ಗ್ರಾಹಕರ ಸುಖ-ದುಃಖ

My Blog List

Sunday, January 26, 2020

ಕೊರೋನಾವೈರಸ್: ವುಹಾನ್ ತ್ಯಜಿಸಲು ಅವಕಾಶ: ಭಾರತ ಸರ್ಕಾರದ ಮನವಿ

ಕೊರೋನಾವೈರಸ್:  ವುಹಾನ್ ತ್ಯಜಿಸಲು ಅವಕಾಶ: ಭಾರತ ಸರ್ಕಾರದ ಮನವಿ
ಬೀಜಿಂಗ್: ನೂತನ ಕೊರೋನಾವೈರಸ್ ವ್ಯಾಧಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿರುವ ಹಾಗೂ ರೋಗವನ್ನು ವ್ಯಾಪಿಸದಂತೆ ತಡೆಯುವ ಸಲುವಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ಸಂಚಾರ ದಿಗ್ಬಂಧನಕ್ಕೆ ಒಳಗಾಗಿರುವ ವುಹಾನ್ ನಗರವನ್ನು ತ್ಯಜಿಸಲು ಅಲ್ಲಿ ಉಳಿದಿರುವ ಭಾರತೀಯರಿಗೆ ಅವಕಾಶ ಕಲ್ಪಿಸಿಕೊಡುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆ ಎಂಬುದಾಗಿ ವರದಿಗಳು ತಿಳಿಸಿವೆ.

ಚೀನಾದಲ್ಲಿ ಕೊರೋನಾವೈರಸ್ ರೋಗಕ್ಕೆ ಬಲಿಯಾಗಿರುವವರ ಸಂಖ್ಯೆ  2020 ಜನವರಿ 25ರ ಶನಿವಾರ ೪೧ಕ್ಕೆ ಏರಿದ್ದು, ೧೨೮೭ ಪ್ರಕರಣಗಳು ದೃಢ ಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಕಮಿಷನ್ ತಿಳಿಸಿದೆ.

ಉಚಿತ ಬಸ್ಸು, ಅಧಿಕೃತ ಕಾರುಗಳು ಮತ್ತು ಸರಬರಾಜು ಸಾಗಣೆ ವಾಹನಗಳಂತಹ ವಿಶೇಷ ನಿಯೋಜಿತ ವಾಹನಗಳನ್ನು ಹೊರತು ಪಡಿಸಿ ಎಲ್ಲ ವಾಹನಗಳ ಸಂಚಾರವನ್ನೂ ನಗರದಲ್ಲಿ ಭಾನುವಾರದಿಂದ ಅನಿರ್ದಿಷ್ಟ ಅವಧಿಗೆ ರದ್ದು ಪಡಿಸಲಾಗುವುದು ಎಂದು ಸರ್ಕಾರ  ಪ್ರಕಟಿಸಿತು.
ವುಹಾನ್ ನಗರದಲಿ ಗುರುವಾರ ದಿಢೀರನೆ ಪ್ರಕಟಿಸಿಲಾದ ಸಂಚಾರ ನಿರ್ಬಂಧಗಳ ಪರಿಣಾಮವಾಗಿ ನಗರದ ಭಾರತೀಯ ಸಮುದಾಯದ ಸದಸ್ಯರಲ್ಲಿ ಭೀತಿ ಮತ್ತು ಆತಂಕ ಮೂಡಿದೆ. ತಾವು ಗಂಭೀರ ವೈದ್ಯಕೀಯ ತುರ್ತುಪರಿಸ್ಥಿತಿಯ ಮಧ್ಯೆ ತಾವು ಸಿಕ್ಕಿಹಾಕಿಕೊಂಡಿದ್ದೇವೆ ಎಂಬ ಭಾವನೆ ಅವರಲ್ಲಿ ಮೂಡಿದೆ.

ಕೇಂದ್ರ ಚೀನೀ ಹುಬೀ ಪ್ರಾಂತದ ರಾಜಧಾನಿಯಾಗಿರುವ ವುಹಾನ್ ನಗರದಲ್ಲಿ ಇನ್ನೂ ೨೫೦-೩೦೦ ಭಾರತೀಯರು ಇದ್ದಾರೆ. ವುಹಾನ್ ನಗರದ ಜನಸಂಖ್ಯೆ ಅಂದಾಜು ೧೧ ಮಿಲಿಯನ್ (. ಕೋಟಿ).
ವುಹಾನ್ ನಗರದಲ್ಲಿ ಇರುವ ಭಾರತೀಯರ ಪೈಕಿ ಬಹುತೇಕ ಮಂದಿ ಚೀನೀ ಚಾಂದ್ರ ವರ್ಷಾರಂಭದ ರಜೆಯ ಕಾರಣ  ಎರಡು ವಾರಗಳಷ್ಟು ಹಿಂದೆಯೇ ಭಾರತಕ್ಕೆ ವಾಪಸಾಗಿದ್ದರು. ಉಳಿದ ಹಿಡಿಯಷ್ಟು ಭಾರತೀಯ ನಿವಾಸಿಗಳು ನಗರದಲ್ಲಿ ಉಳಿದಿರುವ ಭಾರತೀಯರ ಪಟ್ಟಿ ಮಾಡಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ನೆರವು ನೀಡಿದ್ದಾರೆ. ಉಳಿದಿರುವ ಭಾರತೀಯರ ಪೈಕಿ ಬಹುತೇಕ ಮಂದಿ ವಿದ್ಯಾರ್ಥಿಗಳಾಗಿದ್ದರೆ, ಸುಮಾರು ೫೦ ಮಂದಿ ಅಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಎಂದು ವರದಿಗಳು ಹೇಳಿವೆ.

ವುಹಾನ್ ನಗರದಲ್ಲಿ ಇರುವ ಭಾರತೀಯ ಕುಟುಂಬಗಳ ಪೈಕಿ ಬಹುತೇಕ ಕುಟುಂಬಗಳು ಈಗಾಗಲೇ ವುಹಾನ್ ನಗರವನ್ನು ತ್ಯಜಿಸಿವೆ ಎಂದು ಹೇಳಲಾಗಿದೆ. ಉಳಿದಿರುವ ಭಾರತೀಯರಿಗೆ ಸ್ವದೇಶಕ್ಕೆ ವಾಪಸಾಗಲು ಅನುಮತಿ ಪಡೆಯುವ ಸಲುವಾಗಿ ಭಾರತೀಯ ಅಧಿಕಾರಿಗಳು ಹುಬೀ ಮತ್ತು ವುಹಾನ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಮೂಲಗಳು ಹೇಳಿವೆ.

ಅನಿದಿಷ್ಟ ಅವಧಿಗೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ನಗರದಲ್ಲಿ ಅಗತ್ಯವಸ್ತುಗಳ ಸರಬರಾಜು ಸ್ಥಗಿತಗೊಳ್ಳಬಹುದು ಎಂಬ ಭೀತಿ ಸಮುದಾಯದ ಸದಸ್ಯರನ್ನು ಕಾಡುತ್ತಿದೆ. ಇದರ ಜೊತೆಗೆ ವೈರಸ್ ಗಾಳಿಯಿಂದ ಹರಡುತ್ತದೆ ಎಂಬ ಪುಕಾರುಗಳು ವ್ಯಾಪಕವಾಗಿ ಹರಡಿರುವುದು ಜನರ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ವ್ಯಕ್ತಿಯಿಂದ ವ್ಯಕ್ತಿಗೆ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಸಂದರ್ಭದಲ್ಲಿ ಪ್ರಯಾಣ ಮಾಡಬಹುದೇ ಎಂದೂ ಹಲವರು ಗೊಂದಲಕ್ಕೆ ಈಡಾಗಿದ್ದಾರೆ.

ವುಹಾನ್ ಮಾತ್ರವೇ ಅಲ್ಲ, ಚೀನಾದ ಇತರ ಭಾಗಗಳಿಂದಲೂ ಚಿಂತೆಗೆ ಒಳಗಾಗಿರುವ ಭಾರತೀಯರು ಭಾರತದ ರಾಯಭಾರ ಕಚೇರಿಯ ಎರಡು ಹಾಟ್ ಲೈನ್ ಸಂಖ್ಯೆಗಳಿಗೆ ಸತತ ದೂರವಾಣಿ ಕರೆಗಳನ್ನು ಮಾಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಭಾರತೀಯ ರಾಯಭಾರ ಕಚೇರಿಯು ವುಹಾನ್ನಲ್ಲಿ ಉಳಿದಿರುವ ಭಾರತೀಯ ನಿವಾಸಿಗಳಿಗಾಗಿ ಗ್ರೂಪ್ ಒಂದನ್ನು ಆರಂಭಿಸಿ ಪರಿಸ್ಥಿತಿ ಬಗ್ಗೆ ಸತತ ಮಾಹಿತಿ ಒದಗಿಸುತ್ತಿದೆ. ನಿರ್ಬಂಧಿತ ನಗರದಿಂದ ಭಾರತೀಯರನ್ನು ಹೊರಕ್ಕೆ ಕರೆತರುವುದು ಸುಲಭದ ಕೆಲಸವಲ್ಲ. ಸಂಪೂರ್ಣವಾಗಿ ಚೀನೀ ಅಧಿಕಾರಿಗಳು ಅದಕ್ಕೆ ಒಪ್ಪುವರೇ ಎಂಬುದನ್ನು ಇದು ಅವಲಂಬಿಸಿದೆ ಎಂದು ಮೂಲಗಳು ತಿಳಿಸಿವೆ.

ಈವರೆಗಿನ ವರ್ತಮಾನದಂತೆ ವುಹಾನ್ ನಗರದಿಂದ ಹೊರಹೋಗುವ ಎಲ್ಲ ರೈಲುಗಾಡಿ, ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ರಸ್ತೆ ಸಂಚಾರ ವ್ಯವಸ್ಥೆಯನ್ನೂ ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ವುಹಾನ್ ನಗರದಲ್ಲಿ ಮೀನು ಮತ್ತು ಸಾಗರ ಆಹಾರ ಮಾರುಕಟ್ಟೆಯಲ್ಲಿ ಶೇಕಡಾ ೯೦ಕ್ಕಿಂತಲೂ ಹೆಚ್ಚಿನ ಕೊರೋನಾವೈರಸ್ ಪತ್ತೆಯಾಗಿರುವುದು ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ ಅಧಿಕಾರಿಗಳಿಗೆ ಚಿಂತೆಗೆ ಕಾರಣವಾಗಿದೆ.

ತೆರವುಗೊಳಿಸಿದರೆ ಭಾರತೀಯರನ್ನು ಎರಡು ವಾರಗಳ ಅವಧಿಗೆ ಪ್ರತ್ಯೇಕಿತರನಾಗಿಸಿ, ಏಕಾಂತವಾಸಕ್ಕೆ ಗುರಿಪಡಿಸಲಾಗುವುದೇ? ಗುರಿಪಡಿಸುವುದಾಗಿದ್ದರೆ ಎಲ್ಲಿ ಎಂಬ ಪ್ರಶ್ನೆಗಳು ಎದ್ದಿವೆ.
ಅಲ್ಲದೆ, ಬೀಜಿಂಗ್ ಒಂದು ರಾಷ್ಟ್ರದ ನಿವಾಸಿಗಳಿಗೆ ಚೀನೀ ನಗರ ತ್ಯಜಿಸಲು ಅವಕಾಸ ನೀಡಿದರೆ ಇತರ ರಾಷ್ಟ್ರಗಳಿಂದಲೂ ಇಂತಹ ಬೇಡಿಕೆ ಬರಬಹುದು ಎಂಬ ಚಿಂತೆ ಚೀನೀ ಅಧಿಕಾರಿಗಳನ್ನು ಕಾಡುತ್ತಿದೆ ಎಂದು ವರದಿಗಳು ಹೇಳಿವೆ.

No comments:

Advertisement