My Blog List

Tuesday, January 28, 2020

ಪಾಕಿಸ್ತಾನ: ಹಿಂದೂ ವಧುವಿನ ಅಪಹರಣ, ಬಲಾತ್ಕಾರದ ಮದುವೆ

ಪಾಕಿಸ್ತಾನ: ಹಿಂದೂ ವಧುವಿನ ಅಪಹರಣ,
ಬಲಾತ್ಕಾರದ ಮದುವೆ
ರಕ್ಷಣೆಗೆ ಬದಲು ಅಪಹರಣಕಾರರಿಗೇ ಪಾಕ್ ಪೊಲೀಸ್ ನೆರವು
ಸಿಂಧ್: ಪಾಕಿಸ್ತಾನದಲ್ಲಿ ಬಲವಂತ ಮತಾಂತರದ ಮತ್ತೊಂದು ಪ್ರಕರಣದಲ್ಲಿ, ಹಿಂದೂ ವಧು ಒಬ್ಬಳನ್ನು ಮದುವೆ ಮಂಟಪದಿಂದಲೇ ಅಪಹರಿಸಿ, ಇಸ್ಲಾಮ್‌ಗೆ ಮತಾಂತರಗೊಳಿಸಿ ಬಳಿಕ ಮುಸ್ಲಿಮ್ ಯುವಕನೊಬ್ಬ ಮದುವೆಯಾದ ಘಟನೆ ಘಟಿಸಿದೆ.

ಸಿಂಧ್ ಪ್ರಾಂತ್ಯದ ಮಾಟಿಯಾರಿ ಜಿಲ್ಲೆಯ ಹಲಾ ನಗರದಲ್ಲಿ 2020 ಜನವರಿ 25ರ ಶನಿವಾರ ನಡೆದ ವಿವಾಹ ಸಮಾರಂಭದ ಸ್ಥಳದಿಂದ ವಧು ಭಾರತಿ ಬಾಯಿ ಎಂಬ ಮಹಿಳೆಯನ್ನು ಒಂದು ಗುಂಪು ಅಪಹರಿಸಿದ್ದು, ನಂತರ ಶಾರುಖ್ ಗುಲ್ ಎಂಬ ವ್ಯಕ್ತಿ ಆಕೆಯನ್ನು ಮದುವೆಯಾಗಿರುವುದಾಗಿ ವರದಿ 2020 ಜನವರಿ 27ರ ಸೋಮವಾರ ತಿಳಿಸಿತು.

ಅಪಹರಣಕಾರರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವರದಿಗಳ ಪ್ರಕಾರ, ವಧುವನ್ನು ಬಲವಂತವಾಗಿ ಕರೆದೊಯ್ಯಲು ಪೊಲೀಸರೇ ಅಪಹರಣ ನಡೆಸಿದ ಪುರುಷರಿಗೆ ಸಹಾಯ ಮಾಡಿದರು ಎನ್ನಲಾಯಿತು.

ಪ್ರತಿ ವರ್ಷ, ೧೨ ರಿಂದ ೨೮ ವರ್ಷದೊಳಗಿನ ಸುಮಾರು ೧,೦೦೦ ಯುವ ಸಿಂಧಿ ಹಿಂದೂ ಬಾಲಕಿಯರನ್ನು ಅಪಹರಿಸಿ, ಬಲವಂತವಾಗಿ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ ಎಂದು ಅಮೆರಿಕ ಮೂಲದ ಸಿಂಧಿ ಫೌಂಡೇಶನ್ ಆಪಾದಿಸಿತು.

ಪಾಕಿಸ್ತಾನದಲ್ಲಿ, ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹುಡುಗಿಯರನ್ನು, ಮುಖ್ಯವಾಗಿ ಹಿಂದೂ, ಸಿಖ್ ಮತ್ತು ಕ್ರೈಸ್ತರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸ್ಲಿಂ ಪುರುಷರೊಂದಿಗೆ ವಿವಾಹ ಮಾಡುವ ಇಂತಹ ಅನೇಕ ಘಟನೆಗಳು ಆಗಾಗ ವರದಿಯಾಗುತ್ತವೆ.

ಕಳೆದ ಕೆಲವು ತಿಂಗಳುಗಳಲ್ಲಿ, ದೇಶದ ಅಲ್ಪಸಂಖ್ಯಾತರ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ ಎಂದು ಫೌಂಡೇಶನ್ ಹೇಳಿತು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ೧೯ ವರ್ಷದ ಜಗ್ಜಿತ್ ಕೌರ್ ಹಲವಾರು ದಿನಗಳವರೆಗೆ ಕಾಣೆಯಾಗಿದ್ದರು. ನಂತರ, ಆಕೆ ಅಪಹರಣಕಾರರ ಬಲವಂತಕ್ಕೆ ಒಳಗಾಗಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದುದು ಬೆಳಕಿಗೆ ಬಂದಿತ್ತು.

ಗುರುದ್ವಾರ ತಂಬು ಸಾಹಿಬ್‌ನ ’ಗ್ರಂಥಿ (ಅರ್ಚಕ್ರ) ಭಗವಾನ್ ಸಿಂಗ್ ಅವರ ಪುತ್ರಿಯನ್ನು ಬಂದೂಕು ತೋರಿಸಿ ಇಸ್ಲಾಂಗೆ ಮತಾಂತರ ಮಾಡಲಾಗಿತ್ತು.

ಈ ಘಟನೆಯು ಭಾರತದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ದೇಶಾದ್ಯಂತ ಹಲವಾರು ರಾಜಕೀಯ ಮುಖಂಡರು ಪಕ್ಷಾತೀತರಾಗಿ ಇಂತಹ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

No comments:

Advertisement