My Blog List

Thursday, May 15, 2008

ಇಂದಿನ ಇತಿಹಾಸ History Today ಮೇ 15

ಇಂದಿನ ಇತಿಹಾಸ

ಮೇ 15

ಇಪ್ಪತ್ನಾಲ್ಕು ವರ್ಷಗಳ ಹಿಂದೆ ಪರ್ವತಾರೋಹಣ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡಿನ ಪರ್ವತಾರೋಹಿ ಮಾರ್ಕ್ ಇಂಗ್ಲಿಸ್ ಈದಿನ `ಎವರೆಸ್ಟ್ ಶಿಖರಾರೋಹಣ' ಮಾಡುವ ಮೂಲಕ ವಿಶ್ವದ ಅತ್ಯುನ್ನತ ಪರ್ವತ ಶಿಖರವನ್ನು ಏರಿದ ಮೊತ್ತ ಮೊದಲ `ಕಾಲುಗಳಿಲ್ಲದ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಸೈನಿಕರಿಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ದೇಶಕ್ಕೆ ಉತ್ತಮ ಸೇನಾಧಿಕಾರಿಗಳು ಮತ್ತು ಯೋಧರನ್ನು ಕೊಡುಗೆಯಾಗಿ ನೀಡಿ ಖ್ಯಾತಿ ಪಡೆದಿರುವ ಬೆಳಗಾವಿಯ ಮರಾಠಾ ಲಘು ಪದಾತಿ ದಳದ (ಎಂಎಲ್ ಐ ಆರ್ ಸಿ) ಯೋಧರು ಸೇರಿದಂತೆ 12 ಜನರಿದ್ದ ಭಾರತೀಯ ಯೋಧರ ತಂಡ ಹಾಗೂ 13 ಶೆರ್ಪಾಗಳ ತಂಡ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದವು. ಭಾರತೀಯ ಭೂಸೇನೆಯ ಮುಖ್ಯಸ್ಥ ಹಾಗೂ ಮರಾಠಾ ಲಘು ಪದಾತಿದಳದ ಕರ್ನಲ್ ಜನರಲ್ ಜೋಗೀಂದರ್ ಜಸ್ವಂತ್ಸಿಂಗ್ (ಜೆ.ಜೆ.ಸಿಂಗ್) ಮಾರ್ಗದರ್ಶನದಲ್ಲಿ ಲೆಫ್ಟಿನೆಂಟ್ ಕ್ಯಾಪ್ಟನ್ ಥಾಪಾ ಈ ಸಾಹಸ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಎರಡು ತಂಡಗಳಾಗಿ ಈ ಸಾಹಸ ನಡೆಸಲಾಯಿತು. ಒಂದು ತಂಡ ಈದಿನ ಹಾಗೂ ಇನ್ನೊಂದು ತಂಡ ಮರುದಿನ (ಮೇ 16) ಮೌಂಟ್ ಎವರೆಸ್ಟ್ ಶಿಖರ ಏರಿತು. ಶೆರ್ಪಾಗಳ ತಂಡದ ನೇತೃತ್ವವನ್ನು ಸಿರ್ಧರ್ ಚಿರೀಂಗ್ ದೋರ್ಜಿ ವಹಿಸಿದ್ದರು.

2007: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮಿಲೆನಿಯಂ ಅಭಿವೃದ್ಧಿ ಗುರಿಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಕ್ಕಾಗಿ ನ್ಯೂಯಾರ್ಕ್ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೂರನೇ `ಯುಎನ್ ವಿಮೆನ್ ಟುಗೆದರ್ ಅವಾರ್ಡ್' ವಿಶ್ವಸಂಸ್ಥೆ ಮಹಿಳಾ ಪ್ರಶಸ್ತಿ ಪಡೆದರು. ಖಾದಿ ಅಭಿವೃದ್ಧಿ, ನೇಕಾರರ ಅಭಿವೃದ್ಧಿ ಮತ್ತು ಕುಶಲಕರ್ಮಿಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಾಗಿ ವಸುಂಧರಾ ರಾಜೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ವಸುಂಧರಾ ಪಾತ್ರರಾದರು.

2007: ದಯಾನಿಧಿ ಮಾರನ್ ರಾಜೀನಾಮೆಯ ಬಳಿಕ ಪರಿಸರ ಖಾತೆಯ ಸಚಿವರಾಗಿದ್ದ ಎ. ರಾಜ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ಸಚಿವರನ್ನಾಗಿ ಪ್ರಧಾನಿ ಮನಮೋಹನ್ ಸಿಂಗ್ ನೇಮಕ ಮಾಡಿದರು.
2007: ನ್ಯಾಟೋ ನೇತೃತ್ವದ ಸೇನಾಪಡೆ ಹಿಂದಿನ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ತಾಲಿಬಾನ್ ಉಗ್ರಗಾಮಿಗಳು ಹತರಾದರು.

2007: ಮೇ 9ರಂದು ಮದುರೈಯಲ್ಲಿ `ದಿನಕರನ್' ದೈನಿಕ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿ `ಅಟ್ಯಾಕ್ ಪಾಂಡಿ' ಮದುರೈ ಗ್ರಾಮಾಂತರ ಪೊಲೀಸರಿಗೆ ಶರಣಾಗತನಾದ.

2007: ಅನಿಲ್ ಶರ್ಮಾ ಅವರ `ಅಪ್ನೆ' ಚಿತ್ರವು ಜೂನ್ 29ರಂದು ದೇಶ - ವಿದೇಶಗಳಲ್ಲಿ 900 ಕಡೆ ಏಕಕಾಲದಲ್ಲಿ ಬಿಡುಗಡೆಯಾಗುವುದು ಎಂದು ಪ್ರಕಟಿಸಲಾಯಿತು. 8 ತಿಂಗಳಲ್ಲಿ ಪೂರ್ಣಗೊಂಡ ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್, ಕತ್ರಿನಾ ಕೈಫ್, ಶಿಲ್ಪಾಶೆಟ್ಟಿ ಅಭಿನಯಿಸಿದ್ದು ಬ್ಯಾಂಕಾಕ್, ನ್ಯೂಯಾರ್ಕ್ ಮತ್ತು ಕೆನಡಾದಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

2006: ಇಪ್ಪತ್ನಾಲ್ಕು ವರ್ಷಗಳ ಹಿಂದೆ ಪರ್ವತಾರೋಹಣ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡಿನ ಪರ್ವತಾರೋಹಿ ಮಾರ್ಕ್ ಇಂಗ್ಲಿಸ್ ಈದಿನ `ಎವರೆಸ್ಟ್ ಶಿಖರಾರೋಹಣ' ಮಾಡುವ ಮೂಲಕ ವಿಶ್ವದ ಅತ್ಯುನ್ನತ ಪರ್ವತ ಶಿಖರವನ್ನು ಏರಿದ ಮೊತ್ತ ಮೊದಲ `ಕಾಲುಗಳಿಲ್ಲದ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು. 47 ವರ್ಷದ ಈ ಸಾಧಕ 1982ರಲ್ಲಿ ಫಿಲ್ ಧೂಲೆ ಜೊತೆಗೆ ನ್ಯೂಜಿಲೆಂಡಿನ ಅತ್ಯುನ್ನತ ಶಿಖರ ಮೌಂಟ್ ಕುಕ್ ಏರುತ್ತಿದ್ದಾಗ0 ಮಂಜುಗಡ್ಡೆಯ ಗುಹೆಯೊಳಗೆ 14 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು. ಆಗ ಕಾಲುಗಳಲ್ಲಿ ಹಿಮ ಹುಣ್ಣಾಗಿ ತೊಡೆಯಿಂದ ಕೆಳಗಿನ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಲಾಗಿತ್ತು. ಆ ಬಳಿಕ ಬದುಕನ್ನು ಸವಾಲಾಗಿ ಸ್ವೀಕರಿಸಿದ ಇಂಗ್ಲಿಸ್ ಕಾಲು ರಹಿತರ ಪರ್ವತಾರೋಹಣ ಸೇರಿದಂತೆ ಹಲವಾರು ಸಾಹಸ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು.

2006: ಸಂಗ್ರಹಾಲಯವಾಗಿ ಪರಿವರ್ತನೆಗೊಳ್ಳಲಿರುವ ಐಎನ್ಸ್ ಚಪಲ್ ಸಮರನೌಕೆಯು ಆಗ್ರಾ ಐಎನ್ಎಸ್ ಕದಂಬ ನೌಕಾ ನೆಲೆಯಿಂದ ಈದಿನ ಕಾರವಾರದ ರಬೀಂದ್ರನಾಥ ಟ್ಯಾಗೋರ್ ಕರಾವಳಿಗೆ ಆಗಮಿಸಿತು. ಕ್ಷಿಪಣಿ ಉಡಾವಣಾ ವಾಹನವಾಗಿ 28 ವರ್ಷಗಳ ಸೇವೆ ಸಲ್ಲಿಸಿದ್ದ ಈ ಸಮರನೌಕೆ 2005ರ ನವೆಂಬರಿನಲ್ಲಿ ಸೇವೆಯಿಂದ ನಿವೃತ್ತಿ ಪಡೆದಿತ್ತು. 275 ಟನ್ ತೂಕ, 38.5 ಮೀಟರ್ ಎತ್ತರ, 7.2 ಮೀಟರ್ ಅಗಲ ಇರುವ ಈ ನೌಕೆಯು ಈಗ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನೌಕಾನೆಲೆಯಲ್ಲಿ ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇರಿಸಲು ನಿರ್ಧರಿಸಲಾಗಿದೆ.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ವಿರುದ್ಧ ತನಿಖೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಗ್ರಾಮಸ್ಥರ ಕೊಲೆ, ಮಕ್ಕಳು ಮಹಿಳೆಯರಿಗೆ ಚಿತ್ರಹಿಂಸೆ ಮತ್ತು 399 ಜನರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ನಡೆಸಿದ ಆರೋಪಗಳನ್ನು ಹೊರಿಸಲಾಯಿತು. 1982ರಲ್ಲಿ ದುಜೈಲ್ ನಲ್ಲಿ ಸದ್ದಾಂ ಹತ್ಯೆಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಪಡೆಗಳು ನೂರಾರು ಮಂದಿಯನ್ನು ಬಂಧಿಸಿ ಹಿಂಸೆಗೆ ಗುರಿಪಡಿಸಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿ ಸಲ್ಲಿಸಲಾಯಿತು.

2006: ರಾಯ್ ಬರೇಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆಯಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರದಲ್ಲಿ ಸಿಪಿಎಂ ಹಿರಿಯ ಮುಖಂಡ ವಿ.ಎಸ್. ಅಚ್ಯುತಾನಂದನ್ (82) ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

1993: ಭಾರತದ ನಿವೃತ್ತ ಸೇನಾ ಪ್ರಮುಖ ಕೆ.ಎಂ. ಕಾರ್ಯಪ್ಪ ಅವರು ಈದಿನ ನಿಧನರಾದರು. 1899ರ ಜನವರಿ 28ರಂದು ಮಡಿಕೇರಿಯಲ್ಲಿ ಜನಿಸಿದ ಕಾರ್ಯಪ್ಪ 1918ರಲ್ಲಿ ಮೊದಲ ಮಹಾಯುದ್ಧ ಮುಗಿದ ಸಮಯಲ್ಲಿ ಕಿಂಗ್ಸ್ ಕಮಿಷನ್ ಸೈನಿಕರಿಗಾಗಿ ಭಾರತದಲ್ಲಿ ಆಯ್ಕೆ ನಡೆಸಿದಾಗ ಆಯ್ಕೆಯಾದ ಕಾರ್ಯಪ್ಪ ಕಿಂಗ್ಸ್ ಕಮಿಷನ್ಡ್ ಇಂಡಿಯನ್ ಆಫೀಸರ್ಸ್ (ಕೆಸಿಐಒ) ಮೊದಲ ತಂಡದ ತರಬೇತಿ ಪಡೆದರು. ಕ್ರೀಡೆ ಮತ್ತು ಸಂಗೀತದಲ್ಲಿ ಇವರಿಗೆ ಅಪಾರ ಆಸಕ್ತಿ ಇತ್ತು.

1966: ಕಲಾವಿದೆ ರಾಧಿ ರಂಜಿನಿ ಜನನ.

1952: ಕಲಾವಿದ ಶಿವರುದ್ರಯ್ಯ ಕೆ. ಜನನ.

1951: ಕಲೆಯ ಹಲವು ಪ್ರಕಾರಗಳಾದ ಕಲಾ ಇತಿಹಾಸ, ಕಲಾ ಬರಹ, ಕಲಾ ಸಂಘಟನೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡ ಕಲಾವಿದ ಎನ್. ಮರಿಶಾಮಾಚಾರ್ ಅವರು ಸಿ.ಎಂ. ನಂಜುಂಡಾಚಾರ್- ಲಿಂಗಮ್ಮ ದಂಪತಿಯ ಮಗನಾಗಿ ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಜನಿಸಿದರು.

1941: ಕಲಾವಿದ ಟಿ.ಎ.ಎಸ್. ಮಣಿ ಜನನ.

1918: ಅಮೆರಿಕವು ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿ.ಸಿ. ಮಧ್ಯೆ ನಿಯಮಿತ ಏರ್ ಮೇಲ್ ಸೇವೆಯನ್ನು ಆರಂಭಿಸಿತು. ಇದು ಜಗತ್ತಿನಲ್ಲೇ ಪ್ರಪ್ರಥಮ ನಿಯಮಿತ ಏರ್ ಮೇಲ್ ಸೇವೆಯಾಗಿತ್ತು.

1914: ತೇನ್ಸಿಂಗ್ ನೋರ್ಗೆ (1914-84) ಜನ್ಮದಿನ. ಇವರು ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಪರ್ವತವನ್ನು ಏರಿದರು.

1859: ಪಿಯರ್ ಕ್ಯೂರಿ (1859-1906) ಹುಟ್ಟಿದ ದಿನ. ಫ್ರೆಂಚ್ ಭೌತ ರಸಾಯನ ತಜ್ಞನಾದ ಈತ ತನ್ನ ಪತ್ನಿ ಮೇಡಂ ಕ್ಯೂರಿ ನೆರವಿನೊಂದಿಗೆ ರೇಡಿಯಂ ಮತ್ತು ಪೊಲೋನಿಯಂನ್ನು ಸಂಶೋಧಿಸಿದ.

1845: ಮುಂಬೈಯ ಜೆಮ್ ಸೆಟ್ ಜಿ ಜೀಜೆಭಾಯ್ ಆಸ್ಪತ್ರೆಯು ಗವರ್ಮರ್ ಸರ್ ಜಾರ್ಜ್ ಆರ್ಥರ್ ಬಾರ್ಟ್ ಅವರಿಂದ ಉದ್ಘಾಟನೆಗೊಂಡಿತು.

1817: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ಜನ್ಮದಿನ. ಹಿಂದೂ ತತ್ವಜ್ಞಾನಿ ಹಾಗೂ ಧಾರ್ಮಿಕ ಸುಧಾರಕರಾಗ್ದಿದ ಇವರು 1863ರಲ್ಲಿ `ಶಾಂತಿ ನಿಕೇತನ'ವನ್ನು ಸ್ಥಾಪಿಸಿದರು. ಇವರ ಪುತ್ರ ರಬೀಂದ್ರನಾಥ ಟ್ಯಾಗೋರ್ ಅವರು ಶಾಂತಿನಿಕೇತನಕ್ಕೆ ಖ್ಯಾತಿಯನ್ನು ತಂದುಕೊಟ್ಟರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement