My Blog List

Wednesday, December 23, 2020

ಡಿಡಿಸಿ: ಗುಪ್ಕರ್ ಮೈತ್ರಿಕೂಟಕ್ಕೆ ಜಯ, ಏಕೈಕ ದೊಡ್ಡ ಪಕ್ಷ ಬಿಜೆಪಿ

ಡಿಡಿಸಿ: ಗುಪ್ಕರ್ ಮೈತ್ರಿಕೂಟಕ್ಕೆ ಜಯ,  ಏಕೈಕ ದೊಡ್ಡ ಪಕ್ಷ ಬಿಜೆಪಿ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ಬಳಿಕ ನಡೆದ ಮೊದಲ ಚುನಾವಣೆಯಾದ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚೊಚ್ಚಲ ಚುನಾವಣೆಯಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಮೈತ್ರಿಕೂಟವಾದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಪ್ರಚಂಡ ಜಯಗಳಿಸಿದೆ.ಆದರೂ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ (ಪಿಸಿ), ಪೀಪಲ್ಸ್ ಮೂವ್‌ಮೆಂಟ್ (ಪಿಎಂ), ಸಿಪಿಐ (ಎಂ), ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಮತ್ತು ಕಾಂಗ್ರೆಸ್  ಒಟ್ಟಿಗೆ  ೧೧೦ ಸ್ಥಾನಗಳನ್ನು ಗೆದ್ದಿವೆ. ಪಕ್ಷಗಳ ಮೈತ್ರಿಕೂಟದ ವಿರುದ್ಧ ಹೋರಾಟ ನೀಡಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ೭೫ ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಪಿಎಜಿಡಿಯ ಪ್ರಭಾವವು ಹೆಚ್ಚಾಗಿ ಕಾಶ್ಮೀರ ಪ್ರದೇಶಕ್ಕೆ ಸೀಮಿತವಾಗಿತ್ತು. ಅದರ ಶೇಕಡಾ ೭೬ ಸ್ಥಾನಗಳು ಕಾಶ್ಮೀರ ಕಣಿವೆ ಪ್ರದೇಶದಿಂದಲೇ ಬಂದಿವೆ, ಶೇಕಡಾ ೨೪ರಷ್ಟು ಸ್ಥಾನಗಳು ಮಾತ್ರ ಜಮ್ಮು ಪ್ರದೇಶದಿಂದ ಬಂದವು. ಜಮ್ಮು  ಪ್ರದೇಶದಲ್ಲಿ ಗುಪ್ಕರ್ ಮೈತ್ರಿಕೂಟದ ಮಿತ್ರ ಪಕ್ಷಗಳು ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮೈತ್ರಿಕೂಟದ ಮುಖ್ಯ ವಿರೋಧಿಗಳು ಬಿಜೆಪಿ ಮತ್ತು ಹೊಸದಾಗಿ ರೂಪುಗೊಂಡ ಅಪ್ನಿ ಪಕ್ಷ, ಇದು ಪಿಡಿಪಿ ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದಲ್ಲಿದೆ, ಅವರು ಸಂವಿಧಾನದ ವಿಧಿ ೩೭೦ ಬೇಡಿಕೆಯಿಂದ ಆಚೆಗೆ ಸಾಗಿ ಬರಬೇಕು ಎಂದು ಸಲಹೆ ನೀಡುತ್ತಾರೆ.

ಬಿಜೆಪಿ ಜಮ್ಮು ಪ್ರದೇಶದಲ್ಲಿ ತನ್ನ ಬೇರನ್ನು ಭದ್ರವಾಗಿ ಉಳಿಸಿಕೊಂಡಿದೆ ಮತ್ತು ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಶ್ಮೀರದಲ್ಲಿ ತನ್ನ ಖಾತೆಯನ್ನು ತೆರೆದಿದೆ. ದಕ್ಷಿಣ ಕಾಶ್ಮೀರದ ಕಾಕಪೋರಾದಲ್ಲಿ ಒಂದು, ಶ್ರೀನಗರದ ಖನ್ಮೋದಲ್ಲಿ ಒಂದು ಮತ್ತು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯ ತುಲೇಲ್ ಪ್ರದೇಶದಲ್ಲಿ ಇನ್ನೊಂದು ಹೀಗೆ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಶ್ಮೀರ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತೀವ್ರ ಪ್ರಯತ್ನ ಮಾಡಿತು ಮತ್ತು ಮಾಜಿ ನಾಗರಿಕ ವಿಮಾನಯಾನ ಸಚಿವ ಶಾನವಾಜ್ ಹುಸೇನ್ ಅವರಂತಹ ತಾರಾ ಪ್ರಚಾರಕರನ್ನು ನಿಯೋಜಿಸಿತ್ತು, ಅವರು ಸುಮಾರು ಒಂದು ತಿಂಗಳ ಕಾಲ ಕಣಿವೆಯಲ್ಲಿ ಶಿಬಿರ ಹೂಡಿದ್ದರು.

ಕಣಿವೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳ ಸಂಖ್ಯೆ ದೊಡ್ಡದಾಗಿರದೆ ಇರಬಹುದು ಆದರೆ ಕಣಿವೆಗೆ ನುಗ್ಗಿರುವುದು ಹಲವು ವಿಧಗಳಲ್ಲಿ ಗಮನಾರ್ಹವಾಗಿದೆ.

ಕಣದಲ್ಲಿ ,೨೦೦ ಅಭ್ಯರ್ಥಿಗಳಿದ್ದು, ಪೈಕಿ ಪಿಎಜಿಡಿ ಸದಸ್ಯರಾದ ಎನ್‌ಸಿ ೧೬೯, ಪಿಡಿಪಿ ೬೮, ಅಪ್ನಿ ಪಾರ್ಟಿ ೧೬೬, ಕಾಂಗ್ರೆಸ್ ೧೫೭, ಪೀಪಲ್ಸ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಮೂವ್‌ಮೆಂಟ್ ತಲಾ ೧೧, ಸಿಪಿಐ (ಎಂ) ಎಂಟು, ಎಲ್‌ಜೆಪಿ ಆರು ಮತ್ತು ಪ್ಯಾಂಥರ್ಸ್ ಪಾರ್ಟಿ ೫೪. ಹಾಗೂ ಇವುಗಳಿಗೆ ವಿರುದ್ಧವಾಗಿ ಬಿಜೆಪಿ ೨೩೫ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ,೨೩೮ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಜಮ್ಮು - ಕಾಶ್ಮೀರದ ರಾಜಕೀಯದ ವಿಭಜಿತ ದೃಶ್ಯವದ ಆಸಕ್ತಿದಾಯಕ ಕಥೆಯನ್ನು ಸಂಖ್ಯೆಗಳು ನಿರೂಪಿಸುತ್ತವೆ. ನ್ಯಾಷನಲ್ ಕಾನ್ಫರೆನ್ಸ್ ೬೭ ಸ್ಥಾನ, ಪಿಡಿಪಿ ೨೭, ಕಾಂಗ್ರೆಸ್ ೨೬, ಪೀಪಲ್ಸ್ ಕಾನ್ಫರೆನ್ಸ್ , ಸಿಪಿಐ (ಎಂ) ಮತ್ತು ಅಪ್ನಿ ಪಕ್ಷ ೧೨ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಪಿಎಜಿಡಿಯ ಭಾಗವಾಗಿರುವ ಜಮ್ಮುನಲ್ಲಿ ಜೆ & ಕೆ ಪೀಪಲ್ಸ್ ಮೂವ್ ಮೆಂಟ್, ಅವಾಮಿ ನ್ಯಾಷನಲ್ ಕಾನ್ಫರೆನ್ಸ್, ಪ್ಯಾಂಥರ್ಸ್ ಪಾರ್ಟಿ ಸೇರಿದಂತೆ ಸಣ್ಣ ಪಕ್ಷಗಳು ಇತರ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದವು.

ಚುನಾವಣೆಯಲ್ಲಿ ಮತ್ತೊಂದು ಮಹತ್ವದ ಪಾಲನ್ನು ಪಕ್ಷೇತರ ಅಭ್ಯರ್ಥಿಗಳು ತೆಗೆದುಕೊಂಡಿದ್ದು, ಒಟ್ಟು ೫೦ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಶ್ರೀನಗರದ ೧೪ ಕ್ಷೇತ್ರಗಳಲ್ಲಿ ಸ್ವತಂತ್ರರು ಏಳು ಸ್ಥಾನಗಳನ್ನು ಗೆದ್ದರು, ಬಿಜೆಪಿಗೆ ಶ್ರೀನಗರ ಸ್ಥಾನವನ್ನು ಗೆಲ್ಲಿಸಿಕೊಟ್ಟ ಇಜಾಜ್ ಹುಸೇನ್ ರಾಥರ್, ಬಿಜೆಪಿ ಯುವ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ಪಕ್ಷಕ್ಕೆ ಪಶ್ಚಿಮ ಬಂಗಾಳದ ಉಸ್ತುವಾರಿಗಳಲ್ಲಿ ಒಬ್ಬರು.

"ಬಿಜೆಪಿಯನ್ನು ಸೋಲಿಸಲು ಅನೇಕ ರಾಜಕೀಯ ಪಕ್ಷಗಳು ಒಗ್ಗೂಡಬೇಕಾಗಿರುವುದು ನಾಚಿಕೆಗೇಡಿನ ಸಂಗತಿ ಮತ್ತು ನಾವು ಕಾಶ್ಮೀರದಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಸಹ, ನಮ್ಮ ಪಕ್ಷವು ಕಣಿವೆಯಲ್ಲಿ ಮಹತ್ವದ ಛಾಪು ಮೂಡಿಸಿದೆ ಎಂದು ನಾನು ನಂಬುತ್ತೇನೆ" ಎಂದು ಬಿಜೆಪಿ ಮಾಧ್ಯಮ ಉಸ್ತುವಾರಿ  ಮಂಜೂರ್ ಭಟ್ ಹೇಳಿದರು.

ಹೆಚ್ಚು ತೊಂದರೆಗೀಡಾದ ಪ್ರದೇಶಗಳಲ್ಲಿ ಒಂದಾಗಿರುವ ಪುಲ್ವಾಮಾ ಜಿಲ್ಲೆಯೂ ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿತು. ಪಿಡಿಪಿ ೧೪ ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ, ನಾಲ್ಕು ಸ್ಥಾನಗಳನ್ನು ಪಕ್ಷೇತರರು ಪಡೆದುಕೊಂಡರು ಮತ್ತು ಒಂದು ಸ್ಥಾನ ಬಿಜೆಪಿಗೆ ಸಿಕ್ಕಿತು. ಪುಲ್ವಾಮಾ ೨೦೧೯ ಫೆಬ್ರವರಿಯಲ್ಲಿ ೪೦ ಸಿಆರ್‌ಪಿಎಫ್ ಸೈನಿಕರು ತಮ್ಮ ಬೆಂಗಾವಲು ಮೇಲೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತರಾದಾಗ ಸುದ್ದಿಯ ಪಟ್ಟಾಗ ಮುಂಚೂಣಿಗೆ ಬಂದಿತ್ತು. ಕುತೂಹಲಕಾರಿಯಾಗಿ, ಯುವ ಬಾಂಬರ್ ಆದಿಲ್ ದಾರ್‌ನನ್ನು ಪ್ರಶಂಸಿಸಿದ್ದ  ಪ್ರದೇಶದಿಂದ ಬಿಜೆಪಿ ವಿಜಯ ಸಾಧಿಸಿತು.

No comments:

Advertisement