My Blog List

Tuesday, August 4, 2020

ಜಾಧವ್ ಪರ ವಕೀಲರ ನೇಮಕ: ಭಾರತಕ್ಕೆ ಪಾಕ್ ಸುಪ್ರೀಂ ಅವಕಾಶ

ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ

ಭಾರತಕ್ಕೆ ಪಾಕ್ ಸುಪ್ರೀಂಕೋರ್ಟ್ ಅವಕಾಶ

ನವದೆಹಲಿ: ಬೇಹುಗಾರಿಕೆ ಆರೋ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯನ್ನು ರಕ್ಷಿಸುವ ಸಲುವಾಗಿ ವಕೀಲರನ್ನು ನೇಮಿಸಲು ಭಾರತಕ್ಕೆ ಅವಕಾಶ ನೀಡಬೇಕು ಎಂದು 2020 ಆಗಸ್ಟ್ 03ರ ಸೋಮವಾರ ಆಜ್ಞಾಪಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು 2020 ಸೆಪ್ಟೆಂಬರ್ 3 ಕ್ಕೆ ಮುಂದೂಡಿತು.

ವಕೀಲರು ಪಾಕಿಸ್ತಾನ ಪ್ರಜೆಯಾಗಿರಬೇಕು ಎಂದು ಷರತ್ತು ವಿಧಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಜಾಧವ್ ಪರ ಕಾನೂನು ಪ್ರತಿನಿಧಿಯನ್ನು ನೇಮಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿತು.

ಪಾಕಿಸ್ತಾನದಲ್ಲಿ ವಕಾಲತ್ತು ನಡೆಸಲು ಅರ್ಹರಾಗಿರುವ ವಕೀಲರನ್ನು ತೊಡಗಿಸಿಕೊಳ್ಳಲು ಭಾರತ ಸರ್ಕಾರವನ್ನು ಮತ್ತೊಮ್ಮೆ ಸಂಪರ್ಕಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ ಎಂದು ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಮಾಧ್ಯಮಗಳಿಗೆ ತಿಳಿಸಿದರು.

ಪಾಕಿಸ್ತಾನಿ ಕಾನೂನು ತಂಡಕ್ಕೆ ಸಹಾಯ ಮಾಡಲು ಭಾರತೀಯ ವಕೀಲರಿಗೆ ಇಲ್ಲಿಯವರೆಗೆ ಯಾವುದೇ ಅವಕಾಶ ನೀಡಲಾಗಿಲ್ಲ ಎಂದುಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಕೀಲರನ್ನು ವ್ಯವಸ್ಥೆ ಮಾಡಲು ಭಾರತ ಸರ್ಕಾರಕ್ಕೆ ಮತ್ತು ಕುಲಭೂಷಣ್ ಜಾಧವ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಹೇಳಿತು. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ವಕೀಲರ ನೇಮಕಾತಿ ಪ್ರಸ್ತಾವವನ್ನು ತಿಳಿಸಲಾಗುವುದು ಎಂದು ಅವರು ಹೇಳಿದರು.

ಜಾಧವ್ ಪರ ಕಾನೂನು ಪ್ರತಿನಿಧಿಯನ್ನು ನೇಮಿಸುವಂತೆ ಕೋರಲು ಪಾಕಿಸ್ತಾನ ಸರ್ಕಾರ ಜುಲೈ ೨೨ ರಂದು ಇಸ್ಲಾಮಾಬಾದ್ ಹೈಕೋರ್ಟನ್ನು ಸಂಪರ್ಕಿಸಿತ್ತು.

ಅಂತಾರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ೨೦೧೯ ಜುಲೈ ೧೭ರಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ, ಐಸಿಜೆ ತೀರ್ಪಿನ ಬಳಿಕ, ಅದನ್ನು ಜಾರಿಗೆ ತರಲು ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆಯನ್ನು (೨೦೨೦) ಜಾರಿಗೆ ತರಲಾಗಿತ್ತು

ಎರಡನೇ ಅವಕಾಶವನ್ನುಸಂಪೂರ್ಣವಾಗಿ ಬಳಸಿಕೊಳ್ಳದಕಾರಣ, ಜುಲೈ ೧೭ ರಂದು ಪಾಕಿಸ್ತಾನವು ಜಾಧವ್ ಅವರಿಗೆ ಭಾರತದ ರಾಜತಾಂತ್ರಿಕ ಸಂಪರ್ಕಕ್ಕೆ ಮೂರನೇ ಬಾರಿಗೆ ಅವಕಾಶ ನೀಡಿತ್ತು.

ಜಾಧವ್ ಪ್ರಕರಣದ ಪರಿಣಾಮಕಾರಿ ಪುನರ್ ಪರಿಶೀಲನೆಗೆ ಪಾಕಿಸ್ತಾನವು ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದೆ ಎಂದು ಭಾರತ ಆರೋಪಿಸಿದೆ ಮತ್ತು ಹೆಚ್ಚಿನ ಪರಿಹಾರಗಳನ್ನು ಪಡೆಯಲು ತನ್ನ ಹಕ್ಕುಗಳನ್ನು ಕಾಯ್ದಿರಿಸಿದೆ ಎಂದು ಹೇಳಿದೆ.

ಮಾಜಿ ನೌಕಾ ಕಮಾಂಡರ್ ಜಾಧವ್ ಅವರನ್ನು ಸಂಪರ್ಕಿಸದಂತೆ ಇಸ್ಲಾಮಾಬಾದ್ ವ್ಯವಸ್ಥಿತವಾಗಿ ನಿರ್ಬಂಧಿಸಿದೆ, ಅವರ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಲ್ಲ ಮತ್ತು ಅವರಿಗೆ ವಿಧಿಸಲಾಗಿರುವ ಶಿಕ್ಷೆಯ ಪುನರ್ ಪರಿಶೀಲನೆ ಮಾಡುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿದ ಆದೇಶವನ್ನು ಉಲ್ಲಂಘಿಸಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ.

No comments:

Advertisement