Sunday, October 18, 2009

ಇಂದಿನ ಇತಿಹಾಸ History Today ಅಕ್ಟೋಬರ್ 18

ಇಂದಿನ ಇತಿಹಾಸ

ಅಕ್ಟೋಬರ್ 18


ಭಾರತೀಯ ಕ್ರಿಕೆಟಿನ ಮಾಜಿ ಆಟಗಾರ ನರೇಂದ್ರ ಹಿರ್ವಾನಿ ಜನ್ಮದಿನ. ತಮ್ಮ ಚೊಚ್ಚಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 16 ವಿಕೆಟುಗಳನ್ನು ಗಳಿಸಿ ಖ್ಯಾತರಾಗಿದ್ದರು.

2014: ಜಮ್ಮು: ಪಾಕಿಸ್ತಾನಿ ರೇಂಜರ್​ಗಳು ಈದಿನ ಮತ್ತೆ ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಗಳ (ಬಿಎಸ್​ಎಫ್) ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಜಮ್ಮು ಜಿಲ್ಲೆಯ ಆರ್​ಎಸ್ ಪುರ ವಿಭಾಗದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್​ಎಫ್ ನೆಲೆಗಳ ಮೇಲೆ ಪಾಕಿಸ್ತಾನಿ ರೇಂಜರ್​ಗಳು ಈದಿನ ಅಪ್ರಚೋದಿತ ಗುಂಡಿನದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿ ಹೇಳಿದರು. ಮುಂಜಾನೆ 5.30ಕ್ಕೆ ಗುಂಡಿನ ದಾಳಿ ಆರಂಭವಾಯಿತು. ಸ್ವಯಂಚಾಲಿತ ಹಗುರ ಶಸ್ತ್ರಾಸ್ತ್ರಗಳನ್ನು ಅವರು ದಾಳಿಗೆ ಬಳಸಿದರು. ಬಿಎಸ್​ಎಫ್ ಕೂಡಾ ಅದೇ ದರ್ಜೆಯ ಶಸ್ತ್ರಾಸ್ತ್ರಗಳಿಂದ ಅವರಿಗೆ ಸೂಕ್ತ ಉತ್ತರ ನೀಡಿತು. ಗುಂಡಿನ ವಿನಿಮಯ ಮಧ್ಯಾಹ್ನದವರೆಗೂ ಮುಂದುವರೆಯಿತು ನಮ್ಮ ಕಡೆಯಿಂದ ಯಾವುದೇ ಸಾವು ನೋವಿನ ವರದಿ ಇಲ್ಲ ಎಂದು ಅಧಿಕಾರಿ ಹೇಳಿದರು. ಪೂಂಚ್ ಜಿಲ್ಲೆಯ ಹಮೀರಪುರ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಹಿಂದಿನ ರಾತ್ರಿ ಪಾಕಿಸ್ತಾನಿ ಸೇನೆ ದ್ವಿಪಕ್ಷೀಯ ಕದನವಿರಾಮವನ್ನು ಉಲ್ಲಂಘಿಸಿ ಭಾರತೀಯ ನೆಲೆಗಳತ್ತ ಗುಂಡಿನ ದಾಳಿ ನಡೆಸಿತ್ತು. ರಾತ್ರಿ 8.55ಕ್ಕೆ ಪೂಂಚ್ ಜಿಲ್ಲೆಯ ಹಮೀರಪುರ ವಿಭಾಗದಲ್ಲಿ ಪಾಕಿಸ್ತಾನಿ ಸೇನೆಯು ಭಾರತೀಯ ನೆಲೆಗಳತ್ತ ಗುಂಡು ಹಾರಿಸಲು ಆರಂಭಿಸಿತು. ಪಾಕ್ ಸೈನಿಕರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ದಾಳಿಗೆ ಬಳಸಿದರು ಎಂದು ಸೇನಾ ಮೂಲಗಳು ತಿಳಿಸಿದವು. ಅಕ್ಟೋಬರ್ 6ರಿಂದೀಚೆಗೆ ಜಮ್ಮು ವಲಯದಲ್ಲಿ ಜನ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನವು ನಡೆಸಿದ ದಾಳಿಗಳಲ್ಲಿ ಎಂಟು ನಾಗರಿಕರು ಮೃತರಾಗಿ 62 ಮಂದಿ ಗಾಯಗೊಂಡಿದ್ದರು. ಸಹಸ್ರಾರು ಮಂದಿ ಗುಳೇಹೋಗಿದ್ದಾರೆ.

2014: ವಾಷಿಂಗ್ಟನ್: ಚೆನ್ನೈಯಲ್ಲಿ ಜನಿಸಿದ ಭಾರತೀಯ ಮೂಲದ ಅಮೆರಿಕ ವಿಜ್ಞಾನಿ ಹಾಗೂ ಎಂಜಿನಿಯರ್ ಸುಬ್ರ ಸುರೇಶ್ ಅವರು ಅಕ್ಟೋಬರ್ 19ರಂದು ಇನ್​ಸ್ಟಿಟ್ಯೂಟ್ ಆಫ್ ಮೆಡಿಸಿನ್​ಗೆ (ಐಒಎಂ) ಸೇರ್ಪಡೆಗೊಳ್ಳಲು ಸಜ್ಞಾದರು. ಇದರೊಂದಿಗೆ ಎಲ್ಲಾ ಮೂರೂ ರಾಷ್ಟ್ರೀಯ ಅಕಾಡೆಮಿಗಳಿಗೆ ಆಯ್ಕೆಯಾಗುತ್ತಿರುವ ಏಕೈಕ ವಿಶ್ವವಿದ್ಯಾಲಯದ ಅಧ್ಯಕ್ಷ ಎಂಬ ಅಪರೂಪದ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಪ್ರಸ್ತುತ ಕಾರ್ನಿಜೀ ಮೆಲ್ಲೋನ್ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿರುವ ಸುರೇಶ್ ಅವರು ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಮತ್ತು ಎಂಜಿನಿಯರಿಂಗ್ ರಾಷ್ಟ್ರೀಯ ಅಕಾಡೆಮಿಗಳನ್ನು ಒಳಗೊಂಡ ಇನ್​ಸ್ಟಿಟ್ಯೂಟ್ ಆಫ್ ಮೆಡಿಸಿನ್ ಸಂಸ್ಥೆಗೆ ಆಯ್ಕೆಯಾಗುತ್ತಿರುವ 16 ಮಂದಿ ಅಮೆರಿಕನ್ನರಲ್ಲಿ ಒಬ್ಬರಾಗಿದ್ದಾರೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮದ್ರಾಸ್, ಲೋವಾ ಸ್ಟೇಟ್ ಯುನಿವರ್ಸಿಟಿ ಮತ್ತು ಮೆಸಾಚ್ಯುಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿಯಾಗಿರುವ ಸುರೇಶ್ ಅವರು 2010-2013ರ ಅವಧಿಯಲ್ಲಿ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 7 ಶತಕೋಟಿ ಡಾಲರ್ ವ್ಯವಹಾರದ ಈ ಫೌಂಡೇಷನ್ ಸ್ವತಂತ್ರ ವಿಜ್ಞಾನ ಸಂಸ್ಥೆಯಾಗಿದ್ದು ಮೂಲಭೂತ ವಿಜ್ಞಾನ, ಎಂಜಿನಿಯರಿಂಗ್ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ಎಸಗುತ್ತಿರುವ ಪ್ರತಿಷ್ಠಿತ ಸಂಸ್ಥೆ. ಮಲೇರಿಯಾ, ರಕ್ತ ಸಂಬಂಧಿತ ಕಾಯಿಲೆಗಳು ಮತ್ತು ಕೆಲವು ಮಾದರಿಯ ಕ್ಯಾನ್ಸರ್ ಮತ್ತಿತರ ರೋಗಗಳಿಗೆ ತಮ್ಮ ಸಂಶೋಧನೆ ಮೂಲಕ ಔಷಧ ಕಂಡು ಹಿಡಿದು ಆರೋಗ್ಯ ಸೇವಾ ಕ್ಷೇತ್ರಕ್ಕೆ ಸುರೇಶ್ ಅವರು ನೀಡಿರುವ ಕೊಡುಗೆಯನ್ನು ಐಓಎಂ ಗುರುತಿಸಿದೆ ಎಂದು ಪೆನ್ಸಿಲ್ವೇನಿಯಾ ಮೂಲದ ಪಿಟ್ಸ್​ಬರ್ಗ್ ಯುನಿರ್ವಸಿಟಿ ಪ್ರಕಟಿಸಿತು.

2014: ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಇತರರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಪರಪ್ಪನ ಅಗ್ರಹಾರದ ಕೇಂದ್ರೀಯ ಸೆರೆಮನೆಯಿಂದ ಅವರನ್ನು ಈದಿನ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಬೆಂಬಲಿಗರ ಸಂಭ್ರಮೋತ್ಸಾಹದ ಮಧ್ಯೆ ಸೆರೆಮನೆಯಿಂದ ಹೊರಬಂದ ಜಯಲಲಿತಾ ಅವರು ಒಯ್ಯಲು ಸಜ್ಜಾಗಿ ಬಂದಿದ್ದ ಕಾರಿನಲ್ಲಿ ಸೆರೆಮನೆಯಿಂದ ತಮಿಳುನಾಡಿನ ಕಡೆಗೆ ಹೊರಟರು. ಅದಕ್ಕೆ ಮುನ್ನ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಯಲಲಿತಾ ಮತ್ತು ಇತರರನ್ನು ಬಿಡುಗಡೆ ಮಾಡುವಂತೆ ಇಲ್ಲಿನ ವಿಶೇಷ ನ್ಯಾಯಾಲಯ ಬೆಳಗ್ಗೆ ಆಜ್ಞಾಪಿಸಿತು. ಈ ಆದೇಶದ ಪ್ರತಿಯನ್ನು ತೆಗೆದುಕೊಂಡು ಕೋರ್ಟ್ ಸಂದೇಶವಾಹಕನ ಬಂದ ಬಳಿಕೆ ಪರಪ್ಪನ ಅಗ್ರಹಾರದ ಕೇಂದ್ರೀಯ ಸೆರೆಮನೆಯಲ್ಲಿ ಜಯಲಲಿತಾ ಮತ್ತು ಇತರ ಮೂವರ ಬಿಡುಗಡೆ ಪ್ರಕ್ರಿಯೆ ಚುರುಕುಗೊಂಡಿತು. ಇದಕ್ಕೂ ಮುನ್ನ ವಿಶೇಷ ನ್ಯಾಯಾಲಯವು ಜಯಲಲಿತಾ ಮತ್ತು ಇತರರಿಂದ ಭದ್ರತಾ ಖಾತರಿಯನ್ನು ಪಡೆದುಕೊಂಡಿತು. ವೈದ್ಯಕೀಯ ಪರೀಕ್ಷೆ ಮತ್ತಿತರ ಔಪಚಾರಿಕ ವಿಧಿವಿಧನಗಳ ಬಳಿಕ ಮೊದಲು ಅಧಿಕಾರಿಗಳು ಇಳವರಸಿ ಅವರನ್ನು ಕರೆಸಿಕೊಂಡು ಬಿಡುಗಡೆ ಮಾಡಿದರು. ಆ ಬಳಿಕ ಜಯಲಲಿತಾ, ನಿಕಟವರ್ತಿಗಳಾದ ಶಶಿಕಲಾ ಹಾಗೂ ಸುಧಾಕರನ್ ಅವರನ್ನೂ ಬಿಡುಗಡೆ ಮಾಡಲಾಯಿತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 4 ವರ್ಷಗಳ ಸೆರೆವಾಸದ ಶಿಕ್ಷೆಗೆ ಗುರಿಯಾದ ಬಳಿಕ ಕಳೆದ 22 ದಿನಗಳಿಂದ ಪರಪ್ಪನ ಅಗ್ರಹಾರದ ಕೇಂದ್ರೀಯ ಸೆರೆಮನೆಯಲ್ಲಿ ಜಯಲಲಿತಾ ಮತ್ತು ಇತರರನ್ನು ಇರಿಸಲಾಗಿತ್ತು. ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಯಲಲಿತಾ ಅವರನ್ನು ಸ್ವಾಗತಿಸಲು ಪರಪ್ಪನ ಅಗ್ರಹಾರ ಆವರಣದಲ್ಲೇ ಜಮಾಯಿಸಿದ್ದರು.

2014: ಲೂಧಿಯಾನ: ಲೂಧಿಯಾನದ ಮಾಜಿ ಸಂಸತ್ ಸದಸ್ಯ, ಅಕಾಲಿ ನಾಯಕ ಗುರುಚರಣ್ ಸಿಂಗ್ ಗಾಲಿಬ್ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಲೂಧಿಯಾನದಲ್ಲಿ ನಿಧನರಾದರು. ಕಾಂಗ್ರೆಸ್ ಪಕ್ಷದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಗಾಲಿಬ್ (82) ಐದು ವರ್ಷಗಳ ಹಿಂದೆ ಅಕಾಲಿದಳಕ್ಕೆ ನಿಷ್ಠೆ ಬದಲಾಯಿಸಿದ್ದರು. ಈದಿನ ಬೆಳಗ್ಗೆ ಅವರು ನಿಧನರಾದರು ಎಂದು ಕುಟುಂಬ ಸದಸ್ಯರು ತಿಳಿಸಿದರು. ಪಂಜಾಬ್ ಮುಖ್ಯಮಂತ್ರಿ ಪ್ರಕಾಶಸಿಂಗ್ ಬಾದಲ್ ಅವರು ಗಾಲಿಬ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದರು. ಗಾಲಿಬ್ ಅವರು ಪತ್ನಿ, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದರು.

2014: ಮಾಲ್ಡಾ (ಪಶ್ಚಿಮ ಬಂಗಾಳ): ಶತಾಬ್ದಿ ಎಕ್ಸ್​ಪ್ರೆಸ್ ರೈಲುಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದ ವಜ್ರದ ವ್ಯಾಪಾರಿಯೊಬ್ಬರನ್ನು ಗಮನ ಸೆಳೆದು ವಂಚಿಸಿದ ಇಬ್ಬರು ವ್ಯಕ್ತಿಗಳು ಅವರ ಬಳಿ ಇದ್ದ ಚಿನ್ನ ಮತ್ತು ನಗದು ಹಣವನ್ನು ಕಿತ್ತುಕೊಂಡ ಘಟನೆ ಘಟಿಸಿತು. ವಜ್ರದ ವ್ಯಾಪಾರಿಯ ಚೀಲವನ್ನು ಚಿನ್ನ ಹಾಗೂ ನಗದು ಸಹಿತವಾಗಿ ಕಿತ್ತುಕೊಂಡ ವ್ಯಕ್ತಿಗಳಿಬ್ಬರೂ ರೈಲುಗಾಡಿಯು ಜಮೀರ್ ಘಾಟಾ ನಿಲ್ದಾಣ ತಲುಪುವ ಮುನ್ನವೇ ರೈಲಿನಿಂದ ಇಳಿದು ಪರಾರಿಯಾದರು. ವಜ್ರದ ವ್ಯಾಪಾರಿ ನ್ಯೂ ಜಲಪಾಯಿಗುರಿಯಿಂದ ಹೌರಾಕ್ಕೆ ಹೊರಟಿದ್ದ ಶತಾಬ್ದಿ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣ ಹೊರಟಿದ್ದರು. ಆಗಂತುಕ ವ್ಯಕ್ತಿಗಳು ರೈಲುಗಾಡಿಯು ಜಮೀರ್ ಘಾಟಾ ನಿಲ್ದಾಣ ಬರುವ ಮುನ್ನವೇ ಸಿಗ್ನಲ್​ನಲ್ಲಿ ರೈಲುಗಾಡಿ ನಿಂತಾಗ ವಜ್ರದ ವ್ಯಾಪಾರಿಯ ಗಮನವನ್ನು ಸೆಳೆದು ನಿಮ್ಮ ಚೀಲ ಬಿದ್ದಿದೆ ನೋಡಿ ಎಂದು ಹೇಳಿ ಅವರು ಗಲಿಬಿಲಿಯಾಗುತ್ತಿದ್ದಂತೆಯೇ ಚಿನ್ನ ಮತ್ತು ನಗದು ಇದ್ದ ಚೀಲವನ್ನು ಕಿತ್ತುಕೊಂಡು ಪರಾರಿಯಾದರು ಎಂದು ಸುದ್ದಿ ಮೂಲಗಳು ಹೇಳಿದವು.

2008: ಮುಂದಿನ ಮಾರ್ಚ್ ಅಂತ್ಯದೊಳಗೆ ಒಂದು ಲಕ್ಷ ಯುವಜನರಿಗೆ ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಿದ ಕರ್ನಾಟಕ ರಾಜ್ಯ ಸರ್ಕಾರ 30,000 ಜನರಿಗೆ ಕೌಶಲ್ಯ ತರಬೇತಿ ಕಲ್ಪಿಸುವ ಸಂಬಂಧ ಈದಿನ ಐದು ಪ್ರಮುಖ ಕಂಪೆನಿಗಳ ಜತೆ ಬೆಂಗಳೂರಿನಲ್ಲಿ ಒಪ್ಪಂದ ಮಾಡಿಕೊಂಡಿತು. ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಜಂಟಿಯಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ ಎರಡು ದಿನಗಳ `ಬೃಹತ್ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮೇಳ'ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಪ್ಪಂದಕ್ಕೆ ಸಹಿ ಮಾಡಿದರು.

2008: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಸರ್ಕಾರದ ಪರ ವಾದ ಮಾಡಲು ರಾಜ್ಯ ಸರ್ಕಾರವು ಹೈಕೋರ್ಟ್ ನಿವೃತ್ತ ಹೆಚ್ಚುವರಿ ನ್ಯಾಯಮೂರ್ತಿ ರವಿ ಬಿ.ನಾಯಕ್ ಅವರನ್ನು ಸರ್ಕಾರಿ ವಿಶೇಷ ಅಭಿಯೋಜಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿತು. ಈಜಿಪುರದ ವಸತಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೇವರಿಕ್ ಸಂಸ್ಥೆಯಿಂದ ಕೋಟ್ಯಂತರ ರೂಪಾಯಿ ಲಂಚ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ, ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಸೆ.30ರಂದು ನಿರ್ಧರಿಸಿದ್ದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರು ಕರಾಚಿಯಲ್ಲಿ ಈದಿನ ಮಧ್ಯರಾತ್ರಿ ನಡೆಸುತ್ತಿದ್ದ ರ್ಯಾಲಿಯಲ್ಲಿ ಮಾನವ ಬಾಂಬ್ ಸ್ಫೋಟದಿಂದ 139 ಜನರು ಸಾವಿಗೀಡಾಗಿ, 500ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಬಂಧನ ಭಯದಿಂದ ಮುಕ್ತಿ ಹೊಂದಲು ಗಡೀಪಾರಾಗಿದ್ದ ಬೆನಜೀರ್ ಭುಟ್ಟೋ ಎಂಟು ವರ್ಷದ ಬಳಿಕ ಈದಿನ ಮಧ್ಯಾಹ್ನ 2.15ರ ಹೊತ್ತಿಗೆ ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. 1998ರ ಅವಧಿಯಲ್ಲಿ ಅಕ್ರಮ ಹಣ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸಬಹುದು ಎಂಬ ಭಯದಿಂದ ಮೂವರು ಮಕ್ಕಳೊಂದಿಗೆ ದೇಶ ತೊರೆದಿದ್ದ ಭುಟ್ಟೋ ನಂತರ ಲಂಡನ್ ಹಾಗೂ ದುಬೈಯಲ್ಲಿ ನೆಲೆಸಿದ್ದರು. 1975ರ ಅವಧಿಯಲ್ಲಿ ಬೆನಜೀರ್ ತಂದೆ ಜುಲ್ಫಿಕರ್ ಅಲಿ ಭುಟ್ಟೋ ಅವರಿಗೆ ಗಲ್ಲು ವಿಧಿಸಿದ ಬಳಿಕ ಅಂದಿನ ಮಿಲಿಟರಿ ಆಡಳಿತ ಐದು ವರ್ಷಗಳ ಕಾಲ ಇವರಿಗೆ ಜೈಲು ಶಿಕ್ಷೆ ನೀಡಿತ್ತು. ನಂತರ ಇಂಗ್ಲೆಂಡಿಗೆ ಗಡೀಪಾರು ಮಾಡಿತು. 1984ರಲ್ಲಿ ಇಂಗ್ಲೆಂಡಿಗೆ ತೆರಳಿದ್ದ ಬೆನಜೀರ್ ಅಲ್ಲಿನ ಪ್ರಸಿದ್ಧ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ 1986ರಲ್ಲಿ ಮರಳಿದರು. ಕೂಡಲೆ ರಾಜಕೀಯ ಪ್ರವೇಶಿಸಿದ ಅವರು ಅಧಿಕಾರದ ಏಳು ಬೀಳುಗಳ ನಡುವೆ ಎರಡು ಬಾರಿ ಪಾಕಿಸ್ಥಾನದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು.

2007: ಮೆಲ್ಬೋರ್ನಿನಲ್ಲಿ ನಡೆದ ಐದನೇ ಆಸ್ಟ್ರೇಲಿಯಾ-ಭಾರತ ಚಲನಚಿತ್ರೋತ್ಸವದಲ್ಲಿ ಭಾರತದ `ಚಕ್ ದೇ ಇಂಡಿಯಾ' ಚಿತ್ರವು ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2007: ಟಿಬೆಟಿನ ಧಾರ್ಮಿಕ ಗುರು ದಲೈಲಾಮ ಅವರಿಗೆ ಅಮೆರಿಕದ ಅತ್ಯುಚ್ಛ ಗೌರವದೊಂದಿಗೆ ಬಂಗಾರದ ಪದಕವನ್ನು ನೀಡಿದ್ದಕ್ಕೆ ಚೀನಾವು ತೀವ್ರ ಅಸಮಾಧಾನ ವ್ಯಕ್ತ ಪಡಿಸಿತು. `ಅಮೆರಿಕಾದ ಈ ವರ್ತನೆ' ಚೀನಾದ ಆಂತರಿಕ ವ್ಯವಹಾರದೊಳಗೆ ಅನಗತ್ಯ ಹಸ್ತಕ್ಷೇಪ' ಎಂದೂ ಅದು ಟೀಕಿಸಿತು. ಬೀಜಿಂಗಿನಲ್ಲಿ ಇರುವ ಅಮೆರಿಕದ ರಾಯಭಾರಿಯನ್ನು ತನ್ನ ಕಚೇರಿಗೆ ಕರೆಸಿಕೊಂಡ ಚೀನಾ ಸರ್ಕಾರ ಅಮೆರಿಕದ ಈ ವರ್ತನೆಯ ವಿರುದ್ಧ ತನ್ನ ಕೋಪವನ್ನು ವ್ಯಕ್ತಪಡಿಸಿತು. ಟಿಬೆಟನ್ನು 1959ರಲ್ಲಿ ತೊರೆದ ದಲೈಲಾಮ ಭಾರತದಲ್ಲಿಯೇ ವಾಸಿಸುತ್ತಿದ್ದು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಂದ ಆ ದೇಶದ ಈ ಉನ್ನತ ಪ್ರಶಸ್ತಿಯನ್ನು ಸ್ವೀಕರಿಸಿದರು.

2007: ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಹಾಗೂ ಅವರ ಪತ್ನಿ ಸಿಸಿಲಿಯ ಪರಸ್ವರ ಒಪ್ಪಿಗೆಯ ಮೇರೆಗೆ ತಮ್ಮ ಹನ್ನೊಂದು ವರ್ಷದ ವೈವಾಹಿಕ ಜೀವನಕ್ಕೆ ಮುಕ್ತಾಯ ಹಾಡಿದರು. ಸರ್ಕೋಜಿ ಹಾಗೂ ಸಿಸಿಲಿಯ ಅವರ ವಿವಾಹ ವಿಚ್ಛೇದನದ ಅರ್ಜಿಯ ವಿಚಾರಣೆಯ ಕಲಾಪಗಳ ವರದಿಗಳನ್ನು ಫ್ರಾನ್ಸ್ ಪತ್ರಿಕೆಗಳು ಮುಖ ಪುಟದಲ್ಲಿ ಪ್ರಕಟಿಸಿದ್ದವು. ಸರ್ಕೋಜಿ ಹಾಗೂ ಸಿಸಿಲಿಯ ಅವರಿಗೆ 10 ವರ್ಷದ ಮಗನಿದ್ದಾನೆ. ಸಿಸಿಲಿಯ ಅವರು 2005ರಲ್ಲಿ ನ್ಯೂಯಾರ್ಕಿನ ಜಾಹೀರಾತು ಕಂಪೆನಿಯೊಂದರ ಕಾರ್ಯ ನಿರ್ವಾಹಕನ ಜೊತೆಗೆ ಓಡಿ ಹೋಗಿದ್ದರು.

2007: ಭಾರತದಲ್ಲಿನ ರೈತರ ಆತ್ಮಹತ್ಯೆಗೆ ಸಾಲದ ಹೊರೆಯೊಂದೇ ಕಾರಣವಲ್ಲ. ಇದರ ಹೊರತಾಗಿ ಪ್ರಕೃತಿ ವಿಕೋಪ, ಕೀಟನಾಶಕಗಳು ಹಾಗೂ ಬೆಳೆ ವೈಫಲ್ಯವೂ ಸೇರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ವೈ.ವಿ. ರೆಡ್ಡಿ ಪ್ರತಿಪಾದಿಸಿದರು. ಅತಿ ಹೆಚ್ಚು ಸಾಲ ದೊರಕುವ ರಾಜ್ಯಗಳಲ್ಲಿಯೇ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿವೆ. ಅಲ್ಲದೇ ಈ ಪ್ರದೇಶಗಳಲ್ಲಿ ವಾಣಿಜ್ಯ ಕೃಷಿ ಕೈಗೊಳ್ಳಲಾಗುತ್ತಿದೆ. ಅಂದರೆ ಇದರ ಒಟ್ಟು ಸಾರಾಂಶ ರೈತರ ಆತ್ಮಹತ್ಯೆಗೆ ಸಾಲದ ಹೊರೆಯ ಹೊರತಾಗಿಯೂ ಇತರ ಕಾರಣಗಳಿವೆ. ಪ್ರಕೃತಿ ವಿಕೋಪ, ಬೆಳೆ, ಕೀಟನಾಶಕ ವೈಫಲ್ಯ, ವಿದ್ಯುತ್ ಹಾಗೂ ನೀರಿನ ಅಸಮರ್ಪಕ ಪೂರೈಕೆ ಮುಂತಾದ ಕಾರಣಗಳು ಸಹ ರೈತರ ಆತ್ಮಹತ್ಯೆಗೆ ಕಾರಣವಾಗಿವೆ ಎಂದು ಅವರು ವಿವರಿಸಿದರು.

2007: ರಂಗಕರ್ಮಿಗಳ ಸಡಗರ, ಸಂಭ್ರಮದ ನಡುವೆ ಉಡುಪಿ ಜಿಲ್ಲೆ ಮೂಡಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ 2006ನೇ ಸಾಲಿನ `ರಂಗ ಸಮ್ಮಾನ' ಪ್ರಶಸ್ತಿಗಳನ್ನು ಈದಿನ ರಾತ್ರಿ ಪ್ರದಾನ ಮಾಡಲಾಯಿತು. ಕರ್ನಾಟಕ ನಾಟಕ ಅಕಾಡೆಮಿ 2006 ರ ಪ್ರಶಸ್ತಿಯನ್ನು ಈ ಕೆಳಕಂಡವರಿಗೆ ನೀಡಿ ಗೌರವಿಸಲಾಯಿತು. ಅನಿತಾ ಕಾರ್ಯಪ್ಪ (ಕೊಡಗು), ಕೆ, ಆನಂದರಾಜು (ಬೆಂಗಳೂರು), ಎಸ್. ಎನ್. ದೇಶಪಾಂಡೆ (ಧಾರವಾಡ), ದೇವಿಂದ್ರ ರಡ್ಡಿ, ನಾರಾಯಣ ಭೀಮಸೇನರಾವ ಕುಲಕರ್ಣಿ (ಗುಲ್ಬರ್ಗ), ಮಹಾಂತೇಶ ಗಜೇಂದ್ರಗಡ (ಬಾಗಲಕೋಟೆ), ಮೈಕೋ ಚಂದ್ರು (ಬೆಂಗಳೂರು), ಕೆ. ರಂಗಸ್ವಾಮಿ (ಹಾಸನ), ಪಿ.ಎಸ್. ರಾವ್ (ದ.ಕನ್ನಡ), ಲಿಂಗಯ್ಯ ವೀರಭದ್ರಯ್ಯ ಕುಲಕರ್ಣಿ (ಬೆಳಗಾವಿ), ಕೆ.ಬಿ. ಶಂಕರ್ (ವಿಜಾಪುರ), ಡಿ.ಕೆ. ಶಿಂಧೆ (ಬೆಂಗಳೂರು), ಸೀತಾರಾಮ ಶೆಟ್ಟಿ ಕೂರಾಡಿ (ಉಡುಪಿ), ಶ್ರೀಮತಿ ಹರಿಪ್ರಸಾದ್ (ಮೈಸೂರು). ದೊಡ್ಡ ಅಂಕಾಚಾರ್ ಅನಾರೋಗ್ಯದ ಪ್ರಯುಕ್ತ ಗೈರು ಹಾಜರಾಗಿದ್ದರು. ಸಿಜಿಕೆ ಯುವರಂಗ 2006 ಪುರಸ್ಕಾರವನ್ನು ಹಾಸನದ ಮೋಹನ ಮಟ್ಟನವಿಲೆ, ರಾಜೇಶ ತಲಕಾಡು ಮೈಸೂರು, ರಾಮಕೃಷ್ಣ ಬೆಳ್ತೂರ್ ಬೆಂಗಳೂರು, ಸಂತೋಷ ಗಜಾನನ ಮಹಾಲೆ ಧಾರವಾಡ, ಎಸ್. ಎಸ್. ಸಿದ್ಧರಾಜು ದಾವಣಗೆರೆ, ಸುರೇಶ ಅಂಗಡಿ ಬಳ್ಳಾರಿ ಈ ಯುವ ರಂಗಕರ್ಮಿಗಳಿಗೆ ನೀಡಲಾಯಿತು. 2006 ರ ಗೌರವ ಪ್ರಶಸ್ತಿಯನ್ನು ಖ್ಯಾತ ಹನಿಗವನ ಸಾಹಿತಿ ಎಚ್. ದುಂಡಿರಾಜ್ ಅವರಿಗೆ ಹಾಗೂ ಕೆ. ಹಿರಣ್ಯಯ್ಯ ಪುರಸ್ಕಾರವನ್ನು ಪ್ರಭಾತ್ ಕಲಾವಿದರಿಗೆ (ಟಿ. ವೆಂಕಟೇಶ್) ನೀಡಲಾಯಿತು.

2007: ಅಂತಾರಾಷ್ಟ್ರೀಯ ಮಟ್ಟದ ನಾಗರಿಕ ವಿಮಾನ ಸಂಚಾರ ಸೇವೆಯ ಪ್ರಮುಖ ಕಂಪೆನಿ ಏರ್ ಅರೇಬಿಯಾ, 2007ರ ಅಕ್ಟೋಬರ್ 28 ರಿಂದ ಬೆಂಗಳೂರಿನಿಂದ ಶಾರ್ಜಾಕ್ಕೆ ನಿತ್ಯವೂ ಪ್ರಯಾಣಿಕ ವಿಮಾನ ಸಂಚಾರ ಆರಂಭಿಸುವುದಾಗಿ ಬೆಂಗಳೂರಿನಲ್ಲಿ ಪ್ರಕಟಿಸಿತು.

2006: ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಅಂಗವಿಕಲರಿಗಾಗಿ ನಾಲ್ಕು ಆಸನಗಳಿರುವ ಮೊಬೈಲ್ ಕಾರು ಸೇವೆ ಆರಂಭಿಸಲಾಯಿತು. 4 ಲಕ್ಷ ರೂಪಾಯಿ ವೆಚ್ಚದ ಈ ಕಾರು ಸೇವೆಯನ್ನು ಬೆಂಗಳೂರಿನ ಮೈನಿ ಮೆಟೇರಿಯಲ್ಸ್ ಮೂವ್ ಮೆಂಟ್ ಲಿಮಿಟೆಡ್ ಸಂಸ್ಥೆ ಒದಗಿಸಿದೆ.

2006: ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಬರೆದ `ಬಿಲ್ಡಿಂಗ್ ಸೋಲ್ಸ್: ಡಯಲಾಗ್ ಆನ್ ದಿ ಪರ್ಪಸ್ ಆಫ್ ಲೈಫ್' ಪುಸ್ತಕದ ಚೀನೀ ಅನುವಾದವನ್ನು ಬೀಜಿಂಗಿನಲ್ಲಿ ಬಿಡುಗಡೆ ಮಾಡಲಾಯಿತು. ಕಲಾಂ ಅವರು ತಮ್ಮ ಜೀವನದ ವಿವಿಧ ಅನುಭವಗಳನ್ನು ವಿಜ್ಞಾನಿ ಅರುಣ್ ಕೆ. ತಿವಾರಿ ಅವರ ಜೊತೆಗೂಡಿ ಬರೆದ ಪುಸ್ತಕ ಇದು. ಆಳುವ ಕಮ್ಯೂನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಮಂತ್ರಿ ಲಿಯು ಹಾಂಗ್ ಕಾಯ್ ಪುಸ್ತಕ ಬಿಡುಗಡೆ ಮಾಡಿದರು.

1993: ಭಾರತೀಯ ಚಿತ್ರೋದ್ಯಮದ ಮೊದಲ ಬಾಲನಟಿ ಮಂದಾಕಿನಿ ಅಠವಳೆ ನಿಧನರಾದರು.

1985: ಕಲ್ಪಾಕಂನ ರಿಯಾಕ್ಟರ್ ಸಂಶೋಧನಾ ಕೇಂದ್ರದಲ್ಲಿ ಭಾರತದ ಮೊತ್ತ ಮೊದಲ `ಫಾಸ್ಟ್ ಬ್ರೀಡರ್ ನ್ಯೂಕ್ಲಿಯರ್ ರಿಯಾಕ್ಟರ್' ಕಾರ್ಯಾರಂಭ ಮಾಡಿತು. ಪ್ಲುಟೋನಿಯಂ ಮತ್ತು ಸಹಜ ಯುರೇನಿಯಂ ಕಾರ್ಬೈಡುಗಳ ಮಿಶ್ರಣದ ಇಂಧನ ಮೂಲಕ ಈ ಸಾಧನೆ ಮಾಡಲಾಯಿತು. ಇದರ ವಿನ್ಯಾಸ ಹಾಗೂ ನಿರ್ಮಾಣಕ್ಕೆ ಸಂಪೂರ್ಣ ದೇಶೀಯ ತಂತ್ರಜ್ಞಾನ ಬಳಸಿಕೊಳ್ಳಲಾಯಿತು. ಸಂಶೋಧನಾ ಕೇಂದ್ರಕ್ಕೆ ಈ ಸಂದರ್ಭದಲ್ಲಿ `ಇಂದಿರಾ ಗಾಂಧಿ ಅಣುಸಂಶೋಧನಾ ಕೇಂದ್ರ (ಐಜಿಸಿಎಆರ್) ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು.

1983: ಕ್ರಿಕೆಟ್ ಆಟಗಾರ ವಿಜಯ ಮಂಜ್ರೇಕರ್ ನಿಧನ.

1981: ಮದ್ರಾಸಿನಲ್ಲಿ (ಈಗಿನ ಚೆನ್ನೈ) ಏರ್ಪಡಿಸಲಾಗಿದ್ದ ಸಮಾರಂಭ ಒಂದರಲ್ಲಿ 1000 ಮಂದಿ ಹರಿಜನರು ಬೌದ್ಧ ಧರ್ಮಕ್ಕೆ ಸೇರಿದರು. ಖೋಬರ್ ಗಡೆ ಗುಂಪಿನ ಭಾರತೀಯ ರಿಪಬ್ಲಿಕನ್ ಪಕ್ಷ ಈ ಮತಾಂತರ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಮಹಾಬೋಧಿ ಸಂಘದವರು ಕಾರ್ಯಕ್ರಮ ನೆರವೇರಿಸಿದರು.

1968: ಭಾರತೀಯ ಕ್ರಿಕೆಟಿನ ಮಾಜಿ ಆಟಗಾರ ನರೇಂದ್ರ ಹಿರ್ವಾನಿ ಜನ್ಮದಿನ. ತಮ್ಮ ಚೊಚ್ಚಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 16 ವಿಕೆಟುಗಳನ್ನು ಗಳಿಸಿ ಖ್ಯಾತರಾಗಿದ್ದರು.

1956: ಮೈಸೂರಿನ ರಾಜಪ್ರಮುಖ ಮಹಾರಾಜ ಜಯಚಾಮರಾಜ ಒಡೆಯರ್ ಬಹದ್ದೂರ್ ಅವರನ್ನು ನೂತನ ಮೈಸೂರು ರಾಜ್ಯದ ಗವರ್ನರ್ (ರಾಜ್ಯಪಾಲ) ಆಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

1956: ಝೆಕ್ ಸಂಜಾತೆ ಅಮೆರಿಕನ್ ಟೆನಿಸ್ ಅಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ ಜನ್ಮದಿನ. 1970ರ ಕೊನೆ ಹಾಗೂ 80ರ ದಶಕಗಳಲ್ಲಿ ಈಕೆ ಮಹಿಳಾ ಟೆನಿಸ್ಸಿನಲ್ಲಿ ನಂಬರ್ ಒನ್ ಆಟಗಾರ್ತಿಯಾಗಿ ಹೆಸರು ಪಡೆದರು.

1947: ಸಾಹಿತಿ ಬರಗೂರು ರಾಮಚಂದ್ರಪ್ಪ ಜನನ.

1941: ಸೃಜನಶೀಲ, ಅನುವಾದಕ ಸಾಹಿತಿ, ಪ್ರವಾಸಪ್ರಿಯ ಚಂದ್ರ ವದನರಾವ್ ಅವರು ಎಚ್.ಟಿ. ರಂಗಣ್ಣ- ಎ.ಸಿ. ಶಾರದಮ್ಮ ದಂಪತಿಯ ಮಗನಾಗಿ ಹಾಸನದಲ್ಲಿ ಜನಿಸಿದರು.

1931: `ಮೆನ್ಲೊ ಪಾರ್ಕಿನ ಮಾಂತ್ರಿಕ' ಥಾಮಸ್ ಆಲ್ವಾ ಎಡಿಸನ್ ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು. ಬದುಕಿನ ಅವಧಿಯಲ್ಲಿ ಇವರ 1093 ಸಂಶೋಧನೆಗಳಿಗೆ ಪೇಟೆಂಟ್ ನೀಡಲಾಯಿತು. ಚಲನಚಿತ್ರ ಪ್ರೊಜೆಕ್ಟರ್, ಕಾರ್ಬನ್ ಟೆಲಿಫೋನ್ ಟ್ರಾನ್ಸ್ ಮಿಟರ್, ಫೊನೋಗ್ರಾಫ್ ಮತ್ತು ಎಲೆಕ್ಟ್ರಿಕ್ ವಿದ್ಯುತ್ ದೀಪ ಅವುಗಳಲ್ಲಿ ಪ್ರಮುಖವಾದವು. ಶಬ್ದ ಹಾಗೂ ದೃಷ್ಟಿಗೆ ಸಂಬಂಧಿಸಿದ ಇವರ ಸಂಶೋಧನೆಗಳು `ಮಾತನಾಡುವ ಚಿತ್ರಗಳ' ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದವು. ದೂರವಾಣಿ ಕ್ಷೇತ್ರಕ್ಕೆ `ಹಲೋ' ಶಬ್ದದ ಕೊಡುಗೆ ಕೂಡಾ ಇವರದ್ದೇ. ಅಲೆಗ್ಸಾಂಡರ್ ಗ್ರಹಾಂಬೆಲ್ ಸೂಚಿಸಿದ್ದ `ಅಹೋಯ್' ಶಬ್ದದ ಬದಲಿಗೆ `ಹಲೋ' ಶಬ್ದ ಬಳಸುವಂತೆ ಎಡಿಸನ್ ಟೆಲಿಗ್ರಾಫ್ ಕಂಪೆನಿಯ ಅಧ್ಯಕ್ಷರಿಗೆ ಸಲಹೆ ಮಾಡಿದ್ದರು.

1928: ಮಾಜಿ ಕ್ರಿಕೆಟ್ ಆಟಗಾರ ರೋಷನ್ ಹರ್ಷದ್ಲಾಲ್ `ದೀಪಕ್' ಶೋಧನ್ ಜನ್ಮದಿನ. ತಮ್ಮ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೇ ಇವರು ಶತಕ ಬಾರಿಸಿದ್ದರು.

1922: ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಲಿಮಿಟೆಡ್ಡನ್ನು ಈ ದಿನ ಸ್ಥಾಪಿಸಲಾಯಿತು. ಇದಕ್ಕೆ ಸಂಬಂಧಪಟ್ಟಂತೆ ಲಂಡನ್ನಿನಲ್ಲಿ ನಡೆದ ಸಭೆಯಲ್ಲಿ ಸುಮಾರು 300 ಮಂದಿ ವೈರ್ ಲೆಸ್ ಉತ್ಪಾದಕರು ಮತ್ತು ಪಾಲುಬಂಡವಾಳದಾರರು (ಷೇರುದಾರರು) ಪಾಲ್ಗೊಂಡಿದ್ದರು. ಡಿಸೆಂಬರ್ 15ರಂದು ಅದನ್ನು ನೋಂದಣಿ ಮಾಡಲಾಯಿತು. 1923ರ ಜನವರಿ 18ರಂದು ಪೋಸ್ಟ್ ಮಾಸ್ಟರ್ ಜನರಲ್ ನಿಂದ ಪ್ರಸಾರ ಮಾಡಲು ಅದಕ್ಕೆ ಅನುಮತಿ ನೀಡಲಾಯಿತು. ಆದರೆ 1922ರ ನವೆಂಬರ್ 14ರಿಂದಲೇ ಅದು ಪ್ರತಿದಿನದ ಪ್ರಸಾರವನ್ನು ಆರಂಭಿಸಿತು. ಹಾಗಾಗಿ ಈ ದಿನವನ್ನೇ ಬಿಬಿಸಿಯ ಜನ್ಮದಿನ ಎಂಬುದಾಗಿ ಪರಿಗಣಿಸಲಾಯಿತು.

1828: ಜಾನ್ ಥಾಮಸ್ ವೈಟ್ ಹೆಡ್ ಮಿಶೆಲ್ (1828-95) ಜನ್ಮದಿನ. ಈತ 19ನೇ ಶತಮಾನದ ಇಂಗ್ಲಿಷ್ ಗ್ರಾಹಕ ಚಳವಳಿಯ ಪ್ರಮುಖ ವ್ಯಕ್ತಿ.

No comments:

Advertisement