Thursday, October 15, 2020

ಎಲ್‌ಜೆಪಿ ವಿರೋಧ ನಿತೀಶ ಕುಮಾರ್ ವರ್ತನೆಗೆ: ಚಿರಾಗ್

 ಎಲ್‌ಜೆಪಿ ವಿರೋಧ ನಿತೀಶ ಕುಮಾರ್ ವರ್ತನೆಗೆ: ಚಿರಾಗ್

ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀ ಕುಮಾರ್ ಅವರ ಜನತಾದಳದಿಂದ (ಯು) ಬೇರ್ಪಡೆಗೊಳ್ಳಲು ವಿಧಾನಸಭಾ ಚುನಾವಣೆಗಾಗಿ ಸೀಟು ಹಂಚಿಕೆ ಕಾರಣವಲ್ಲ ಎಂಬುದಾಗಿ 2020 ಅಕ್ಟೋಬರ್ 15ರ ಗುರುವಾರ ಇಲ್ಲಿ ಸ್ಪಷ್ಟ ಪಡಿಸಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ನಿತೀಶ ಕುಮಾರ್ ವರ್ತನೆಯೇ ನಿರ್ಧಾರಕ್ಕೆ ಕಾರಣ ಎಂದು ಹೇಳಿದರು..

ನಾವು ನಿತೀಶ ಕುಮಾರ್ ಅವರ ರಾಜಕೀಯವನ್ನು ವಿರೋಧಿಸುತ್ತೇವೆ ಎಂದು ಚಿರಾಗ್ ವಿವರಿಸಿದರು.

ಕಳೆದ ವರ್ಷ ಎನ್‌ಡಿಎಗೆ ಮರಳಿದ ಬಳಿಕ ಅನಿವಾರ್ಯವಾಗಿ ತಮ್ಮ ಪಕ್ಷವು ಜೆಡಿಯು ಜೊತೆಗೆ ಮೈತ್ರಿ ಮಾಡಿಕೊಂಡು ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಹೋರಾಡಿತು, ಆದರೆ ಚುನಾವಣೆಯಲ್ಲಿ ನಿತೀಶ ಕುಮಾರ್ ಎಲ್‌ಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದರು. ಇದು ಪಕ್ಷ ಸಮ್ಮಿಶ್ರ ಧರ್ಮದ ಉಲ್ಲಂಘನೆ ಎಂದು ಎಲ್‌ಜೆಪಿ ನಾಯಕ ನುಡಿದರು.

ಎಲ್‌ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಇತ್ತೀಚೆಗೆ ಕಳೆದುಕೊಂಡಿರುವ ೩೭ ವರ್ಷದ ಚಿರಾಗ್, ಬಿಹಾರದ ಮುಖ್ಯಮಂತ್ರಿ ಕಳೆದ ವರ್ಷ ಜೆಡಿಯು ಮುಖ್ಯಸ್ಥರನ್ನು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕರೆಸಿಕೊಂಡಾಗ ಅಹಂಕಾರಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.

ರಾಮ್ ವಿಲಾಸ ಪಾಸ್ವಾನ್ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ತಮ್ಮೊಂದಿಗೆ ಬರುವಂತೆ ವಿನಂತಿಸಿದ್ದರು. ಆದರೆ ಮುಹೂರ್ತ ಮುಗಿದ ಬಳಿಕ ನಿತೀಶ ಕುಮಾರ್ ಆಗಮಿಸಿದರು. ಇಷ್ಟಲ್ಲದೆ ಎಲ್‌ಜೆಪಿಯು ಕೇವಲ ಇಬ್ಬರು ಸದಸ್ಯರನ್ನು ಹೊಂದಿರುವುದರಿಂದ ಜೆಡಿಯು ಬೆಂಬಲವಿಲ್ಲದೆ ನನ್ನ ತಂದೆ ರಾಜ್ಯಸಭೆಗೆ ಆಯ್ಕೆಯಾಗಲು ಸಾಧ್ಯವಲ್ಲ ಎಂದು ಅಪಹಾಸ್ಯ ಮಾಡಿದ್ದರು ಎಂದು ಚಿರಾಗ್ ಪಾಸ್ವಾನ್ ಹೇಳಿದರು.

ಇಂತಹ ಅಹಂಕಾರಿ ವರ್ತನೆಯನ್ನು ಯಾರಾದರೂ ತನ್ನ ತಂದೆಯ ಎದುರು ತೋರಿಸಿದಾಗ ಯಾರೇ ಪುತ್ರ ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ನನ್ನ ತಂದೆಗೆ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಸ್ವತಃ ರಾಜ್ಯಸಭಾ ಸ್ಥಾನದ ಭರವಸೆ ನೀಡಿದ್ದರು ಎಂಬುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿತ್ತು ಎಂದು ಪಾಸ್ವಾನ್ ನುಡಿದರು.

ಎನ್‌ಡಿಎಯ ಕಿರಿಯ ಪಕ್ಷಕ್ಕೆ ನ್ಯಾಯಯುತವಾದ ಸೀಟುಗಳನ್ನು ನಿರಾಕರಿಸಲು ಪ್ರಯತ್ನಿಸಿದ ನಂತರ ಜೆಡಿಯು ವಿರುದ್ಧ ದಂಗೆಯ ಬ್ಯಾನರ್ ಎತ್ತಲಾಯಿತು ಎಂಬುದನ್ನು ಎಲ್‌ಜೆಪಿ ಮುಖ್ಯಸ್ಥ ತಳ್ಳಿಹಾಕಿದರು. "ನಾನು ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರನ್ನು ಇತ್ತೀಚಿನ ದಿನಗಳಲ್ಲಿ ಬಹಳ ಬಾರಿ ಭೇಟಿ ಮಾಡಿದ್ದೇನೆ. ಸೀಟು ಹಂಚಿಕೆ ಸಮಸ್ಯೆ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ ಎಂದು ಅವರು ಹೇಳಿದರು.

"ಎಲ್‌ಜೆಪಿ ಎಂದಿಗೂ ನಿತೀಶ ಕುಮಾರ್ ಶೈಲಿಯ ರಾಜಕೀಯದ ಅಭಿಮಾನಿಯಾಗಿರಲಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಮಹಾದಾಲಿತ ಉಪ-ಗುಂಪನ್ನು ರಚಿಸುವ ಮೂಲಕ ದಲಿತರಿಗೆ ಹಾನಿ ಮಾಡಿದ್ದಾರೆ ಎಂದು ಪಾಸ್ವಾನ್ ಹೇಳಿದರು.

ಬಿಹಾರ ಮುಖ್ಯಮಂತ್ರಿಯ ಏಳು ನಿಶ್ಚಯಗಳನ್ನು (ಸಾತ್ ನಿಶ್ಚಯ್) ಕೂಡಾ ಎಲ್‌ಜೆಡಿ ಅಧ್ಯಕ್ಷರು ಟೀಕಿಸಿದರು. ದೇಶದ ಉಳಿದ ಭಾಗಗಳು ತ್ವರಿತವಾಗಿ ತುಂಬಾ ಪ್ರಗತಿ ಸಾಧಿಸುತ್ತಿವೆ. ಇಲ್ಲಿ ಅವರು ನಲ್ಲಿ ನೀರು ಮತ್ತು ಕಾಂಕ್ರೀಟ್ ರಸ್ತೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

"ಭ್ರಷ್ಟಾಚಾರ, ಅಪರಾಧ ಮತ್ತು ಕೋಮುವಾದಕ್ಕೆ ಶೂನ್ಯ ಸಹನೆ ಘೋಷಿಸಲು ಮುಖ್ಯಮಂತ್ರಿ ಎಂದಿಗೂ ಸುಸ್ತಾಗುವುದಿಲ್ಲ. ರಾಜ್ಯದ ಪ್ರತಿಯೊಂದು ಸರ್ಕಾರಿ ಯೋಜನೆಗಳ ಅನುಷ್ಠಾದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದು ಮುಖ್ಯಮಂತ್ರಿಗಳ ಮುಖಕ್ಕೇ ರಾಚುತ್ತದೆ. ಅತ್ಯಾಚಾರದ ನಂತರ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕುವಂತಹ ಭಯಾನಕ ಘಟನೆ ಬಕ್ಸಾರ್ ಜಿಲ್ಲೆಯಲ್ಲಿ ನಡೆಯಿತು. ಆಮೇಲೆ, ಕೋಮುವಾದ? ನಿತ್ಯಾನಂದ ರಾಯ್ ಅವರ ಹೇಳಿಕೆಗಳ ಬಗ್ಗೆ ನಿತೀಶ ಕುಮಾರ್ ಏನು ಹೇಳುತ್ತಾರೆ? ಉತ್ತರ ನೀಡಲಿ. ನಮ್ಮಂತಲ್ಲ, ಅವರು ಈಗಲೂ ಬಿಹಾರದ ಎನ್‌ಡಿಎಯ ಭಾಗವಾಗಿದ್ದಾರೆ ಎಂದು ಚಿರಾಗ್ ಹೇಳಿದರು.

ಕೇಂದ್ರ ಗೃಹ ರಾಜ್ಯ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ನಿತ್ಯಾನಂದ ರಾಯ್ ಅವರು ತಮ್ಮ ಇತ್ತೀಚಿನ ರ್‍ಯಾಲಿಯೊಂದರಲ್ಲಿ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ವಿರೋಧದ ಗೆಲುವು ಬಿಹಾರವನ್ನು ಕಾಶ್ಮೀರ ಮೂಲದ ಭಯೋತ್ಪಾದಕರಿಗೆ ಸುರಕ್ಷಿತ ತಾಣವನ್ನಾಗಿ ಮಾಡಬಹುದು ಎಂಬುದಾಗಿ ಹೇಳುವ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ. ಅಲ್ಪಸಂಖ್ಯಾತರ ವಿರುದ್ಧ ಮತದಾರರನ್ನು ಧ್ರುವೀಕರಿಸುವ ಪ್ರಯತ್ನ ಇದು ಎಂದು ವಿರೋಧ ಪಕ್ಷಗಳು ಇದರ ವಿರುದ್ಧ ಕಿಡಿ ಕಾರಿವೆ.

No comments:

Advertisement