್ ವಿ ರಾಕೆಟ್ ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಬಿಡುವ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನವು ಐತಿಹಾಸಿಕ ವಿಶ್ವ ದಾಖಲೆಯನ್ನು ನಿರ್ಮಿಸಿತು. 230 ಟನ್ ಅಂದರೆ 50 ಆನೆ ತೂಕದ, 12 ಮಹಡಿ ಎತ್ತರದ ಪಿ ಎಸ್ ಎಲ್ ವಿ ಯು ನಮ್ಮ ದೇಶದ ಒಂದು ನಕ್ಷೆ ಉಪಗ್ರಹ `ಕಾರ್ಟೋಸ್ಯಾಟ್-2ಎ' ಒಂದು ದೂರ ಸಂವೇದಿ ಮಿನಿ ಉಪಗ್ರಹ ಹಾಗೂ ವಿದೇಶಗಳ ಎಂಟು ನ್ಯಾನೋ ಉಪಗ್ರಹಗಳನ್ನು ಹಾಗೂ ಒಂದು ದೂರಸಂವೇದಿ ಉಪಗ್ರಹವನ್ನು ನಿಶ್ಚಿತ ಕಕ್ಷೆಗೆ ಸೇರಿಸಿತು. ಉಡಾವಣಾ ಹಲಗೆ ಮೇಲಿನಿಂದ 9.23ಕ್ಕೆ ಚಿಮ್ಮಿದ ಈ ರಾಕೆಟ್ ಯಾವುದೇ ಆತಂಕಕ್ಕೆ ಎಡೆ ಮಾಡಿಕೊಡದೆ ಸುಮಾರು 14 ನಿಮಿಷಗಳ ಅವದಿಯಲ್ಲಿ 635 ಕಿ.ಮೀ. ದೂರದ `ಪೋಲಾರ್ ಸನ್ ಸಿಂಕ್ರೋನಸ್ ಕಕ್ಷೆ'ಗೆ ಉಪಗ್ರಹಗಳನ್ನು ಹಾರಿಸಿತು. ಈದಿನದ ಉಡಾವಣೆಯೂ ಸೇರಿ ಪಿ ಎಸ್ ಎಲ್ ವಿ 12 ಸಲ ಯಶಸ್ವಿಯಾಗಿ ಉಡಾವಣೆಗಳನ್ನು ಮಾಡಿದೆಯಾದರೂ, ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದು ಇದೇ ಮೊದಲು. ರಷ್ಯಾದ ರಾಕೆಟ್ ಒಂದು ಕಳೆದ ವರ್ಷ ಒಂದೇ ಸಲಕ್ಕೆ 16 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತಾದರೂ ಅವುಗಳ ಒಟ್ಟು ತೂಕ ಕೇವಲ 300 ಕಿ.ಲೋ. ಮಾತ್ರ. ಆದರೆ ಪಿ ಎಸ್ ಎಲ್ ವಿ ಕಕ್ಷೆಗೆ ಸೇರಿಸಿದ ಉಪಗ್ರಹಗಳ ತೂಕ ಒಟ್ಟು 824 ಕೆ.ಜಿ.

2008: ವೇಗಿ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಭಜನ್ ಸಿಂಗ್ ಅವರ ಮೇಲೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಐಪಿಎಲ್ ಮ್ಯಾಚ್ ರೆಫರಿ ಹಾಗೂ ಮಾಜಿ ಆಟಗಾರ ಫಾರೂಕ್ ಎಂಜಿನಿಯರ್ ಅವರು ಈದಿನ ಮಧ್ಯಾಹ್ನ ನವದೆಹಲಿಯ ಹೋಟೆಲ್ ಒಂದರಲ್ಲಿ ಎರಡು ಗಂಟೆ ಕಾಲ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಭಜ್ಜಿ ಕ್ಷಮೆಯಾಚಿಸಿದರು. ಬಳಿಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಜ್ಜಿ ಮೇಲೆ ಐಪಿಎಲ್ `ಟ್ವೆಂಟಿ-20' ಟೂರ್ನಿಯ 11 ಪಂದ್ಯಗಳ ನಿಷೇಧದ ತೀರ್ಪನ್ನು ಪ್ರಕಟಿಸಿತು.

2008: ಭಾರತ ಹಾಕಿ ಫೆಡರೇಷನ್ ಅಧ್ಯಕ್ಷ ಕೆ.ಪಿ.ಎಸ್. ಗಿಲ್ ಅವರ ಹದಿನೈದು ವರ್ಷಗಳ ಆಳ್ವಿಕೆಗೆ ಕೊನೆಗೂ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಂತ್ಯ ಹಾಡಿತು. ಈದಿನ ನಡೆದ ತುರ್ತು ಸಭೆಯಲ್ಲಿ ಐಒಎ, ಭಾರತ ಹಾಕಿ ಫೆಡರೇಷನನ್ನು ಅಮಾನತು ಮಾಡುವುದರ ಜೊತೆಯಲ್ಲಿ ಒಲಿಂಪಿಯನ್ ಅಸ್ಲಮ್ ಷೇರ್ ಖಾನ್ ಅವರ ನೇತೃತ್ವದಲ್ಲಿ ತಾತ್ಕಾಲಿಕ ಆಯ್ಕೆ ಸಮಿತಿಯನ್ನು ನೇಮಿಸಲಾಯಿತು. ಐ ಎಚ್ ಎಫ್ ಕಾರ್ಯದರ್ಶಿ ಕೆ. ಜ್ಯೋತಿಕುಮಾರನ್ ಅಜ್ಲನ್ ಷಾ ಕಪ್ ಹಾಕಿ ಚಾಂಪಿಯನ್ ಶಿಪ್ಪಿನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಆಯ್ಕೆಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಟಿ.ವಿ. ಸ್ಟಿಂಗ್ ಆಪರೇಷನ್ನಿನಲ್ಲಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಐಒಎ ತುರ್ತು ಸಭೆ ನಡೆಸಿ ಐ ಎಚ್ ಎಫ್ನ ಪ್ರಸ್ತುತ ಆಡಳಿತ ಮಂಡಳಿಯನ್ನು ಕಿತ್ತೊಗೆಯುವುದಕ್ಕೆ ಸರ್ವಾನುಮತದಿಂದ ಸಮ್ಮತಿಸಿತು.

2008: ಮಲೇಷ್ಯಾದ ಸಂಸತ್ತಿಗೆ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಭಾರತೀಯ ಮೂಲದ 10 ಶಾಸಕರು ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಮಹಿಳೆಯೊಬ್ಬರು ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದರು. ಮಾರ್ಚ್ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಶಾಲಿಗಳಾಗಿದ್ದ ಭಾರತೀಯ ಮೂಲದ 10ಮಂದಿ ಈದಿನ ಆರಂಭವಾದ ಮಲೇಷ್ಯಾದ ಸಂಸತ್ತಿನ 12ನೇ ಅಧಿವೇಶನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಬ್ದುಲ್ಲಾ ಅಹಮದ್ ಬದಾವಿ ನೇತೃತ್ವದ್ಲಲಿ ಆಡಳಿತಾರೂಢ ಬರಿಸಾನ್ ನಾಸಿಯೊನಾಲ್ (ಬಿಎನ್) ಪಕ್ಷ ಮಲೇಷ್ಯಾದ ಇತಿಹಾಸದಲ್ಲೇ ಎರಡನೇ ಬಾರಿಗೆ ಮೂರನೇ ಎರಡರಷ್ಟು ಬಹುಮತ ಗಳಿಸಿತು.

2008: ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆಯ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಸ್ಥಾನ ಗಳಿಸಿದ್ದಾನೆ! ಸೌಂದರ್ಯ ಅಥವಾ ಆಕರ್ಷಕ ಪುರುಷ ಎಂಬ ಕಾರಣಕ್ಕಾಗಿ ಅಲ್ಲ, ದೇಶಭ್ರಷ್ಟತೆಯ ಕಾರಣಕ್ಕಾಗಿ. ಫೋರ್ಬ್ಸ್ ತಯಾರಿಸಿದ ವಿಶ್ವದ ಪ್ರಮುಖ ಹತ್ತು ದೇಶಭ್ರಷ್ಟರ ಪಟ್ಟಿಯಲ್ಲಿ ಅಲ್ ಖೈದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮೂಲದ ದಾವೂದ್ ಇಬ್ರಾಹಿಂ ಮತ್ತು ಆತನ `ಡಿ' ಕಂಪನಿ ನಾಲ್ಕನೇ ಸ್ಥಾನ ಗಳಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ ಭೂಗತ ದೊರೆ ದಾವೂದ್ (52) ಈಗ ಪಾಕಿಸ್ಥಾನದಲ್ಲಿ ಇರಬಹುದು ಎಂಬ ಶಂಕೆ ಇದ್ದು, ಈತ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಅಮೆರಿಕ ಘೋಷಿಸಿದೆ. ಪೊಲೀಸರಿಗೆ ತನ್ನ ಗುರುತು ಸಿಗಬಾರದೆಂದು ದಾವೂದ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದೆಂದೂ `ಫೋರ್ಬ್ಸ್' ಹೇಳಿತು.

2008: ತನ್ನ ಸ್ವಂತ ಮಗಳನ್ನೇ 24 ವರ್ಷಗಳ ಕಾಲ ಮನೆಯಲ್ಲಿ ಸೆರೆಯಾಗಿಟ್ಟು, ಮಗಳಿಗೇ 7 ಮಕ್ಕಳನ್ನು ಕರುಣಿಸಿದ ಆಸ್ಟ್ರೇಲಿಯಾದ 73 ವರ್ಷದ ಜೋಸೆಫ್ ಎಂಬ ತಂದೆಯೊಬ್ಬ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು ತನ್ನ `ಪಾಪಕೃತ್ಯ'ಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ಆಸ್ಟ್ರಿಯಾ ಸುದ್ದಿ ವಾಹಿತಿನಯೊಂದು ವರದಿ ಮಾಡಿತು. ತಂದೆಯಿಂದಲೇ ಮಕ್ಕಳನ್ನು ಪಡೆದಿರುವ ಮಗಳು ಎಲಿಜಬೆತ್ ಫ್ರಿಜ್ ಹಾಗೂ ಆಕೆಯ ಮಕ್ಕಳು ಸೆರೆಯಾಗಿರುವ ಸ್ಥಳವನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ವರದಿ ಹೇಳಿತು.

2008: ಚೀನಾದ ಪೂರ್ವ ಭಾಗದ ಶಾಂಡೊಂಗ್ ಪ್ರಾಂತ್ಯದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಪಕ್ಷ 60 ಮಂದಿ ಸತ್ತು 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 57 ಜನರು ಸ್ಥಳದಲ್ಲಿಯೇ ಮೃತರಾದರೆ ಮೂವರು ಆಸ್ಪತ್ರೆಯಲ್ಲಿ ಅಸು ನೀಗಿದರು. ಬೀಜಿಂಗಿನಿಂದ ಕ್ವಿಂಗಾಡೊಗೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಹಳಿ ತಪ್ಪಿ ಯಂತಾಯಿ ರೈಲಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತು.

2008: ಪಾಕಿಸ್ಥಾನದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನಡೆಸಿದ ಹೋರಾಟಕ್ಕಾಗಿ ಮಾಜಿ ಪ್ರಧಾನಿ ದಿ. ಬೆನಜೀರ್ ಭುಟ್ಟೊ ಅವರಿಗೆ ಪ್ರತಿಷ್ಠಿತ ತಿಪ್ಪೆರರಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಭುಟ್ಟೊ ಅವರ ದೀರ್ಘ ಕಾಲದ ನಿಕಟವರ್ತಿ ಬಶೀರ್ ರೈಜಾ ಅವರು ಭುಟ್ಟೊ ಕುಟುಂಬದ ಪರವಾಗಿ ಐರ್ಲೆಂಡಿನಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡರು.

2008: ಕರ್ನಾಟಕದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ಸಲ್ಲಿಸಿದ್ದ `ಸೂತ್ರ'ಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತು. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘವು ವೈದ್ಯಕೀಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜಾರಿಗೆ ತಂದಿದ್ದ `ಸೂತ್ರ'ವನ್ನೇ ಒಪ್ಪಿಕೊಂಡಿವೆ ಎಂದು ನ್ಯಾಯಮೂರ್ತಿ ಬಿ.ಎನ್.ಅಗರವಾಲ್ ನೇತೃತ್ವದ ನ್ಯಾಯಪೀಠವು ತಿಳಿಸಿತು.

2008: ರೋಗಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ. ಪ್ರಕಾಶ್ ಕಪಾಟೆ ಅವರಿಗೆ ಒಂದು ವರ್ಷ ಶಿಕ್ಷೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿತು. ಕ್ಯಾನ್ಸರಿನಿಂದ ಬಳಲುತ್ತಿದ್ದ ಚಿಂತಾಮಣಿಯ ಐಮರೆಡ್ಡಿಹಳ್ಳಿಯ ರಾಮಣ್ಣ ಎಂಬುವರು 2000ನೇ ಸಾಲಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ರಾಮಣ್ಣ ಅವರಿಗೆ ರೆಡಿಯೋಥೆರೆಫಿ ಮಾಡಲು ಪ್ರಕಾಶ್ ಎರಡು ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಬಗ್ಗೆ ರಾಮಣ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಒಂದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ತನಿಖಾ ತಂಡ ಪ್ರಕಾಶ್ ಅವರನ್ನು ಬಂಧಿಸಿತ್ತು. ಲೋಕಾಯುಕ್ತದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೈ.ಆರ್. ಜಗದೀಶ್ ವಾದ ಮಂಡಿಸಿದ್ದರು. ವಿಶೇಷ ನ್ಯಾಯಾಧೀಶರಾದ ಆರ್.ಎಂ. ಶೆಟ್ಟರ್ ಅವರು ಮೇಲಿನ ಆದೇಶ ನೀಡಿದರು.

2006: ಎಚ್. ಟಿ. ಮೀಡಿಯಾ ಲಿಮಿಟೆಡ್ ಉಪಾಧ್ಯಕ್ಷೆ ಶೋಭನಾ ಭಾರ್ತಿಯಾ ಮತ್ತು ಪಯೋನೀರ್ ಸಂಪಾದಕ ಚಂದನ್ ಮಿತ್ರ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಕೇಂದ್ರ (ಸಿಪಿಐಎಲ್) ತನ್ನ ಅರ್ಜಿಯಲ್ಲಿ ಮೇಲ್ಮನೆಗೆ ಮಾಡಲಾದ ಇವರಿಬ್ಬರ ನಾಮಕರಣ ಸಂವಿಧಾನದ 80 (3) ವಿಧಿಯಡಿಯಲ್ಲಿ ಸೂಚಿತವಾಗಿರುವ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವೆ ಈ ವರ್ಗಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪೀಠವು ಸಮಾಜ ಸೇವೆ ಶಬ್ಧದ ಅರ್ಥವ್ಯಾಪ್ತಿ ಇಂತಹ ಪ್ರಕರಣಗಳು ಒಳಗೊಳ್ಳುವಷ್ಟು ವಿಶಾಲವಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದರು.

2006: ಯುತ್ ಐಕಾನ್ ಹೆಸರಿನ ಮೊಹರು ಮಾಡಲಾದ ಸ್ಪೈಟ್ ಬಾಟಲಿಯೊಳಗೆ ಸತ್ತ ಕೀಟಗಳು ಇದ್ದುದಕ್ಕಾಗಿ 1.20 ಲಕ್ಷ ರೂಪಾಯಿಗಳ ಪರಿಹಾರವನ್ನು ಗ್ರಾಹಕನಿಗೆ ನೀಡುವಂತೆ ದೆಹಲಿಯ ಗ್ರಾಹಕ ನ್ಯಾಯಾಲಯವೊಂದು ಕೋಕಾ-ಕೋಲಾ ಕಂಪೆನಿಗೆ ಆದೇಶಿಸಿತು.

2006: ಹೌ ಓಪಲ್ ಮೆಹ್ತಾ ಗಾಟ್ ಕಿಸ್ಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಕರ್ತೃ ಭಾರತೀಯ ಮೂಲದ ಲೇಖಕಿ ಕಾವ್ಯ ವಿಶ್ವನಾಥನ್ ಕೃತಿಚೌರ್ಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾದಂಬರಿ ಪ್ರಕಟಿಸಿದ ಪ್ರಕಾಶನ ಸಂಸ್ಥೆಯ ಲಿಟ್ಲ್ ಬ್ರೌನ್ ಕಾದಂಬರಿಯ ಎಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ನಿರ್ಧರಿಸಿತು.

2006: ಪಣಜಿ ಸಮೀಪದ ವಾಸೊದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಅತ್ಯಂತ ದೊಡ್ಡದಾದ ಅತ್ಯಾಧುನಿಕ ಕರಾವಳಿ ಕಡಲು ಪಹರೆ ನೌಕೆ 105 ಮೀಟರ್ ಉದ್ದದ ಐಜಿಜಿಎಸ್ ಸಂಕಲ್ಪ ಸೇರ್ಪಡೆಗೊಂಡಿತು.

2006: ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವಂತಿಲ್ಲ ಎಂದು ಭಾರತದ ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ರುಮಾ ಪಾಲ್ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು 1986ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿ ಈ ತೀರ್ಪನ್ನು ನೀಡಿತು. ಲಾಟರಿ ಟಿಕೆಟ್ಟುಗಳ ಮಾರಾಟವನ್ನು ವಸ್ತುಗಳ ಮಾರಾಟಕ್ಕೆ ಸಮಾನವಾಗಿ ನೋಡಲಾಗದು. ಆದ್ದರಿಂದ ಅದರ ಮೇಲೆ ತೆರಿಗೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಹೇಳಿತು. ಲಾಟರಿ ಟಿಕೆಟ್ಟುಗಳ ಮಾರಾಟದ ಮೇಲೆ ತೆರಿಗೆ ವಿಧಿಸಬಹುದು ಎಂದು 1986ರಲ್ಲಿ ನೀಡಲಾಗಿದ್ದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.

1946: ಭಾಷೆ ಹಾಗೂ ಕೋಶ ವಿಜ್ಞಾನಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ- ಪಾರ್ವತಿ ದಂಪತಿಯ ಪುತ್ರರಾಗಿ ಜನಿಸಿದರು.

1945: ಇಟೆಲಿಯ ಸರ್ವಾಧಿಕಾರಿ ಬೆನಿಟೋ ಮುಸ್ಸೋಲಿನಿ ಮತ್ತು ಆತನ ಪ್ರೇಯಸಿ ಕ್ಲಾರಾ ಪೆಟಾಸ್ಸಿಯನ್ನು ಅವರು ರಾಷ್ಟ್ರದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೊಲ್ಲಲಾಯಿತು. ತಲೆಕೆಳಗಾಗಿ ನೇತಾಡುತ್ತಿದ್ದ ಅವರ ಶವಗಳು ಮಿಲಾನಿನ ಪಿಯಾಝಾ ಲೊರೆಟೊದಲ್ಲಿ ಪತ್ತೆಯಾದವು.

1937: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಜನ್ಮದಿನ. 1979ರಿಂದ ಇತ್ತೀಚೆಗೆ ಅಮೆರಿಕ ಪಡೆಗಳು ದಾಳಿ ನಡೆಸುವವರೆಗೂ ಈತ ಇರಾಕಿನ ಅಧ್ಯಕ್ಷನಾಗಿದ್ದ.

1928: ಇ.ಎಂ. ಶೂಮೇಕರ್ (1928-97) ಹುಟ್ಟಿದ ದಿನ. ಅಮೆರಿಕದ ಖಭೌತ ತಜ್ಞನಾದ ಈತ ಚಂದ್ರನ ಮಣ್ಣಿನ ಪದರ ಹಾಗೂ ಒಡೆದ ಕಲ್ಲುಗಳಿಗೆ `ರಿಗೋಲಿತ್' ಎಂದು ಹೆಸರಿಟ್ಟ. 1994ರಲ್ಲಿ ಗುರುಗ್ರಹಕ್ಕೆ ಡಿಕ್ಕಿ ಹೊಡೆದ ಪಿ/ಶೂಮೇಕರ್-ಲೆವಿ 9 ಧೂಮಕೇತುವನ್ನೂ ಈತ ಸಂಶೋಧಿಸಿದ.

1924: ಕೆನ್ನೆತ್ ಕೌಂಡಾ ಜನ್ಮದಿನ. 1961ರಲ್ಲಿ ಜಾಂಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈತ 1991ರವರೆಗೂ ಅಲ್ಲಿನ ಅಧ್ಯಕ್ಷನಾಗಿದ್ದ.

1865: ಸ್ಯಾಮುಯೆಲ್ ಕ್ಯುನಾರ್ಡ್ 77ನೇ ವಯಸಿನಲ್ಲಿ ಮೃತನಾದ. ಬ್ರಿಟಿಷ್ ವರ್ತಕನಾದ ಈತ ಬ್ರಿಟಿಷ್ ಸ್ಟೀಮ್ ಶಿಪ್ ಕಂಪೆನಿಯ ಸ್ಥಾಪಕ. ಈ ಕಂಪೆನಿಗೆ ಆತನ ಹೆಸರನ್ನೇ ಇಡಲಾಗಿತ್ತು.

No comments:

Advertisement