My Blog List

Wednesday, January 15, 2020

ಶಬರಿಮಲೈ: ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಹರಿವರಾಸನಂ ಪ್ರಶಸ್ತಿ ಪ್ರದಾನ

ಶಬರಿಮಲೈ: ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಹರಿವರಾಸನಂ ಪ್ರಶಸ್ತಿ ಪ್ರದಾನ
ಶಬರಿಮಲೈ: ಕೇರಳ ಸರ್ಕಾರದ  ವತಿಯಿಂದ ನೀಡಲಾಗುವ  2020ನೇ ಸಾಲಿನ ಪ್ರತಿಷ್ಠಿತ ಹರಿವರಾಸನಂ ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ 2020 ಜನವರಿ 15ರ ಬುಧವಾರ ಶಬರಿಮಲೈ ಸ್ವಾಮಿ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರದಾನ ಮಾಡಲಾಯಿತು.

ಪ್ರತೀವರ್ಷ ಧಾರ್ಮಿಕ, ಸಾಮರಸ್ಯ ಹಾಗೂ ರಾಷ್ಟ್ರೀಯ ಐಕ್ಯತೆಗೆ ಕಾರಣರಾದವರಿಗೆ ಈ ಪ್ರಶಸ್ತಿಯನ್ನು ಕೇರಳ ಸರ್ಕಾರ  ನೀಡುತ್ತಿದೆ. ಪ್ರಶಸ್ತಿಯು ೧ ಲಕ್ಷ ರೂಪಾಯಿ ನಗದು, ಪ್ರಮಾಣ ಪತ್ರ ಹಾಗೂ ಫಲಕವನ್ನು  ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಇಳಯರಾಜ ಅವರಿಗೆ ಪೂಜಾ ಸಂಗೀತಗಾರ ಎಂಬ ಬಿರುದನ್ನು ಕೂಡಾ ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿಯನ್ನು ಈವರೆಗೆ ಡಾ.ಕೆ.ಜೆ.ಯೇಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ,  ಕೆ.ಎಸ್.ಚಿತ್ರಾ ,ಪಿ.ಸುಶೀಲಾ, ಎಂ.ಜಿ.ಶ್ರೀ ಕುಮಾರ್, ಗಂಗೈ ಅಮರನ್ ಅವರಿಗೆ ನೀಡಲಾಗಿತ್ತು.

ಕನ್ನಡ ಸೇರಿದಂತೆ ದಕ್ಷಿಣದ ಚಲನಚಿತ್ರೋದ್ಯಮದ  ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ಅದ್ಭುತ ಗೀತೆಗಳನ್ನು ನೀಡಿ, ಸಂಗೀತ ನಿಧಿ ಎಂದು ಹೆಸರುವಾಸಿಯಾಗಿರುವ ಇಳಯರಾಜಾ ಅವರಿಗೆ ಇತರ ಹಲವು ಗೌರವ, ಪ್ರಶಸ್ತಿಗಳು ಸಂದಿವೆ.

ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ನಾಗರೀಕ ಪುರಸ್ಕಾರ ಪದ್ಮವಿಭೂಷಣಕ್ಕೂ ಅವರು ಭಾಜನರಾಗಿದ್ದಾರೆ. ಶಬರಿಮಲೈ  ಬೆಟ್ಟದ ಮೇಲೆ ನೆಲೆಸಿರುವ ಅಯ್ಯಪ್ಪ ಕುರಿತ “ಹರಿವರಾಸನಂಗೀತೆ ಅಯ್ಯಪ್ಪ ಭಕ್ತರನ್ನು ಭಕ್ತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಗೀತೆಯಾಗಿದೆ, ಅಯ್ಯಪ್ಪ ಭಕ್ತರು ನಿತ್ಯವೂ ಪಠಿಸುವ ಪವಿತ್ರ ಗೀತೆ ಎಂಬ ಶ್ಲಾಘನೆಗೊಳಗಾಗಿದೆ. ಈ ಹಿನ್ನಲೆಯಲ್ಲಿ ಇಳಯರಾಜ ಅವರಿಗೆ “ಹರಿವರಾಸನಂ ಪ್ರಶಸ್ತಿ ಲಭಿಸಿರುವುದು ಹಾಗೂ ಶಬರಿಮಲೈಯಲ್ಲಿ ಅದನ್ನು ಅವರು ಪಡೆದುಕೊಂಡಿರುವುದು ಅತ್ಯಂತ ಮಹತ್ವ ಎಂದು ಪರಿಗಣಿಸಲಾಗಿದೆ.

No comments:

Advertisement