My Blog List

Monday, February 3, 2020

ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ನಿಷೇಧಕ್ಕೆ ಆಪ್ ಆಗ್ರಹ

ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ
ನಿಷೇಧಕ್ಕೆ ಆಪ್ ಆಗ್ರಹ
ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರು ದೆಹಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ನಡೆಸದಂತೆ ನಿಷೇಧಿಸಬೇಕು ಎಂದು ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ಚುನಾವಣೆ ಆಯೋಗವನ್ನು  2020 ಫೆಬ್ರುವರಿ 02ರ ಭಾನುವಾರ ಒತ್ತಾಯಿಸಿತು.

ವಾಯುವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಸಭೆಯೊಂದರಲ್ಲಿ  ಪಾಲ್ಗೊಂಡು ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುವವರು ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಆಜಾದಿ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ್ದರು.

ಅಲ್ಲದೆ ಭಿನ್ನಮತೀಯರೊಂದಿಗೆ ವ್ಯವಹರಿಸಲು ಗುಂಡುಗಳ ಬಳಕೆ ಬಗ್ಗೆ ಒಲವು ವ್ಯಕ್ತ ಪಡಿಸಿದ್ದರು ಎನ್ನಲಾಗಿತ್ತು.

ನಾವು ಯಾರೊಬ್ಬರ ಉತ್ಸವ ಅಥವಾ ನಂಬಿಕೆಗೆ ಅಡ್ಡಿ ಪಡಿಸುವುದಿಲ್ಲ. ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಉತ್ಸವಗಳನ್ನು ಆಚರಿಸಲಿ. ಆದರೆ ಶಿವಭಕ್ತರ ಮೇಲೆ ಯಾರೇ ವ್ಯಕ್ತಿ ಗುಂಡು ಹಾರಿಸಿದರೆ, ದಂಗೆ ಎಬ್ಬಿಸಿದರೆ.. ಅವರು ಮಾತುಗಳನ್ನು ಆಲಿಸದೇ ಇದ್ದರೆ, ಅವರು ಖಂಡಿತವಾಗಿ ಗುಂಡುಗಳಿಗೆ ಆಲಿಸುತ್ತಾರೆಎಂದು ಆದಿತ್ಯನಾಥ್ ಸಭೆಯಲ್ಲಿ ಹೇಳಿದರು ಎನ್ನಲಾಗಿತ್ತು.

ಆದಿತ್ಯನಾಥ್ ಅವರು ಭಾಷಣ ಮಾಡುತ್ತಿದ್ದ ವೇಳೆಯಲ್ಲಿಯೇ ಶಾಹೀನ್ ಬಾಗ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹಿಂದೂಗಳು ಮಾತ್ರವೇ ಆಳ್ವಿಕೆ ನಡೆಸಬೇಕು ಎಂದು ಘೋಷಣೆ ಮೊಳಗಿಸುತ್ತ ಗುಂಡಿನ ದಾಳಿ ನಡೆಸಿದ ಘಟನೆ 2020 ಫೆಬ್ರುವರಿ 01ರ ಶನಿವಾರ ಘಟಿಸಿತ್ತು.

 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಹೀನ್ ಬಾಗ್   ಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆಎಂದು ಕೂಡಾ ತಮ್ಮ ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದರು.

ಬಿಜೆಪಿಯ ತಾರಾ ಪ್ರಚಾರಕರಾಗಿರುವ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಎಎಪಿಯ ಸಂಜಯ್ ಸಿಂಗ್ ಅವರು ದೂರು ದಾಖಲಿಸಿದ್ದು, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು.

ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ಚುನಾವಣಾ ಆಯೋಗವನ್ನು ಭೇಟಿ ಮಾಡಲು ಎಎಪಿ ಕಳೆದ ೪೮ ಗಂಟೆಗಳಿಂದಲೂ ಅನುಮತಿ ಕೇಳಿದ್ದರೂ ಕೂಡ ಪ್ರಯೋಜನವಾಗಿಲ್ಲ. ಒಂದು ವೇಳೆ ಚುನಾವಣಾ ಆಯೋಗವು ನಮಗೆ ಭೇಟಿಗೆ ಅನುಮತಿ ನೀಡಲಿಲ್ಲವಾದರೆ ಚುನಾವಣಾ ಆಯೋಗದ ಕಚೇರಿ ಮುಂದೆ ಸೋಮವಾರ ಧರಣಿ ಕೂರುವುದಾಗಿ ಹೇಳಿದರು.

No comments:

Advertisement