My Blog List

Saturday, July 11, 2020

ಸರ್ಕಾರ ಉರುಳಿಸಲು ಬಿಜೆಪಿ ಆಮಿಷ, ಗೆಹ್ಲೋಟ್ ಆರೋಪ

ಸರ್ಕಾರ ಉರುಳಿಸಲು ಬಿಜೆಪಿ ಆಮಿಷ, ಗೆಹ್ಲೋಟ್ ಆರೋಪ

ಜೈಪುರ: ತಮ್ಮ ಸರ್ಕಾರವನ್ನು ಉರುಳಿಸುವ ಹತಾಶ ಯತ್ನವಾಗಿ ವಿರೋಧೀ ಭಾರತೀಯ ಜನತಾ ಪಕ್ಷವು (ಬಿಜೆಪಿ) ’ಮಾರುಕಟ್ಟೆಗಲ್ಲಿ ಕುರಿಗಳನ್ನು ಖರೀದಿಸುವಂತೆ ಶಾಸಕರನ್ನು ಖರೀದಿಸಲು ಯತ್ನಿಸಿತ್ತು, ಆದರೆ ಕಾಂಗ್ರೆಸ್ ಪಕ್ಷವು ಇದನ್ನು ವಿಫಲಗೊಳಿಸಿತು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ 2020 ಜುಲೈ 11ರ ಶನಿವಾರ ಇಲ್ಲಿ ಹೇಳಿದರು.

ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷ ಒಡ್ಡುವ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಯತ್ನಗಳ ಜೊತೆಗೆ ಸಂಪರ್ಕ ಹೊಂದಿದ್ದ ಇಬ್ಬರ ವಿರುದ್ಧ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣಾ ತಂಡವು (ಎಸ್ ಒಜಿ) ಈಗಾಗಲೇ ಪ್ರಕರಣ ದಾಖಲಿಸಿದೆ ಎಂದು  ಅವರು ಹೇಳಿದರು.

ಬಂಧಿತ ವ್ಯಕ್ತಿಗಳ ನಡುವಣ ಮೊಬೈಲ್ ಸಂಭಾಷಣೆಯನ್ನು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದ್ದು, ಜೂನ್ ೧೯ರಂದು ನಡೆದ ರಾಜ್ಯಸಭಾ ಚುನಾವಣೆಗೂ ಮುಂಚಿನಿಂದಲೇ ಸರ್ಕಾರ ಉರುಳಿಸುವ ಯತ್ನ ನಡೆದಿತ್ತು ಎಂದು ಮುಖ್ಯಮಂತ್ರಿ ಆಪಾದಿಸಿದರು.

ಇಡೀ ಆಡಳಿತವು ಕೊರೋನಾವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಲು ಕಾರ್ಯಮಗ್ನವಾಗಿದ್ದಾಗ, ಬಿಜೆಪಿ ನಾಯಕರು ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಯತ್ನಿಸಿದರು. ನಾವೆಲ್ಲರೂ ವೈರಸ್ ವಿರುದ್ಧ ಹೋರಾಟಕ್ಕೆ ಗಮನ ನೀಡಬೇಕಾಗಿದ್ದ ಹೊತ್ತಿನಲ್ಲಿ ಸಚಿವರು, ಶಾಸಕರು ಮತ್ತು ನಾಯಕರು ಸರ್ಕಾರ ಉಳಿಸಿಕೊಳ್ಳುವತ್ತ ಗಮನ ಹರಿಸಬೇಕಾಯಿತು ಎಂದು ಗೆಹೋಟ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಪರಂಪರೆ ಇರಲಿಲ್ಲ. ಆದರೆ ಬಿಜೆಪಿ ನಾಯಕರು ಈಗಾಗಲೇ ಶಾಸಕರಿಗೆ ನಿಷ್ಠೆ ಬದಲಾವಣೆ ಮಾಡಿ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ತಲಾ ೧೦-೧೫ ಕೋಟಿ ರೂಪಾಯಿಗಳ ಆಮಿಷ ಒಡ್ಡುವ ದಾರ್ಷ್ಟ್ಯ ಮೆರೆದಿದ್ದಾರೆ ಎಂದು ಮುಖ್ಯಮಂತ್ರಿ ಆಪಾದಿಸಿದರು.

ಬಿಜೆಪಿ ನಾಯಕರು ನಾಚಿಕೆಗೇಡುತನದ ಎಲ್ಲೆಗಳನ್ನು ಮೀರಿದ್ದಾರೆ. ಮಾರುಕಟ್ಟೆಯಿಂದ ಕುರಿಗಳನ್ನು ಖರೀದಿಸುವಂತೆ ಬಿಜೆಪಿಯು ಶಾಸಕರನ್ನು ಖರೀದಿಸಲು ಯತ್ನಿಸುವ ಮೂಲಕ ರಾಜಕೀಯ ನಡೆಸಲು ಹೊರಟಿದೆ ಎಂದು ಗೆಹ್ಲೋಟ್ ಹೇಳಿದರು.

ಬಿಜೆಪಿಯು ಗುಜರಾತಿನಲ್ಲಿ ಏಳು ಮಂದಿ ಕಾಂಗ್ರೆಸ್ ಶಾಸಕರನ್ನು ಖರೀದಿಸುವಲ್ಲಿ ಮತ್ತು ಎರಡು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು  ಎಂದು ಮುಖ್ಯಮಂತ್ರಿ ನುಡಿದರು.

ಆದರೆ ಅವರ ಅಂತಹುದೇ ಆಟವನ್ನು ನಾವು ರಾಜಸ್ಥಾನದಲ್ಲಿ ವಿಫಲಗೊಳಿಸಿದೆವು ಮತ್ತು ಎರಡು ಸ್ಥಾನ ಗೆಲ್ಲುವ ಮೂಲಕ ಅವರಿಗೆ ಪಾಠ ಕಲಿಸಿದೆವು. ಆದರೆ ಅವರು ನಾಚಿಕೆ ಇಲ್ಲದವರು, ಈಗಲೂ ತಮ್ಮ ಯತ್ನ ಮುಂದುವರೆಸಿದ್ದಾರೆ ಎಂದು ಹೇಳಿದ ಗೆಹ್ಲೋಟ್, ತಮ್ಮ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ, ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಗೆಹ್ಲೋಟ್ ಹರಿಹಾಯ್ದರು.

ಮೋದಿ ಜಿ ಮತ್ತು ಅಮಿತ್ ಶಾಜಿಗೆ ನನ್ನ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಬಿಜೆಪಿ ನಾಯಕರ ಮೂಲಕ ಶಾಸಕರ ಖರೀದಿ ಯತ್ನಕ್ಕೆ ಸಂಚು ನಡೆಯಿತು ಎಂದು ಮುಖ್ಯಮಂತ್ರಿ ಹೇಳಿದರು.

೧೯೯೮ರಿಂದ ೨೦೦೪ರವರೆಗಿನ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬಿಜೆಪಿ ಭಿನ್ನವಾಗಿತ್ತು ಎಂದು ಗೆಹ್ಲೋಟ್ ಪ್ರತಿಪಾದಿಸಿದರು. ’(ಅಟಲ್ ಬಿಹಾರಿ) ವಾಜಪೇಯಿ ಅವರ ಕಾಲದಲ್ಲಿ ಹೀಗಾಗುತ್ತಿರಲಿಲ್ಲ. ಆದರೆ ೨೦೧೪ರಿಂದ ಬಿಜೆಪಿಯಲ್ಲಿ ಹಟಮಾರಿತನ ಬಹಿರಂಗವಾಗಿ ಕಾಣಿಸಿಕೊಂಡಿದೆ. ಅವರು ಜನರನ್ನು ಧರ್ಮ ಮತ್ತು ಜಾತಿ ಆಧಾರದಲ್ಲಿ ವಿಭಜಿಸುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ. ಅವರ (ಬಿಜೆಪಿ) ಚಂತನೆ ಫ್ಯಾಸಿಸ್ಟ್ ಆಗಿದೆ ಎಂದು ಗೆಹ್ಲೋಟ್ ಹೇಳಿದರು.

ಬಿಜೆಪಿ ನಕಾರ: ಏನಿದ್ದರೂ, ಗೆಹ್ಲೋಟ್ ಆಪಾದನೆಯನ್ನು ನಿರಾಕರಿಸಿರುವ ಬಿಜೆಪಿ, ’ತಮ್ಮ ಆಂತರಿಕ ಘರ್ಷಣೆಯನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯ ಮೇಲೆ ಕುದುರೆವ್ಯಾಪಾರದ ಗೂಬೆ ಕೂರಿಸುವ ಸಂಚು ಹೆಣೆದಿದ್ದಾರೆ ಎಂದು ದೂರಿತು.

ಇದು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಆಂತರಿಕ ಬಣ ಕಚ್ಚಾಟ ಬಹಿರಂಗಕ್ಕೆ ಬಾರದಂತೆ ತಡೆಯಲು ಮುಖ್ಯಮಂತ್ರಿ ರೂಪಿಸಿದ ಕಾರ್ಯತಂತ್ರ ಇದು ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯವರು ಪಕ್ಷ ಬದಲಾಯಿಸುವ ದ್ರೋಹಿಗಳ ಹೆಸರು ಹೇಳಲಿಲ್ಲ. ಅವರು ಕಾಂಗ್ರೆಸ್ ಪಕ್ಷದ ಒಳಗಿನ ಕಚ್ಚಾಟಗಳನ್ನು ಮುಚ್ಚಿಡಲು ಬಿಜೆಪಿಯನ್ನು ಬಲಿಪಶು ಮಾಡುತ್ತಿದ್ದಾರೆ. ಇದು ಸಮರ್ಥನೀಯವಲ್ಲ ಎಂದು ಪೂನಿಯಾ ನುಡಿದರು.

ಶಾಸಕರು ಮತ್ತು ಬಿಜೆಪಿಯ ಕೇಂದ್ರ ನಾಯಕರ ಬಗ್ಗೆ ಮಾನಹಾನಿಕರ ಪದಗಳನ್ನು ಬಳಸುವ ಮೂಲಕ ಗೆಹ್ಲೋಟ್ ಅವರು ರಾಜಕೀಯ ಸಜ್ಜನಿಕೆಯ ಎಲ್ಲೆಗಳನ್ನು ಮೀರಿದ್ದಾರೆ ಎಂದೂ ಪೂನಿಯಾ ಟೀಕಿಸಿದರು. ಮೋದಿ ಮತ್ತು ಶಾ ಅವರನ್ನು ಟೀಕಿಸುವ ಮೂಲಕ ರಾಷ್ಟ್ರೀಯ ನಾಯಕನಾಗಲು ಗೆಹ್ಲೋಟ್ ಯತ್ನಿಸುತ್ತಿದ್ದಾರೆ ಎಂದೂ ಪೂನಿಯಾ ಹೇಳಿದರು.

No comments:

Advertisement