My Blog List

Tuesday, November 5, 2019

ಆರ್ಸಿಇಪಿ ವಾಣಿಜ್ಯ ಒಪ್ಪಂದಕ್ಕೆ ಭಾರತದ ನಕಾರ

ಆರ್‌ಸಿಇಪಿ ವಾಣಿಜ್ಯ ಒಪ್ಪಂದಕ್ಕೆ ಭಾರತದ ನಕಾರ
ಬಾಕಿ ವಿಷಯಗಳ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಆಗ್ರಹ
ಬ್ಯಾಂಕಾಕ್:  ಸೇವಾ ನೌಕರರು ಮತ್ತು ರೈತರ ರಕ್ಷಣೆಯ ಸಲುವಾಗಿ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಅಥವಾ ಆರ್‌ಸಿಇಪಿಯನ್ನು  ಸೇರದೇ ಇರಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ.

‘ಕೊರತೆಗಳ ಬಗ್ಗೆ ಗಮನ ಹರಿಸುವಂತೆ  ಮುತ್ತು ಭಾರತದ ಸೇವೆಗಳು ಮತ್ತು ಹೂಡಿಕೆಗಳಿಗೆ ತಮ್ಮ ಮಾರುಕಟ್ಟೆಗಳನ್ನು ತೆರೆಯುವಂತೆ ಭಾರತವು ಇತರ ೧೫ ರಾಷ್ಟ್ರಗಳನ್ನು ಆಗ್ರಹಿಸಿದೆ ಎಂದು ಭಾರತದ ಅಧಿಕಾರಿಯೊಬ್ಬರು 2019 ನವೆಂಬರ್  4ರ ಸೋಮವಾರ ನವದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.

‘ಇತ್ಯರ್ಥವಾಗದೇ ಇರುವ ಮಹತ್ವದ ವಿಷಯಗಳಿವೆ ಅವುಗಳನ್ನು ಮೊದಲು ಇತ್ಯರ್ಥ ಪಡಿಸಬೇಕಾಗಿದೆ ಎಂದು ಆರ್‌ಸಿಇಪಿ ರಾಷ್ಟ್ರಗಳಿಗೆ ಭಾರತ ಆಗ್ರಹಿಸಿತು ಎಂದು ಆರ್‌ಸಿಇಪಿ ರಾಷ್ಟ್ರಗಳು ಕೂಡಾ ಸೋಮವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದವು.

‘ಪರಸ್ಪರ ಒಪ್ಪಿಗೆಯಾಗುವ ರೀತಿಯಲ್ಲಿ ಎಲ್ಲ ಆರ್‌ಸಿಇಪಿ ರಾಷ್ಟ್ರಗಳು ಬಾಕಿ ಉಳಿದಿರುವ ವಿಷಯಗಳ ಇತ್ಯರ್ಥಕ್ಕೆ ಒಟ್ಟಾಗಿ ಶ್ರಮಿಸಲಿವೆ. ಭಾರತದ ಅಂತಿಮ ನಿರ್ಧಾರವು ಈ ವಿಷಯಗಳ ಸಮಾಧಾನಕರ ಇತ್ಯರ್ಥವನ್ನು ಅವಲಂಬಿಸಿದೆ ಎಂದೂ ಹೇಳಿಕೆ ತಿಳಿಸಿತು.

‘ಯಾವಾಗ ಬೇಕಿದ್ದರೂ ಆರ್‌ಸಿಇಪಿ ಸೇರಲು ಭಾರತಕ್ಕೆ ಸ್ವಾಗತವಿದೆ ಎಂದು ಉಪ ವಿದೇಶಾಂಗ ಸಚಿವ ಲೆ ಯುಚೆಂಗ್ ಅವರು ಸೋಮವಾರ ಬ್ಯಾಂಕಾಕಿನಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ವಾಣಿಜ್ಯ ಒಪ್ಪಂದದ ಪ್ರಗತಿ ಬಗ್ಗೆ ಈ ವಾರದಲ್ಲಿ ಪ್ರಕಟಣೆ ಬರಬಹುದು ಎಂದು ಏಷ್ಯಾದ ನಾಯಕರು ಆಶಯ ವ್ಯಕ್ತ ಪಡಿಸಿದ್ದಾರೆ.

‘೧೫ ರಾಷ್ಟ್ರಗಳು ಇದನ್ನು ಮೊದಲು ಮುಂದಕ್ಕೆ ಒಯ್ಯಬೇಕು ಎಂದು ನಿರ್ಧರಿಸಿವೆ. ಕೆಲವೊಂದು ಬಾಕಿ ವಿಷಯಗಳು ಈ ವರ್ಷಾಂತ್ಯದ ಒಳಗೆ  ಪೂರ್ಣಗೊಳ್ಳುವ ಸಾಧ್ಯತೆಗಳು ಇಲ್ಲ ಎಂದು ಲೆ ಹೇಳಿದರು.

‘ಮುಂದಿನ ವರ್ಷ ಆರ್‌ಸಿಇಪಿಗೆ ಸಹಿ ಹಾಕಲು ೧೫ ರಾಷ್ಟ್ರಗಳಿಗೂ ಯಾವುದೇ ಸಮಸ್ಯೆ ಇರಲಾರದು. ಭಾರತ ಯಾವಾಗ ಸಿದ್ಧವಾಗುತ್ತದೋ ಆಗ ಅದನ್ನು ಸ್ವಾಗತಿಸಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಅವರು ನುಡಿದರು.

೨೦೧೭ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಟ್ರಾನ್ಸ್ ಪೆಸಿಫಿಕ್ ಪಾಲುದಾರಿಕೆಯಿಂದ ಹೊರಬಂದಿರುವ ಅಮೆರಿಕದ ಜೊತೆಗೆ ತನ್ನ ವಾಣಿಜ್ಯ ಸಮರವು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪ್ರದೇಶಗಳನ್ನು ಒಳಗೊಳ್ಳುವ ಈ ಆರ್‌ಸಿಇಪಿ ಒಪ್ಪಂದವನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಮೂಲಕ ತನ್ನ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಲು ಚೀನಾ ಬಯಸಿದೆ.

No comments:

Advertisement