My Blog List

Tuesday, October 6, 2020

 ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ

ಭಾರತಕ್ಕೆ ನೀಡಿದ್ದ ೨ನೇ ಗಡುವೂ ಮುಕ್ತಾಯ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗೂಢಚರ್ಯೆ ಆಪಾದನೆಯಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ವಕೀಲರನ್ನು ನೇಮಿಸಲು ಇಸ್ಲಾಮಾಬಾದ್ ಹೈಕೋರ್ಟ್ ಭಾರತಕ್ಕೆ ನೀಡಿದ್ದ ಎರಡನೇ ಗಡುವು ಕೂಡಾ 2020 ಅಕ್ಟೋಬರ್ 06ರ ಮಂಗಳವಾರ ಮುಕ್ತಾಯಗೊಂಡಿದೆ.

ಪಾಕಿಸ್ತಾನದ ಇಬ್ಬರು ಹಿರಿಯ ವಕೀಲರಾದ ಅಬಿದ್ ಹಸನ್ ಮಾಂಟೊ ಮತ್ತು ಮಖ್ದೂಮ್ ಅಲಿ ಖಾನ್ ಕ್ರಮವಾಗಿ ವೈದ್ಯಕೀಯ ಮತ್ತು ವೃತ್ತಿಪರ ಹಿನ್ನೆಲೆಯಲ್ಲಿ ಜಾಧವ್ ಪರ ಹಾಜರಾಗಲು ನಿರಾಕರಿಸಿದ್ದನ್ನು ಅನುಸರಿಸಿ ಇದೀಗ ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್ಸಿ) ಸ್ವತಃ ಪಾಕಿಸ್ತಾನದ ಇಬ್ಬರು ವಕೀಲರನ್ನು ನೇಮಿಸಬಹುದು ಎಂದು ಕಾನೂನು ಮೂಲಗಳು ಹೇಳಿವೆ.

ಸೆಪ್ಟೆಂಬರ್ ರಂದು ಐಎಚ್ಸಿ ಪ್ರಕರಣವನ್ನು ಎರಡನೇ ಬಾರಿಗೆ ಆಲಿಸಿತ್ತು ಮತ್ತು ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಲು ಭಾರತಕ್ಕೆ "ಮತ್ತೊಂದು ಅವಕಾಶವನ್ನು ನೀಡುವಂತೆ ಫೆಡರಲ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಐಎಚ್ಸಿಯ ವಿಶಾಲ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದು, ವಿಷಯದ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಭಾರತದಿಂದ ಇನ್ನೂ ಉತ್ತರ ಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಪ್ರಕರಣದ ಪರಿಣಾಮಕಾರಿ ಪುನರ್ ಪರಿಶೀಲನೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ೨೦೨೦ರಲ್ಲಿ ನೀಡಿದ ಆದೇಶ ಲಾಭವನ್ನು ಪಡೆಯಲು ತಾವು ಬಯಸುವುದಿಲ, ಬದಲಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥರ ಮುಂದೆ ಈಗಾಗಲೇ ಬಾಕಿ ಉಳಿದಿರುವ ತಮ್ಮ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಪರಿಗಣಿಸಬೇಕು ಎಂದು ಕೋರಿದ್ದಾರೆ ಎಂದು ಹೈಕೋರ್ಟಿಗೆ ಪಾಕಿಸ್ತಾನದ ಅಟಾರ್ನಿ ಜನರಲ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದ ಪುನರ್ ಪರಿಶೀಲನಾ ಸುಗ್ರೀವಾಜ್ಞೆಯನ್ನು ಸೆಪ್ಟೆಂಬರ್ನಲ್ಲಿ ಪಾಕಿಸ್ತಾನ ಸಂಸತ್ತು ನಾಲ್ಕು ತಿಂಗಳವರೆಗೆ ವಿಸ್ತರಿಸಿದ್ದು, ಜಾಧವ್ ಅವರಿಗೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಸುಗ್ರೀವಾಜ್ಞೆ ಸೆಪ್ಟೆಂಬರ್ ೧೭ ರಂದು ಮುಕ್ತಾಯಗೊಳ್ಳಲಿತ್ತು. ಇದಕ್ಕೂ ಮುನ್ನ ಜಾಧವ್ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಲು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ ಹೈಕೋರ್ಟಿಗೆ ಮನವಿ ಮಾಡಿತ್ತು.

ಗೂಢಚರ್ಯೆ ಆರೋಪದ ಮೇಲೆ ಜಾಧವ್ ಅವರನ್ನು ೨೦೧೬ರ ಮಾರ್ಚ್ ೩ರಂದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ೨೦೧೭ರಲ್ಲಿ ಮಿಲಿಟರಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು.

ಆಗಸ್ಟ್ ತಿಂಗಳಲ್ಲಿ ಮರಣದಂಡನೆ ವಿರುದ್ಧದ ಮೇಲ್ಮನವಿಗಾಗಿ ಜಾಧವ್ ಪರ ವಕೀಲರನ್ನು ನೇಮಿಸಬೇಕೆಂಬ ಸರ್ಕಾರದ ಕೋರಿಕೆಯ ಮೇರೆಗೆ ಮೂರು ಸದಸ್ಯರ ವಿಶಾಲ ಪೀಠವನ್ನು ಇಸ್ಲಾಮಾಬಾದ್ ಹೈಕೋರ್ಟ್ ರಚಿಸಿತ್ತು.

ಉಚಿತ ಮತ್ತು ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಜಾಧವ್ಗೆ ಭಾರತೀಯ ವಕೀಲ ಅಥವಾ ಕ್ವೀನ್ಸ್ ಕೌನ್ಸೆಲ್ ಅವರನ್ನು ನೇಮಿಸಬೇಕು ಎಂಬ ಭಾರತದ ಬೇಡಿಕೆಯನ್ನು ಕಳೆದ ತಿಂಗಳು ಪಾಕಿಸ್ತಾನ ತಿರಸ್ಕರಿಸಿತ್ತು. ಕ್ವೀನ್ಸ್ ಕೌನ್ಸೆಲ್ ನ್ಯಾಯವಾದಿ ಅಥವಾ ವಕೀಲರಾಗಿದ್ದು, ಲಾರ್ಡ್ ಚಾನ್ಸೆಲರ್ ಅವರ ಶಿಫಾರಸ್ಸಿನ ಮೇರೆಗೆ ಇಂಗ್ಲೆಂಡಿನ ರಾಣಿಗೆ ಕೌನ್ಸೆಲ್ ನೇಮಕಗೊಳ್ಳುತ್ತಾರೆ.

"ಪಾಕಿಸ್ತಾನದಲ್ಲಿ ಕಾನೂನು ಅಭ್ಯಾಸ ಮಾಡಲು ಪರವಾನಗಿ ಹೊಂದಿರುವ ನ್ಯಾಯಾಲಯದಲ್ಲಿ ಕಮಾಂಡರ್ ಜಾಧವ್ ಅವರನ್ನು ವಕೀಲರು ಮಾತ್ರ ಪ್ರತಿನಿಧಿಸಬಹುದು ಎಂದು ನಾವು ಅವರಿಗೆ ಪದೇ ಪದೇ ಹೇಳಿದ್ದೇವೆ. ಇದು ಇತರ ನ್ಯಾಯವ್ಯಾಪ್ತಿಯಲ್ಲಿ ಕಾನೂನು ಅಭ್ಯಾಸಕ್ಕೆ ಅನುಗುಣವಾಗಿರುತ್ತz’ ಎಂದು ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಸಮಯದಲ್ಲಿ ಹೇಳಿದ್ದರು. ಭಾgತದ ಸುಪ್ರೀಂ ಕೋರ್ಟ್ ಕೂಡಾ ತನ್ನ ಒಂದು ತೀರ್ಪಿನಲ್ಲಿ ವಿದೇಶಿ ವಕೀಲರು ದೇಶದೊಳಗೆ ಕಾನೂನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ ಎಂದು ಅವರು ಪ್ರತಿಪಾದಿಸಿದರು.

ಐಸಿಜೆ ತೀರ್ಪನ್ನು ಮನಃಪೂರ್ವಕವಾಗಿ ಅನುಷ್ಠಾನಗೊಳಿಸುವ ತನ್ನ ಜವಾಬ್ದಾರಿಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ ಎಂದು ಭಾರತ ಆಪಾದಿಸಿದೆ.

"ಇದು ಇನ್ನೂ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಇದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸುವುದು, ಕುಲಭೂಷಣ್ ಜಾಧವ್ ಅವರಿಗೆ ಬೇಷರತ್ತಾದ ಮತ್ತು ಅಡೆತಡೆಯಿಲ್ಲದ ರಾಜತಾಂತ್ರಿಕ ಸಂಪರ್ಕ ಒದಗಿಸುವುದು ಮತ್ತು ಉಚಿತ ಮತ್ತು ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ವಕೀಲ ಅಥವಾ ಕ್ವೀನ್ಸ್ ಕೌನ್ಸೆಲ್ ಸೇರಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಕಳೆದ ತಿಂಗಳು ಹೇಳಿದ್ದಾರೆ.

ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ನಿರಾಕರಿಸಿದ್ದಕ್ಕಾಗಿ ಮತ್ತು ಮಿಲಿಟರಿ ನ್ಯಾಯಾಲಯವು ಅವರಿಗೆ ನೀಡಿದ್ದ ಮರಣದಂಡನೆಯನ್ನು ಪ್ರಶ್ನಿಸಿ ೨೦೧೭ ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು (ಐಸಿಜೆ) ಸಂಪರ್ಕಿಸಿತ್ತು.

ಹೇಗ್ ಮೂಲದ ಐಸಿಜೆ ೨೦೧೯ ಜುಲೈಯಲ್ಲಿ ಪಾಕಿಸ್ತಾನವು ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯ "ಪರಿಣಾಮಕಾರಿ ವಿಮರ್ಶೆ ಮತ್ತು ಮರುಪರಿಶೀಲನೆ" ಯನ್ನು ಕೈಗೊಳ್ಳಬೇಕು ಮತ್ತು ಹೆಚ್ಚಿನ ವಿಳಂಬವಿಲ್ಲದೆ ಜಾಧವ್ ಅವರಿಗೆ ಭಾರತೀಯ ರಾಜತಾಂತ್ರಿಕ ಸಂಪರ್ಕ ಒದಗಿಸಬೇಕು ಎಂದು ತೀರ್ಪು ನೀಡಿತ್ತು.

ಐಸಿಜೆ ಆದೇಶಕ್ಕೆ ವಿರುದ್ಧವಾಗಿ ಜಾಧವ್ ಅವರ ಮರಣದಂಡನೆ ಶಿಕ್ಷೆಯ ವಿರುದ್ಧ ಲಭ್ಯವಿರುವ ಕಾನೂನು ಪರಿಹಾರಗಳನ್ನು ನಿರಾಕರಿಸುವ ಮೂಲಕ ಭಾರತವು "ವಿಡಂಬನಾತ್ಮಕ" ವಿಧಾನವನ್ನು ಅನುಸರಿಸಿದೆ ಎಂದು ಪಾಕಿಸ್ತಾನ ದೂಷಿಸಿದೆ.

No comments:

Advertisement