My Blog List

Saturday, October 17, 2009

ಇಂದಿನ ಇತಿಹಾಸ History Today ಅಕ್ಟೋಬರ್ 17

ಇಂದಿನ ಇತಿಹಾಸ

ಅಕ್ಟೋಬರ್ 17


ಮೊಬೈಲ್ ಬಳಕೆದಾರರಿಗೆ ಇದೊಂದು ಎಚ್ಚರಿಕೆಯ ಮಾಹಿತಿ. ಅತಿಯಾದ ಮೊಬೈಲ್ ಬಳಕೆ ಚರ್ಮ ರೋಗವನ್ನೂ ತರಬಲ್ಲದು. ಮೊಬೈಲ್ ಬಳಕೆಯಿಂದ ಮುಖದ ಮೇಲೆ ಗುಳ್ಳೆಗಳು ಮತ್ತು ಬಿಳಿ ಲೋಹ (ಉಕ್ಕು ಬೆರೆಸಿದ ನಿಕಲ್) ಬಳಸಿದ ಹ್ಯಾಂಡ್ ಸೆಟ್ ಕಿವಿಯ ಅಲರ್ಜಿಗೆ ಕಾರಣವಾಗುತ್ತದೆ ಎಂದು ಬ್ರಿಟಿಷ್ ಚರ್ಮರೋಗ ತಜ್ಞರ ಸಂಘದ ಸದಸ್ಯರು ಬಹಿರಂಗ ಪಡಿಸಿದರು.

2014: ಜಮ್ಮು : ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸ್ವಯಂಚಾಲಿತ ಆಯುಧಗಳಿಂದ ಗುಂಡು ಹಾರಿಸುವ ಮೂಲಕ ಈದಿನ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿದವು. ಬೆಳಗ್ಗೆ 9.55ರಿಂದ ಪೂಂಚ್ ಜಿಲ್ಲೆಯ ಹಮೀರಪುರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸ್ವಯಂಚಾಲಿತ ಆಯುಧಗಳಿಂದ ದಾಳಿ ನಡೆಸುವ ಮೂಲಕ ಎರಡು ಬಾರಿ ಕದನವಿರಾಮ ಉಲ್ಲಂಘಿಸಿದವು ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಗಡಿ ಕಾಯುತ್ತಿದ್ದ ಭಾರತೀಯ ಪಡೆಗಳು ಪಾಕಿಸ್ತಾನಿ ಪಡೆಗಳಿಗೆ ಸೂಕ್ತ ಉತ್ತರ ನೀಡಿದವು. ಘರ್ಷಣೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ವರದಿ ಬಂದಿಲ್ಲ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಹಿಂದಿನ ರಾತ್ರಿ 9ರಿಂದ 10.45ರ ನಡುವಣ ಅವಧಿಯಲ್ಲಿ ಪೂಂಚ್ ಜಿಲ್ಲೆಯ ಹಮೀರಪುರ ವಿಭಾಗದಲ್ಲಿ ಭಾರತದ ನೆಲೆಗಳ ಮೇಲೆ ಪಾಕ್ ಪಡೆಗಳು ಗುಂಡು ಹಾರಿಸಿದ್ದವು. ಇದಕ್ಕೂ ಭಾರತೀಯ ಪಡೆಗಳು ಸೂಕ್ತ ಉತ್ತರ ನೀಡಿದ್ದವು. ಅಕ್ಟೋಬರ್ 15ರಂದು ಪೂಂಚ್ ಜಿಲ್ಲೆಯ ಸೌಜಿಯಾನ್-ರ್ಕಿನಿ-ಶಾಹಪುರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕುಯಿಯಾನ್ ಗೋಟ್ರಿಯನ್ ಗ್ರಾಮದ 7 ವರ್ಷದ ಬಾಲಕ ರಿಯಾಜ್ ಗಾಯಗೊಂಡಿದ್ದ. ಇದಕ್ಕೂ ಮೊದಲು ಅಕ್ಟೋಬರ್ ತಿಂಗಳಿನಿಂದೀಚೆಗೆ ನಡೆದ ಪಾಕಿಸ್ತಾನಿ ಗುಂಡಿನ ದಾಳಿಯಲ್ಲಿ 8 ಮಂದಿ ಮೃತರಾಗಿ, ಭದ್ರತಾ ಸಿಬ್ಬಂದಿ ಸೇರಿ 95 ಮಂದಿ ಗಾಯಗೊಂಡಿದ್ದರು. ಸಹಸ್ರಾರು ಗ್ರಾಮಸ್ಥರು ಮನೆಮಾರು ತೊರೆದು ಗುಳೇ ಹೋಗಿದ್ದರು.

2014: ವಾಷಿಂಗ್ಟನ್: ಆಪಲ್ ಸಂಸ್ಥೆಯು ವಿಶ್ವದಲ್ಲೇ ಅತ್ಯಂತ 'ತಳುವಾದ' ಟ್ಯಾಬ್ಲೆಟ್ ಎನ್ನಲಾದ ನೂತನ 'ಐಪಾಡ್ ಏರ್ 2' ಬಿಡುಗಡೆ ಮಾಡಿತು. ಇದರ ಜೊತೆಗೆ ಹೊಸ ಐಪಾಡ್ ಮಿನಿ 3 ಟ್ಯಾಬ್ಲೆಟ್ ಹಾಗೂ ನೂತನ ಮ್ಯಾಕ್ ಆಪರೇಟಿಂಗ್ ಸಿಸ್ಟಂನ್ನೂ ಅನಾವರಣ ಮಾಡಿತು. ಹೊಸ ಗ್ಯಾಡ್ಜೆಟ್​ಗಳನ್ನು (ಉಪಕರಣ) ಬಿಡುಗಡೆ ಮಾಡಿದ ಆಪಲ್ ಸಿಇಒ ಟಿಮ್​ಕುಕ್ ಅವರು 'ಹೊಸ ಐಫೋನ್​ಗಳು ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೇಗವಾಗಿ ಮಾರಾಟವಾಗುತ್ತಿರುವ ಉತ್ಪನ್ನಗಳು' ಎಂದು ಹೇಳಿದರು. ಟ್ಯಾಬ್ಲೆಟ್​ನಲ್ಲಿ ಇದೇ ಮೊದಲ ಬಾರಿಗೆ ಪ್ರತಿಫಲನ ನಿರೋಧಿ ಲೇಪ ಇರುವುದರ ಜೊತೆಗೆ 8 ಮೆಗಾಪಿಕ್ಸೆಲ್ ಐಸೈಟ್ ಕ್ಯಾಮರಾ ಮತ್ತು 3 ಶತಕೋಟಿ ಟ್ರಾನ್ಸಿಸ್ಟರ್​ಗಳನ್ನು ಹೊಂದಿರುವ ಹೊಸ ತಲೆಮಾರಿನ ಎ8ಎಕ್ಸ್ ಚಿಪ್​ನ್ನು ಐಪಾಡ್ ಏರ್2 ಹೊಂದಿದೆ. ಸ್ವಲ್ಪ ಪರಿಷ್ಕರಣೆಯೊಂದಿಗೆ ಬಂದಿರುವ ಐಪಾಡ್ ಮಿನಿ 3 ಟ್ಯಾಬ್ಲೆಟ್ ಬಿಳಿ, ಕಂದು ಮತ್ತು ಚಿನ್ನದ ಬಣ್ಣಗಳಲ್ಲಿ ಲಭಿಸುತ್ತದೆ. ಮಿನಿ ಮತ್ತು ಏರ್ ಎರಡೂ ಟ್ಯಾಬ್ಲೆಟ್​ಗಳು ಭದ್ರತೆ ಸಲುವಾಗಿ ಟಚ್ ಐಡಿ ಫಿಂಗರ್​ಪ್ರಿಂಟ್ ಸೆನ್ಸರ್ ಹೊಂದಿರುತ್ತವೆ. ಹೊಸ ಐಪಾಡ್ ಏರ್2ರ ಬೆಲೆ 499 ಡಾಲರ್​ಗಳಾಗಿದ್ದರೆ ಐಪಾಡ್ ಮಿನಿ 3 ಟ್ಯಾಬ್ಲೆಟ್ 399 ಡಾಲರ್​ಗಳ ದರದೊಂದಿಗೆ ಆರಂಭವಾಗುತ್ತವೆ ಎಂದು ಆಪಲ್ ತಿಳಿಸಿತು.

2014: ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆಗೆ ಒಳಗಾಗಿದ್ದ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಅವರ ನಿಕಟವರ್ತಿ ಶಶಿಕಲಾ, ಬಂಧುಗಳಾದ ವಿ.ಎನ್. ಸುಧಾಕರನ್ ಹಾಗೂ ಇಳವರಸಿ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಎರಡು ತಿಂಗಳುಗಳ ಒಳಗಾಗಿ ಹೈಕೋರ್ಟಿಗೆ ಮೇಲ್ಮನವಿ (ಅಪೀಲ್ ಪೇಪರ್ ಬುಕ್) ಸಲ್ಲಿಸಬೇಕು ಎಂದು ಖಡಕ್ ನಿರ್ದೇಶನವನ್ನೂ ನೀಡಿತು. ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವಲ್ಲಿ ಒಂದು ದಿನ ವಿಳಂಬವಾದರೂ ಸಹಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ದತ್ತು ಎಚ್ಚರಿಸಿದರು. ಜಯಲಲಿತಾ ಅವರ ಸೂಚನೆ ಮೇರೆಗೆ ಪಕ್ಷ ಕಾರ್ಯಕರ್ತರು ಕಾನೂನು ಸುವ್ಯವಸ್ಥೆ ಉಂಟು ಮಾಡುವುದಕ್ಕೆ ಗಂಭೀರ ಆಕ್ಷೇಪ ವ್ಯಕ್ತ ಪಡಿಸಿದ ನ್ಯಾಯಾಲಯ, ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸದಂತೆ ಕಾರ್ಯಕರ್ತರಿಗೆ ನಿದೇಶನ ನೀಡುವಂತೆ ಜಯಲಲಿತಾ ಅವರಿಗೆ ಆಜ್ಞಾಪಿಸಿತು. 2-3 ತಿಂಗಳ ಕಾಲ ಗೃಹಬಂಧನದಲ್ಲಿ ಇರಲು ಕೂಡಾ ತಾವು ಸಿದ್ಧ ಎಂದು ಜಾಮೀನು ಕೋರಿಕೆ ಸಮಯದಲ್ಲಿ ಜಯಲಲಿತಾ ಸುಪ್ರೀಂಕೋರ್ಟಿಗೆ ತಿಳಿಸಿದರು. ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡುವುದಿಲ್ಲ. ಈ ವಿಚಾರಕ್ಕಾಗಿ ನ್ಯಾಯಾಲಯದ ಕಲಾಪ ಮುಂದೂಡಿಕೆ ಕೇಳುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ವಚನ ನೀಡುವಂತೆ ಸೂಚಿಸಿದ ನ್ಯಾಯಾಲಯ, ಜಯಲಿತಾ ಪರ ವಕೀಲ ನಾರಿಮನ್ ಅವರು ಈ ಬಗ್ಗೆ ಸ್ಪಷ್ಟವಾಗಿ ಬರೆದುಕೊಡುವುದಾಗಿ ತಿಳಿಸಿದ ಬಳಿಕ ಜಾಮೀನು ಮಂಜೂರು ಮಾಡಿತು. ಮೇಲ್ಮನವಿಯನ್ನು ಮೂರು ತಿಂಗಳುಗಳ ಒಳಗಾಗಿ ಇತ್ಯರ್ಥ ಪಡಿಸುವಂತೆ ಹೈಕೋರ್ಟ್​ಗೆ ಸೂಚಿಸುವುದಾಗಿಯೂ ಈ ಸಂದರ್ಭದಲ್ಲಿ ಪೀಠವು ತಿಳಿಸಿತು. 1991-96ರಲ್ಲಿ ಜಯಲಲಿತಾ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 66.65 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 27ರಂದು ಜಯಲಲಿತಾ ಮತ್ತು ಇತರ ಮೂವರು ಅಪರಾಧಿಗಳು ಎಂದು ಘೋಷಿಸಿ ಜಯಲಲಿತಾ ಅವರಿಗೆ 4 ವರ್ಷಗಳ ಸೆರೆವಾಸ ಮತ್ತು 100 ಕೋಟಿ ರೂಪಾಯಿಗಳ ದಂಡ ವಿಧಿಸಿತ್ತು. ಶಿಕ್ಷೆಯ ಅಮಾನತು ಹಾಗೂ ಜಾಮೀನು ಕೋರಿ ಜಯಲಲಿತಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ ಜಯಲಲಿತಾ ಮತ್ತು ಇತರರು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.

2014: ಬಾಲಸೋರ್: ಅಂದಾಜು 700 ಕಿ.ಮೀ.ಗೂ ಹೆಚ್ಚು ದೂರದ ಗುರಿಯತ್ತ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ದೇಶೀ ನಿರ್ಮಿತ 'ನಿರ್ಭಯ' ದೂರಗಾಮೀ ನಿರ್ದೇಶಿತ ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒಡಿಶಾದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು. ಬೆಳಗ್ಗೆ 10.04 ಗಂಟೆಗೆ ಕ್ಷಿಪಣಿಯನ್ನು ಉಡಾಯಿಸಲಾಯತು. 800 ಮೀಟರ್ ಎತ್ತರಕ್ಕೆ ತಲುಪಿದ ಬಳಿಕ ಅದು ಬಂಗಾಳಕೊಲ್ಲಿಯ ಕಡೆಗೆ ತಿರುಗಿ ಸಾಗಿ ತನ್ನ ಗುರಿ ತಲುಪಿತು. ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​ಡಿಓ) ಮೂಲಗಳು ತಿಳಿಸಿದವು. ಅಣ್ವಸ್ತ್ರ ಸಾಗಣೆ ಸಾಮರ್ಥ್ಯದ ನಿರ್ಭಯ ಕ್ಷಿಪಣಿಯ ಅಭಿವೃದ್ಧಿ ಪರೀಕ್ಷೆ ನಡೆಸಿದ್ದು ಇದು ಎರಡನೇ ಬಾರಿ. 2013ರ ಮಾರ್ಚ್ 12ರಂದು ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಇದೇ ಸ್ಥಳದಲ್ಲಿ ನಡೆಸಲಾಗಿತ್ತು. ಆದರೆ ಉದ್ದೇಶಿತ ಗುರಿಯತ್ತ ಸಾಗದ ಕಾರಣ ಹಾರಾಟವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಲಾಗಿತ್ತು.

2014:  ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು, ಬೆಳಗಾವಿ ಸೇರಿದಂತೆ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಸೂಚಿಸಿ ಅಧಿಕೃತ ಆದೇಶ ಹೊರಡಿಸಿತು. ರಾಜ್ಯದ 12 ನಗರಗಳ ಆಂಗ್ಲ ಹೆಸರನ್ನು ತೆಗೆದು ಹೊಸದಾಗಿ ಮರು ನಾಮಕರಣ ಮಾಡುವಂತೆ ಕೋರಿ 2009ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2013ರಲ್ಲಿ ಈ ಸಂಬಂಧ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಮರು ನಾಮಕರಣಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಮತ್ತೊಮ್ಮೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆ ಪರಿಗಣಿಸಿ ಮರು ನಾಮಕರಣಕ್ಕೆ ಒಪ್ಪಿಗೆ ಸೂಚಿಸಿ ಈದಿನ ಅಧಿಕೃತ ಆದೇಶ ಹೊರಡಿಸಿತು. ಹೆಸರು ಬದಲಾವಣೆ... ಬ್ಯಾಂಗ್ಳೂರ್ - ಬೆಂಗಳೂರು ಮ್ಯಾಂಗ್ಳೂರ್ - ಮಂಗಳೂರು ಬೆಳ್ಳಾರಿ -ಬಳ್ಳಾರಿ ಬಿಜಾಪುರ್ - ವಿಜಯಪುರ ಅಥವಾ ವಿಜಾಪುರ ಬೆಳಗಾಂ -ಬೆಳಗಾವಿ ಚಿಕ್​ವುಗ್ಳೂರ್- ಚಿಕ್ಕಮಗಳೂರು ಗುಲ್ಬರ್ಗ-ಕಲ್ಬುರ್ಗಿ ಮೈಸೂರ್ -ಮೈಸೂರು ಹೊಸ್ಪೇಟ್-ಹೊಸಪೇಟೆ ಶಿಮೊಗ್ಗ - ಶಿವಮೊಗ್ಗ ಹುಬ್ಳಿ -ಹುಬ್ಬಳ್ಳಿ ತುಮ್ಕೂರ್ - ತುಮಕೂರು  ರಾಜ್ಯದ ವಿವಿಧ ನಗರಗಳ ಆಂಗ್ಲಭಾಷೆಯಲ್ಲಿದ್ದ ಲೋಪದ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡುವುದರೊಂದಿಗೆ ಹತ್ತಕ್ಕೂ ಹೆಚ್ಚು ವರ್ಷಗಳ ಬೇಡಿಕೆಯೊಂದು ಈಡೇರಿದಂತಾಯಿತು. ಬೆಂಗಳೂರು ನಗರವನ್ನು ಬ್ಯಾಂಗ್ಳೂರು ಎಂದು ಆಂಗ್ಲಭಾಷೆಯಲ್ಲಿ ಬರೆಯವುದರ ವಿರುದ್ಧ ಮೊದಲು ದನಿ ಎತ್ತಿದ್ದು ಸಾಹಿತಿ ಯು.ಆರ್. ಅನಂತಮೂರ್ತಿ. ಇಂಗ್ಲಿಷ್​ನಲ್ಲಿಯೂ ಬೆಂಗಳೂರು ಎಂದೇ ಕರೆಯಬೇಕು ಹಾಗೂ ದಾಖಲೆಗಳಲ್ಲಿಯೂ ಅದೇ ರೀತಿಯಲ್ಲಿಯೇ ಇರಬೇಕೆಂದು ಒತ್ತಾಯ ಮಾಡಿದ್ದರು. ಅನಂತಮೂರ್ತಿ ಅವರ ಒತ್ತಾಯಕ್ಕೆ ಮಣಿದ ಆಗಿನ ಎಸ್.ಎಂ. ಕೃಷ್ಣ ಸರ್ಕಾರ ರಾಜ್ಯದ 12 ನಗರಗಳ ಆಂಗ್ಲಭಾಷೆಯಲ್ಲಿದ್ದ ದೋಷ ಸರಿಪಡಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಆ ನಂತರ ರಾಜ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಬಿಜೆಪಿ ಸರ್ಕಾರ ಸಹ ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಒತ್ತಾಯ ಮಾಡುತ್ತಲೇ ಬಂತು. ರಾಜ್ಯದಿಂದ ಪ್ರಸ್ತಾವನೆ ಹೋದಾಗಲೇ ಕೇಂದ್ರ ಗೃಹ ಸಚಿವಾಲಯ ಭೂಸರ್ವೆಕ್ಷಣಾ ಇಲಾಖೆಯಿಂದ ಪ್ರಸ್ತಾವನೆ ಪಡೆದಿತ್ತು. ಆದರೆ ಒಪ್ಪಿಗೆ ಮಾತ್ರ ಸಿಕ್ಕಿರಲಿಲ್ಲ. ಇತ್ತೀಚೆಗೆ ಬೆಳಗಾಂನ್ನು ಬೆಳಗಾವಿ ಎಂದು ಬದಲಾವಣೆ ಮಾಡಬೇಕೆಂದು ಅಲ್ಲಿನ ಕನ್ನಡಿಗರು ಒತ್ತಾಯ ಮಾಡಿದ್ದರು. ಈ ವಿಚಾರದಲ್ಲಿ ಅಲ್ಲಿನ ಮರಾಠಿಗರಲ್ಲಿ ಕೆಲವರು ತಕರಾರು ತೆಗೆದಿದ್ದರು. ಆದರೆ ರಾಜ್ಯ ಸರ್ಕಾರ ಇದಾವುದಕ್ಕೂ ಮಣಿಯದೇ ಮತ್ತೆ ಕೇಂದ್ರದ ಮೇಲೆ ಒತ್ತಡ ತಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಜತೆಯಲ್ಲಿ ಮಾತುಕತೆ ನಡೆಸಿದ ಪರಿಣಾಮ ಆಂಗ್ಲಭಾಷೆಯಲ್ಲಿ ನಗರಗಳ ಹೆಸರು ಬದಲಾವಣೆಗೆ ಒಪ್ಪಿಗೆ ಸಿಕ್ಕಿತು. ಇದೀಗ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಬೇಕಾಗಿದೆ.

2014: ನವದೆಹಲಿ: ನಾರ್ವೆ ಮತ್ತು ಫಿನ್ಲೆಂಡ್​ನ ತಮ್ಮ ಐದು ದಿನಗಳ ಪ್ರವಾಸವನ್ನು ಮುಗಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಾಯ್ನಾಡಿಗೆ ವಾಪಸಾದರು. ಐದು ದಿನಗಳ ಪ್ರವಾಸ ಕಾಲದಲ್ಲಿ ರಾಷ್ಟ್ರಪತಿಯವರು ಶಾಂತಿಯುತ ಬಳಕೆಗಾಗಿ ಪರಮಾಣು ಶಕ್ತಿ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು. ಈದಿನ ಬೆಳಗ್ಗೆ ರಾಷ್ಟ್ರಪತಿಯವರು ಸ್ವದೇಶಕ್ಕೆ ವಾಪಸಾದರು. ರಾಷ್ಟ್ರಪತಿಯವರ ಓಸ್ಲೋ ಭೇಟಿ ಕಾಲದಲ್ಲಿ ಭಾರತ ಮತ್ತು ನಾರ್ವೆ ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಇತರ ರಂಗಗಳಲ್ಲಿ ಸಹಕಾರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ಡಜನ್​ಗೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿದವು.

2014: ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಪ್ರಕ್ಷುಬ್ಧತೆ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರೂ ಪಡೆಗಳ ಉನ್ನತ ಮಿಲಿಟರಿ ಅಧಿಕಾರಿಗಳ ಜೊತೆಗೆ ರಕ್ಷಣಾ ಸಚಿವಾಲಯದ 'ಸಮರ ಕೊಠಡಿ'ಯಲ್ಲಿ ಸಮಾಲೋಚನೆ ನಡೆಸಿದರು. ಮೂರೂ ಪಡೆಗಳ ಮುಖ್ಯಸ್ಥರು ಒಟ್ಟಾಗಿ ಎಲ್ಲಾ ಉನ್ನತ ಕಮಾಂಡರ್​ಗಳ ಜೊತೆಗೆ ಪ್ರಧಾನಿಯವರೊಂದಿಗೆ ಸಮಾಲೋಚನಾ ಸಭೆ ಸೇರಿದ್ದು ಇದೇ ಮೊದಲು. ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆ ಈ ಮೂರೂ ಪಡೆಗಳ ಮುಖ್ಯಸ್ಥರು ಪ್ರಧಾನಿಗೆ ಭದ್ರತಾ ಪರಿಸ್ಥಿತಿ ಬಗ್ಗೆ ವಿವರವಾದ ಮಾಹಿತಿ ಒದಗಿಸಿದರು. ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರುಪ್ ರಾಹ ಅವರು ಸಿಬ್ಬಂದಿ ಸಮಿತಿಯ ಮುಖ್ಯಸ್ಥರ ಅಧ್ಯಕ್ಷರಾಗಿ ಮೊದಲಿಗೆ ವಿವರಣೆ ನೀಡಿದರೆ, ಬಳಿಕ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಕೆ. ಧೋವನ್ ಮತ್ತು ಭಾರತೀಯ ಸೇನಾ ಪಡೆ ಮುಖ್ಯಸ್ಥ ಜನರಲ್ ದಲ್​ಬೀರ್ ಸಿಂಗ್ ಪ್ರಧಾನಿಗೆ ವಿವರ ಒಪ್ಪಿಸಿದರು. ಪ್ರಧಾನಿ ಮತ್ತು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಕಾರ್ಯದರ್ಶಿ ಆರ್.ಕೆ. ಮಾಥುರ್ ಮತ್ತಿತರರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

2009: ವಿಶ್ವದ ಮೊತ್ತ ಮೊದಲ ನೀರೊಳಗಿನ ಸಂಪುಟ ಸಭೆ ಶನಿವಾರ (17/10/2009) ಮಾಲ್ದೀವ್ಸಿನಲ್ಲಿ ನಡೆಯಿತು. ಸಾಗರ ತಳದಲ್ಲಿ ಸಭೆ ನಡೆಸಿದ ಸಚಿವರು ಜಾಗತಿಕ ತಾಪಮಾನದಿಂದ ತಮ್ಮ ಪುಟ್ಟ ದ್ವೀಪದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿ ಜಗತ್ತಿನ ಗಮನ ಸೆಳೆದರು.ರಾಜಧಾನಿ ಮಾಲೆಯಿಂದ 35 ನಾಟಿಕಲ್ ಮೈಲು ದೂರದಲ್ಲಿನ ಗಿರಿಫಿಶಿ ದ್ವೀಪ ಸಮೀಪ ನೀಲ ಸಮುದ್ರದ ಆಳದಲ್ಲಿ ಸಂಪುಟ ಸಭೆಗಾಗಿ ಕುದುರೆ ಪಾದಾಕಾರದ ಮೇಜನ್ನು ಅಳವಡಿಸಲಾಗಿತ್ತು. ಅಧ್ಯಕ್ಷ ಮೊಹಮ್ಮದ್ ನಶೀದ್ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಕ್ಯೂಬಾ ದುಸ್ತು ಧರಿಸಿದ್ದ ಸಚಿವರು ಸ್ಪೀಡ್ ಬೋಟುಗಳಲ್ಲಿ ದ್ವೀಪಕ್ಕೆ ಆಗಮಿಸಿ, ನಂತರ ಸಂಪುಟ ಸಭೆ ನಡೆಯುವ ತಾಣಕ್ಕೆ ಈಜಿದರು.ಸಮುದ್ರದೊಳಗಿನ ತಮ್ಮ ಸಭೆಯ ನಿರ್ಣಯಗಳನ್ನು ಜಗತ್ತಿಗೆ ಸಾರಲು ಸಚಿವರು ಬಿಳಿಯ ಫಲಕಗಳು ಮತ್ತು ಕೈ ಸಂಕೇತಗಳನ್ನು ಬಳಸಿದರು.

2008: ಮೊಹಾಲಿ ಅಂಗಳದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ನಿರ್ಮಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ಅವರು ಇತಿಹಾಸದ ಪುಟದಲ್ಲಿ ದಾಖಲಾದರು. `ಕೆರಿಬಿಯನ್ ಕ್ರಿಕೆಟ್ ದೊರೆ' ಬ್ರಯನ್ ಲಾರಾ ಅವರ ಹೆಸರನ್ನು ಅಳಿಸಿ ಹಾಕಿ, ಆ ಜಾಗದಲ್ಲಿ ತಮ್ಮ ಹೆಸರು ಬರೆದರು. ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ 15 ರನ್ ತಲುಪುತ್ತಿದ್ದಂತೆ ಲಾರಾ ಅವರ 11953 ರನ್ಗಳ ಮಹಾನ್ ಸಾಧನೆ ಪತನಗೊಂಡಿತು. ಈಗ ತೆಂಡೂಲ್ಕರ್ ಖಜಾನೆಯಲ್ಲಿರುವ ರನ್ 12027. ಲಾರಾ ದಾಖಲೆ ಮುರಿಯಲು ಸಚಿನ್ಗೆ 152 ಟೆಸ್ಟ್ ಬೇಕಾಯಿತು. ವಿಂಡೀಸ್ ಆಟಗಾರ ಟೆಸ್ಟ್ನಲ್ಲಿ ಗರಿಷ್ಠ ರನ್ ಗಳಿಸಲು ತೆಗೆದುಕೊಂಡಿದ್ದು ಕೇವಲ 131 ಟೆಸ್ಟ್.

2008: ಮಂಡ್ಯ ತಾಲ್ಲೂಕಿನ ಹೊಳಲು ಸಮೀಪ ಸಂಭವಿಸಿದ ಬಸ್ ಅಪಘಾತದಲ್ಲಿ ಒಟ್ಟು ಆರು ಜನರು ಮೃತರಾಗಿ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೇಲುಕೋಟೆ ಕಡೆಯಿಂದ ಮಂಡ್ಯಕ್ಕೆ ಆಗಮಿಸುತ್ತಿದ್ದ ಖಾಸಗಿ ನವದುರ್ಗ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಬ್ಬಿನ ಗದ್ದೆಗೆ ಉರುಳಿ ಈ ಅಪಘಾತ ಸಂಭವಿಸಿತು.

2008: ಮೊಬೈಲ್ ಬಳಕೆದಾರರಿಗೆ ಇದೊಂದು ಎಚ್ಚರಿಕೆಯ ಮಾಹಿತಿ. ಅತಿಯಾದ ಮೊಬೈಲ್ ಬಳಕೆ ಚರ್ಮ ರೋಗವನ್ನೂ ತರಬಲ್ಲದು. ಮೊಬೈಲ್ ಬಳಕೆಯಿಂದ ಮುಖದ ಮೇಲೆ ಗುಳ್ಳೆಗಳು ಮತ್ತು ಬಿಳಿ ಲೋಹ (ಉಕ್ಕು ಬೆರೆಸಿದ ನಿಕಲ್) ಬಳಸಿದ ಹ್ಯಾಂಡ್ ಸೆಟ್ ಕಿವಿಯ ಅಲರ್ಜಿಗೆ ಕಾರಣವಾಗುತ್ತದೆ ಎಂದು ಬ್ರಿಟಿಷ್ ಚರ್ಮರೋಗ ತಜ್ಞರ ಸಂಘದ ಸದಸ್ಯರು ಬಹಿರಂಗ ಪಡಿಸಿದರು. ಬಿಳಿ ಲೋಹವು ಸಾಮಾನ್ಯವಾಗಿ ಎಲ್ಲರಿಗೂ ಹಿಡಿಸುವುದಿಲ್ಲ. ಇದನ್ನು ಹ್ಯಾಂಡ್ ಸೆಟ್ಗಳ ಬಟನ್ ಮತ್ತು ಸ್ಕ್ರೀನ್ಗಳಲ್ಲಿ ಬಳಸಲಾಗುತ್ತದೆ. ಮೊಬೈಲ್ ಪೋನ್ ಚರ್ಮರೋಗದಲ್ಲಿ ಚರ್ಮವು ಕೆಂಪಗಾಗುತ್ತದೆ. ಅಲ್ಲದೆ ಬೊಕ್ಕೆಗಳೆದ್ದು ಒಣಗುತ್ತದೆ ಹಾಗೂ ಒಡೆಯುತ್ತದೆ. ಸ್ತ್ರೀಯರ ಚರ್ಮ ಹೆಚ್ಚು ಸೂಕ್ಷ್ಮವಾದುದುರಿಂದ ಈ ಚರ್ಮ ರೋಗದ ತೀವ್ರತೆ ಪುರುಷರಿಗಿಂತ ಮಹಿಳೆಯರಲ್ಲಿ ಇನ್ನೂ ಹೆಚ್ಚು. `ಮೊಬೈಲ್ ಹ್ಯಾಂಡ್ ಸೆಟ್ನಲ್ಲಿ ಕಿವಿಗಿಟ್ಟು ಕೊಳ್ಳುವ ಭಾಗದಲ್ಲಿರುವ ಬಿಳಿ ಲೋಹದಿಂದ ಅಲರ್ಜಿ ಹೆಚ್ಚು ಉಂಟಾಗುತ್ತದೆ' ಸಂಘದ ಡಾ. ಗ್ರಾಹಂ ಲೋವೆ ಹೇಳಿದರು.

2008: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ನ್ಯೂಯಾರ್ಕಿನ ವಿಚಾರಣಾ ಮಂಡಳಿಯೊಂದು 20,000 ಅಮೆರಿಕನ್ ಡಾಲರ್ ಪರಿಹಾರ ನೀಡಲು ಸೂಚಿಸಿತು. ಹರ್ವಿಂದರ್ ವಿಲಕು ಅವರೇ ಪರಿಹಾರ ಪಡೆದ ಭಾರತೀಯ ಮೂಲದ ವ್ಯಕ್ತಿ. 2005 ರ ಮೇ ತಿಂಗಳಲ್ಲಿ ಇವರು ಯಾರ್ಕ್ ಕಾಲೇಜಿನ ಹೊರಭಾಗದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪೊಲೀಸರಿಗೆ ಅವರ ಹೆಸರು ಕೇಳಿದ್ದಕ್ಕೆ ಅವರು (ಪೊಲೀಸರು) ಅಂಗಿಯ ಕಾಲರ್ ಹಿಡಿದೆಳೆದು ಹೊಟ್ಟೆ ಮತ್ತು ತೊಡೆಯ ಮೇಲೆ ಹಲ್ಲೆ ನಡೆಸಿ ಜನಾಂಗೀಯ ನಿಂದನೆಯನ್ನು ಮಾಡಿದ್ದರು. ಆನಂತರ ಹರ್ವಿಂದರ್ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ನಡೆಯುವುದಕ್ಕೆ ನಾಲ್ಕು ತಿಂಗಳ ಮುನ್ನ ಹರ್ವಿಂದರ್ ಅಮೆರಿಕದ ಪೌರತ್ವ ಪಡೆದಿದ್ದರು.

2008: ಕ್ಷಯರೋಗ ನಿಯಂತ್ರಣ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆಗಳ ಮೂಲಕ ಹೊಸ ವಿಧಾನಗಳನ್ನು ಅಭಿವೃದ್ಧಿ ಪಡಿಸಿದ್ದ ಹಿರಿಯ ಕ್ಷಯರೋಗ ತಜ್ಞ ಅನಿವಾಸಿ ಭಾರತೀಯ (ಎನ್ಆರ್ಐ) ಪ್ರೊ.ಅಜಿತ್ ಲಾಲ್ವಾನಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ಪ್ರಶಸ್ತಿ `ರಾಯಲ್ ಕಾಲೇಜ್ ಆಫ್ ಫಿಜಿಶಿಯನ್ಸ್ ವೆಬರ್ ಪಾರ್ಕ್ ಟ್ರಸ್ಟ್ ಮೆಡಲ್' ಲಭಿಸಿತು. ಲಂಡನ್ನಿನ ರೀಜೆಂಟ್ಸ್ ಪಾರ್ಕ್ನಲ್ಲಿ ನಡೆದ ವಾರ್ಷಿಕ ಹಾರ್ವೇನಿಯನ್ ಭಾಷಣ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಹಿರಿಯ ಸಂಶೋಧಕ ಮತ್ತು ಅಧ್ಯಕ್ಷರಾಗಿರುವ ಲಾಲ್ವಾನಿ ಅವರು ಇಲ್ಲಿನ ಬಹುದೊಡ್ಡ ವಿಟಮಿನ್ ತಯಾರಿಕಾ ಕಂಪೆನಿ `ವಿಟಬಯಾಟಿಕ್ಸ್' ನ ಸ್ಥಾಪಕ ಹಾಗೂ ಅಧ್ಯಕ್ಷರ ಪುತ್ರ .

2008: ಚಲನಚಿತ್ರ ವಿತರಕ, ಚಿತ್ರಮಂದಿರಗಳ ಮಾಲೀಕ ಕೆ.ಸಿ.ದೇಸಾಯಿ (85) ಬೆಂಗಳೂರಿನಲ್ಲಿ ನಿಧನರಾದರು. ಪ್ರತಿಷ್ಠಿತ ಚಿತ್ರಮಂದಿರ ಎಂದು ಕರೆಸಿಕೊಂಡಿದ್ದ ಅಲಂಕಾರ್, ಹಿಂದೆ ಕನ್ನಡ ಚಲನಚಿತ್ರಗಳ ಜೀವನಾಡಿಯಂತಿದ್ದ ಪ್ರಭಾತ್ ಹಾಗೂ ಅಪ್ಸರಾ ಚಿತ್ರಮಂದಿರಗಳ ಮಾಲೀಕರಾಗಿದ್ದ ದೇಸಾಯಿ. ತಮ್ಮ ಚಲನಚಿತ್ರ ವಿತರಣಾ ಸಂಸ್ಥೆಗಳಾದ `ಫೇಮಸ್ ಫಿಲ್ಮ್ಸ್' ಮತ್ತು `ಅಮಿ ಫಿಲ್ಮ್ಸ್'ಗಳ ಮೂಲಕ ಹಿಂದಿ ಚಿತ್ರಗಳನ್ನಲ್ಲದೇ ಸುಮಾರು 100 ಕನ್ನಡ ಚಿತ್ರಗಳನ್ನೂ ಬಿಡುಗಡೆ ಮಾಡಿದ್ದರು. ಇದರೊಂದಿಗೆ ರಾಜ್ಯ ಕ್ರಿಕೆಟ್ ಮಂಡಳಿಗೆ ನಲವತ್ತು ವರ್ಷಗಳ ಕಾಲ ಖಜಾಂಚಿಯಾಗಿದ್ದರು. `ಅಂತ' `ಅಜಿತ್', `ನೀ ಬರೆದ ಕಾದಂಬರಿ' `ಬಣ್ಣದ ಗೆಜ್ಜೆ' ಅವರು ವಿತರಣೆ ಮಾಡಿದ ಮುಖ್ಯವಾದ ಸಿನಿಮಾಗಳು. ಚಿತ್ರರಂಗದಲ್ಲಿ ಶಿಸ್ತು, ಸಂಯಮಕ್ಕೆ ಅವರು ಮತ್ತೊಂದು ಹೆಸರಾಗಿದ್ದರು.

2008: ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 10 ಸಾವಿರ ಗಡಿಯಿಂದ ಕೆಳಮಟ್ಟಕ್ಕೆ ಕುಸಿಯಿತು. ವಾರಾಂತ್ಯದ ದಿನ ಷೇರು ವಹಿವಾಟು ಆರಂಭದಲ್ಲಿ ಏರುಗತಿ ಪ್ರದರ್ಶಿಸಿತು. ಆದರೆ, ಆನಂತರ ಶೇ 5.73 ರಷ್ಟು ಅಂದರೆ, 606 ಅಂಶಗಳ ಪತನ ದಾಖಲಿಸಿತು.

2007: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಕ್ರೆಗ್ ಮೆಕ್ ಮಿಲನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವೆಲ್ಲಿಂಗ್ಟನ್ನಿನಲ್ಲಿ ವಿದಾಯ ಘೋಷಿಸಿದರು. ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ 31ರ ಹರೆಯದ ಅವರು ಈ ನಿರ್ಧಾರ ಕೈಗೊಂಡರು. ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಕೊನೆಗೊಂಡ ಟ್ವೆಂಟಿ 20 ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಪ್ರಕಟಿಸಲು ಬಯಸಿದ್ದೆ ಎಂದು ಅವರು ತಿಳಿಸಿದರು. ಟ್ವೆಂಟಿ 20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಕಿವೀಸ್ ಪರ ಅತ್ಯಧಿಕ ರನ್ ಪೇರಿಸಿದ್ದರು.

2007: ತೆಲುಗು ಚಿತ್ರ ನಟ ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ (19) ತಂದೆಯ 'ಗೃಹ ಬಂಧನ'ದಿಂದ ತಪ್ಪಿಸಿಕೊಂಡು ಹೋಗಿ ತನ್ನ ಪ್ರಿಯಕರ ಸಿರೀಶ್ ಭಾರದ್ವಾಜ್ ಅವರನ್ನು ಮದುವೆಯಾದ ಘಟನೆ ಬೆಳಕಿಗೆ ಬಂತು. ಚಾರ್ಟರ್ಡ್ ಅಕೌಂಟೆಂಟ್ ಪದವಿ ಓದುತ್ತಿದ್ದ ಶ್ರೀಜಾ, ನಾಲ್ಕು ವರ್ಷದಿಂದ ಸಿರೀಶನನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿಗೆ ಚಿರಂಜೀವಿ ಕುಟುಂಬ ಸುತರಾಂ ಒಪ್ಪಿರಲಿಲ್ಲ. ಆಕೆಯ ಓದನ್ನೂ ಮೊಟಕುಗೊಳಿಸಿ ಒಂದು ವರ್ಷದಿಂದ ಮನೆಯಲ್ಲೇ ಇಟ್ಟಿದ್ದರು. ಈದಿನ ಮುಂಜಾನೆ ಮನೆಯಿಂದ ತಪ್ಪಿಸಿಕೊಂಡ ಶ್ರೀಜಾ, ಹೈದರಾಬಾದಿನಲ್ಲಿ ಆರ್ಯ ಸಮಾಜದಲ್ಲಿ ತಾನು ಪ್ರೀತಿಸಿದ ಸಿರೀಶನೊಂದಿಗೆ ರಹಸ್ಯವಾಗಿ ಮದುವೆಯಾದರು. ನಂತರ ಮಾಧ್ಯಮಗಳ ಮುಂದೆ ಬಂದು ತಮ್ಮ 'ಪ್ರೇಮ ಕಥೆ'ಯನ್ನು ಬಹಿರಂಗ ಪಡಿಸಿದರು. ಕಳೆದ ವರ್ಷ ಚಿರಂಜೀವಿ ಅವರ ಹಿರಿಯ ಪುತ್ರಿಯ ಮದುವೆ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ವಿಜೃಂಭಣೆಯಿಂದ ನಡೆದಿತ್ತು.

2007: ಪಾಕಿಸ್ಥಾನವು ಅಂತಾರಾಷ್ಟ್ರೀಯ ಕ್ರಿಕೆಟ್ಟಿಗೆ ನೀಡಿದ ಅತ್ಯುತ್ತಮ ಅಂಪೈರ್ ಅಲೀಮ್ ದಾರ್ ಮಟ್ಟಿಗೆ ಈದಿನ ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಹಣಾಹಣಿಯ ಪಂದ್ಯದಲ್ಲಿ ತಮ್ಮ ನೂರನೇ ಏಕದಿನ ಪಂದ್ಯದ ಸಂಭ್ರಮವನ್ನು ಅನುಭವಿಸಿದರು. ನಾಗಪುರ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅದು ಅವರ 99 ನೆಂಯ ಏಕದಿನ ಪಂದ್ಯವಾಗಿತ್ತು. 2003ರಲ್ಲಿ ಢಾಕಾದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಅವರು ಮೊತ್ತ ಮೊದಲ ಬಾರಿಗೆ ಟೆಸ್ಟ್ ಅಂಪೈರ್ ಆಗಿದ್ದರು. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಅವರು ಪದಾರ್ಪಣೆ ಮಾಡಿದ್ದು ಆತಿಥೇಯ ಪಾಕಿಸ್ಥಾನ ಹಾಗೂ ಪ್ರವಾಸಿ ಶ್ರೀಲಂಕಾ ತಂಡಗಳು 2000 ಇಸವಿಯ ಫೆಬ್ರುವರಿಯಲ್ಲಿ ಹಣಾಹಣಿ ನಡೆಸಿದ್ದಾಗ.

2007: ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವ ಶ್ರೀ ಪ್ರಶಸ್ತಿ'ಯನ್ನು ಈ ಬಾರಿ ಹರಿಯಾಣದ ಸಮಾಜ ಸೇವಕ ಸ್ವಾಮಿ ಅಗ್ನಿವೇಶ್ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯು 1ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡುವ ರಾಜ್ಯ ಸಂಗೀತ ವಿದ್ವಾನ್ ಗೌರವ ಪುರಸ್ಕಾರಕ್ಕೆ ನಾಡಿನ ಹಿರಿಯ ಹಿಂದೂಸ್ಥಾನಿ ಗಾಯಕ ಪಂಡಿತ್ ಸಿದ್ದರಾಮಸ್ವಾಮಿ ಕೋರವಾರ ಅವರು ಆಯ್ಕೆಯಾದರು.

2007: ಮುಂಬೈ: ಬ್ಯಾಟಿಂಗಿನಲ್ಲೂ ಬೌಲರುಗಳು ಮಿಂಚಿದ್ದರಿಂದ ಮುಂಬೈಯಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ವಿಕೆಟುಗಳ ರೋಚಕ ಗೆಲುವು ಸಾಧಿಸಿತು.

2007: ಕರ್ನಾಟಕ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ವಿದ್ಯುತ್ ಸರಬರಾಜು ಮಾಡಲು ಅಥವಾ ಅಗತ್ಯವಾದ ಲೈನು/ ಇತರ ಕೆಲಸಗಳಿಗಾಗಿ ಗ್ರಾಹಕರಿಂದ ಎರಡು ತಿಂಗಳ ವಿದ್ಯುತ್ ಬಿಲ್ (2 ಎಂಎಂಡಿ) ಮೊತ್ತಕ್ಕೆ ಸಮಾನವಾದ ಠೇವಣಿಯನ್ನು ಪಡೆಯಬಹುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) ಆದೇಶ ನೀಡಿತು. ಒಂದು ವೇಳೆ ಎರಡು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ನೀಡುವ ಕ್ರಮ ಇದ್ದರೆ 3 ತಿಂಗಳ ಬಿಲ್ (3 ಎಂಎಂಡಿ) ಮೊತ್ತವನ್ನು ಭದ್ರತೆಯಾಗಿ ಪಡೆಯಬಹುದು, ಅಕ್ಟೋಬರ್ 11ರಿಂದ ಈ ಆದೇಶ ಜಾರಿಗೆ ಬಂದಿದೆ ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಿಸಿದರು.

2007: ರಿಜ್ವಾನುರ್ ರೆಹಮಾನ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತ್ತ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡಿತು. ಕೋಲ್ಕತ್ತಾ ಪೊಲೀಸ್ ಆಯುಕ್ತ ಪ್ರಸುನ್ ಮುಖರ್ಜಿ, ಪೊಲೀಸ್ ಉಪ ಕಮಿಷನರುಗಳಾದ ಗ್ಯಾನ್ವಂತ್ ಸಿಂಗ್ ಮತ್ತು ಅಜಯ್ ಕುಮಾರ್, ರೌಡಿ ನಿಗ್ರಹ ದಳದ ಸಹಾಯಕ ಕಮಿಷನರ್ ಸುಕಾಂತಿ ಚಕ್ರವರ್ತಿ, ಸಬ್ ಇನ್ಸ್ಪೆಕ್ಟರ್ ಕೃಷ್ಣೇಂದು ಘೋಷ್ ಅವರ ವಿರುದ್ಧ ಈ ತನಿಖೆಗೆ ಹೈಕೋರ್ಟ್ ಆಜ್ಞಾಪಿಸಿತ್ತು.

2007: ಸಾಹಿತ್ಯ ಲೋಕದ ಅತ್ಯುನ್ನತ `ಬೂಕರ್' ಪ್ರಶಸ್ತಿ ಐರಿಷ್ ಲೇಖಕಿ ಅನ್ನೆ ಎನ್ ರೈಟ್ (45) ಅವರಿಗೆ ಲಭಿಸಿತು. ಭಾರತದ ಇಂದ್ರಾ ಸಿನ್ಹಾ ಹಾಗೂ ಇತರ ನಾಲ್ವರನ್ನು ಹಿಂದಿಕ್ಕಿ ಅನ್ನೆ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇಂದ್ರಾ ಅವರ `ಅನಿಮಲ್ಸ್ ಪೀಪಲ್', ಇಯಾನ್ ಮೆಕ್ ವಾನ್ ಅವರ `ಆನ್ ಚೆಸಿಲ್ ಬೀಚ್' ಹಾಗೂ ಲಾಯ್ಡ್ ಜೋನ್ಸ್ ಅವರ `ಮಿಸ್ಟರ್ ಪಿಪ್' ಪುಸ್ತಕಗಳನ್ನು ಅನ್ನೆ ಅವರ `ದಿ ಗ್ಯಾದರಿಂಗ್' ಹಿಂದಿಕ್ಕಿತು. ಹೋವರ್ಡ್ ಡೇವೀಸ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿತು. ಪ್ರಶಸ್ತಿಯು 50 ಸಾವಿರ ಪೌಂಡುಗಳ ನಗದು ಬಹುಮಾನ ಹೊಂದಿದೆ.

2007: ಸುಮಾರು 140 ದಶಲಕ್ಷ ವರ್ಷಗಳ ಹಿಂದೆ `ಗೊಂಡ್ವಾನಾಲ್ಯಾಂಡ್' ಎಂದೇ ಕರೆಯಲ್ಪಡುವ ಮಹಾಖಂಡ ಒಡೆದು ನಂತರ ಅದರ ಒಂದು ಭಾಗವಾದ ಭಾರತ ಉಪಖಂಡ ಅತಿ ವೇಗವಾಗಿ ಯುರೇಷಿಯಾಕ್ಕೆ ಅಪ್ಪಳಿಸಿದ ಪರಿಣಾಮ ಹಿಮಾಲಯ ಪರ್ವತ ಮತ್ತು ಟಿಬೆಟ್ ಪ್ರಸ್ಥಭೂಮಿ ರಚನೆಯಾಗಿರುವುದಾಗಿ ಬ್ರಿಟನ್ನಿನ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿತು. ಈ ಮಹಾಖಂಡದಲ್ಲಿ ಆಧುನಿಕ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ದಕ್ಷಿಣ ಅಮೆರಿಕ ಉಪಖಂಡಗಳು ಸೇರಿದ್ದವು. ಇತರ ಭಾಗಗಳಿಗಿಂತಲೂ ಭಾರತ ಅತಿವೇಗವಾಗಿ (ವರ್ಷಕ್ಕೆ 18ರಿಂದ 20 ಸೆಂಟಿ ಮೀಟರಿನಷ್ಟು) ಚಲಿಸಿ, ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಯುರೇಷಿಯಾಕ್ಕೆ ಅಪ್ಪಳಿಸಿ ಹಿಂದಕ್ಕೆ ಸರಿದಾಗ ಭೂಮಿ ದೊಡ್ಡ ಪರ್ವತವಾಗಿ ಮಾರ್ಪಟ್ಟು ವಿಶ್ವದ ಅತಿ ಎತ್ತರದ ಶಿಖರ ನಿರ್ಮಾಣವಾಯಿತು. ಆದರೆ ಆಸ್ಟ್ರೇಲಿಯಾ ಮತ್ತು ಆಫ್ರಿಕಾ ನಿಧಾನಗತಿಯಲ್ಲಿ ವರ್ಷಕ್ಕೆ 4 ಸೆಂಟಿ ಮೀಟರಿನಷ್ಟು ಚಲಿಸಿತು. ದಕ್ಷಿಣ ಅಮೆರಿಕ ಸ್ವಲ್ಪ ವೇಗವಾಗಿ ಚಲಿಸಿತು. ಅಂಟಾರ್ಕ್ಟಿಕಾ ಮಾತ್ರ ಅಲ್ಲೇ ಉಳಿಯಿತು ಎಂದು ಜರ್ಮನ್ ಮತ್ತು ಭಾರತೀಯ ತಜ್ಞ ಲೇಖಕರು ನಂಬುವುದಾಗಿ ಪತ್ರಿಕೆ ಪ್ರಕಟಿಸಿತು.

2007: ಬರ್ಕಿನಾ ಫಾಸೋ, ಕೋಸ್ಟಾ ರಿಕಾ, ಕ್ರೊವೇಷಿಯಾ, ಲಿಬಿಯಾ ಹಾಗೂ ವಿಯೆಟ್ನಾಂ ದೇಶಗಳನ್ನು ಮುಂದಿನ ಎರಡು ವರ್ಷಗಳ ಅವಧಿಗಾಗಿ ಭದ್ರತಾ ಮಂಡಲಿಗೆ ಹಂಗಾಮಿ ಸದಸ್ಯರನ್ನಾಗಿ ವಿಶ್ವಸಂಸ್ಥೆಯ ಮಹಾಸಭೆ ಆಯ್ಕೆ ಮಾಡಿತು.

2006: ಭಾರತೀಯ ಸಂಜಾತ ವಿಜ್ಞಾನಿ ಮಂಡ್ಯಮ್ ಶ್ರೀನಿವಾಸನ್ (56) ಅವರಿಗೆ ವೈಜ್ಞಾನಿಕ ಸಂಶೋಧನೆಗೆ ನೀಡಲಾಗುವ ಆಸ್ಟ್ರೇಲಿಯಾದ ಪ್ರತಿಷ್ಠಿತ ಪ್ರಧಾನ ಮಂತ್ರಿ ಪ್ರಶಸ್ತಿ ಲಭಿಸಿತು. ಮೂರು ಲಕ್ಷ ಡಾಲರ್ ಮೌಲ್ಯದ ಈ ಪ್ರಶಸ್ತಿಯನ್ನು ಮೆಲ್ಬೋರ್ನಿನಲ್ಲಿ ಪ್ರದಾನ ಮಾಡಲಾಯಿತು. ಆಸ್ಟ್ರೇಲಿಯಾದ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿರುವ ಶ್ರೀನಿವಾಸನ್ ಅವರು ಜೇನ್ನೊಣಗಳ ಹಾರಾಟ ಕೌಶಲ ಬಗ್ಗೆ ಮಾಡಿದ ಸಂಶೋಧನೆ ಹಾಗೂ ಅದನ್ನು ರೊಬೋಟಿಕ್ ವಿಮಾನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಯಿತು.

2006: ಕುತೂಹಲ ಕೆರಳಿಸಿದ್ದ ಪ್ರಿಯದರ್ಶಿನಿ ಮಟ್ಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿಯ ಪುತ್ರ ಸಂತೋಷ ಕುಮಾರ ಸಿಂಗ್ ತಪ್ಪಿತಸ್ಥ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. 1996ರ ಜುಲೈ 23ರಂದು ಈ ಕೊಲೆ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಎಸ್. ಸೋಧಿ, ಹಾಗೂ ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಅವರನ್ನು ಒಳಗೊಂಡ ಪೀಠವು ಆರೋಪಿಯನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು.

2006: ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪಾರಿತೋಷಕ ನೀಡದೆ ಆಯ್ಕೆ ಸಮಿತಿ ಈವರೆಗಿನ ಅತಿದೊಡ್ಡ ತಪ್ಪು ಎಸಗಿದೆ ಎಂದು ನಾರ್ವೆಯ ನೊಬೆಲ್ ಸಂಸ್ಥೆ ನಿರ್ದೇಶಕ ಗೀರ್ ಲುಂಡೆಸ್ಟ್ಯಾಂಡ್ ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿ ಅವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡುವ ಪ್ರಸ್ತಾವನೆ ಇತ್ತು, ಆದರೆ 1948ರಲ್ಲಿ ಗಾಂಧೀಜಿ ನಿಧನರಾದ ಬಳಿಕ ಆ ಯೋಚನೆ ಕೈಬಿಡಲಾಯಿತು ಎಂದು ಲುಂಡೆ ಸ್ಟ್ಯಾಂಡ್ ನಾರ್ವೆಯ ರಾಜಧಾನಿ ಓಸ್ಲೊದಲ್ಲಿ ಭಾರತೀಯ ಪತ್ರಕರ್ತರಿಗೆ ತಿಳಿಸಿದರು.

1997: ಕ್ರಾಂತಿಕಾರಿ ಅರ್ನೆಸ್ಟೋ `ಚೆ' ಗ್ಯುವೇರಾ ಅವರ ಅವಶೇಷಗಳನ್ನು 30 ವರ್ಷಗಳ ಬಳಿಕ ಕ್ಯೂಬಾದಲ್ಲಿ ಸಮಾಧಿ ಮಾಡಲಾಯಿತು. ಮೂವತ್ತು ವರ್ಷಗಳ ಹಿಂದೆ ಬೊಲಿವಿಯಾದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

1979: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

1970: ಅನಿಲ್ ಕುಂಬ್ಳೆ ಜನ್ಮದಿನ. 300 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಟುಗಳನ್ನು ಪಡೆದ ಏಕೈಕ ಭಾರತೀಯ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

1970: ಅನ್ವರ್ ಸಾದತ್ ಅವರು ಅಬ್ದುಲ್ ನಾಸ್ಸೇರ್ ಅವರ ಉತ್ತರಾಧಿಕಾರಿಯಾಗಿ ಈಜಿಪ್ಟಿನ ಅಧ್ಯಕ್ಷ ಸ್ಥಾನಕ್ಕೆ ಏರಿದರು.

1941: ಹಿರಿಯ ಭಾಷಾ ವಿಜ್ಞಾನಿ, ಘನ ವಿದ್ವಾಂಸ, ವಿಮರ್ಶಕ ಡಾ. ಕೆ.ಜಿ. ಶಾಸ್ತ್ರಿ ಅವರು ಗಣೇಶ ಶಾಸ್ತ್ರಿ- ಮೀನಾಕ್ಷಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.

1941: ಸಾಹಿತಿ ಶಾಂತಾ ಸನ್ಮತಿಕುಮಾರ್ ಜನನ.

1933: ಆಲ್ಬರ್ಟ್ ಐನ್ ಸ್ಟೀನ್ ಅವರು ನಾಜಿ ಜರ್ಮನಿಯಿಂದ ನಿರಾಶ್ರಿತರಾಗಿ ಅಮೆರಿಕಕ್ಕೆ ಆಗಮಿಸಿದರು.

1932: ಸಾಹಿತಿ ಎಚ್. ಬಿ. ಚಂಪಕಮಾಲಾ ಜನನ.

1932: ಸಾಹಿತಿ ರಾಜೀವ್ ತಾರಾನಾಥ ಜನನ.

1926: ಸಾಹಿತಿ ಎಂ.ಎನ್. ಸರೋಜಮ್ಮ ಜನನ.

1920: ಭಾರತದ ಕಮ್ಯೂನಿಸ್ಟ್ ಪಕ್ಷವು ತಾಷ್ಕೆಂಟಿನಲ್ಲಿ ಸ್ಥಾಪನೆಗೊಂಡಿತು. ಏಳುಮಂದಿ ಸದಸ್ಯರಲ್ಲಿ ಎಂ.ಎನ್. ರಾಯ್ ಮತ್ತು ಬೀರೇಂದ್ರ ಚಟ್ಟೋಪಾಧ್ಯಾಯ ಸೇರಿದ್ದರು.

1919: ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಗೊಂಡಿತು. ಮುಸ್ಲಿಂ ನಾಯಕ ಮೌಲಾನಾ ಜೌಹರ್ ಅಲಿ ಮತ್ತು ಮೌಲಾನಾ ಶೌಕತ್ ಅಲಿ ಸೋದರರು ಮತ್ತು ಅಬ್ದುಲ್ ಕಲಾಂ ಆಜಾದ್ ನೇತೃತ್ವದಲ್ಲಿ ಚಳವಳಿಗೆ ನಾಂದಿ ಹಾಡಲಾಯಿತು.

1912: ಪೋಪ್ ಒಂದನೇ ಜಾನ್ ಪಾಲ್ (1912-78) ಜನ್ಮದಿನ. 1978ರಲ್ಲಿ ಪೋಪ್ ಪದವಿಗೆ ಏರಿದ ಇವರು ಆ ಹುದ್ದೆಯಲ್ಲಿ ಇದ್ದುದು 34 ದಿನ ಮಾತ್ರ. ಆಧುನಿಕ ಕಾಲದಲ್ಲಿ ಈ ಹುದ್ದೆಯಲ್ಲಿ ಅತ್ಯಂತ ಕಡಿಮೆ ದಿನ ಇದ್ದವರು ಇವರು.

1906: ಸ್ವಾಮಿ ರಾಮತೀರ್ಥ ಜನನ.

1817: ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯದ ಸ್ಥಾಪಕ ಸರ್ ಸೈಯದ್ ಅಹಮದ್ ಖಾನ್ (1817-98) ಜನ್ಮದಿನ. ಮುಸ್ಲಿಂ ಶಿಕ್ಷಣತಜ್ಞ, ನ್ಯಾಯವಾದಿ ಹಾಗೂ ಗ್ರಂಥಕರ್ತರಾಗಿದ್ದ ಇವರು 19ನೇ ಶತಮಾನದಲ್ಲಿ ಭಾರತೀಯ ಮುಸ್ಲಿಮರ ಪುನರುತ್ಥಾನಕ್ಕೆ ಮಹತ್ವದ ಕಾಣಿಕೆ ನೀಡಿದರು.

1777: ಸ್ವಾತಂತ್ರ್ಯ ಸಮರ ಕಾಲದ ಸರಟೋಗಾ ಕದನದಲ್ಲಿ ಅಮೆರಿಕನ್ ವಸಾಹತುಗಾರರಿಗೆ (ಕೊಲೊನಿಸ್ಟ್) ಜನರಲ್ ಹೊರಾಷಿಯೋ ಗೇಟ್ಸ್ ನಾಯಕತ್ವದಲ್ಲಿ ವಿಜಯ ಲಭಿಸಿತು. ಜಾನ್ ಬರ್ಗೊಯೆನ್ ನೇತೃತ್ವದ ಬ್ರಿಟಿಷ್ ಪಡೆಗಳು ಪರಾಭವ ಅನುಭವಿಸಿದವು.

No comments:

Advertisement