Monday, August 5, 2013

ಸವಲತ್ತಿಗೆ ಅಡಚಣೆ ಭ್ರಷ್ಟಾಚಾರ ರಹಿತವಾಗಿಯೇ ನಿವಾರಣೆ: ಮುನಿರತ್ನ ಭರವಸೆ

ಸವಲತ್ತಿಗೆ ಅಡಚಣೆ ಭ್ರಷ್ಟಾಚಾರ ರಹಿತವಾಗಿಯೇ ನಿವಾರಣೆ: ಮುನಿರತ್ನ ಭರವಸೆ


ಬೆಂಗಳೂರು: ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರ ಬಡಾವಣೆಯ ಜನತೆಗೆ ನ್ಯಾಯೋಚಿತ ಸವಲತ್ತು ಪಡೆಯುವಲ್ಲಿ ಬಿಬಿಎಂಪಿ ಮತ್ತು ಇತರ ಅಡಳಿತಶಾಹಿಯಿಂದ ಆಗುತ್ತಿರುವ ಎಲ್ಲ ಅಡಚಣೆಗಳನ್ನು ಭ್ರಷ್ಟಾಚಾರ ರಹಿತವಾಗಿಯೇ ನಿವಾರಿಸಿಕೊಡುವುದಾಗಿ ಶಾಸಕ ಮುನಿರತ್ನ ಭಾನುವಾರ (04-08-2013) ಇಲ್ಲಿ ಭರವಸೆ ನೀಡಿದರು.

ಸಚ್ಚಿದಾನಂದ ನಗರ ಬಡಾವಣೆಯಲ್ಲಿ ಭ್ರಷ್ಟಾಚಾರ ಮುಕ್ತವಾಗಿ ಖಾತೆ, ಕಟ್ಟಡ ನಕ್ಷೆ ಹಾಗೂ ಇತರ ಸವಲತ್ತುಗಳಿಗಾಗಿ ಹೋರಾಟ ನಡೆಸುತ್ತಿರುವ ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ (ನೋಂದಾಯಿತ) `ಎಸ್ ಎನ್ ಎನ್ ಎ' ಸಂಘಟಿಸಿದ್ದ ಕಾರ‌್ಯಕ್ರಮದಲ್ಲಿ ಬಡಾವಣೆಯ ಸುಮಾರು 400ಕ್ಕೂ ಹೆಚ್ಚು ನಿವೇಶನದಾರರು ಹಾಗೂ ನಿವಾಸಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬಿಬಿಎಂಪಿ ಅಡಿಷನಲ್ ಕಮೀಷನರ್, ಬೆಸ್ಕಾಂ ಮುಖ್ಯ ಎಂಜಿನಿಯರ್, ಜಲಮಂಡಳಿ ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಮಾತನಾಡುವುದರ ಜೊತೆಗೆ ಅಗತ್ಯ ಪತ್ರ ಬರೆಯುವ ಮೂಲಕ ಸಮಸ್ಯೆಗಳನ್ನು ಬಗೆ ಹರಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.


ಕೆಲಸ ಮಾಡದ ಜನಪ್ರತಿನಿಧಿಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ನಾಗರಿಕರು ತೋರುತ್ತಿರುವ ಅಸಡ್ಡೆ ಬಗ್ಗೆ ಖೇದ ವ್ಯಕ್ತ ಪಡಿಸಿದ ಅವರು, ರಾಜರಾಜೇಶ್ವರಿ ನಗರ- 160ನೇ ವಾರ್ಡಿನಲ್ಲಿ ಮತದಾರರು ಹೇಗೆ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದರು ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಮಲ್ಲೇಶ್ವರದಲ್ಲಿ ತಾವು ಇಡ್ಲಿ ಮಾರುವ ಹುಡುಗನಾಗಿ ಹೇಗೆ ಅತ್ಯಂತ ಬಡತನದ ಜೀವನ ಆರಂಭಿಸಿದೆ ಎಂಬುದನ್ನು ವಿವರಿಸಿದ ಅವರು ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ಮುಕ್ತ ವ್ಯವಹಾರ ಇಟ್ಟುಕೊಂಡಿರುವುದಾಗಿ ಹೇಳಿದರು. ರಾಜಕಾರಣಕ್ಕೆ ಬಂದ ತಮ್ಮ ಮುಖ್ಯ ಉದ್ದೇಶ ಜನಸೇವೆ ಎಂದು ಹೇಳಿದ ಅವರು ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಹೋರಾಟಕ್ಕೆ ಇಳಿದ ಆಂದೋಲನವನ್ನು ಶ್ಲಾಘಿಸಿದರು.


ಎಸ್ ಎನ್ ಎನ್ ಎ ಚಳವಳಿಯ ಸಕ್ರಿಯ ಸದಸ್ಯರಲ್ಲಿ ಒಬ್ಬರಾದ ಡಾ.ಶಂಕರ ಪ್ರಸಾದ್ ಅವರು ಸುಪ್ರೀಂಕೋರ್ಟ್ ಆದೇಶ ಮತ್ತು ಲೋಕಾಯುಕ್ತ ನಿರ್ದೇಶನಕ್ಕೆ ವಿರುದ್ಧವಾಗಿ ಬಿಬಿಎಂಪಿ ಅಧಿಕಾರಿಗಳು ವರ್ತಿಸುತ್ತಿರುವ ವಿಧಾನವನ್ನು ವಿವರಿಸಿದರು.

ಮೂಲಭೂತ ಅಗತ್ಯಗಳಾದ ನೀರು ಮತ್ತು ವಿದ್ಯುತ್ ಸರಬರಾಜಿಗೆ ಧಕ್ಕೆ ಉಂಟು ಮಾಡುವ ಬೆದರಿಕೆ ಹಾಕಿದ್ದನ್ನೂ ಅವರು ದಾಖಲೆ ಸಹಿತ ವಿವರಿಸಿದರು. ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘವು ಭ್ರಷ್ಟಾಚಾರದ ಚಟುವಟಕೆಗಳಿಗೆ ಮಧ್ಯವರ್ತಿಯಾಗಿ ವ್ಯವಹರಿಸಿದ ಬಗೆಯನ್ನೂ ಅವರು ಬಿಚ್ಚಿಟ್ಟರು.

 ಮತ್ತೊಬ್ಬ ಸಕ್ರಿಯ ಸದಸ್ಯ ನೆತ್ರಕೆರೆ ಉದಯಶಂಕರ ಭಟ್ ಅವರು ಬಡಾವಣೆಯಲ್ಲಿ ಜಾರಿಯಾಗಬೇಕಾದ ಅಗತ್ಯ ಸವಲತ್ತು ಗಳಿಗೆ ಸಂಬಂಧಿಸಿದಂತೆ ಐದಂಶದ ಕಾರ‌್ಯಕ್ರಮವನ್ನು ಮುಂದಿಟ್ಟರು.

ಬಿಬಿಎಂಪಿ ಖಾತೆ, ಕಟ್ಟಡ ನಕ್ಷೆ ವಿತರಣೆಯ ಪುನರಾರಂಭ, ಜಲಮಂಡಳಿ ಮೂಲಕ ಸಮರ್ಪಕ ನೀರು ಪೂರೈಕೆ, ಬೆಸ್ಕಾಂ ಮೂಲಕ ವಿದ್ಯುತ್ ಸರಬರಾಜು, ಬಡಾವಣೆಯಲ್ಲಿ ಎಲ್ಲ ರೀತಿಯ ಭೂ ಮಾಫಿಯಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು, ನಿವೇಶನದಾರರು, ನಿವಾಸಿಗಳಿಗೆ ಪೊಲೀಸ್ ರಕ್ಷಣೆ ಒದಗಿಸುವುದು ಇವು ಅಗತ್ಯವಾಗಿ ಆಗಬೇಕಾದ ತುರ್ತು ಕಾರ‌್ಯಕ್ರಮಗಳು ಎಂದು ಅವರು ಹೇಳಿದರು.

ಎಸ್ ಎನ್ ಎನ್ ಎ ಚಳವಳಿಯು ಸುಮಾರು ಮೂರು ವರ್ಷಗಳಿಂದ ಬಿಬಿಎಂಪಿ ಖಾತೆ, ಕಟ್ಟಡ ನಕ್ಷೆ ಮತ್ತು ಇತರ ನಾಗರಿಕ ಸವಲತ್ತುಗಳನ್ನು ಲಂಚಮುಕ್ತವಾಗಿ ಪಡೆದುಕೊಳ್ಳುವ ಸಲುವಾಗಿ ಆರಂಭವಾಗಿದ್ದು, ಲೋಕಾಯುಕ್ತ, ಆರ್ ಟಿ ಐ ಮತ್ತು ಗಾಂಧಿಗಿರಿ ಮಾರ್ಗಗಳ ಮೂಲಕವಾಗಿ ತನ್ನ ಹೋರಾಟ ನಡೆಸುತ್ತಾ ಬಂದಿದೆ.  ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಹಾಗೂ ಬಿಬಿಎಂಪಿಯ ಮಾಜಿ ಮೇಯರ್ ಮತ್ತು ಕೆಲವು ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಈ ಸವಲತ್ತು ಗಳಿಕೆಗೆ  ಅಡ್ಡಿಯುಂಟಾಗಿತ್ತು.

No comments:

Advertisement