My Blog List

Sunday, January 12, 2020

ದೆಹಲಿಯಲ್ಲಿ ಸಿಎಎ, ಎನ್‌ಆರ್‌ಸಿ ಚರ್ಚೆ: ದೀದಿಗೆ ಮೋದಿ ಆಹ್ವಾನ

ದೆಹಲಿಯಲ್ಲಿ  ಸಿಎಎ, ಎನ್ಆರ್ಸಿ  ಚರ್ಚೆ: ದೀದಿಗೆ ಮೋದಿ ಆಹ್ವಾನ
ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಆಹ್ವಾನಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  2020 ಜನವರಿ 11ಶನಿವಾರ ಇಲ್ಲಿ ಪ್ರಕಟಿಸಿದರು.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಸಿಎಎ ಮತ್ತು ಎನ್ಆರ್ಸಿ ವಿಷಯವಾಗಿ ನಡೆದ ತೀವ್ರ ಪ್ರತಿಭಟನೆಗಳ ಮಧ್ಯೆ, ರಾಜಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ೧೫ ನಿಮಿಷಗಳ ಕಾಲ ಮಾತುಕತೆ ನಡೆಸಿದ ಮಮತಾ ಬ್ಯಾನರ್ಜಿ, ರಾಜ್ಯಕ್ಕೆ ಬಿಡುಗಡೆ ಮಾಡಲು ಬಾಕಿ ಇರುವ ೩೮,೦೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದರು.

ನೀವು ನಮ್ಮ ಅತಿಥಿ, ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿಗೆ (ಎನ್ಆರ್ಸಿ) ನಾವು ವಿರೋಧವಾಗಿದ್ದೇವೆ ಎಂಬುದನ್ನು ಇಲ್ಲಿ ಪ್ರಸ್ತಾಪಿಸಬಹುದೇ ಎಂದು ನನಗೆ ಗೊತ್ತಿಲ್ಲ. ಇವು ಜನರನ್ನು ವಿಭಜಿಸುತ್ತವೆ. ದಯವಿಟ್ಟು ಮರುಪರಿಶೀಲನೆ ಮಾಡಿಎಂಬುದಾಗಿ ನಾನು ಹೇಳಿದ್ದೇನೆಎಂದು ಬ್ಯಾನರ್ಜಿ ನುಡಿದರು. ’ಅವರು (ಮೋದಿ) ವಿಷಯದ ಬಗ್ಗೆ ಚರ್ಚಿಸಲು ದೆಹಲಿಗೆ ಬನ್ನಿ ಎಂದು ಆಹ್ವಾನಿಸಿದರುಎಂದು ಮಮತಾ ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಹಣ ಬಿಡುಗಡೆ ಮಾಡುವಂತೆಯೂ ನಾನು ಕೋರಿದೆ. ದೆಹಲಿಗೆ ಹಿಂದಿರುಗಿದ ಬಳಿಕ ಪರಿಶೀಲಿಸುವುದಾಗಿ ಪ್ರಧಾನಿ ಭರವಸೆ ಕೊಟ್ಟರು ಎಂದೂ ಮುಖ್ಯಮಂತ್ರಿ  ನುಡಿದರು.

ಆದಾಗ್ಯೂ, ಮಮತಾ ಬ್ಯಾನರ್ಜಿಯವರು ಮೋದಿ ಅವರ ಜೊತೆಗೆ ಖಾಸಗಿಯಾಗಿ ಹೊಂದಾಣಿಕೆ ಹೊಂದಿದ್ದು, ಬಹಿರಂಗವಾಗಿ ಬೇರೆಯೇ ಮಾತನಾಡುತ್ತಾರೆ ಎಂದು ವಿರೋಧ ಪಕ್ಷಗಳು ಆಕ್ಷೇಪಿಸಿದವು.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೋಲ್ಕತಾ ಬಂದರು ಟ್ರಸ್ಟ್ ೧೫೦ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಪ್ರಧಾನಿಯನ್ನು ಪಶ್ಚಿಮಬಂಗಾಲ ಗವರ್ನರ್ ಜಗದೀಪ್ ಧಾನ್ಕಾರ್, ಕೋಲ್ಕತಾ ಮೇಯರ್, ಸಚಿವ ಫಿರ್ಹಾದ್ ಹಕೀಂ ಮತ್ತು ಇನ್ನಿತರರು ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಕೋಲ್ಕತಾದಲ್ಲಿ ಎರಡು ದಿನಗಳ ಕಾಲ ಪ್ರವಾಸ ನಡೆಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೋಲ್ಕತಾ ಬಂದರು ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲ ಪ್ರಧಾನಿ ನರೇಂದ್ರ ಮೋದಿ ಮತ್ತು  ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಪೌರತ್ವ
ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಮುಖ್ಯಮಂತ್ರಿ ಬ್ಯಾನರ್ಜಿ ನೇತೃತ್ವದಲ್ಲಿಯೂ ಬೃಹತ್ ಪ್ರತಿಭಟನೆ ನಡೆದಿತ್ತು.

ಕೋಲ್ಕತಾಕ್ಕೆ
ಆಗಮಿಸುವ ಮುನ್ನ ವಿದ್ಯಾರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ ಗೋ ಬ್ಯಾಕ್ ಮೋದಿ ಎಂದು ಘೋಷಣೆ ಕೂಗಿದ್ದರು.

No comments:

Advertisement