My Blog List

Saturday, March 28, 2020

ಸ್ವಸ್ಥ ಭಾರತಕ್ಕಾಗಿ ತುರ್ತು ಪರಿಹಾರ ನಿಧಿ ರಚನೆ: ಪ್ರಧಾನಿ ಘೋಷಣೆ


 ಸ್ವಸ್ಥ ಭಾರತಕ್ಕಾಗಿ ತುರ್ತು ಪರಿಹಾರ ನಿಧಿ ರಚನೆ: ಪ್ರಧಾನಿ ಘೋಷಣೆ, ವಿಶ್ವಾದ್ಯಂತ ಲಕ್ಷ ಮಂದಿಗೆ ಕೊರೋನಾ, ಭಾರತದಲ್ಲಿ ೯೧೮ ಸೋಂಕಿತರು
ನವದೆಹಲಿ: ಮಾರಕ ಕೊರೋನಾ ಸೋಂಕಿನ ವಿರುದ್ಧ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಣೆಯಾದ ನಾಲ್ಕನೇ ದಿನವಾದ ಶನಿವಾರ ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ಸೋಂಕು ತಗುಲಿದ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 28ರ ಶನಿವಾರ ತುರ್ತು ಪರಿಹಾರ ನಿಧಿ ರಚನೆಯನ್ನು ಘೋಷಿಸಿದರು.

ತುರ್ತು ಸ್ಥಿತಿಯಲ್ಲಿ ನೆರವಿಗಾಗಿ ರಚಿಸಲಾಗಿರುವ ಪರಿಹಾರ ನಿಧಿಗೆ ಜನರು ಕೂಡಾ ಕಾಣಿಕೆ ಸಲ್ಲಿಸಿ ಕೊರೋನಾವೈರಸ್ ವಿರುದ್ಧ ಸರ್ಕಾರ ನಡೆಸುತ್ತಿರುವ ಸಮರದಲ್ಲಿ ಸಹಭಾಗಿಗಳಾಗಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದರು.

ಪ್ರಧಾನ ಮಂತ್ರಿಯವರ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ನೆರವು ಪರಿಹಾರ ನಿಧಿಯು ಸ್ವಸ್ಥ ಭಾರತ ನಿರ್ಮಾಣದಲ್ಲಿ ಸುದೀರ್ಗ ಮಾರ್ಗದಲ್ಲಿ ಕ್ರಮಿಸಲಿದೆ. ಎಲ್ಲ ರಂಗಗಳ ಜನರೂ ಕೋವಿಡ್-೧೯ರ ವಿರುದ್ಧದ ಭಾರತದ ಸಮರಕ್ಕಾಗಿ ದೇಣಿಗೆ ನೀಡುವ ತಮ್ಮ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಜನರ ಸ್ಫೂರ್ತಿಗೆ ಗೌರವ ನೀಡಿ ನಿಧಿಯನ್ನು ರಚಿಸಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟಿನಲ್ಲಿ ತಿಳಿಸಿದರು.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ  ೧೯೦ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಸೋಂಕಿತ ಪ್ರಕರಣಗಳ ಸಂಖ್ಯೆ ೯೧೮ಕ್ಕೆ ಏರಿತು. ಕೇರಳ ಮತ್ತು ತೆಲಂಗಾಣದಲ್ಲಿ ಮೊತ್ತ ಮೊದಲ ಸಾವುಗಳು ಸಂಭವಿಸಿದ್ದು, ದೇಶದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ೨೦ಕ್ಕೆ ತಲುಪಿತು. ಇದೇ ವೇಳೆಗೆ ವಿಶ್ವಾದ್ಯಂತ ಹೊಸದಾಗಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ,೦೦,೦೦೦ವನ್ನು ಮೀರಿವೆ ಎಂದು ಅಧಿಕೃತವಾಗಿ ಶನಿವಾರ ಪ್ರಕಟಿಸಲಾಯಿತು.
ಯುರೋಪ್ ಖಂಡವೊಂದರಲ್ಲೇ  20,000 ಮಂದಿ ಅಸು ನೀಗಿದ್ದು, 48 ಗಂಟೆಗಳಲ್ಲಿ 1 ಲಕ್ಷ ಹೊಸ ಪ್ರಕರಣಗಳು ವರದಿಯಾದವು.  ಈವರೆಗೆ 1,30,000 ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದು ವರದಿಗಳು ಹೇಳಿದವು.

ಕೇರಳ, ತೆಲಂಗಾಣದದಲ್ಲಿ ಮೊದಲ ಸಾವು
ಕೇರಳದಲ್ಲಿ ದುಬೈಯಿಂದ ವಾಪಸಾಗಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ೬೯ರ ಹರೆಯದ ಒಬ್ಬ ವ್ಯಕ್ತಿ ಹಾಗೂ ತೆಲಂಗಾಣದಲ್ಲಿ ೭೯ರ ಹರೆಯದ ಒಬ್ಬ ವ್ಯಕ್ತಿ ಈದಿನ ಅಸು ನೀಗಿದರು.
ದುಬೈಯಿಂದ ವಾಪಸಾಗಿ, ಕಲಮಸ್ಸೇರಿ ಮೆಡಿಕಲ್ ಕಾಲೇಜಿನಲ್ಲಿ ನ್ಯಮೋನಿಯಾ ಲಕ್ಷಣಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ೬೯ರ ಹರೆಯದ ಕೇರಳದ ವ್ಯಕ್ತಿ ಕೊರೋನಾವೈರಸ್ ಲಕ್ಷಣಗಳೊಂದಿಗೆ ಶನಿವಾರ ಸಾವನ್ನಪ್ಪಿದ್ದು, ಈತನ ಪತ್ನಿ ಮತ್ತು ಅವರನ್ನು ಅವರ ಮನೆಯಿಂದ ವಿಮಾನ ನಿಲ್ದಾಣದವರೆಗೆ ತನ್ನ ಟ್ಯಾಕ್ಸಿಯಲ್ಲಿ ಒಯ್ದಿದ್ದ ಕ್ಯಾಬ್ ಚಾಲಕನಿಗೆ ಕೂಡಾ ಸೋಂಕು ತಗುಲಿದ್ದು ಮೂವರಿಗೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ಹೇಳಿವೆ. ಮೃತರು ಮಾರ್ಚ್ ೧೬ ರಂದು ದುಬೈಯಿಂದ ಕೇರಳ ತಲುಪಿದ್ದು ಮಾರ್ಚ್ ೨೨ ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ನ್ಯುಮೋನಿಯಾ ಸಲುವಾಗಿ ಮಾರ್ಚ್ ೨೨ ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕಿ ಹೃದ್ರೋಗಿಯಾಗಿದ್ದು, ಹಿಂದೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಧಿಕ ರಕ್ತದ ಒತ್ತಡವೂ ಅವರಿಗೆ ಇತ್ತು.

ರೋಗಿಯು ವಾಸಿಸುತ್ತಿದ್ದ ಫ್ಲ್ಯಾಟ್ ನಿವಾಸಿಗಳನ್ನು ನಿಗಾದಲ್ಲಿ ಇಡಲಾಗಿದ್ದು, ರೋಗಿಯು ದುಬೈಯಿಂದ ಪಯಣಿಸಿದ್ದ ವಿಮಾನದ ಸಹ ಪ್ರಯಾಣಿಕರ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.

ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಶನಿವಾರ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಕೊರೋನಾ ಸೋಂಕಿನ ಹರಡುವಿಕೆ ತಡೆಯುವ ಸಲುವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨೪ರಂದು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಿಸಿರುವುದರ ಹೊರತಾಗಿಯೂ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ.

ಭಾರತದಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ಹೊಸ ೧೪೯ ಪ್ರಕರಣಗಳು ಕಳೆದ ೨೪ ಗಂಟೆಗಳಲ್ಲಿ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದರು.

ಅಂಕಿಸಂಖ್ಯಾ ಮಾಜಿ ಮುಖ್ಯಸ್ಥರ ಎಚ್ಚರಿಕೆ
ಮಧ್ಯೆ, ರಾಷ್ಟ್ರವಾಪಿ ದಿಗ್ಬಂಧನ ಮಧ್ಯೆ ಆದಾಯವಿಲ್ಲದ ವಲಸೆ ಕಾರ್ಮಿಕರ ಆಹಾರದ ಅಗತ್ಯಗಳನ್ನು ಈಡೇರಿಸದೇ ಹೋದಲ್ಲಿ ದೇಶದಲ್ಲಿ ಆಹಾರ ದಂಗೆ ಭುಗಿಲೇಳುವ ಸಾಧ್ಯತೆ ಇದೆ ಎಂದು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಜಿ ಅಂಕಿಸಂಖ್ಯಾ ಮುಖ್ಯಸ್ಥ ಪ್ರಣಬ್ ಸೇನ್ ಎಚ್ವರಿಕೆ ನೀಡಿದರು.

ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗು ಗ್ರಾಮೀಣ ಪ್ರದೇಶಗಳಿಗೆ ಹರಡಿದರೆ, ಅದನ್ನು ನಿಯಂತ್ರಿಸುವುದೇ ಅಸಾಧ್ಯದ ಮಾತಾದೀತು ಎಂದೂ ಅವರು ಹೇಳಿದರು.

ದಾದಿಯ ಜೊತೆ ಪ್ರಧಾನಿ ಸಂವಹನ
ಪ್ರಧಾನಿ ನರೇಂದ್ರ ಮಓದಿ ಅವರು ಶನಿವಾರ ಆಯುಷ್ ವೃತ್ತಿ ನಿರತರ ಜೊತೆಗೆ ಕೊರೋನಾವೈರಸ್ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು.

ರೋಗವನ್ನು ಗುಣಪಡಿಸುವ ಬಗ್ಗೆ ಪೂರಕ ಮಾಹಿತಿ ರಹಿತವಾದ ಆಯುಷ್ ತಜ್ಞರ ಪ್ರತಿಪಾದನೆಗಳ ಬಗ್ಗೆ ವಾಸ್ತವಾಂಶ ಮತ್ತು ಸತ್ಯ-ಪರಿಶೀಲನೆಯ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಆಯುಷ್ ವಿಜ್ಞಾನಿಗಳು, ಐಸಿಎಂಆರ್, ಸಿಎಸ್ಐಆರ್ ಮತ್ತು ಇತರ ಸಂಶೋಧನಾ ಸಂಸ್ಥೆಗಳು ಸಾಕ್ಷ್ಯ ಆಧಾರಿತ ಸಂಶೋಧನೆಗಾಗಿ ಒಟ್ಟಾಗಬೇಕು ಎಂದು  ಅವರು ನುಡಿದರು.

,೦೦೦ ಕೋಟಿ ರೂ ನೆರವಿಗೆ ತಮಿಳುನಾಡು ಕೋರಿಕೆ
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೊರೋನಾವೈರಸ್ ವಿರುದ್ಧ ಹೋರಾಡಲು ,೦೦೦ ಕೋಟಿ ರೂಪಾಯಿಗಳ ಆರ್ಥಿಕ ನೆರವಿಗೆ ಮನವಿ ಮಾಡಿದರು.

ತಮಿಳುನಾಡಿನಲ್ಲಿ ಏಕಾಂಗಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಶನಿವಾರ ಸಾವನ್ನಪ್ಪಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು.

ಗೃಹ ಸಚಿವಾಲಯ ಮಾರ್ಗದರ್ಶಿ ಸೂತ್ರ 
ದೇಶವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಸಮಯದಲ್ಲಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಗೃಹ ಸಚಿವಾಲಯವು ಶನಿವಾರ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತು.

ಕೋವಿಡ್ -೧೯ ಹರಡದಂತೆ ತಡೆಯುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರಾಜ್ಯಗಳ ಹೊರಗಿನಿಂದ ಬಂದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತಿತರರಿಗೆ ಅಗತ್ಯ ಅನುಕೂಲಗಳ ಸಮರ್ಪಕ ವ್ಯವಸ್ಥೆ ಮಾಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳ ಮೂಲಕ ಮಾಹಿತಿ ಒದಗಿಸಲಾಯಿತು.

ಮುಂಬೈ ಪೊಲೀಸರಿಂದ ಜನರ ಸೆರೆ
ಮುಂಬೈ ಪೊಲೀಸರು ಅಕ್ರಮವಾಗಿ ೫೦೦೦ ಬಾಟಲಿಗಳಷ್ಟು ಹ್ಯಾಂಡ್ ಸ್ಯಾನಿಟೈಸರ್ ಹೊಂದಿದ್ದ ಮೂವರನ್ನು ಶನಿವಾರ ಬಂಧಿಸಿದರು.

ಮುಂಬೈಯ ಮಾಹಿಮ್ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ಪೊಲೀಸರು . ಲಕ್ಷ ರೂಪಾಯಿ ಮೌಲ್ಯದ ೫೦೦೦ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ಗಳನ್ನು ವಶಪಡಿಸಿಕೊಂಡರು. ಅಕ್ರಮವಾಗಿ ಗೋದಾಮಿನಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಬಾಟಲಿಗಳನ್ನು ಸಂಗ್ರಹಿಸಿ ಇಡಲಾಗಿತ್ತು.

ಪುನಶ್ಚೇತನ ಯೋಜನೆಗೆ ಟ್ರಂಪ್ ಸಹಿ
ಏತನ್ಮಧ್ಯೆ, ಕೊರೊನಾವೈರಸ್ ಸೋಂಕಿನ ಪರಿಣಾಮವಾಗಿ ದುರ್ಬಲಗೊಂಡಿರುವ ಅಮೆರಿಕದ  ಆರ್ಥಿಕತೆಯನ್ನು ಕಾಪಾಡುವ ಸಲುವಾರಿ ಟ್ರಿಲಿಯನ್ ಡಾಲರ್ ಆರ್ಥಿಕ ಪುನಶ್ಚೇತನ ಯೋಜನೆಗೆ ಅವಕಾಶ ನೀಡುವ ಕಾನೂನಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದರು, ಅಧ್ಯಕ್ಷರು ಸಹಿ ಹಾಕಿದ ಒಂದೇ ದಿನ ರಾಷ್ಟ್ರವು ವೈರಸ್ ಸೋಂಕಿನ ೧೦೦,೦೦೦ ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿತು.

ಇದಕ್ಕೆ ಕೆಲವು ಗಂಟೆಗಳ ಮುನ್ನ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪ್ಯಾಕೇಜ್ನ್ನು ಅಂಗೀಕರಿಸಿತು. ಅಮೆರಿಕವು  ಕೋವಿಡ್ -೧೯ ಸೋಂಕು ಪ್ರಸರಣದಲ್ಲಿ ಇದೀಗ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದು, ಒಟ್ಟು ಕೊರೋನಾವೈರಸ್ ಸೋಂಕು ಪ್ರಕರಣ ಸಂಖ್ಯೆ ೧೦೪,೦೦೦ನ್ನು ದಾಟಿದೆ. ,೬೯೩ ಸಾವುಗಳು ಸಂಭವಿಸಿವೆ.

ಕಾನೂನಿಗೆ ಟ್ರಂಪ್ ಅವರ ಸಹಿ ಬೀಳುವುದರೊಂದಿಗೆ ವಾರಾಂತ್ಯದ ಶಾಸಕಾಂಗ ಪ್ರಹಸನಕ್ಕೆ ತೆರೆ ಬಿದ್ದಿತು. ಮತ್ತು ನಾಲ್ಕು ಸದಸ್ಯರ ಅಮೆರಿಕನ್ ಕುಟುಂಬಕ್ಕೆ, ಸರಾಸರಿ  ,೪೦೦ ಡಾಲರ್ವರೆಗಿನ ಪರಿಹಾರ ಚೆಕ್ ವಿತರಣೆಗೆ ಅವಕಾಶ ಒದಗಿಸಿತು.

"ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಒಗ್ಗೂಡಿ ರಾಷ್ಟ್ರಕ್ಕೆ ಅಗ್ರ ಸ್ಥಾನ ನೀಡಿದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಟ್ರಂಪ್ ಹೇಳಿದರು.

"ಇದು ನಮ್ಮ ರಾಷ್ಟ್ರದ ಕುಟುಂಬಗಳು, ಕಾರ್ಮಿಕರು ಮತ್ತು ವ್ಯವಹಾರಗಳಿಗೆ ತುರ್ತಾಗಿ ಅಗತ್ಯವಾದ ಪರಿಹಾರವನ್ನು ನೀಡುತ್ತದೆ ಎಂದು ಅವರು ನುಡಿದರು.

No comments:

Advertisement