My Blog List

Friday, December 4, 2020

ರೈತರ ಬೇಡಿಕೆ ಪರಿಗಣನೆ: ಕೇಂದ್ರ ಕೃಷಿ ಸಚಿವ ತೋಮರ್

 ರೈತರ ಬೇಡಿಕೆ ಪರಿಗಣನೆ: ಕೇಂದ್ರ ಕೃಷಿ ಸಚಿವ ತೋಮರ್

ನವದೆಹಲಿ: ಮೂರು ಕೃಷಿ ಕಾಯೆಗಳನ್ನು ವಿರೋಧಿಸಿ ಒಂಬತ್ತು ದಿನಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಂದುವರೆದಿರುವಂತೆಯೇ ಸರ್ಕಾರವು ರೈತರ ಬೇಡಿಕೆಗಳನ್ನು ಪರಿಗಣಿಸುತ್ತಿದೆ ಮತ್ತು ಮಾತುಕತೆಯ ಮೂಲಕ ಪರಿಹಾರವನ್ನು ಬಯಸಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ 2020 ಡಿಸೆಂಬರ್ 04ರ ಶುಕ್ರವಾರ ಇಲ್ಲಿ ಹೇಳಿದರು. ಇದೇ ವೇಳೆಗೆ ಚಳವಳಿಯ ವಿಚಾರ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಇಡೀ ಚಳವಳಿಯನ್ನು ರಾಜಕೀಯಗೊಳಿಸಬೇಡಿ ಎಂದು ಸಚಿವರು ಎಲ್ಲ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಸರ್ಕಾರದ ಉದ್ದೇಶ ಬಹಳ ಸ್ಪಷ್ಟವಾಗಿದೆ, ಎಂಎಸ್ಪಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅವರು ನುಡಿದರು.

ನಿರಂತರ ಚರ್ಚೆ ನಡೆಯುತ್ತಿದೆ, ಉಭಯರೂ ಕೆಲವು ಅಂಶಗಳನ್ನು ಒಪ್ಪಿಕೊಂಡಿದ್ದಾರೆ. ಭಾರತ ಸರ್ಕಾರ ರೈತ ಸಂಘಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಸಭೆ ಸಕಾರಾತ್ಮಕ ದಾರಿಯಲ್ಲಿ ಸಾಗಿದೆ. ಶನಿವಾರ ನಾವು ಮತ್ತೆ ಭೇಟಿಯಾಗುತ್ತೇವೆ. ನಾವು ಪರಿಹಾರವನ್ನು ಪಡೆಯುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದು ಸಚಿವರು ವಿಶ್ವಾಸ ವ್ಯಕ್ತ ಪಡಿಸಿದರು.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿ-ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಮತ್ತು ಕೇಂದ್ರ ಸರ್ಕಾರದ ನಡುವೆ ಶನಿವಾರದ ಮತ್ತೊಂದು ಸುತ್ತಿನ ಚರ್ಚೆ ವಿಫಲವಾದರೆ ಹೆಚ್ಚಿನ ರಸ್ತೆಗಳನ್ನು ನಿರ್ಬಂಧಿಸಿ, ರಾಷ್ಟ್ರ ರಾಜಧಾನಿಗೆ ಆಹಾರ ಉತ್ಪನ್ನಗಳ ಸರಬರಾಜನ್ನು ಉಸಿರುಗಟ್ಟಿಸುವ ಮೂಲಕ ಪ್ರತಿಭಟನೆಯನ್ನು ಹೆಚ್ಚಿಸುವುದಾಗಿ ಎಚ್ಚರಿಸಿದ್ದಾರೆ.

ಸುಪ್ರೀಂಕೋರ್ಟಿಗೆ ಅರ್ಜಿ

ಮಧ್ಯೆ, ದೆಹಲಿ ಗಡಿಯಿಂದ ಪ್ರತಿಭಟನಾ ನಿರತ ರೈತರನ್ನು ತಕ್ಷಣ ತೆರವುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿಯೊಂದನ್ನು ಸಲ್ಲಿಸಲಾಗಿದೆ.

"ತುರ್ತು / ವೈದ್ಯಕೀಯ ಸೇವೆಗಳಿಗೆ ಅಡ್ಡಿಯುಂಟುಮಾಡಲು ರಸ್ತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ದೆಹಲಿ ಗಡಿಯಲ್ಲಿ ರೈತರ ಸಾಮೂಹಿಕ ಸಭೆಯನ್ನು ತೆರವುಗೊಳಿಸಬೇಕು ಅಥವಾ ಚದುರಿಸಲು ನಿರ್ದೇಶನ ನೀಡಬೇಕು. ಪ್ರತಿಭಟನೆಯಿಂದ ದೆಹಲಿಗೆ ಬರುವ ಅನೇಕ ಮಾರ್ಗಗಳು ಮುಚ್ಚಿದ್ದು ಅಗತ್ಯ ಪೂರೈಕೆಗೆ ಅಡ್ಡಿಯಾಗುತ್ತಿದೆ. ಅಲ್ಲದೆ ಇದರಿಂದಾಗಿ ಕೋವಿಡ್ -೧೯ ಸಾಂಕ್ರಾಮಿಕದ ಸಮುದಾಯ ಪ್ರಸರಣವಾಗುವ ಭೀತಿಯೂ ಇದೆ ಎಂದು ಅರ್ಜಿ ಹೇಳಿದೆ.

"ಕೊರೊನಾವೈರಸ್ ಸಾಂಕ್ರಾಮಿಕ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ತಡೆಗಟ್ಟುವ ದೃಷ್ಟಿಯಿಂದ, ಸಭೆಯನ್ನು ತೆರವುಗೊಳಿಸುವುದು ಬಹಳ ಅವಶ್ಯಕವಾಗಿದೆ" ಎಂದು ಮನವಿ ತಿಳಿಸಿದೆ.

" ಪ್ರತಿಭಟನೆಯು ಎಲ್ಲಾ ತುರ್ತು / ವೈದ್ಯಕೀಯ ಸೇವೆಗಳ ರಸ್ತೆಗಳನ್ನು ಮತ್ತಷ್ಟು ನಿರ್ಬಂಧಿಸುತ್ತಿದೆ, ಇದು ದೆಹಲಿಯಲ್ಲಿ ಕೊರೋನವೈರಸ್ ರೋಗ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವುದರಿಂದ ಮತ್ತು ಜನರು ಗುಂಪುಗೂಡಿರುವುದರಿಂದ ಇನ್ನಷ್ಟು ಹರಡುವ ಸಾಧ್ಯತೆ ಇದೆ. ದೆಹಲಿಯ ದೊಡ್ಡ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಇತರ ರಾಜ್ಯಗಳ ಜನರಿಗೂ ತೊಂದರೆಯಾಗುತ್ತಿದೆ ಎಂದೂ ಅರ್ಜಿ ಹೇಳಿದೆ.

ಗುರುವಾರ, ಕೇಂದ್ರ ಸರ್ಕಾರ ಮತ್ತು ವಿಜ್ಞಾನ ಭವನದಲ್ಲಿ ರೈತರ ಪ್ರತಿನಿಧಿಗಳ ನಡುವಿನ ನಾಲ್ಕನೇ ಸುತ್ತಿನ ಮಾತುಕತೆ ಯಾವುದೇ ತೀರ್ಮಾನಕ್ಕೆ ಬರಲಿಲ್ಲ, ಆದರೆ ರೈತರ ಕೆಲವು ಬೇಡಿಕೆಗಳ ಬಗ್ಗೆ ಸರ್ಕಾರ ತನ್ನ ನಿಲುವನ್ನು ಮೃದುಗೊಳಿಸಿದೆ. ಆದಾಗ್ಯೂ, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೆ ಪ್ರತಿಭಟನೆಯನ್ನು ನಿಲ್ಲಿಸಲು ರೈತರು ನಿರಾಕರಿಸಿದ್ದಾರೆ. ಮತ್ತೊಂದು ಸುತ್ತಿನ ಚರ್ಚೆಯನ್ನು ಶನಿವಾರ ಮಧ್ಯಾಹ್ನ ಗಂಟೆಗೆ ನಿಗದಿಪಡಿಸಲಾಗಿದೆ.

"ಸರ್ಕಾರವು ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಹೊಸ ಕರಡನ್ನು ರೂಪಿಸಬೇಕೆಂದು ರೈತರು ಬಯಸುತ್ತಾರೆ. ಪ್ರಸ್ತುತ, ಇದು ಕಾರ್ಪೊರೇಟ್ಗಳಿಗೆ ಅನುಕೂಲಕರವಾದ ಕಾಯ್ದೆಯಾಗಿದೆ. ಕಾನೂನು ರೈತರಿಗಾಗಿ ಇರಬೇಕು ಮತ್ತು ಅವರನ್ನು ಸಂಪರ್ಕಿಸಬೇಕು. ಒಂದೋ ಸರ್ಕಾರ ನಾಳೆ ನಮ್ಮ ಮನವಿಯನ್ನು ಒಪ್ಪುತ್ತದೆ ಅಥವಾ ನಾವು ಪ್ರತಿಭಟಿಸುತ್ತಲೇ ಇರುತ್ತೇವೆ. ಹೆಚ್ಚಿನ ರೈತರು ಇಲ್ಲಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಗಡಿಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತ್ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕೈಟ್ ನುಡಿದರು.

ಹೆಸರು ಹೇಳಲು ಇಚ್ಛಿಸದ ಒಕ್ಕೂಟದ ಇನ್ನೊಬ್ಬ ಹಿರಿಯ ಸದಸ್ಯ, ಬೇಡಿಕೆಗಳನ್ನು ಈಡೇರಿಸದಿದ್ದರೆ, ರೈತರು ಜನವರಿ ೨೬ ಗಣರಾಜ್ಯ ಪರೇಡಿಗೆ ಸಾಕ್ಷಿಯಾಗಲು ಮತ್ತು ತಮ್ಮ ಟ್ರಾಕ್ಟರುಗಳನ್ನು ರಾಷ್ಟ್ರ ರಾಜಧಾನಿಯ ರಸ್ತೆಗಳಲ್ಲಿ ಓಡಿಸಲು ಮುಂದಾಗಲಿದ್ದಾರೆ ಎಂದು ಹೇಳಿದರು.

ತಾರೈ ಕಿಸಾನ್ ಅಧ್ಯಕ್ಷ ಸಂಗತನ್ ತೇಜಿಂದರ್ ಸಿಂಗ್ ವಿರ್ಕ್ ಅವರು ಇದೇ ಭಾವನೆಯನ್ನು ಪ್ರತಿಧ್ವನಿಸಿದರು, "ಸರ್ಕಾರ ನಮ್ಮ ಬೇಡಿಕೆಗಳನ್ನು ನಾಳೆ ಸ್ವೀಕರಿಸದಿದ್ದರೆ, ನಾವು ರಾಷ್ಟ್ರ ರಾಜಧಾನಿಗೆ ಹೋಗುವ ಹಾಲು, ತರಕಾರಿಗಳು ಮತ್ತು ಹಣ್ಣುಗಳ ಸರಬರಾಜನ್ನು ಸ್ಥಗಿತಗೊಳಿಸುತ್ತೇವೆ. ರಸ್ತೆಗಳನ್ನು ನಿರ್ಬಂಧಿಸುವುದು ಕೇವಲ ಮೊದಲ ಹೆಜ್ಜೆಯಾಗಿದೆ ಮುಂದಿನ ಹಂತವನ್ನು ನಾಳೆ ನಿರ್ಧರಿಸುತ್ತೇವೆ ಎಂದು ನುಡಿದರು.

ದೆಹಲಿ-ಹರಿಯಾಣ ಮತ್ತು ದೆಹಲಿ-ಉತ್ತರ ಪ್ರದೇಶದ ಗಡಿಯಲ್ಲಿ ಕಳೆದ ಒಂಬತ್ತು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಗು ಗಡಿಯಲ್ಲಿ ಸಾವಿರಾರು ರೈತರು ಧರಣಿ ಮಾಡುತ್ತಿದ್ದರೆ, ಇನ್ನೂ ಹಲವಾರು ಗುಂಪುಗಳು ಟಿಕ್ರಿಯ ದೆಹಲಿ-ಹರಿಯಾಣ ಗಡಿ, ದೆಹಲಿ-ಯುಪಿ ಗಾಜಿಪುರ ಗಡಿ ಮತ್ತು ದೆಹಲಿ-ಯುಪಿ ಚಿಲ್ಲಾ ಗಡಿಯಲ್ಲಿ ಪ್ರವೇಶವನ್ನು ನಿರ್ಬಂಧಿಸಿವೆ.

No comments:

Advertisement