My Blog List

Tuesday, May 13, 2008

ಇಂದಿನ ಇತಿಹಾಸ History Today ಮೇ 13

ಇಂದಿನ ಇತಿಹಾಸ

ಮೇ 13

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಲಖನೌ ನಲ್ಲಿ ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ವಿ. ರಾಜೇಶ್ವರ್ ಅವರು ಪ್ರಮಾಣವಚನ ಬೋಧಿಸಿದರು. 49 ಮಂದಿ ಸದಸ್ಯರ ಸಚಿವ ಸಂಪುಟವೂ ಮಾಯಾವತಿ ಜೊತೆಗೆ ಇದೇ ದಿನ ಪ್ರಮಾಣ ವಚನ ಸ್ವೀಕರಿಸಿತು.

2007: ತಾಲಿಬಾನಿನ ಪ್ರಮುಖ ಸೇನಾ ಕಮಾಂಡರ್ ಮುಲ್ಲಾ ದಾದುಲ್ಲಾನನ್ನು ಹತ್ಯೆ ಮಾಡಲಾಗಿದೆ ಎಂದು ಆಫ್ಘಾನಿಸ್ಥಾನ ಸರ್ಕಾರ ಪ್ರಕಟಿಸಿತು. ಸಹಸ್ರಾರು ಉಗ್ರರ ನೇತೃತ್ವ ವಹಿಸಿಕೊಂಡು ದಾಳಿ ಇಡುತ್ತಿದ್ದ ದಾದುಲ್ಲಾನಿಗಾಗಿ 2001ರಲ್ಲಿ ಅಮೆರಿಕ ಮತ್ತು ಆಫ್ಘಾನಿಸ್ಥಾನ ಸರ್ಕಾರ ತಾಲಿಬಾನ್ ವಿರುದ್ಧ ಜಂಟಿ ದಾಳಿ ಆರಂಭಿಸಿದಂದಿನಿಂದ ಹುಡುಕಾಟ ನಡೆಸಲಾಗುತ್ತಿತ್ತು.

2007: ಕೇಂದ್ರ ಸರ್ಕಾರವು ಜಾಹೀರಾತು ಸಲುವಾಗಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಆದರೆ ನೇತಾಜಿ ಸುಭಾಶ್ ಚಂದ್ರ ಬೋಸ್ ಜನ್ಮದಿನ ಹಿನ್ನೆಲೆಯಲ್ಲಿ ಅವರ ಸಂದೇಶವನ್ನು ಜನರಿಗೆ ತಲುಪಿಸುವಂತಹ ಯಾವುದೇ ಜಾಹೀರಾತನ್ನು ಅದು ಪ್ರಕಟಿಸಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಬಹಿರಂಗಪಡಿಸಿತು. ದಿಲ್ಲಿಯ ನಿವಾಸಿ ದೇವ್ ಆಶೀಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಸರ್ಕಾರ ಈ ಮಾಹಿತಿ ನೀಡಿತು.

2007: ಕೇಂದ್ರ ಮಾಹಿತಿ ಮತ್ತು ಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಪ್ರಧಾನಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ಈದಿನ ಚೆನ್ನೈಯಲ್ಲಿ ಸಭೆ ಸೇರಿದ್ದ ಡಿಎಂಕೆ ಆಡಳಿತ ಸಮಿತಿಯು ಮುಖ್ಯಮಂತ್ರಿ ಕರುಣಾನಿಧಿ ಕುಟುಂಬದ ಆಂತರಿಕ ಕಲಹವನ್ನು ಬೀದಿಗೆಳೆದು ತೀವ್ರ ಇರುಸು ಮುರುಸು ಉಂಟುಮಾಡಿದ್ದಕ್ಕಾಗಿ ಮಾರನ್ ಅವರನ್ನು ಕೇಂದ್ರ ಸಂಪುಟದಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತ್ತು.

2007: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಲಖನೌ ನಲ್ಲಿ ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ವಿ. ರಾಜೇಶ್ವರ್ ಅವರು ಪ್ರಮಾಣವಚನ ಬೋಧಿಸಿದರು. 49 ಮಂದಿ ಸದಸ್ಯರ ಸಚಿವ ಸಂಪುಟವೂ ಮಾಯಾವತಿ ಜೊತೆಗೆ ಇದೇ ದಿನ ಪ್ರಮಾಣ ವಚನ ಸ್ವೀಕರಿಸಿತು. ಇದರೊಂದಿಗೆ ಉತ್ತರಪ್ರದೇಶದಲ್ಲಿ 14 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರಗಳ ಯುಗ ಅಂತ್ಯಗೊಂಡಿತು. 1993ರಲ್ಲಿ ರಾಷ್ಟ್ರದಲ್ಲೇ ಮೊತ್ತ ಮೊದಲ ದಲಿತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಾಯಾವತಿ ಈ ಸಲ 4ನೇ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು.

2007: ಜ್ಞಾನಪೀಠ ಮಾದರಿಯ ಪ್ರಶಸ್ತಿಯೊಂದನ್ನು ಕನ್ನಡದಲ್ಲಿ ಮುಂದಿನ ವರ್ಷದಿಂದ ಅಸ್ತಿತ್ವಕ್ಕೆ ತರಲಾಗುವುದು. ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ ಇರುತ್ತದೆ ಎಂದು ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ವಿ. ಲಕ್ಷ್ಮೀನಾರಾಯಣ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಅವರಿಗೆ `ಅನಕೃ - ನಿರ್ಮಾಣ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವಿಚಾರನ್ನು ಲಕ್ಷ್ಮೀನಾರಾಯಣ್ ಬಹಿರಂಗಪಡಿಸಿದರು.

2007: ಚೆನ್ನೈಯ ಪ್ರಸಿದ್ಧ ಜವಳಿ ಸಂಸ್ಥೆ ಕುಮಾರನ್ ಸಿಲ್ಕ್ಸ್ ಸಂಸ್ಥೆಯು ತಮಿಳುನಾಡಿನ ಕೃಷ್ಣಗಿರಿಯ ಪಾರ್ವತಿ ಪದ್ಮಾವತಿ ಜೈನ ದೇವಾಲಯದ ಪದ್ಮಾವತಿ ದೇವಿಗಾಗಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಸೀರೆ ತಯಾರಿಸಿರುವುದನ್ನು ಬಹಿರಂಗ ಪಡಿಸಿತು. ಸತತ 18 ದಿನಗಳ ಶ್ರಮದ ಫಲವಾಗಿ ರೂಪುಗೊಂಡಿರುವ ಈ ಸೀರೆಯ ಉದ್ದ 2007 ಅಡಿಗಳು. ಅಂದರೆ 685 ಮೀಟರ್. (ಸಾಮಾನ್ಯ ಸೀರೆಯ ಉದ್ದ 5-6 ಮೀಟರ್ ಮಾತ್ರ). ಕುಂಕುಮ ಬಣ್ಣದ ಈ ಸೀರೆಯನ್ನು ಗಿನ್ನೆಸ್ ದಾಖಲೆ ಪುಸ್ತಕ ಸಂಸ್ಥೆಯು `ವಿಶ್ವದ ಅತಿ ದೊಡ್ಡ ಸೀರೆ' ಎಂದು ತನ್ನ ದಾಖಲೆಗಳ ಪುಸ್ತಕದಲ್ಲಿ ದಾಖಲು ಮಾಡಿದೆ.

2007: ಮೂವತ್ತು ವರ್ಷಗಳ ಹಿಂದೆ ತನ್ನ ಅಪ್ಪ ಮಾಡಿದ್ದ ಜಾದೂ ದಾಖಲೆಯನ್ನು ಮಗ ಆಕಾಶ್ ಈದಿನ ಹೈದರಾಬಾದಿನಲ್ಲಿ ಮುರಿದ. ಈತನ ಅಪ್ಪ ವಿಶ್ವವಿಖ್ಯಾತ ಜಾದೂಗಾರ ಆನಂದ್ 1970ರಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ಬಂಧಿತರಾಗಿ ಜಬಲ್ಪುರದ ನರ್ಮದಾ ನದಿಯಲ್ಲಿ ಮುಳುಗಿ ಕೇವಲ 40 ಸೆಕೆಂಡುಗಳಲ್ಲಿ ಬಂಧ ಮುಕ್ತರಾಗಿ ನೀರಿನಿಂದ ಮೇಲೆ ಬಂದಿದ್ದರು. ಆ ಮೂಲಕ ಅವರು ವಿಶ್ವ ವಿಖ್ಯಾತ ಹ್ಯಾರಿ ಹೌಡಿನಿ 1912ರಲ್ಲಿ ಸೃಷ್ಟಿಸಿದ್ದ ನೀರಿನಿಂದ ಪಾರಾಗುವ ಜಾದೂ ವಿದ್ಯೆ ಪ್ರದರ್ಶನ ದಾಖಲೆಯನ್ನು ಮುರಿದಿದ್ದರು. ಈದಿನ ಆನಂದ್ ಪುತ್ರ ಆಕಾಶ್ ಕೇವಲ 15 ಸೆಕೆಂಡುಗಳಲ್ಲಿ ಈ ಜಾದೂ ಸಾಹಸ ಮೆರೆದು ಅಪ್ಪನ ದಾಖಲೆ ಮುರಿದ. ಕೈಕಾಲನ್ನು ಸರಪಳಿಯಿಂದ ಬಿಗಿದು ಮರದ ಪೆಟ್ಟಿಗೆಯಲ್ಲಿ ಬಂಧಿಸಿ ಆಕಾಶನನ್ನು ಹೈದರಾಬಾದಿನ ಕೇಂದ್ರ ಭಾಗದ ಹುಸೇನ್ ಸಾಗರ ಸರೋವರದ ನೀರಿನ ಆಳಕ್ಕೆ ಎಸೆಯಲಾಗಿತ್ತು. ಆತ ಈ ಬಂಧನದಿಂದ ಮುಕ್ತನಾಗಿ ಕೇವಲ 15 ಸೆಕೆಂಡುಗಳಲ್ಲೇ ನೀರಿನ ಮೇಲೆ ಗೋಚರಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ.

2006: ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ತಿಂಗಳ ಸಾದಾ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಸಾರಿಗೆ ಸಚಿವ ಸ್ವರೂಪಸಿಂಗ್ ನಾಯಕ್ ಈ ದಿನ ನಸುಕಿನ 4.30ರ ವೇಳೆಗೆ ಮುಂಬೈಯ ಮಲಬಾರ್ ಹಿಲ್ ಠಾಣೆಯಲ್ಲಿ ಪೊಲೀಸರಿಗೆ ಶರಣಾದರು. ನಂತರ ಅವರನ್ನು ಠಾಣೆ ಸೆರೆಮನೆಗೆ ಕಳುಹಿಸಲಾಯಿತು. 2002ರಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿದ್ದ ನಾಯಕ್ ಹಾಗೂ ಇಲಾಖೆಯ ಆಗಿನ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಖೋತ್ ಅವರು ಸುಪ್ರೀಂಕೋರ್ಟ್ ನಿಷೇಧ ಉಲ್ಲಂಘಿಸಿ ಮಹಾರಾಷ್ಟ್ರ ರಾಜ್ಯದಲ್ಲಿ ಆರು ಕಟ್ಟಿಗೆ ಕೊರೆಯುವ ಮಿಲ್ಲುಗಳಿಗೆ ಪರವಾನಗಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಇಬ್ಬರಿಗೂ ಒಂದು ತಿಂಗಳ ಸಾದಾ ಸಜೆ ವಿಧಿಸಿತ್ತು.

1981: ಪೋಪ್ ಜಾನ್ ಪಾಲ್ (ದ್ವಿತೀಯ) ಅವರನ್ನು ಸೇಂಟ್ ಪೀಟರ್ಸ್ ಚೌಕದಲ್ಲಿ ಟರ್ಕಿಯ ಮೆಹ್ಮೆಟ್ ಅಲಿ ಆಗ್ಕಾ ಎಂಬ ವ್ಯಕ್ತಿ ಗುಂಡು ಹೊಡೆದು ತೀವ್ರವಾಗಿ ಗಾಯಗೊಳಿಸಿದ.

1967: ಝಕೀರ್ ಹುಸೇನ್ ಅವರು ಭಾರತದ ಮೂರನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1962: ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಎರಡನೇ ರಾಷ್ಟ್ರಪತಿಯಾದರು.

1960: ಹಾಸ್ಯ ಲೇಖಕಿ, ಕವಯಿತ್ರಿ ಸುಕನ್ಯಾ ಕಳಸ ಅವರು ಎಚ್. ಪುಟ್ಟದೇವರಯ್ಯ - ನಾಗಮ್ಮ ದಂಪತಿಯ ಮಗಳಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ ಹುಟ್ಟಿದರು. ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿಗಳನ್ನು ಪಡೆದಿರುವ ಸುಕನ್ಯಾ ಅವರ ಅವರ ಕಥೆ, ಕವನ, ಲೇಖನ, ಹಾಸ್ಯ ಬರಹಗಳು ಪ್ರಜಾವಾಣಿ, ಸುಧಾ, ತುಷಾರ, ತರಂಗ, ವನಿತ, ಕರ್ಮವೀರ, ಉದಯವಾಣಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

1940: ಬ್ರಿಟನ್ನಿನ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹೌಸ್ ಆಫ್ ಕಾಮನ್ಸ್ ನ್ನು ಉದ್ದೇಶಿಸಿ ಪ್ರಥಮ ಭಾಷಣ ಮಾಡಿದರು. `ನೆತ್ತರು, ಕಣ್ಣೀರು, ಬೆವರಿನ ಹೊರತಾಗಿ ನಿಮಗೆ ನೀಡಲು ನನ್ನ ಬಳಿ ಬೇರೇನೂ ಇಲ್ಲ' ಎಂದು ಅವರು ಹೇಳಿದರು.

1905: ಫಕ್ರುದ್ದೀನ್ ಅಲಿ ಅಹ್ಮದ್ (1905-77) ಜನ್ಮದಿನ. ಇವರು 1974ರಿಂದ 1977ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು.

1857: ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ಸರ್ ರೊನಾಲ್ಡ್ ರಾಸ್ (1857-1932) ಜನ್ಮದಿನ. ಮಲೇರಿಯಾ ರೋಗ ನಿಯಂತ್ರಣಕ್ಕೆ ಔಷಧಿ ಕಂಡು ಹಿಡಿಯುವಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement