Saturday, June 6, 2020

ಭಾರತ-ಚೀನಾ ಸೇನಾ ಕಮಾಂಡರ್ ಮಾತುಕತೆ ಆರಂಭ

ಭಾರತ-ಚೀನಾ ಸೇನಾ ಕಮಾಂಡರ್ ಮಾತುಕತೆ ಆರಂಭ

ನವದೆಹಲಿ: ಪೂರ್ವ ಲಡಾಖ್ನಲ್ಲಿ ಸಂಭವಿಸಿದ ಇತ್ತೀಚಿನ ಗಡಿ ಬಿಕ್ಕಟ್ಟನ್ನು ಇತ್ಯರ್ಥ ಪಡಿಸುವ ಸಲುವಾಗಿ ಭಾರತ ಮತ್ತು ಚೀನಾದ ಸೇನಾ ಜನರಲ್ಗಳು ಉನ್ನತ ಮಟ್ಟದ ಮಾತುಕತೆಯನ್ನು ಚೀನಾದ ಬದಿಯಲ್ಲಿರುವ ಹಿಮಾಲಯನ್ ಹೊರಠಾಣಾ ಪ್ರದೇಶದಲ್ಲಿ 2020 ಜೂನ್ 06ರಶನಿವಾರ  ಆರಂಭಿಸಿದರು.

ಲಡಾಖ್ ಪ್ರದೇಶದಲ್ಲಿ ಉಭಯ ಕಡೆಗಳ ಸೇನೆ ಬೃಹತ್ ಪ್ರಮಾಣದಲ್ಲಿ ಜಮಾವಣೆಗೊಂಡಿರುವ ಹಿನ್ನೆಲೆಯಲ್ಲಿ ಸಭೆ ನಡೆಯುತ್ತಿದೆ. ಉಭಯ ದೇಶಗಳೂ ಮೇ ಮೊದಲ ವಾರದ ಘರ್ಷಣೆಯ ಬಳಿಕ ಲಡಾಖ್ ಪ್ರದೇಶಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚುವರಿ ಪಡೆಗಳನ್ನು ರವಾನಿಸಿವೆ.

ಭಾರತೀಯ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದು, ಹಿಂದಿನ ಸಭೆಗಳಲ್ಲಿ ಪಾಲ್ಗೊಂಡಿದ್ದ ಇತರ ೧೦ ಮಂದಿ ಅಧಿಕಾರಿಗಳೂ ನಿಯೋಗದಲ್ಲಿ ಇದ್ದಾರೆ. ಚೀನಾ ನಿಯೋಗದ ನೇತೃತ್ವವನ್ನು ಕೋರ್ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ವಹಿಸಿದ್ದು, ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ವಿಭಾಗ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಇತರ ೧೦ ಅಧಿಕಾರಿಗಳು ಚೀನೀ ನಿಯೋಗದಲ್ಲಿ ಇದ್ದಾರೆ.

ಬೆಳಿಗ್ಗೆ ೧೧ ಸುಮಾರಿಗೆ ಚುಶುಲ್-ಮೊಲ್ಡೊ ಬಾರ್ಡರ್ ಮೀಟಿಂಗ್ ಪಾಯಿಂಟ್ನಲ್ಲಿ ಮಾತುಕತೆ ಪ್ರಾರಂಭವಾಯಿತು. ವಿವಾದಿತ ಗಡಿಯಲ್ಲಿ ಉದ್ವಿಗ್ನತೆ ನಿವಾರಣೆ ಬಗ್ಗೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಚರ್ಚಿಸಿದ ಒಂದು ದಿನದ ಮಾತುಕತೆಯ ನಂತರ ಈದಿನ ಉನ್ನತ ಮಟ್ಟದ ಸೇನಾ ನಿಯೋಗಗಳ ಮಾತುಕತೆ ನಡೆದಿದೆ.

ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಸಭೆಯು ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಲು ನಿರ್ಧರಿಸಿತ್ತು. ‘ಪರಸ್ಪರರ ಸೂಕ್ಷ್ಮತೆ, ಕಾಳಜಿ ಮತ್ತು ಆಕಾಂಕ್ಷೆಗಳನ್ನು ಗೌರವಿಸುವುದರ ಪ್ರಾಮುಖ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳು ವಿವಾದಗಳಾಗದಂತೆ ನೋಡಿಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.

ಪೂರ್ವ ಲಡಾಖ್ ಮೂರು ಪ್ರದೇಶಗಳಾದ ಪ್ಯಾಂಗೊಂಗ್ ತ್ಸೋ, ಗಲ್ವಾನ್ ಕಣಿವೆ ಮತ್ತು ಡೆಮ್ಚಾಕ್ನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಮಾತುಕತೆಯಲ್ಲಿ ಭಾರತದ ಕಡೆಯವರು ನಿರ್ದಿಷ್ಟ ಪ್ರಸ್ತಾಪಗಳನ್ನು ಮಂಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಮಾತುಕತೆಯಲ್ಲಿ ಭಾರತೀಯ ಸೇನೆ ಮುಂದಿಡುವ ಪ್ರಸ್ತಾಪಗಳು ಏನೆಂದು ತತ್ಕ್ಷಣಕ್ಕೆ  ತಿಳಿದಿಲ್ಲ, ಆದರೆ ಎಲ್ಲ ಕ್ಷೇತ್ರಗಳಲ್ಲಿ ಯಥಾಸ್ಥಿತಿಗೆ ಮರಳಲು ಅದು ಒತ್ತಾಯಿಸುತ್ತದೆ ಎಂದು ತಿಳಿದುಬಂದಿದೆ. ಸ್ಥಳೀಯ ಕಮಾಂಡರ್ಗಳು ಮತ್ತು  ಉಭಯ ಸೇನೆಗಳ ಪ್ರಮುಖ ಸಾಮಾನ್ಯ ಶ್ರೇಣಿಯ ಅಧಿಕಾರಿಗಳ ನಡುವೆ ಉಭಯ ಕಡೆಯವರು ಈಗಾಗಲೇ ಕನಿಷ್ಠ ೧೦ ಸುತ್ತಿನ ಮಾತುಕತೆ ನಡೆಸಿದ್ದಾರೆ, ಆದರೆ ಮಾತುಕತೆಗಳು ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡಿಲ್ಲ.

ಪ್ಯಾಂಗೊಂಗ್ ತ್ಸೊ ಲೇಕ್ ಸಮೀಪದ ಪ್ರದೇಶದಲ್ಲಿ ಪ್ರಮುಖ ರಸ್ತೆಯನ್ನು ಭಾರತ ನಿರ್ಮಿಸುತ್ತಿರುವುದು ಮತ್ತು ಗಲ್ವಾನ್ ಕಣಿವೆಯಲ್ಲಿ ಡಾರ್ಬುಕ್-ಶಾಯೊಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಇನ್ನೊಂದು ರಸ್ತೆ ನಿರ್ಮಿಸಿದ್ದಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿರುವುದು ಹಾಲಿ ಬಿಕ್ಕಟ್ಟಿಗೆ ಕಾರಣವಾಗಿದೆ.

ಭಾರತ ಮತ್ತು ಚೀನಾದ ಸೈನ್ಯವು ೨೦೧೭ ರಲ್ಲಿ ಡೋಕ್ಲಾಮ್ ಮೂರು ಕೂಡು ಮಾರ್ಗದಲ್ಲಿ (ತ್ರಿ-ಜಂಕ್ಷನ್) ೭೩ ದಿನಗಳ ಬಿಕ್ಕಟ್ಟನ್ನು ಎದುರಿಸಿದ್ದವು. ಇದು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವೆ ಯುದ್ಧದ ಭೀತಿಯನ್ನು ಹುಟ್ಟುಹಾಕಿತ್ತು.

ಭಾರತ-ಚೀನಾ ಗಡಿಯು ,೪೮೮ ಕಿ.ಮೀ ಉದ್ದದ ಎಲ್ಎಸಿಯನ್ನು ಒಳಗೊಂಡಿದ್ದು, ಆಗಾಗ ಬಿಕ್ಕಟ್ಟು ತಲೆದೋರುತ್ತದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಭಾಗವೆಂದು ಚೀನಾ ಹೇಳಿಕೊಂಡರೆ, ಭಾರತ ಆಕ್ಷೇಪಿಸುತ್ತದೆ. ಗಡಿ ಸಮಸ್ಯೆಯ ಅಂತಿಮ ನಿರ್ಣಯ ಬಾಕಿ ಇರುವುದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳುವುದು ಅಗತ್ಯ ಎಂದು ಎರಡೂ ಕಡೆಯವರು ಪ್ರತಿಪಾದಿಸುತ್ತಿದ್ದಾರೆ.

ಚೀನಾದ ಸೇನೆಯು ಪ್ಯಾಂಗೊಂಗ್ ತ್ಸೊ ಮತ್ತು ಗಲ್ವಾನ್ ಕಣಿವೆಯಲ್ಲಿ ಸುಮಾರು ,೫೦೦ ಸೈನಿಕರನ್ನು ನಿಯೋಜಿಸಿರುವುದಾಗಿ ತಿಳಿದುಬಂದಿದೆ ಮತ್ತು ಕ್ರಮೇಣ ತಾತ್ಕಾಲಿಕ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತಿದೆ. ಹೆಚ್ಚುವರಿ ಪಡೆಗಳು ಮತ್ತು ಫಿರಂಗಿ ಬಂದೂಕುಗಳನ್ನು ಕಳುಹಿಸುವ ಮೂಲಕ ಭಾರತವು ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೇ ತಿಂಗಳ ಆರಂಭದಲ್ಲಿ ನಡೆದ ಘರ್ಷಣೆಗಳಿಂದಾಗಿ, ದಕ್ಷಿಣಕ್ಕೆ ಡೆಮ್ಚಾಕ್, ಎತ್ತರದ ಪ್ಯಾಂಗೊಂಗ್ ತ್ಸೊ ಸರೋವರದ ಪೂರ್ವದ ದಂಡೆಯಲ್ಲಿರುವ ಫಿಂಗರ್ಸ್ ಪ್ರದೇಶ, ಗಲ್ವಾನ್ ನದಿ ಜಲಾನಯನ ಪ್ರದೇಶಗಳಲ್ಲಿ ಮತ್ತು  ತೀರಾ ಇತ್ತೀಚೆಗೆ ಗೋಗ್ರಾ ಪೋಸ್ಟ್ನಲ್ಲಿ  ಚೀನಾದ ಕಾಲಾಳುಪಡೆ ಸೈನಿಕರು ಒಳನುಗ್ಗಿದ ಬಗ್ಗೆ ಅನೇಕ ವರದಿಗಳು ಬಂದಿವೆ.

ಲಡಾಖ್ ಮತ್ತು ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆ ಅಥವಾ ಎಲ್ಎಸಿ ಉದ್ದಕ್ಕೂ ಚೀನಾದ ಸೇನೆಯಿಂದ ತನ್ನ ಸೈನಿPರಿಗೆ ಸಾಮಾನ್ಯ ಗಸ್ತು ತಿರುಗಲು ಅಡ್ಡಿಯಾಗುತ್ತಿದೆ ಮತ್ತು ಚೀನಾದ ಕಡೆಯಿಂದ ಭಾರತೀಯ ಪಡೆಗ ಕಡೆಗೆ ಅತಿಕ್ರಮಣ ಮಾಡುವುದರಿಂದ ಉಭಯ ಸೇನೆಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ಭಾರತ ಆಪಾದಿಸಿದೆ. ಭಾರತದ ವಾದವನ್ನು ಚೀನಾ ಅಲ್ಲಗಳೆದಿದೆ

No comments:

Advertisement