Friday, November 4, 2022

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ನವದೆಹಲಿ: ಭವಿಷ್ಯನಿಧಿ ಸಂಸ್ಥೆಯು ರೂಪಿಸಿದ 2014 ರ ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ 2022 ನವೆಂಬರ್‌ 04ರ ಶುಕ್ರವಾರ ಎತ್ತಿಹಿಡಿಯಿತು. ಆದರೆ ಪಿಂಚಣಿ ನಿಧಿಗೆ ಸೇರಲು ವಿಧಿಸಲಾದ 15,000 ರೂ ಮಾಸಿಕ ವೇತನದ ಮಿತಿಯನ್ನು ರದ್ದು ಪಡಿಸಿತು.

2014 ರ ತಿದ್ದುಪಡಿಯು ಗರಿಷ್ಠ ಪಿಂಚಣಿ ವೇತನವನ್ನು (ಮೂಲ ವೇತನ ಮತ್ತು ತುಟ್ಟಿಭತ್ಯೆ) ತಿಂಗಳಿಗೆ 15,000 ರೂ. ಎಂಬುದಾಗಿ ಪರಿಷ್ಕರಿಸಿತ್ತು.  ತಿದ್ದುಪಡಿಗೆ ಮೊದಲು, ಗರಿಷ್ಠ ಪಿಂಚಣಿ ವೇತನವನ್ನು ತಿಂಗಳಿಗೆ 6,500 ರೂ. ಎಂಬುದಾಗಿ ನಿಗದಿ ಪಡಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 2014ರ ಪಿಂಚಣಿ ಯೋಜನೆಯನ್ನು ಕಾನೂನುಬದ್ಧ ಎಂಬುದಾಗಿ ಹೇಳಿತಾದರೂ ಅದರ ಕೆಲವು ನಿಬಂಧನೆಗಳು ಮಾನ್ಯವಲ್ಲ ಎಂದು ಹೇಳಿತು.

2014ರ ಯೋಜನೆಯಲ್ಲಿ ನೌಕರರು 15,000 ರೂ.ಗಿಂತ ಹೆಚ್ಚಿನ ವೇತನದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆಯನ್ನು ನೀಡಬೇಕೆಂಬ ಷರತ್ತನ್ನು ಅಮಾನ್ಯವೆಂದು ಪೀಠವು ಪರಿಗಣಿಸಿತು.

ಪಿಂಚಣಿ ಯೋಜನೆಗೆ ಸೇರುವ ಆಯ್ಕೆಯನ್ನು ಚಲಾಯಿಸದ ನೌಕರರು ಆರು ತಿಂಗಳೊಳಗೆ ಹಾಗೆ ಮಾಡಬೇಕು ಎಂದು ಪೀಠ ಹೇಳಿತು. ತನ್ಮೂಲಕ ಭವಿಷ್ಯನಿಧಿಯ ಹಾಲಿ ಸದಸ್ಯ ನೌಕರರಿಗೆ ಯೋಜನೆ ಸೇರುವ ಆಯ್ಕೆ ಚಲಾಯಿಸಲು ಕಾಲಾವಕಾಶವನ್ನು ಆರು ತಿಂಗಳ ಕಾಲ ನೀಡಿತು.

ಕೇರಳ, ರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳು ನೀಡಿದ ತೀರ್ಪಿನ ದೃಷ್ಟಿಯಿಂದ, ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯಿರುವುದರಿಂದ ಕಟ್-ಆಫ್ ದಿನಾಂಕದೊಳಗೆ ಯೋಜನೆಗೆ ಸೇರಲು ಸಾಧ್ಯವಾಗದ ಅರ್ಹ ಉದ್ಯೋಗಿಗಳಿಗೆ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಅದು ಹೇಳಿತು.

ನ್ಯಾಯಾಲಯವು ಆರ್‌ಸಿ ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಪ್ರಕರಣದ ತೀರ್ಪನ್ನು ಒಪ್ಪಿಕೊಂಡಿರುವಾಗಿ ಹೇಳಿತು.

ಆರ್.‌ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯನಿಧಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ವಿಭಾಗೀಯ ಪೀಠವು ಆಯ್ಕೆಯನ್ನು ಚಲಾಯಿಸಲು ಯಾವುದೇ ಕಟ್-ಆಫ್ ದಿನಾಂಕ ಇರುವಂತಿಲ್ಲ ಎಂದು ಹೇಳಿತ್ತು.

ಮಿತಿಯನ್ನು ಮೀರಿದ ಸಂಬಳದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆ ನೀಡಬೇಕೆಂಬ ಷರತ್ತು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್‌ ಹೇಳಿತು. ಆದರೆ ಅಧಿಕಾರಿಗಳಿಗೆ ಹಣವನ್ನು ಹೊಂದಿಸಲು ಸಾಧ್ಯವಾಗುವಂತೆ ತೀರ್ಪಿನ ಈ ಭಾಗವನ್ನು ಆರು ತಿಂಗಳವರೆಗೆ ಅಮಾನತಿನಲ್ಲಿ ಇಡಲಾಗುವುದು ಎಂದು ಅದು ಹೇಳಿತು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು 2014 ರ ಯೋಜನೆಯನ್ನು ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳ ತೀರ್ಪನ್ನು ಪ್ರಶ್ನಿಸಿದ್ದವು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

No comments:

Advertisement