My Blog List

Thursday, April 29, 2010

ಇಂದಿನ ಇತಿಹಾಸ History Today ಏಪ್ರಿಲ್ 29

ಇಂದಿನ ಇತಿಹಾಸ

ಏಪ್ರಿಲ್ 29
ಲಿಮ್ಕಾ ದಾಖಲೆಗೆ ವಾರೆವ್ವಾ...
ವ್ಯಂಗ್ಯಚಿತ್ರಕಾರ ವಸಂತ ಹೊಸಬೆಟ್ಟು ಅವರು ಕನ್ನಡದ ದಿನ ಪತ್ರಿಕೆಯೊಂದರಲ್ಲಿ ಪ್ರತಿ ಬುಧವಾರ ಬರೆಯುವ 'ವಾರೆವ್ವಾ...' ಅಂಕಣ ಲಿಮ್ಕಾ ದಾಖಲೆ ಸೇರಿತು. ವ್ಯಂಗ್ಯ ಚಿತ್ರಗಳ ಇತಿಹಾಸ ಮತ್ತು ವ್ಯಂಗ್ಯ ಚಿತ್ರಕಾರರ ಮಾಹಿತಿ ನೀಡುವ ಈ ಅಂಕಣ 2004 ಡಿ. 1ರಿಂದ ಪ್ರತಿ ಬುಧವಾರ ನಿರಂತರವಾಗಿ ಪ್ರಕಟವಾಗುತ್ತಿದೆ.

ಲಿಮ್ಕಾ ದಾಖಲೆಗೆ ವಾರೆವ್ವಾ...
2009: ವ್ಯಂಗ್ಯಚಿತ್ರಕಾರ ವಸಂತ ಹೊಸಬೆಟ್ಟು ಅವರು ಕನ್ನಡದ ದಿನ ಪತ್ರಿಕೆಯೊಂದರಲ್ಲಿ ಪ್ರತಿ ಬುಧವಾರ ಬರೆಯುವ 'ವಾರೆವ್ವಾ...' ಅಂಕಣ ಲಿಮ್ಕಾ ದಾಖಲೆ ಸೇರಿತು. ವ್ಯಂಗ್ಯ ಚಿತ್ರಗಳ ಇತಿಹಾಸ ಮತ್ತು ವ್ಯಂಗ್ಯ ಚಿತ್ರಕಾರರ ಮಾಹಿತಿ ನೀಡುವ ಈ ಅಂಕಣ 2004 ಡಿ. 1ರಿಂದ ಪ್ರತಿ ಬುಧವಾರ ನಿರಂತರವಾಗಿ ಪ್ರಕಟವಾಗುತ್ತಿದೆ. ಈ ಮಾದರಿಯ ಸುದೀರ್ಘ ಅಂಕಣ ಇನ್ನೆಲ್ಲೂ ದಾಖಲಾಗಿಲ್ಲ ಎಂದು ಲಿಮ್ಕಾ ಬುಕ್ ಮಂಡಳಿ ಶ್ಲಾಘಿಸಿತು.

2009: 'ರಾಖಿ ಕಾ ಸ್ವಯಂವರ್' ಎಂಬ ರಿಯಾಲಿಟಿ ಷೋ ಮೂಲಕ ತನ್ನ ಪ್ರಿಯಕರನನ್ನು ಆಯ್ಕೆ ಮಾಡಲು ಹೊರಟ ನಟಿ ರಾಖಿ ಸಾವಂತ್‌ಗೆ 20 ದಿನಗಳಲ್ಲಿ 12,515 ಮಂದಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಅರ್ಜಿ ರವಾನಿಸಿದ್ದನ್ನು ಈದಿನ ನವದೆಹಲಿಯಲ್ಲಿ ಬಹಿರಂಗ ಪಡಿಸಲಾಯಿತು.

2009: ದೇಶದ ರಾಜಧಾನಿ ದೆಹಲಿಯಲ್ಲಿ ಉಷ್ಣಾಂಶ ಬುಧವಾರ 43.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತು. ಕಳೆದ 50 ವರ್ಷಗಳ ಅವಧಿಯ ಏಪ್ರಿಲ್ ತಿಂಗಳಲ್ಲಿಯೇ ಅತಿ ಹೆಚ್ಚಿನ ತಾಪಮಾನ ಇದು. ಇದಕ್ಕೂ ಮೊದಲು ಅಂದರೆ 1958ರ ಏಪ್ರಿಲ್‌ನಲ್ಲಿ ನಗರದ ಉಷ್ಣಾಂಶ 43.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಅದುವೇ ಆವರೆಗಿನ ಗರಿಷ್ಠ ಉಷ್ಣಾಂಶದ ದಾಖಲೆಯಾಗಿತ್ತು.

2009: ಮಹತ್ವದ ನಿರ್ಧಾರವೊಂದರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಟಗಾರರ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರವುಗೊಳಿಸಿತು. ಆದರೆ ಮೇ 31ರೊಳಗೆ ಐಸಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅದು ಆಟಗಾರರಿಗೆ ಸೂಚಿಸಿತು.

2009: ಭಾರತದ ಐಟಿ ಉದ್ಯಮದ ಚಟುವಟಿಕೆಗಳ ಕೇಂದ್ರ ಎಂದು ಖ್ಯಾತಿ ಗಳಿಸಿದ ಬೆಂಗಳೂರು, ಪ್ರಸ್ತುತ ದೇಶದಲ್ಲಿರುವ ಉತ್ತಮ ಜೀವನ ಮಟ್ಟದ ಮೊದಲನೇ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬದುಕಲು ಯೋಗ್ಯವಾದ ಉತ್ತಮ ಜೀವನ ಮಟ್ಟದ ನಗರಗಳ ಈ ವರ್ಷದ ವಿಶ್ವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 142ನೇ ಸ್ಥಾನ ಪಡೆಯಿತು. ನವದೆಹಲಿ 145ನೇ ಸ್ಥಾನ ಪಡೆದರೆ, ಕಳೆದ ವರ್ಷ 142ನೇ ಸ್ಥಾನದಲ್ಲಿದ್ದ ಮುಂಬೈ 148ನೇ ಸ್ಥಾನಕ್ಕಿಳಿಯಿತು. ವಿಶ್ವದ ವಿವಿಧ ನಗರಗಳ ಜೀವನ ಮಟ್ಟವನ್ನು ದಾಖಲಿಸುವ 2009ರ 'ದಿ ಕ್ವಾಲಿಟಿ ಆಫ್ ಲಿವಿಂಗ್ ರಿಪೋರ್ಟ್' ಪ್ರಕಾರ, ಮುಂಬೈ ಮೇಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಮುಂಬೈ ನಗರದ ಶ್ರೇಯಾಂಕದಲ್ಲಿ ಇಳಿಕೆಯಾಯಿತು. ಆದರೂ ದೇಶದ ಆರ್ಥಿಕ ರಾಜಧಾನಿ ಎಂಬ ಖ್ಯಾತಿಯ ಮುಂಬೈ ನಗರ, ಈ ನಗರಗಳ ಪಟ್ಟಿಯಲ್ಲಿ 152ನೇ ಸ್ಥಾನದಲ್ಲಿರುವ ಚೆನ್ನೈ ನಗರಕ್ಕಿಂತ ಮುಂದಿತ್ತು.

2009: ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹಾಗೂ ಆತನ ಸಹಚರರು ಜಲಾಂತರ್ಗಾಮಿ ನೌಕೆಗಳ ಮೂಲಕ ತಪ್ಪಿಸಿಕೊಳ್ಳುವ ಮಾಹಿತಿಯ ಬೆನ್ನುಹತ್ತಿ ತಮಿಳು ಉಗ್ರರ ಪ್ರದೇಶಗಳ ಮೇಲೆ ದಾಳಿ ನಡೆಸಿದ ಲಂಕಾ ನೌಕಾ ಪಡೆಗಳು ಎಲ್‌ಟಿಟಿಇಯ ಆರು ಹಡಗುಗಳನ್ನು ನಾಶಪಡಿಸಿ, ರೆಕ್ತಾವೈಕ್ಕಲ್ ಕೋಟೆ ಪ್ರದೇಶವನ್ನು ವಶಪಡಿಸಿಕೊಂಡವು.

2009: ಹಂದಿಜ್ವರ ಮೊದಲಿಗೆ ಪತ್ತೆಯಾದ ಮೆಕ್ಸಿಕೊ ದೇಶದಲ್ಲಿ ಮೃತರ ಸಂಖ್ಯೆ 159ಕ್ಕೆ ಏರಿತು. ಈವರೆಗೆ ದೇಶದಲ್ಲಿ 2498 ಶಂಕಿತ ಹಂದಿಜ್ವರ ಪ್ರಕರಣಗಳು ಪತ್ತೆಯಾದವು.

2009: ಎಲ್‌ಟಿಟಿಇ ನಾಯಕ ವಿ. ಪ್ರಭಾಕರನ್ ಮತ್ತು ಗುಪ್ತದಳ ಮುಖ್ಯಸ್ಥ ಪೊಟ್ಟು ಅಮ್ಮನ್ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಸಂಚು ರೂಪಿಸಿದ್ದುದಾಗಿ ಪ್ರಭಾಕರನ್ ನಿಕಟವರ್ತಿ ಮತ್ತು ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಸರ್ಕಾರದಲ್ಲಿ ರಾಷ್ಟ್ರೀಯ ಏಕೀಕರಣ ಸಚಿವರಾದ ಕರುಣಾ ಅಮ್ಮನ್ ತಿಳಿಸಿದರು. 'ಸಂಘಟನೆಯ ಯಾರೊಬ್ಬರ ಗಮನಕ್ಕೂ ತಾರದೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಇಬ್ಬರೇ ಸದ್ದಿಲ್ಲದೆ ಪಿತೂರಿ ಹೆಣೆದಿದ್ದರು. ಅಂತಹ ಪ್ರತಿಕೂಲ ಕ್ರಮಗಳನ್ನು ನಾನು ಯಾವಾಗಲೂ ವಿರೋಧಿಸುತ್ತಿದ್ದೆ' ಎಂದು 2004ರಲ್ಲಿ ಎಲ್‌ಟಿಟಿಇಯಿಂದ ಹೊರಬಂದ ಅದರ ಪೂರ್ವ ಪ್ರಾಂತ್ಯ ಕಮಾಂಡರ್ ಆಗಿದ್ದ ಕರುಣಾ ವಿವರಿಸಿದರು.

2009: ಅಮೆರಿಕದ ಪ್ರತಿಷ್ಠಿತ 'ಹೂವರ್' ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಏಷ್ಯಾದ ಪ್ರಥಮ ವ್ಯಕ್ತಿ ಕಲಾಂ.

2008: ಮಗಳನ್ನೇ 24 ವರ್ಷಗಳ ಕಾಲ ನೆಲಮಾಳಿಗೆಯಲ್ಲಿ ಸೆರೆಯಲ್ಲಿಟ್ಟು ಆಕೆಗೆ 7 ಮಕ್ಕಳನ್ನು ಕರುಣಿಸಿದ ಆಸ್ಟ್ರಿಯದ ಅಮಸ್ಟಿಟೆನ್ನಿನ ಕ್ರೂರ ತಂದೆ ಜೋಸೆಫ್ ಫ್ರಿಜ್ಜಿ (73) ಕುರಿತು ಮತ್ತಷ್ಟು ಮಾಹಿತಿಗಳು ಪತ್ತೆಯಾದವು. `ನನ್ನ ಮಗಳಿಗೆ ಜನಿಸಿದ ಮಗುವೊಂದು ಹುಟ್ಟಿದ ತತ್ ಕ್ಷಣವೇ ಸತ್ತಾಗ ಅದನ್ನು ನಾನೇ ಕೈಯಾರೆ ಸುಟ್ಟೆ' ಎಂದು ಜೋಸೆಫ್ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು. ತನ್ನ ತಂದೆಯ ಮಕ್ಕಳಿಗೇ ತಾಯಿಯಾಗಿರುವ 42ರ ಹರೆಯದ ಎಲಿಜಬೆತ್ 1984ರಿಂದ ಮನೆಯ ನೆಲಮಾಳಿಗೆಯಲ್ಲಿ ಸೆರೆಯಾಗಿದ್ದಾಳೆ. ಆಕೆಯ 7 ಮಕ್ಕಳಲ್ಲಿ ಮೂರು ಮಕ್ಕಳು ಇದುವರೆಗೂ ಬೆಳಕನ್ನೇ ಕಾಣದೇ ಸೆರೆಯಲ್ಲಿದ್ದರೆ, ಉಳಿದ ನಾಲ್ಕು ಮಕ್ಕಳಲ್ಲಿ ಒಂದು ಹುಟ್ಟಿದ ತತ್ ಕ್ಷಣವೇ ತೀರಿಕೊಂಡಿದೆ. ಇನ್ನುಳಿದ ಮೂರು ಮಕ್ಕಳು ತಂದೆ ಜೋಸೆಫ್ ಮತ್ತು ಆತನ ಪತ್ನಿ ರೋಸ್ ಮೇರಿ ಬಳಿ ಇದ್ದಾರೆ. ಎಲಿಜಬೆತ್ತಳ ಹಿರಿಯ ಮಗಳು ಉಸಿರಾಟದ ತೀವ್ರ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದಾಗ, ಅನುಮಾನಗೊಂಡ ವೈದ್ಯರು ಆಕೆಯ ಕುಟುಂಬದ ಮಾಹಿತಿ ಕೇಳಿದಾಗ ಈ ಪ್ರಕರಣ ಬಯಲಿಗೆ ಬಂದಿತು. ಜನ ನಿಬಿಡ ಸ್ಥಳದಲ್ಲಿರುವ ಆ ನೆಲಮಾಳಿಗೆಯಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಯಾರ ಗಮನಕ್ಕೂ ಬಂದಿಲ್ಲ ಎನ್ನುವುದೇ ಅಶ್ಚರ್ಯ ಎಂದು ಆಸ್ಟ್ರಿಯದ `ಡೆರ್ ಸ್ಟ್ಯಾಂಡರ್ಡ್' ಪತ್ರಿಕೆಯಲ್ಲಿ ವಿಶ್ಲೇಷಕಿ ಪೆಟ್ರಾ ಸ್ಟುಬೆರ್ ದಿಗ್ಭ್ರಮೆ ವ್ಯಕ್ತಪಡಿಸಿದರು.

2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ 1989ರಿಂದ ಚೀನಾ ಸರ್ಕಾರದ ವಿರುದ್ಧ ಬೌದ್ಧ ಭಿಕ್ಕುಗಳ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ 17 ಮಂದಿಗೆ ಮೂರು ವರ್ಷ ಜೀವಾವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಲ್ಹಾಸಾದ ಜನತಾ ನ್ಯಾಯಾಲಯವು ಈದಿನ ಈ ಶಿಕ್ಷೆಯನ್ನು ಪ್ರಕಟಿಸಿದೆ ಎಂದು ಚೀನಾ ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ ಹುವಾ ವರದಿ ಮಾಡಿತು. ಕಳೆದ ಮಾರ್ಚ್ ತಿಂಗಳಲ್ಲಿ ಲ್ಹಾಸಾ ಮತ್ತು ಇತರ ಕಡೆಗಳಲ್ಲಿ ಚೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದ ಹಿಂಸಾಚಾರದಲ್ಲಿ 20 ಮಂದಿ ಸತ್ತಿದ್ದರು. ಇದಕ್ಕೆ ದಲೈ ಲಾಮ ಕಾರಣ ಎಂಬುದು ಚೀನಾ ಸರ್ಕಾರದ ಅರೋಪ. ಆದರೆ ದೇಶ ಭ್ರಷ್ಟರಾಗಿ ಭಾರತದಲ್ಲಿರುವ ದಲೈ ಲಾಮ ಈ ಆಪಾದನೆಯನ್ನು ನಿರಾಕರಿಸಿದ್ದರು.

2008: ಸುಮಾರು 26 ತಾಲಿಬಾನಿಗಳನ್ನು ಆಘ್ಘಾನಿಸ್ಥಾನದ ಮಿಲಿಟರಿ ಕಾರ್ಯಪಡೆ ಹತ್ಯೆ ಮಾಡಿತು.

2008: ಪಾಕಿಸ್ಥಾನಕ್ಕೆ ಹತ್ತಿರದಲ್ಲಿರುವ ಪೂರ್ವ ಆಘ್ಘಾನಿಸ್ಥಾನದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಕನಿಷ್ಠ 15 ಮಂದಿ ಆಘ್ಘನ್ನರು ಬಲಿಯಾಗಿ, 25ಮಂದಿ ಗಾಯಗೊಂಡರು ಎಂದು ನ್ಯಾಟೊ ನೇತೃತ್ವದ ಪಡೆಗಳ ವಕ್ತಾರ ತಿಳಿಸಿದರು.

2008: ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.

2008: ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾದ ಸರಬ್ಜಿತ್ ಸಿಂಗ್ ಅವರನ್ನು ಭೇಟಿ ಮಾಡಿದ ಕುಟುಂಬದ ಸದಸ್ಯರು ಕ್ಷಮಾದಾನ ದೊರೆಯಬಹುದೆಂಬ ಭರವಸೆಯೊಂದಿಗೆ ಭಾರತಕ್ಕೆ ವಾಪಸಾದರು. ಸರಬ್ಜಿತ್ ಸಿಂಗ್ ಅವರನ್ನು ಪಾಕಿಸ್ಥಾನದಲ್ಲಿ ಭೇಟಿ ಮಾಡಲು ಪತ್ನಿ ಸುಖಪ್ರೀತ್ ಸಿಂಗ್, ಸಹೋದರಿ ದಲ್ಬೀರ್ ಕೌರ್ ಹಾಗೂ ಪುತ್ರಿಯರಾದ ಸ್ವಪನ್ ದೀಪ್ ಮತ್ತು ಪೂನಂ ತೆರಳಿದ್ದರು. ಸರಬ್ಜಿತ್ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ಥಾನ ಸರ್ಕಾರ ಮತ್ತೆ ಮೂರು ವಾರಗಳ ತಡೆಯಾಜ್ಞೆ ನೀಡಿದ್ದು `ಸಕಾರಾತ್ಮಕ ನಿಲುವು' ಎಂದು ಆತನ ಕುಟುಂಬ ಬಣ್ಣಿಸಿತು. 2008ರ ಏಪ್ರಿಲ್ 1ರಂದು ಸರಬ್ಜಿತ್ ನೇಣುಗಂಬಕ್ಕೇರಬೇಕಿತ್ತು. ಆದರೆ ಪಾಕ್ ಸರ್ಕಾರ ಅದನ್ನು 30 ದಿನ ಮುಂದೂಡಿತ್ತು. ಆ ಅವಧಿಯನ್ನು ಮತ್ತೆ ಮೂರು ವಾರಗಳ ಕಾಲ ಮುಂದೂಡಲಾಯಿತು.

2007: ಕಂಡು ಕೇಳರಿಯದ ನೈಜ ಗೋವಿನ ರಥೋತ್ಸವದೊಂದಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಶ್ರೀ ರಾಮಚಂದ್ರಾಪುರ ಮಠವು ಸಂಘಟಿಸಿದ್ದ 10 ದಿನಗಳ ವಿಶ್ವ ಗೋ ಸಮ್ಮೇಳನಕ್ಕೆ ಸಡಗರದ ತೆರೆ ಬಿದ್ದಿತು. ಲಕ್ಷಾಂತರ ಮಂದಿ ಸಂಭ್ರಮೋತ್ಸಾಹದೊಂದಿಗೆ ಗೋ ರಥೋತ್ಸವ ವೀಕ್ಷಿಸಿದರು. ಅಭೂತಪೂರ್ವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ಕಲಾ, ಭಜನಾ, ಸಂಕೀರ್ತನಾ ತಂಡಗಳು ಭಾಗವಹಿಸಿದ್ದವು. ಕುದುರೆ ಸಾರೋಟು, ನಾಲ್ಕು ಆನೆಗಳು, ಸಶಸ್ತ್ರ ದಳದವರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಗೋ ತುಲಾಭಾರ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆರೆಸ್ಸೆಸ್ ಸರಸಂಘ ಚಾಲಕ ಕೆ.ಸಿ. ಸುದರ್ಶನ್ ಪಾಲ್ಗೊಂಡಿದ್ದರು.

2007: ಭಾರತದ ಗೌರವ್ ಘಾಯ್ ಅವರು ಬೀಜಿಂಗಿನಲ್ಲಿ ಮುಕ್ತಾಯವಾದ ಐದು ಲಕ್ಷ ಡಾಲರ್ ಬಹುಮಾನ ಮೊತ್ತದ ಪ್ರಥಮ ಫೈನ್ ವ್ಯಾಲಿ ಬೀಜಿಂಗಿನ ಓಪನ್ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು..

2007: ಉಕ್ಕು ಉದ್ಯಮ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರು ಸತತ ಮೂರನೇ ವರ್ಷ ಬ್ರಿಟಿನ್ನಿನ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಿಂದುಜಾ ಸಹೋದರರು ಮತ್ತು ಲಾರ್ಡ್ ಸ್ವರಾಜ್ ಪಾಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

2006: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ಪ್ರತಿಷ್ಠಿತ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ' ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕೀಯ ಸಲಹೆಗಾರ ಎನ್.ವಿ. ಜೋಶಿ ಅವರಿಗೆ ಲಭಿಸಿತು. ಇಲ್ಲಿಯವರೆಗೆ ಹಿರಿಯ ಪತ್ರಕರ್ತರಾದ ಎನ್. ಎಸ್. ಸೀತಾರಾಮ ಶಾಸ್ತ್ರಿ, ಅಮ್ಮೆಂಬಳ ಆನಂದ, ಸಿ.ಜಿ.ಕೆ.ರೆಡ್ಡಿ, ಬಾಬು ಕೃಷ್ಣಮೂರ್ತಿ, ಮಿಂಚು ಶ್ರೀನಿವಾಸ, ಎಸ್. ವಿ. ಜಯಶೀಲರಾವ್, ಎಂ.ಬಿ.ಸಿಂಗ್, ಜಿ.ನಾರಾಯಣ, ಎಸ್. ಪಟ್ಟಾಭಿರಾಮನ್, ಸಿ.ವಿ. ರಾಜಗೋಪಾಲ, ಸುರೇಂದ್ರ ದಾನಿ, ತುಮಕೂರಿನ ಪ್ರಜಾ ಪ್ರಗತಿ ಸಂಪಾದಕ ನಾಗಣ್ಣ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು.

2001: ಅಮೆರಿಕದ ಕೋಟ್ಯಧೀಶ ಡೆನ್ನಿಸ್ ಟಿಟೋ ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡರು. 60 ವರ್ಷ ವಯಸ್ಸಿನ ಇವರು ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ರಷ್ಯದ ರಾಕೆಟ್ ಮೂಲಕ 20 ದಶಲಕ್ಷ ಡಾಲರ್ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ `ಮೋಜಿನ ಹಾರಾಟ' ನಡೆಸಿದರು. 2002ರ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕದ ಮಾರ್ಕ್ ಶಟ್ಲ್ ವರ್ತ್ ಎರಡನೇ ಖಾಸಗಿ ಬಾಹ್ಯಾಕಾಶ ಪ್ರವಾಸಿ ಎಂಬ ಹೆಸರಿಗೆ ಪಾತ್ರರಾದರು.

1937: ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.

1929: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಸಿಸು ಸಂಗಮೇಶ (29-4-1929ರಿಂದ 29-5-2001) ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಸಿದ್ದರಾಮಪ್ಪ-- ಗೌರಮ್ಮ ದಂಪತಿಯ ಮಗನಾಗಿ ಜನಿಸಿದರು. ಅವರ ಮೊದಲಿನ ಹೆಸರು ಸಂಗಮೇಶ ಸಿದ್ದಾಮಪ್ಪನಗೊಂಡ. 80ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ ಮೂಲಕ ಶಿಶು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿರುವ ಸಿಸು ಸಂಗಮೇಶ ಅವರು ಇತರ ವಿಚಾರಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

1848: ಭಾರತದ ಖ್ಯಾತ ವರ್ಣಚಿತ್ರಗಾರ ರಾಜಾ ರವಿ ವರ್ಮ (1848-1912) ಜನ್ಮದಿನ.

1630: ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರು ಈದಿನ ಮಹಾರಾಷ್ಟ್ರದ ಶಿವನೇರಿ ದುರ್ಗದಲ್ಲಿ ಜನಿಸಿದರು.

1236: ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬನಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತನಾದ. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.

No comments:

Advertisement