Wednesday, May 20, 2020

ಶ್ರಮಿಕ ರೈಲು: ಪರಿಷ್ಕೃತ ನಿಯಮಾವಳಿ, ರಾಜ್ಯಗಳ ಅನುಮತಿ ಬೇಕಿಲ್ಲ

ಶ್ರಮಿಕ ರೈಲು:  ಪರಿಷ್ಕೃತ ನಿಯಮಾವಳಿ,  ರಾಜ್ಯಗಳ ಅನುಮತಿ  ಬೇಕಿಲ್ಲ
ನವದೆಹಲಿ: ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಸಲುವಾಗಿ ಓಡಿಸಲಾಗುತ್ತಿರುವ ಶ್ರಮಿಕ ರೈಲುಗಳ ಓಡಾಟಕ್ಕೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನ ರೂಪಿಸಿರುವ ಗೃಹ ಸಚಿವಾಲಯವು ರೈಲು ಪ್ರವೇಶಕ್ಕೆ ಸಂಬಂಧಪಟ್ಟ ರಾಜ್ಯದ ಒಪ್ಪಿಗೆ ಅಗತ್ಯ ಎಂಬ ನಿಯಮವನ್ನು 2020 ಮೇ 19ರ ಮಂಗಳವಾರ ರದ್ದು ಪಡಿಸಿತು.

ಕೋವಿಡ್ ದಿಗ್ಬಂಧನದ ಹಿನ್ನೆಲೆಯಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಕರೆದೊಯ್ಯುವ ಸಲುವಾಗಿ ರೂಪಿಸಿದ ನಿಯಮಾವಳಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು, ’ಶ್ರಮಿಕ ರೈಲುಗಳ ಸಂಚಾರಕ್ಕೆ ರೈಲ್ವೇ ಇಲಾಖೆಯು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಅನುಮತಿ ನೀಡಬಹುದು ಎಂದು ತಿಳಿಸಿತು.

ಮೇ ೨ರಂದು ಹೊರಡಿಸಲಾಗಿದ್ದ ಅಧಿಸೂಚನೆಯ ಪ್ರಕಾರ ಶ್ರಮಿಕ ವಿಶೇಷ ರೈಲುಗಳ ಓಡಾಟಕ್ಕೆ ಸಂಬಂಧಪಟ್ಟ ರಾಜ್ಯಗಳ ಒಪ್ಪಿಗೆ ಪಡೆಯಲಾಗುವುದು ಎಂದು ರೈಲ್ವೇ ಸಚಿವಾಲಯವು ತಿಳಿಸಿತ್ತು. ’ಸಿಕ್ಕಿಹಾಕಿಕೊಂಡ ವ್ಯಕ್ತಿಗಳ ಸಮೂಹವು ಒಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದಕ್ಕೆ ರೈಲಿನ ಮೂಲಕ ಹೋಗಬೇಕಿದ್ದರೆ, ಕಳುಹಿಸುವ ಮತ್ತು ತಲುಪಬೇಕಾಗಿರುವ ಎರಡೂ ರಾಜ್ಯಗಳ ಪರಸ್ಪರ ಒಪ್ಪಿಗೆ ಅಗತ್ಯ ಎಂದು ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆ ತಿಳಿಸಿತ್ತು.

ತಲುಪಬೇಕಾಗಿರುವ ರಾಜ್ಯಗಳ ಒಪ್ಪಿಗೆಯನ್ನು  ವ್ಯಕ್ತಿಗಳು ಹೊರಡಬೇಕಾಗಿರುವ ರಾಜ್ಯಗಳು ಪಡೆದುಕೊಳ್ಳಬೇಕು ಮತ್ತು ಅಂತಹ ಒಪ್ಪಿಗೆಯ ಪತ್ರವನ್ನು ರೈಲು ಹೊರಡುವುದಕ್ಕೆ ಮುನ್ನ ರೈಲ್ವೇ ಅಧಿಕಾರಿಗಳಿಗೆ ತಲುಪಿಸಬೇಕು ಎಂದು ಅಧಿಸೂಚನೆ ಹೇಳಿತ್ತು.

ಮಂಗಳವಾರ ಹೊರಡಿಸಲಾದ ಸಚಿವಾಲಯದ  ಅಧಿಸೂಚನೆಯು ರಾಜ್ಯಗಳ ಒಪ್ಪಿಗೆಗೆ ಸಂಬಂಧಿಸಿದ ಉಲ್ಲೇಖವನ್ನು ತೆಗೆದುಹಾಕಿದೆ. ಮತ್ತು ನೋಡಾಲ್ ಅಧಿಕಾರಿಗಳು ಸಿಕ್ಕಿ ಬಿದ್ದ ಕಾರ್ಮಿಕರನ್ನು ಕಳುಹಿಸುವ ಮತ್ತು ಸ್ವಾಗತಿಸುವ ನಿಟ್ಟಿನಲ್ಲಿ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಮಾಡುವರು  ಎಂದು ಹೇಳಿದೆ. ರೈಲು ವೇಳಾಪಟ್ಟಿ, ನಿಲುಗಡೆ ಮತ್ತು ಹೋಗಬೇಕಾದ ಸ್ಥಳಗಳನ್ನು ರೈಲ್ವೇಯೇ ಅಂತಿಮ ಪಡಿಸುವುದು ಎಂದು ಕೂಡಾ ಅಧಿಸೂಚನೆ ತಿಳಿಸಿದೆ.

ಪರಿಷ್ಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಗೃಹ ಕಾರ್‍ಯದರ್ಶಿ ಅಜಯ್ ಭಲ್ಲಾ ಅವರುಸಿಕ್ಕಿಬಿದ್ದ ಜನರನ್ನು ಕಳುಹಿಸುವ ಮತ್ತು ಸ್ವಾಗತಿಸುವ ವ್ಯವಸ್ಥೆಗಳನ್ನು ಮಾಡಲು ನೋಡಾಲ್ ಅಧಿಕಾರಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯೋಜಿಸಬೇಕು ಎಂದು ಹೇಳಿದರು.

ವಲಸೆ ಕಾರ್ಮಿಕರು ತಲುಪುವ ರಾಜ್ಯಗಳ ಒಪ್ಪಿಗೆ ಇನ್ನು ಅಗತ್ಯವಿಲ್ಲ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಯೊಬ್ಬರು ಕೂಡಾ ದೃಢ ಪಡಿಸಿದರು. ಯಾವ ರಾಜ್ಯದಿಂದ ರೈಲು ಹೊರಡುವುದೋ ರಾಜ್ಯವು ಪ್ರಯಾಣಿಕರ ಪಟ್ಟಿಯನ್ನು ರೈಲ್ವೇಗೆ ನೀಡುತ್ತದೆ ಎಂದು ಅವರು ನುಡಿದರು.

ನಿಲುಗಡೆ ಮತ್ತು ಅಂತಿಮ ನಿಲುಗಡೆ ಸೇರಿದಂತೆ ರೈಲು ವೇಳಾಪಟ್ಟಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಗತ್ಯಗಳಿಗೆ ಅನುಗುಣವಾಗಿ ರೈಲ್ವೇ ಇಲಾಖೆಯೇ ಸಿದ್ಧ ಪಡಿಸುವುದು ಮತ್ತು ಆಯಾ ರಾಜ್ಯಗಳಿಗೆ ಕಳುಹಿಸುವ ಮತ್ತು ಸ್ವಾಗತಿಸುವ ವ್ಯವಸ್ಥೆಗಳನ್ನು ಮಾಡುವ ಸಲುವಾಗಿ ಕಳುಹಿಸುವುದು.

ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಹೆಚ್ಚಿನ ನಿಲುಗಡೆಗಳನ್ನು ವಿಶೇಷ ರೈಲುಗಳಿಗೆ ಒದಗಿಸುವ ಖಾತರಿಯನ್ನು ರೈಲ್ವೇಯು ನೀಡುತ್ತದೆ ಎಂದು ಸಚಿವಾಲಯ ಹೇಳಿತು.

ಎಲ್ಲ ರೈಲುಗಳಲ್ಲಿಯೂ ಕೋವಿಡ್ ದಿಗ್ಬಂಧನ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಲಾಗುವುದು. ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುವುದು.
ರೋಗಲಕ್ಷಣ
ಇಲ್ಲದ ಪ್ರಯಾಣಿಕರನ್ನು ಮಾತ್ರವೇ ರೈಲುಗಾಡಿ ಏರಲು ಬಿಡಲಾಗುವುದು. ರೈಲು ಹತ್ತುವಾಗ ಮತ್ತು ಪಯಣ ಕಾಲದಲ್ಲಿ  ಎಲ್ಲ ಪ್ರಯಾಣಿಕರೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ನಿಯಮಾವಳಿ ತಿಳಿಸಿದೆ.

ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ರಾಜ್ಯಕ್ಕೆ ವಾಪಸಾಗಬಯಸಿರುವ ವಲಸೆ ಕಾರ್ಮಿಕರು ವಾಪಸಾತಿಗೆ ಮುಖ್ಯಮಂತ್ರಿಯ ಒಪ್ಪಿಗೆ ಲಭಿಸದ ಕಾರಣ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ಗೃಹ ಸಚಿವಾಲಯ ಮತ್ತು ರೈಲ್ವೇ ಸಚಿವಾಲಯ ಪ್ರತ್ಯೇಕ ಹೇಳಿಕೆಗಳಲ್ಲಿ ವಲಸೆ ಕಾರ್ಮಿಕರಿಗಾಗಿ ರೈಲುಗಳ ಸುಗಮ ಸಂಚಾರ ನಿಟ್ಟಿನಲ್ಲಿ ರಾಜ್ಯಗಳು ರೈಲ್ವೇ ಜೊತೆಗೆ ಸಹಕಾರ ನೀಡಬೇಕು ಮತ್ತು ಜಿಲ್ಲಾ ಅಧಿಕಾರಿಗಳು ರೈಲ್ವೇಗೆ ಬೇಕಾದ ಅತ್ಯಗಳನ್ನು ಒದಗಿಸಬೇಕು ಎಂದು ಹೇಳಿವೆ. ರೈಲು ವೇಳಾಪಟ್ಟಿ, ನಿಲುಗಡೆ ಸಮಯ ಮತ್ತು ಇತರ ವಿವರಗಳಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದೂ ಹೇಳಿಕೆ ತಿಳಿಸಿದೆ.

No comments:

Advertisement