My Blog List

Monday, December 9, 2019

ಪೌರತ್ವ ತಿದ್ದುಪಡಿ ಮಸೂದೆ: ಬಿಜೆಪಿ ಸಂಸದರಿಗೆ ಕಟ್ಟುನಿಟ್ಟಿನ ವಿಪ್

ಪೌರತ್ವ ತಿದ್ದುಪಡಿ ಮಸೂದೆ: ಬಿಜೆಪಿ ಸಂಸದರಿಗೆ ಕಟ್ಟುನಿಟ್ಟಿನ ವಿಪ್
ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಯ ಹಿನ್ನೆಲೆಯಲ್ಲಿಸೋಮವಾರದಿಂದ ಬುಧವಾರದವರೆಗೆ ಲೋಕಸಭೆ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕುಎಂದು ತನ್ನ ಎಲ್ಲ ಸಂಸದರಿಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) 2019 ಡಿಸೆಂಬರ್ 08ರ ಭಾನುವಾರ ಕಟ್ಟುನಿಟ್ಟಿನ ವಿಪ್ ಜಾರಿಗೊಳಿಸಿತು.

ಬಹಳ ಮುಖ್ಯವಾದ ಕೆಲ ಶಾಸನಗಳ ಪ್ರಕ್ರಿಯೆ ಇರುವುದರಿಂದ ಡಿ. ೯ರಿಂದ ಮೂರು ದಿನಗಳವರೆಗೆ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಉಪಸ್ಥಿತರಿರಬೇಕುಎಂದು ವಿಪ್ ಸೂಚನೆ ನೀಡಿತು.

ಡಿಸೆಂಬರ್ ೯ರ ಸೋಮವಾರದಿಂದ ಡಿಸೆಂಬರ್ ೧೧ರ ಮಂಗಳವಾರದವರೆಗೆ ಲೋಕಸಭೆಯಲ್ಲಿ ಬಹಳ ಮಹತ್ವದ ಕೆಲವು ಶಾಸನಗಳ ಚರ್ಚೆ ನಡೆಯಲಿದೆ. ಅವುಗಳ ಮಂಡನೆ ಹಾಗೂ ಅನುಮೋದನೆಯ ಅಗತ್ಯವಿದೆ. ಪಕ್ಷದ ಎಲ್ಲ ಸದಸ್ಯರೂ ಸಕಾರಾತ್ಮಕವಾಗಿ ಸದನದಲ್ಲಿ ಹಾಜರಿದ್ದು ಸರ್ಕಾರವನ್ನು ಬೆಂಬಲಿಸಬೇಕು ಎಂದು ಸೂಚಿಸಲಾಗಿದೆ ಎಂದು ವಿಪ್ ಹೇಳಿತು.
2019 ಡಿಸೆಂಬರ್ 09ರ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಿದ್ಧಾರೆ.

ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆ ರೂಪಿಸಲಾಗಿದೆ.

ಮಸೂದೆಯ ಬಗ್ಗೆ ವಿಪಕ್ಷಗಳು ಬಹಳ ಗಂಭೀರವಾದ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದು, ಮಸೂದೆಗೆ ತಡೆಯೊಡ್ಡಲು ಸಾಕಷ್ಟು ಪ್ರಯತ್ನಗಳು ನಡೆಯುವ ಸಾಧ್ಯತೆ ಇದೆ. ಹಿನ್ನೆಲೆಯಲ್ಲಿ ಬಿಜೆಪಿಯು ಮಸೂದೆಗೆ ಅನುಮೋದನೆ ಪಡೆಯುವುದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.

No comments:

Advertisement