My Blog List

Monday, December 9, 2019

ಉನ್ನಾವೋ: ಅತ್ಯಾಚಾರ ಸಂತ್ರಸ್ತ ಮಹಿಳೆಯ ಅಂತ್ಯಕ್ರಿಯೆ

ಉನ್ನಾವೋ: ಅತ್ಯಾಚಾರ ಸಂತ್ರಸ್ತ ಮಹಿಳೆಯ ಅಂತ್ಯಕ್ರಿಯೆ
ಸಚಿವರು, ಉನ್ನತ ಅಧಿಕಾರಿಗಳ ಭೇಟಿ ಕುಟುಂಬದ ಮನವೊಲಿಕೆ
ಲಕ್ನೋ:  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಗಾಗಿ ಪಟ್ಟು ಹಿಡಿದಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಕುಟುಂಬ ಸದಸ್ಯರು, ಸಚಿವರು ಹಾಗೂ ಉನ್ನತ ಅಧಿಕಾರಿಗಳ ಭೇಟಿಯ ಬಳಿಕ, ದೆಹಲಿ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ 2019 ಡಿಸೆಂಬರ್ 06ರ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದ ಅತ್ಯಾಚಾರ ಸಂತ್ರಸ್ಥ ಮಹಿಳೆಯ ಅಂತ್ಯಕ್ರಿಯೆಯನ್ನು 2019 ಡಿಸೆಂಬರ್ 08ರ ಭಾನುವಾರ ನೆರವೇರಿಸಿದರು.

ಹಿರಿಯ ಅಧಿಕಾರಿಗಳು ಮತ್ತು ಸಚಿವರು ಕುಟುಂಬ ಸದಸ್ಯರ ಮನವೊಲಿಸಿದ ಬಳಿಕ ಪೊಲೀಸರ ಸಮ್ಮುಖದಲ್ಲಿ, ೨೪ರ ಹರೆಯದ ಮಹಿಳೆಯ ಶವವನ್ನು ಆಕೆಯ ಗ್ರಾಮದ ಹೊರಭಾಗದಲ್ಲಿ ಆಕೆಯ ಕುಟುಂಬದ ಮಾಲೀಕತ್ವಕ್ಕೆ ಒಳಪಟ್ಟ ಹೊಲ ಒಂದರಲ್ಲಿ ಸಮಾಧಿ ಮಾಡಲಾಯಿತು.

ಲಕ್ನೋದ ಡಿವಿಷನಲ್ ಕಮಿಷನರ್ ಮುಖೇಶ್ ಮೆಶ್ರಮ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಸ್ ಕೆ ಭಗತ್ ಅವರು ಮಹಿಳೆಯ ತಂದೆ ಮತ್ತು ಸಹೋದರನ ಬಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಬಳಿಕ ಅವರು ಮಹಿಳೆಯ ಸಮಾಧಿಗೆ ಒಪ್ಪಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮನ್ನು ಭೇಟಿ ಮಾಡಬೇಕು ಮತ್ತು ಕಿರಿಯ ಪುತ್ರಿಗೆ ಉದ್ಯೋಗ ನೀಡಬೇಕು ಎಂದು ಕುಟುಂಬ ಬಯಸಿತ್ತು. ತನ್ನ ಸಹೋದರಿಗೆ ಬ್ಯಾಂಕಿನಲ್ಲಿ ನೌಕರಿ ಲಭಿಸಿತ್ತು. ಅತ್ಯಾಚಾರಿಗಳು ಸೇರಿದಂತೆ ಐವರು ವ್ಯಕ್ತಿಗಳು ಬೆಂಕು ಹಚ್ಚುವುದಕ್ಕೆ ಒಂದೆರಡು ದಿನ ಅಂತರದಲ್ಲಿ ಆಕೆ ಕೆಲಸಕ್ಕೆ ಸೇರಲಿದ್ದಳು ಎಂದು ಕಿರಿಯ ಸಹೋದರಿ ಮಂಗಳವಾರ ಹೇಳಿದ್ದಳು.

ರಾಜ್ಯ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಉನ್ನಾವೋ ಉಸ್ತುವಾರಿ ಸಚಿವ ಕಮಲ್ ರಾಣಿ ವರುಣ್ ಅವರೂ ಕುಟುಂಬದ ಜೊತೆಗೆ ಮಾತನಾಡಿದರು ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಮೃತ ಮಹಿಳೆಯ ೬೫ರ ಹರೆಯದ ತಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಜೊತೆಗೆ ದೂರವಾಣಿ ಮೂಲಕ ಸಚಿವರ ಸಮ್ಮುಖದಲ್ಲೇ ಮಾತನಾಡಿದರು. ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡಬೇಕೆಂಬ ಅವರ ಬೇಡಿಕೆಯನ್ನು ಸರ್ಕಾರ ಪರಿಗಣಿಸುವುದು ಎಂಬುದಾಗಿ ಅವಸ್ಥಿ ಭರವಸೆ ನೀಡಿದರು.

ಕುಟುಂಬಕ್ಕೆ ಭದ್ರತೆ ಹಾಗೂ ಪ್ರಧಾನಿಯವರ ವಸತಿ ಯೋಜನೆಯ ಅಡಿಯಲ್ಲಿ ಎರಡು ಮನೆಗಳನ್ನು ಆದ್ಯತೆ ಆಧಾರದಲ್ಲಿ ನೀಡಲಾಗುವುದು ಎಂದು ಉನ್ನಾವೋ ಜಿಲ್ಲಾ ಮ್ಯಾಜಿಸ್ಟ್ರೇಟ್ ದೇವೇಂದ್ರ ಪಾಂಡೆ ನುಡಿದರು.

ಕುಟುಂಬವು ಬಯಸಿದರೆ ಅವರಿಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಪರವಾನಗಿ ನೀಡಲಾಗುವುದು ಎಂದೂ ಪಾಂಡೆ ಹೇಳಿದರು.

ಉನ್ನಾವೋ ಅತ್ಯಾಚಾರ ಘಟನೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಂದ ರಾಜೀನಾಮೆ ನೀಡುವಂತೆ ಒತ್ತಡಕ್ಕೆ ಒಳಗಾಗಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶನಿವಾರ ಮೃತಳ ಕುಟುಂಬಕ್ಕೆ ೨೫ ಲಕ್ಷ ರೂಪಾಯಿಗಳ ಎಕ್ಸ್ ಗ್ರೇಷಿಯಾ ನೀಡುವುದಾಗಿ ಪ್ರಕಟಿಸಿದ್ದರು.

ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಪ್ರತಿನಿಧಿಯಾಗಿ ಬಂದಿದ್ದ ಉತ್ತರ ಪ್ರದೇಶದ ಹಿರಿಯ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರೂ ಇಂತಹುದೇ ಪ್ರಕಟಣೆ ಮಾಡಿದ್ದರು. ೨೫ ಲಕ್ಷ ರೂಪಾಯಿಗಳ ಹೊರತಾಗಿ ಕುಟುಂಬಕ್ಕೆ ಸರ್ಕಾರಿ ಮನೆ ನೀಡಲಾಗುವುದು ಎಂದೂ ಅವರು ಹೇಳಿದ್ದರು.

ಮಾಜಿ ಕಾಂಗ್ರೆಸ್ ಶಾಸಕ ಅನು ಟಂಡನ್ ಅವರೂ ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಪಕ್ಷದ ಪರವಾಗಿ ಲಕ್ಷ ರೂಪಾಯಿಗಳನ್ನು ನೀಡಿದ್ದರು.

ಮಹಿಳೆಯ ಮೇಲೆ ಕಳೆದ ವರ್ಷ ಡಿಸೆಂಬರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅದರೆ ವರ್ಷ ಮಾರ್ಚ್ ತಿಂಗಳಲ್ಲಷ್ಟೇ ಪ್ರಕರಣ ದಾಖಲಾಗಿತ್ತು. ಗುರುವಾರ ಅತ್ಯಾಚಾರ ಆರೋಪಿಯೂ ಸೇರಿ ಐವರು ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಬಳಿಕ ಶೇಕಡಾ ೯೦ರಷ್ಟು ಸುಟ್ಟ ಗಾಯಗಳಿಗೆ ಒಳಗಾದ ಮಹಿಳೆಯನ್ನು ವಿಮಾನದ ಮೂಲಕ ದೆಹಲಿಗೆ ಒಯ್ದು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ರಾತ್ರಿ ಹೃದಯಸ್ಥಂಭನದಿಂದ ಆಕೆ ಸಾವನ್ನಪ್ಪಿದ್ದರು.

ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಸಾವು ಹಾಗೂ ರಾಜ್ಯದಲ್ಲಿ ಮಹಿಳೆಯ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಿದರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲಕ್ನೋದಲ್ಲಿ ರಾಜ್ಯ ವಿಧಾನಸಭೆಯ ಹೊರಗೆ ಪ್ರತಿಭಟನಾ ಧರಣಿ ನಡೆಸಿದ್ದರು.

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಮಹಿಳೆಯ ಕುಟುಂಬಕ್ಕೆ ನ್ಯಾಯದ ಖಾತರಿ ನೀಡಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸುವಂತೆ ಆಗ್ರಹಿಸಿದ್ದರು.

ಉತ್ತರ ಪ್ರದೇಶ ಪೊಲೀಸರ ಮಾಹಿತಿಯ ಪ್ರಕಾರ ಕಳೆದ ೧೧ ತಿಂಗಳ ಅವಧಿಯಲ್ಲಿ ಉನ್ನಾವೋ ಜಿಲ್ಲೆ ಒಂದರಲ್ಲೇ ೫೧ ಅತ್ಯಾಚಾರ ಪ್ರಕರಣಗಳೂ ಸೇರಿದಂತೆ ಲೈಂಗಿಕ ಹಲ್ಲೆಯ ಘಟನೆಗಳು ವರದಿಯಾಗಿವೆ. ಕಳೆದ ಎರಡು ವರ್ಷಗಳಲ್ಲಿ ೨೪ ಮಂದಿ ಅಪ್ರಾಪ್ತರ ಮೇಲೆ ಕೂಡಾ ಅತ್ಯಾಚಾರ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

No comments:

Advertisement