My Blog List

Sunday, January 26, 2020

ನಿರ್ಭಯಾ ಪ್ರಕರಣ: ಕ್ಷಮಾ ಅರ್ಜಿ ತಿರಸ್ಕಾರ ಪ್ರಶ್ನಿಸಿ ಮತ್ತೆ ಸುಪ್ರೀಂಗೆ ಮುಖೇಶ್

ನಿರ್ಭಯಾ ಪ್ರಕರಣ: ಕ್ಷಮಾ ಅರ್ಜಿ ತಿರಸ್ಕಾರ ಪ್ರಶ್ನಿಸಿ ಮತ್ತೆ ಸುಪ್ರೀಂಗೆ ಮುಖೇಶ್
ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ 2020 ಜನವರಿ 25ರ ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ.

ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕರಿಸಿದ್ದರ ನ್ಯಾಯಾಂಗ ವಿಮರ್ಶೆ ನಡೆಸಬೇಕು ಎಂದು ಮುಖೇಶ್ ಸಿಂಗ್ ಕೋರಿದ್ದಾನೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖೇಶ್ ಸಿಂಗ್ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಜನವರಿ ೧೭ರಂದು, ತಮಗೆ ಸಲ್ಲಿಕೆಯಾದ ಕೇವಲ ನಾಲ್ಕು ದಿನಗಳ ಒಳಗಾಗಿ ತಿರಸ್ಕರಿಸಿದ್ದರು. ಕ್ಷಮಾದಾನ ಕೋರಿಕೆ ಅರ್ಜಿಯೊಂದನ್ನು ಇಷ್ಟೊಂದು ತ್ವರಿತವಾಗಿ ರಾಷ್ಟ್ರಪತಿಯವರು ಇತ್ಯರ್ಥ ಪಡಿಸಿದ್ದು ಇದೇ ಪ್ರಥಮವಾಗಿತ್ತು.

೨೦೧೪ರ ಶತ್ರುಘ್ನ ಚೌಹಾಣ್ ವರ್ಸಸ್ ಭಾರತ ಸರ್ಕಾರ ಪ್ರಕರಣವನ್ನು ಆಧರಿಸಿ ಮುಖೇಶ್ ಸಿಂಗ್ ಸುಪ್ರೀಂಕೋರ್ಟ್ಗೆ ಇದೀಗ ನ್ಯಾಯಾಂಗ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ರಾಷ್ಟ್ರಪತಿಯವರು ಅರ್ಜಿಯನ್ನು ವಿಲೇವಾರಿ ಮಾಡಿದ ಬಗೆಯನ್ನು ಪ್ರಶ್ನಿಸಿದ್ದಾನೆ.

ರಾಷ್ಟ್ರಪತಿಯವರಿಂದ ಕ್ಷಮಾದಾನ ಪಡೆಯಲು ಮುಖೇಶ್ ನಡೆಸಿದ್ದ ವಿಫಲ ಯತ್ನದ ಪರಿಣಾಮವಾಗಿ ಜನವರಿ ೨೨ಕ್ಕೆ ನಿಗದಿಯಾಗಿದ್ದ ನಾಲ್ಕೂ ಅಪರಾಧಿಗಳ ಮರಣದಂಡನೆ ಜಾರಿಯು ಫೆಬ್ರುವರಿ ೧ಕ್ಕೆ ಮುಂದೂಡಲ್ಪಟ್ಟಿತ್ತು. ಮರಣದಂಡನೆ ಜಾರಿಗೆ ಫೆಬ್ರುವರಿ ೧ರ ದಿನಾಂಕವನ್ನು ನಿಗದಿಪಡಿಸಿ ವಿಚಾರಣಾ ನ್ಯಾಯಾಧೀಶರು ಹೊಸದಾಗಿ ಡೆತ್ ವಾರಂಟ್ ಹೊರಡಿಸಿದ್ದರು.

ಮುಖೇಶ್ ಸಿಂಗ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವುದಕ್ಕೆ ಕೆಲವೇ ಗಂಟೆಗಳ ಮುನ್ನ ತನ್ನ ಕಕ್ಷಿದಾರರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಮತ್ತು ಕ್ಯುರೇಟಿವ್ ಅರ್ಜಿ ಸಲ್ಲಿಸುವ ಸಲುವಾಗಿ ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ಸೆರೆಮನೆ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿ ಪ್ರಕರಣದ ಇತರ ಮೂವರು ಶಿಕ್ಷಿತ ಅಪರಾಧಿಗಳ ಪರವಾಗಿ ಅವರ ವಕೀಲ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು.

ಯಾವ ದಾಖಲೆಗಳೂ ಬಾಕಿ ಉಳಿದಿಲ್ಲ, ಎಲ್ಲವನ್ನೂ ಕಕ್ಷಿದಾರರ ಪರ ವಕೀಲರ ತಂಡಕ್ಕೆ ನೀಡಲಾಗಿದೆ ಎಂದು ನ್ಯಾಯಾಧೀಶ ಕೆ ಜೈನ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು. ವಿನಯ್ ಶರ್ಮ (೨೬), ಅಕ್ಷಯ್ ಕುಮಾರ್ (೩೧) ಮತ್ತು ಪವನ್ ಗುಪ್ತ (೨೫) ಅವರ ಪರವಾಗಿ ವಕೀಲರು ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ನ್ಯಾಯಾಧೀಶರು ಯಾವುದೇ ನಿರ್ದೇಶನಗಳ ಅಗತ್ಯ ಇಲ್ಲ ಎಂದು ಆದೇಶ ನೀಡಿದ್ದರು.

ಅಪರಾಧಿಗಳಾದ ಪವನ್, ವಿನಯ್, ಅಕ್ಷಯ್ ಮತ್ತು ಮುಖೇಶ್ ಅವರಿಗೆ ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೨ರಂದು ದೆಹಲಿಯ ಚಲಿಸುವ ಬಸ್ಸಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಮಂದಿ ಆರೋಪಿಗಳ ಪೈಕಿ ಒಬ್ಬನನ್ನು ಅಪ್ರಾಪ್ತ ವಯಸ್ಕನೆಂಬ ಕಾರಣಕ್ಕಾಗಿ ಮೂರು ವರ್ಷಗಳ ಸುಧಾರಣಾ ಗೃಹವಾಸಕ್ಕೆ ಒಳಪಡಿಸಿ ಬಿಡುಗಡೆ ಮಾಡಲಾಗಿತ್ತು. ಆರನೇ ಆರೋಪಿ ರಾಮ್ ಸಿಂಗ್ ವಿಚಾರಣಾ ವೇಳೆಯಲ್ಲಿ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆಪಾದಿಸಲಾಗಿತ್ತು.

No comments:

Advertisement