Monday, February 15, 2010

ಇಂದಿನ ಇತಿಹಾಸ History Today ಜನವರಿ 13

ಇಂದಿನ ಇತಿಹಾಸ

ಜನವರಿ 13

ಆಸ್ಟ್ರೇಲಿಯಾದ ಬ್ಯಾಟಿಂಗ್ ಭುಜಬಲ ಪರಾಕ್ರಮಿ ಮ್ಯಾಥ್ಯು ಹೇಡನ್ ಕ್ರಿಕೆಟಿಗೆ ಬ್ರಿಸ್ಬೇನಿನಲ್ಲಿ ವಿದಾಯ ಹೇಳಿದರು. ಮೆಲ್ಬರ್ನ್‌ನಲ್ಲಿ ಇನ್ನೊಂದು ಕ್ರಿಸ್‌ಮಸ್ ಸಂಭ್ರಮವನ್ನು ಅನುಭವಿಸಬೇಕೆಂದು ಮಗಳು ಗ್ರೇಸ್ ಕೇಳಿದರೂ ಒಪ್ಪಲಿಲ್ಲ. ಮತ್ತೊಂದು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡುವವರೆಗೆ ಕಾಯುವ ಯೋಚನೆ ಮಾಡಲಿಲ್ಲ. '

2009: ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 2009-10ನೇ ಸಾಲಿನ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಮಸ್ಯೆ ಬಗೆಹರಿಯಿತು. ಎಂಜಿನಿಯರಿಂಗಿನಲ್ಲಿ ಸರ್ಕಾರಿ ಕೋಟಾದ ಶೇ 25ರಷ್ಟು ಸೀಟುಗಳಿಗೆ ಶುಲ್ಕದಲ್ಲಿ 10 ಸಾವಿರ ರೂಪಾಯಿ ಇಳಿಸಲಾಯಿತು. ಎಂಜಿನಿಯರಿಂಗಿನಲ್ಲಿ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ತಲಾ ಶೇ 50: 50 ಪ್ರಮಾಣದಲ್ಲಿ ಸೀಟು ಹಂಚಿಕೆ ಮಾಡಲಾಗಿದ್ದು, ಸರ್ಕಾರಿ ಕೋಟಾದ ಶೇ 25ರಷ್ಟು ಸೀಟುಗಳಿಗೆ 25 ಸಾವಿರಕ್ಕೆ ಬದಲಾಗಿ ಈ ಬಾರಿ 15 ಸಾವಿರ ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಯಿತು. ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಮಧ್ಯೆ ನಡೆದ ಮಾತುಕತೆ ಸಂದರ್ಭದಲ್ಲಿ ಒತ್ತಡಕ್ಕೆ ಮಣಿದ ಸರ್ಕಾರ, ಎಂಜಿನಿಯರಿಂಗಿನಲ್ಲಿ ಕಳೆದ ಬಾರಿಗಿಂತ ಶೇ 5ರಷ್ಟು ಹೆಚ್ಚಿನ ಸೀಟುಗಳನ್ನು ಖಾಸಗಿ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿತು. ಕಳೆದ ಬಾರಿ ಸರ್ಕಾರಿ ಕೋಟಾ ಶೇ 55 ಹಾಗೂ ಆಡಳಿತ ಮಂಡಳಿ ಕೋಟಾ ಶೇ 45ರಷ್ಟು ಇತ್ತು.

2009: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಘಟಕವನ್ನೇ ನೀಡಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಗೆ ಕಿವಿಗೊಡದ ಕೇಂದ್ರ ಸರ್ಕಾರ, ಬೆಂಗಳೂರಿನಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ಸ್ಥಾಪನೆಗೆ ಚಾಲನೆ ನೀಡಿತು. ಮುಂಬೈ, ಕೊಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದುಗಳಲ್ಲಿ ಎನ್‌ಎಸ್‌ಜಿ ಸ್ಥಾಪನೆಯ ಜತೆಯಲ್ಲಿ ಬೆಂಗಳೂರಿನಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ಸ್ಥಾಪನೆ ಬಗ್ಗೆಯೂ ಕೇಂದ್ರ ಗೃಹಸಚಿವ ಪಿ.ಚಿದಂಬರಮ್ ಸೇನೆ ಮತ್ತು ಎನ್‌ಎಸ್‌ಜಿ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿದರು. ಉಳಿದ ನಾಲ್ಕು ಮೆಟ್ರೋಗಳ ಜತೆ ಬೆಂಗಳೂರಿಗೂ ಎನ್‌ಎಸ್‌ಜಿ ಘಟಕ ನೀಡಬೇಕೆಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದರು. ಎನ್‌ಎಸ್‌ಜಿ ನೀಡದೆ ಹೋದರೆ ಹೋರಾಟದ ಹಾದಿ ತುಳಿಯಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

2009: ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 31ಕ್ಕೆ ಅಂತ್ಯವಾದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಇನ್ಫೊಸಿಸ್ ಟೆಕ್ನಾಲಜಿಸ್ ಕಂಪೆನಿ, ಒಟ್ಟು 1641 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತು. ಇದರ ಹಿಂದಿನ ವರ್ಷ ಇದೇ ಅವಧಿಯಲ್ಲಾದ ನಿವ್ವಳ ಲಾಭಕ್ಕಿಂತ ಶೇ 33.3 ಏರಿಕೆ ಸಾಧಿಸಿತು. ದೇಶದಲ್ಲಿ ಗರಿಷ್ಠ ಪ್ರಮಾಣದ ಸಾಫ್ಟ್‌ವೇರ್ ರಫ್ತು ವಹಿವಾಟು ಹೊಂದಿರುವ ಇನ್ಫೊಸಿಸ್, ತ್ರೈಮಾಸಿಕ ಅವಧಿಯಲ್ಲಿ ಒಟ್ಟು 5786 ಕೋಟಿ ರೂ. ರಫ್ತು ಆದಾಯ ಮಾಡಿ ಶೇ. 35.5 ಹೆಚ್ಚಳ ದಾಖಲಿಸಿತು.

2009: ಸತ್ಯಂ ಕಂಪ್ಯೂಟರ್‌ಗೆ ವಹಿಸಲಾಗಿದ್ದ ಬಹುತೇಕ ಪ್ರಾಜೆಕ್ಟ್ ಕಾರ್ಯಗಳನ್ನು ವಿಶ್ವಬ್ಯಾಂಕ್, ಭಾರತದ ನಂ.1 ಸ್ಥಾನದಲ್ಲಿರುವ ಐಟಿ ಕಂಪೆನಿ ಟಾಟಾ ಕನ್ಸ್‌ಲ್ಟೆನ್ಸಿ ಸರ್ವಿಸ್ (ಟಿಸಿಎಸ್)ಗೆ ವಹಿಸಿತು. ವಿಶ್ವಬ್ಯಾಂಕ್ ಕಳೆದ ಸೆಪ್ಟೆಂಬರ್ ತಿಂಗಳಿಂದ 8 ವರ್ಷ ಸತ್ಯಂ ಕಂಪ್ಯೂಟರ್ಸ್‌ನೊಂದಿಗೆ ವ್ಯವಹಾರ ನಡೆಸುವುದಕ್ಕೆ ನಿಷೇಧ ಹೇರಿತ್ತು. ಇದಾದ ನಂತರವಷ್ಟೇ ಕಂಪೆನಿಯ ಹಣದ ಮೋಸದ ಪ್ರಕರಣ ಬಯಲಿಗೆ ಬಂದಿತ್ತು. ಯೋಜನೆಗಳನ್ನು ಮತ್ತೆ ಭಾರತದ ಐಟಿ ಕಂಪೆನಿಗೆ ವಹಿಸಿದ್ದರಿಂದ ವಿಶ್ವಬ್ಯಾಂಕ್ ಭಾರತದ ಐಟಿ ಕಂಪೆನಿಗಳನ್ನು ಗುರಿಯಾಗಿಟ್ಟುಕೊಂಡು ನಿಷೇಧ ಹೇರಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.

2009: ಎಲ್ಲದಕ್ಕೂ ಕೊನೆ ಎನ್ನುವುದಿದೆ. ಯಶಸ್ಸಿನ ಎತ್ತರ ಕಂಡವರ ಉತ್ಸಾಹದ ಹರಿವು ಕೂಡ ಅಂತ್ಯ ಕಾಣುತ್ತದೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ಭುಜಬಲ ಪರಾಕ್ರಮಿ ಮ್ಯಾಥ್ಯು ಹೇಡನ್ ಕೂಡ ಅಂತಹ ಸಿಹಿ ಹಾಗೂ ಕಹಿ ನೆನಪುಗಳ ಬುತ್ತಿ ಕಟ್ಟಿಕೊಂಡು ಕ್ರಿಕೆಟಿಗೆ ಬ್ರಿಸ್ಬೇನಿನಲ್ಲಿ ವಿದಾಯ ಹೇಳಿದರು. ಮೆಲ್ಬರ್ನ್‌ನಲ್ಲಿ ಇನ್ನೊಂದು ಕ್ರಿಸ್‌ಮಸ್ ಸಂಭ್ರಮವನ್ನು ಅನುಭವಿಸಬೇಕೆಂದು ಮಗಳು ಗ್ರೇಸ್ ಕೇಳಿದರೂ ಒಪ್ಪಲಿಲ್ಲ. ಮತ್ತೊಂದು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡುವವರೆಗೆ ಕಾಯುವ ಯೋಚನೆ ಮಾಡಲಿಲ್ಲ. 'ಸಾಕಮ್ಮ ಇನ್ನು' ಎಂದು ಹೇಳಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿಯೇ ಬಿಟ್ಟರು. ಅಲ್ಲಿಗೆ 'ಬ್ಯಾಟಿಂಗ್ ದೈತ್ಯ'ನ ಯುಗವೊಂದು ಕೊನೆಯಾಯಿತು. ಆಜಾನುಬಾಹು ಮ್ಯಾಥ್ಯು ಅವರು ಸುದ್ದಿಗಾರರ ಮುಂದೆ ಪ್ರತ್ಯಕ್ಷವಾಗಿ 'ಇದು ನನ್ನ ನಿವೃತ್ತಿಯ ದಿನ'ವೆಂದು ಪ್ರಕಟಿಸಿದಾಗ ಮುಗ್ಧ ಮಗುವಿನಂತೆ ಕಂಡರು. ಮೊದಲೇ ಸಿದ್ಧಪಡಿಸಿಕೊಂಡಿದ್ದ ನಿವೃತ್ತಿ ಪ್ರಕಟಣೆಯನ್ನು ಓದುವಾಗ ಕಣ್ಣೀರು ಕಟ್ಟೆ ಒಡೆಯಬಾರದೆಂದು ಎಷ್ಟೆಲ್ಲ ಪ್ರಯತ್ನ ಮಾಡಿದರೂ ತಡೆಯಲು ಸಾಧ್ಯವಾಗಲಿಲ್ಲ. ಕ್ರಿಕೆಟಿನಿಂದಾಗಿ ಜನರಿಂದ ದೊರೆತ ಪ್ರೀತಿಯು ಅವರ ಎದೆಯಲ್ಲಿ ಹೆಪ್ಪುಗಟ್ಟಿದ ಮಂಜನ್ನು ಕರಗಿಸಿ ಕಣ್ಣೀರ ಹನಿಯಾಗಿಸಿತು.

2008: ಸುಗುಣೇಂದ್ರ ತೀರ್ಥರು ದ್ವಂದ್ವಮಠ ಕೃಷ್ಣಾಪುರ ಮಠಾಧೀಶರಿಂದ ಶಿಷ್ಯರನ್ನು ಸ್ವೀಕರಿಸಿ ಅವರ ಮೂಲಕ ಪರ್ಯಾಯ ಪೀಠಾರೋಹಣ ಹಾಗೂ ಕೃಷ್ಣಪೂಜೆ ಮಾಡಿಸಬೇಕು ಎಂದು ಉಡುಪಿಯಲ್ಲಿ ನಡೆದ ಮಧ್ವಮಠಾಧೀಶರ ಮಹತ್ವದ ಸಭೆ ಒಕ್ಕೊರಲ ನಿರ್ಧಾರ ತೆಗೆದುಕೊಂಡಿತು. ಒಂದು ವೇಳೆ ಈ ಸಭೆಯ ನಿರ್ಣಯವನ್ನು ಪುತ್ತಿಗೆ ಶ್ರೀಗಳು ಒಪ್ಪದೇ ಇದ್ದಲ್ಲಿ ಜನವರಿ 15ರ ಮಧ್ಯಾಹ್ನದಿಂದ ಪೇಜಾವರ ಮಠದಲ್ಲಿ ಅಷ್ಟಮಠಗಳ ಆರು ಯತಿಗಳು ಕಠಿಣ ಉಪವಾಸ ಕೈಗೊಳ್ಳಬೇಕು ಎಂದು ಸಭೆ ತೀರ್ಮಾನಿಸಿತು.

2008: ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ತಾಂತ್ರಿಕ ದೋಷದ ಕಾರಣ ಸರಕು ಸಾಗಣೆ ಲಿಫ್ಟ್ ಕುಸಿದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯೆಲ್ಲದಕೆರೆಯ ಸೋಮಶೇಖರ್ (30) ಹಾಗೂ ಬೋರನಕುಂಟೆ ಗ್ರಾಮದ ಆರ್.ರಾಜಣ್ಣ (30) ಎಂಬ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತರಾದರು. ಇವರಿಬ್ಬರೂ ಚಿಕ್ಕಮಗಳೂರು ಮೂಲದ ಈ ಕಂಪೆನಿಯ ಕೋಳಿ ಮಾಂಸ ಸಂಸ್ಕರಣಾ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

2008: ವಿಶ್ವದ ವಿಶಿಷ್ಟ 25 ರೈಲುಗಳ ಪಟ್ಟಿಯಲ್ಲಿ ಭಾರತದ `ಡೆಕ್ಕನ್ ಒಡಿಸ್ಸಿ ಎಕ್ಸ್ ಪ್ರೆಸ್' ರೈಲು ಸೇರಿದಂತೆ ಒಟ್ಟು ಮೂರು ರೈಲುಗಳು ಸೇರಿದವು. 100 ವರ್ಷದ ಹಿಂದೆ ಸಂಚರಿಸುತ್ತಿದ್ದ ಉಗಿಯಂತ್ರದ ರೈಲು ಹಾಗೂ `ಗಾಲಿಗಳ ಮೇಲೆ ಅರಮನೆ ` ರೈಲು ಕೂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಈ ಪಟ್ಟಿಯನ್ನು ಅಂತಾರಾಷ್ಟ್ರೀಯ ರೈಲು ಪ್ರಯಾಣಿಕರ ಸಂಘ ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಹ್ಯೂಸ್ಟನ್ನಿನಲ್ಲಿ ತಯಾರಿಸಿತು. ಅದರಲ್ಲಿ ಅತ್ಯಂತ ಐಷಾರಾಮಿ ಸೌಲಭ್ಯ ಹೊಂದಿರುವ `ಗೋಲ್ಡನ್ ಈಗಲ್ ಟ್ರಾನ್ಸಿಬ್ರೈನ್ ಎಕ್ಸ್ ಪ್ರೆಸ್' ರೈಲು ಮೊದಲನೆ ಸ್ಥಾನ ಪಡೆಯಿತು.

2008: ಬಿಹಾರದ ಗಯಾ ಜಿಲ್ಲೆಯಲ್ಲಿ ಪೊಲೀಸರ ಗುಂಡೇಟಿಗೆ ಆರು ಮಂದಿ ನಕ್ಸಲೀಯರು ಹತರಾದರು. ಬೆಟ್ಟ ಪ್ರದೇಶದಲ್ಲಿ ನಕ್ಸಲೀಯರು ಅಡಗಿದ್ದಾರೆಂಬ ಖಚಿತ ಸುಳಿವಿನ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಆರು ನಕ್ಸಲೀಯರು ಬಲಿಯಾದರು ಎಂದು ಡಿ ವೈ ಎಸ್ ಪಿ ಬಲರಾಮ್ ಕುಮಾರ್ ಚೌಧರಿ ತಿಳಿಸಿದರು.

2008: ಪಶ್ಚಿಮ ಆಫ್ಘಾನಿಸ್ಥಾನದ ಕಾಬೂಲನ್ನು ತತ್ತರಿಸುವಂತೆ ಮಾಡಿದ ನಿರಂತರ ಹಿಮಪಾತ ಮತ್ತು ಚಳಿಗೆ ಕನಿಷ್ಠ 52 ಮಂದಿ ಮೃತರಾದರು. ಇತ್ತೀಚಿನ ವರ್ಷಗಳಲ್ಲಿ ಚಳಿ ಮತ್ತು ಹಿಮಕ್ಕೆ ಈ ಪ್ರಮಾಣದ ಸಾವು ನೋವು ಸಂಭವಿಸಿರುವುದು ಇದೇ ಮೊದಲು.

2008: ಜಾಫ್ನಾ ಹಾಗೂ ಶ್ರೀಲಂಕಾದ ವಾಯವ್ಯ ಭಾಗದಲ್ಲಿ ಶ್ರೀಲಂಕಾ ಯೋಧರು ಹಾಗೂ ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 85 ಮಂದಿ ಯೋಧರು ಸೇರಿದಂತೆ 151 ಮಂದಿ ಮೃತರಾದರು.

2008: ಆಫ್ಘಾನಿಸ್ಥಾನ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ವಾಜಿರಿಸ್ಥಾನ್ ಪ್ರದೇಶದಲ್ಲಿ ಅಡಗಿದ್ದ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹಸೂದ್ ಅವರ ಬೆಂಬಲಿಗರ ಮೇಲೆ ಪಾಕಿಸ್ಥಾನದ ಸೈನ್ಯ ಭಾರಿ ಪ್ರಮಾಣದಲ್ಲಿ ದಾಳಿ ಮಾಡಿ, ಸುಮಾರು 40ರಿಂದ 50 ಉಗ್ರರನ್ನು ಹತ್ಯೆ ಮಾಡಿತು. ಈಚೆಗೆ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಸೇನೆಯು ಈ ಕಾರ್ಯಾಚರಣೆ ನಡೆಸಿತು.

2007: ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿ ಬ್ರೌನ್ ಗಂಡು ಮಗುವಿಗೆ ಜನ್ಮ ನೀಡಿದರು. ವೆಸ್ಲೆ ಮುಲಿಂದರ್ ಪತ್ನಿಯಾಗಿರುವ 28 ರ ಹರೆಯದ ಲೂಯಿ ಬ್ರೌನ್ ಸ್ವಾಭಾವಿಕವಾಗಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದರು.

2007: ಖ್ಯಾತ ಚಿತ್ರನಟಿ ಶಬಾನಾ ಅಜ್ಮಿ ಅವರಿಗೆ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಹೈದರಾಬಾದಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

2007: ಟಾಟಾ ಸಮೂಹದ ತಾಜ್ ಹೋಟೆಲ್ಸ್ ರಿಸಾರ್ಟ್ಸ್ ಅಂಡ್ ಪ್ಯಾಲೇಸಸ್ ಸಂಸ್ಥೆಯು ಅಮೆರಿಕದ ಬೋಸ್ಟನ್ನಿನ 80 ವರ್ಷ ಇತಿಹಾಸ ಹೊಂದಿರುವ ರಿಜ್ ಹೋಟೆಲನ್ನು 7650 ಕೋಟಿ ರೂಪಾಯಿಗಳಿಗೆ ಖರೀದಿಸಿತು.

2006: ಡಾ. ಜಿ.ಎಸ್. ಶಿವರುದ್ರಪ್ಪ ವಿಶ್ವಸ್ತ ಮಂಡಲಿಯು 2005ನೇ ಸಾಲಿನ ಡಾ. ಜಿಎಸ್ಸೆಸ್ ಪ್ರಶಸ್ತಿಗೆ ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಿತು.

2004: ಹದಿನೈದು ಮಂದಿ ರೋಗಿಗಳನ್ನು ಕೊಂದುದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಬ್ರಿಟನ್ನಿನ ಸರಣಿ ಕೊಲೆಗಾರ ಹೆರಾಲ್ಡ್ ಶಿಪ್ ಮನ್ ಸೆರೆಮನೆಯ ಸೆಲ್ಲಿನಲ್ಲಿ ನೇಣು ಹಾಕಿಕೊಂಡಿದ್ದುದು ಪತ್ತೆಯಾಯಿತು.

2000: ಮೈಕ್ರೋಸಾಫ್ಟ್ ಚೇರ್ಮನ್ ಬಿಲ್ ಗೇಟ್ಸ್ ಮುಖ್ಯ ಎಕ್ಸಿಕ್ಯೂಟಿವ್ ಸ್ಥಾನದಿಂದ ಕೆಳಗಿಳಿದು ಕಂಪೆನಿ ಅಧ್ಯಕ್ಷ ಸ್ಟೀವ್ ಬಾಮರ್ (Steve Ballmer) ಅವರಿಗೆ ಈ ಸ್ಥಾನಕ್ಕೆ ಬಡ್ತಿ ನೀಡಿದರು.

1999: ಮೈಕೆಲ್ ಜೋರ್ಡಾನ್ ಅವರು ಷಿಕಾಗೋ ಬುಲ್ಸ್ ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದರು. (2001ರ ಸೆಪ್ಟೆಂಬರಿನಲ್ಲಿ ವಾಷಿಂಗ್ಟನ್ ವಿಜಾರ್ಡ್ಸ್ ಪರ ಆಡುವ ಸಲುವಾಗಿ ತಾವು ಮತ್ತೆ ಕಣಕ್ಕೆ ಇಳಿಯುವುದಾಗಿ ಅವರು ಘೋಷಿಸಿದರು).

1982: ಮದ್ದೂರಿನಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ವೇದಿಕೆ ಕುಸಿದು ಬಿಜೆಪಿ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಗಾಯಗೊಂಡರು.

1960: ಕಲಾವಿದೆ ಸರ್ವಮಂಗಳಾ ಗುರ್ಲ ಹೊಸೂರು ಜನನ.

1957: ಖ್ಯಾತ ರಂಗಭೂಮಿ ನಿರ್ದೇಶಕ ಜಿ. ಅಶೋಕ ಬಾಬು ಅವರು ಎಸ್. ಗೋವಿಂದರಾಜು- ಸರಸ್ವತಿಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1949: ಭಾರತದ ಪ್ರಪ್ರಥಮ ಗಗನಯಾತ್ರಿ ರಾಕೇಶ ಶರ್ಮಾ ಈದಿನ ಪಂಜಾಬಿನ ಪಟಿಯಾಲದಲ್ಲಿ ಜನಿಸಿದರು. ಭಾರತೀಯ ವಾಯುಪಡೆಗೆ ಸ್ವಾಡ್ರನ್ ಲೀಡರ್ ಆಗಿ ಸೇರ್ಪಡೆಯಾದ ಶರ್ಮಾ, ತಮ್ಮ 35ನೇ ವಯಸ್ಸಿನಲ್ಲಿ 138ನೇ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1938: ಭಾರತೀಯ ಸಂತೂರ್ ವಾದಕ ಪಂಡಿತ್ ಶಿವಕುಮಾರ ಶರ್ಮಾ ಹುಟ್ಟಿದ ದಿನ.

1915: ಕೇಂದ್ರ ಇಟಲಿಯ ಅವೆಝಾನೊ ಪಟ್ಟಣದಲ್ಲಿ ಸಂಭವಿಸಿದ ಭಾರಿ ಭೂಕಂಪಕ್ಕೆ 30,000 ಜನ ಬಲಿಯಾದರು.

1898: ಸಂಸ ಎಂದೇ ಖ್ಯಾತರಾದ ಖ್ಯಾತ ನಾಟಕಕಾರ, ಸಾಹಿತಿ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಈದಿನ ನರಸಿಂಹ ಪಂಡಿತ-ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 17ರ ಪ್ರಾಯದಲ್ಲೇ ಸಾಹಿತ್ಯದ ಹುಚ್ಚು ಅಂಟಿಸಿಕೊಂಡ ಅಯ್ಯರ್ ಅವರ ಮೊದಲ ಕಾದಂಬರಿ ಕೌಶಲ. 1919ರಿಂದ 1935ರವರೆಗೆ ಉದ್ಯೋಗಾರ್ಥ ದೇಶ ಪರ್ಯಟನೆ. ಫಿಜಿ ದ್ವೀಪ, ಟಿಬೆಟ್, ಆಫ್ಘಾನಿಸ್ಥಾನ, ಬಲೂಚಿಸ್ಥಾನ, ಬರ್ಮಾ, ದಕ್ಷಿಣ ಆಫ್ರಿಕಾಕ್ಕೂ ಭೇಟಿ. ಮೈಸೂರಿನ ಅರಸರ ಚರಿತ್ರೆಗೆ ಸಂಬಂಧಿಸಿದಂತೆ ಅವರು ರಚಿಸಿದ 23 ನಾಟಕಗಳ ಪೈಕಿ ಉಳಿದಿರುವುದು ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯನಾರಸಿಂಹ, ಬಿರುದಂತೆಂಬರ ಗಂಡ, ಬೆಟ್ಟದ ಅರಸು ಮತ್ತು ಮಂತ್ರಶಕ್ತಿ. ಕೌಶಲ ಮತ್ತು ಶೆರ್ಲಾಕ್ ಹೋಮ್ಸ್ ಇನ್ ಜೈಲ್ ಎರಡು ಕಾದಂಬರಿಗಳು, ಶ್ರೀಮಂತೋ ಧ್ಯಾನ ವರ್ಣನಂ, ಸಂಸಪದಂ, ಈಶ ಪ್ರಕೋಪನ, ನರಕ ದುರ್ಯೋಧನೀಯಂ, ಅಚ್ಚುಂಬ ಪದ್ಯಕಾವ್ಯ ಅವರ ಕೃತಿಗಳು. ಚಿಕ್ಕ ವಯಸ್ಸಿನಲ್ಲೇ ತಂದೆಯ ಸಾವಿನಿಂದ ಅನಾಥಭಾವ, ತನ್ನನ್ನು ಕಂಡರೆ ಲೋಕಕ್ಕೆ ಸಹನೆ ಇಲ್ಲ, ಇತರರು ತನ್ನ ಬಾಳನ್ನು ಕೆಡಿಸುತ್ತಿದ್ದಾರೆ ಎಂಬ ಭ್ರಮೆಗೆ ಈಡಾಗಿ ಪರ್ಸೆಕ್ಯೂಷನ್ ಕಾಂಪ್ಲೆಕ್ಸಿಗೆ ಒಳಗಾದ ಅವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಕೊಠಡಿಯೊಂದರಲ್ಲಿ 1939ರ ಫೆಬ್ರವರಿ 14ರಂದು ಆತ್ಮಹತ್ಯೆ ಮಾಡಿಕೊಂಡರು.

1888: `ಭೌಗೋಳಿಕ ಜ್ಞಾನ' ಹೆಚ್ಚಿಸುವ ಸಲುವಾಗಿ ಸೊಸೈಟಿ ಒಂದನ್ನು ಸ್ಥಾಪಿಸಲು ವಾಷಿಂಗ್ಟನ್ನಿನ ಕಾಸ್ಮೋಸ್ ಕ್ಲಬ್ಬಿನಲ್ಲಿ 33 ಜನ ಸಭೆ ಸೇರಿದರು. ಇದು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭಕ್ಕೆ ಮೂಲವಾಯಿತು. ಗಾರ್ಡಿನರ್ ಹಬ್ಬರ್ಡ್ 1888ರ ಫೆಬ್ರುವರಿ 17ರಂದು ಇದರ ಪ್ರಥಮ ಅಧ್ಯಕ್ಷರಾದರು. ಮೊತ್ತ ಮೊದಲ `ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್' ಅದೇ ವರ್ಷ ಪ್ರಕಟಗೊಂಡಿತು.

1849: ಸರ್ ಹಗ್ ಗೌಗ್ ಲಾಹೋರ್ ಪ್ರಾಂತದ ಚಿಲಿಯನ್ ವಾಲಾದಲ್ಲಿ ಸಿಕ್ಖರ ಜೊತೆಗೆ ಭೀಕರ ಕದನ ನಡೆಸಿದ. ಎರಡನೇ ಸಿಖ್ ಸಮರ ಕಾಲದಲ್ಲಿ ನಡೆದ ಈ ಕದನದಲ್ಲಿ ಗೌಗ್ ಜಯ ಗಳಿಸಿದೆನೆಂದು ಹೇಳಿಕೊಂಡರೂ, ಬ್ರಿಟಿಷ್ ಕಡೆಯಲ್ಲಿ ಉಂಟಾದ ಭಾರೀ ಸಾವು ನೋವಿಗಾಗಿ ತೀವ್ರ ಟೀಕೆಗೆ ಗುರಿಯಾದ. ಫೆಬ್ರುವರಿಯಲ್ಲಿ ನಡೆದ ಗುಜರಾತ್ ಸಮರದ ಬಳಿಕ ಮಾತ್ರವೇ 1849ರ ಮಾರ್ಚಿನಲ್ಲಿ ಸಿಕ್ಖರು ಅಂತಿಮವಾಗಿ ಸೋತರು ಮತ್ತು ಸಿಖ್ ರಾಜ್ಯ ಅಸ್ತಿತ್ವ ಕಳೆದುಕೊಂಡಿತು.

No comments:

Advertisement