My Blog List

Thursday, April 1, 2010

ಇಂದಿನ ಇತಿಹಾಸ History Today ಏಪ್ರಿಲ್ 01

ಇಂದಿನ ಇತಿಹಾಸ

ಏಪ್ರಿಲ್ 01
ಶ್ರೀಲಂಕಾ ಭದ್ರತಾ ಪಡೆಗಳ ಜತೆ ನಡೆದ ತೀವ್ರ ಕಾಳಗದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರ ಪುತ್ರ ಚಾರ್ಲ್ಸ್ ಆಂಟನಿ ಗಾಯಗೊಂಡರು. 24 ವರ್ಷ ವಯಸ್ಸಿನ ಚಾರ್ಲ್ಸ್, ಪ್ರಭಾಕರನ್ ಅವರ ಹಿರಿಯ ಪುತ್ರ. ಎಲ್‌ಟಿಟಿಇ ಪ್ರಾಬಲ್ಯದ ಪುದ್ದುಕ್ಕುಡಿಯಿರುಪ್ಪು ಪ್ರದೇಶದಲ್ಲಿ ಲಂಕಾ ಸೇನೆ ನಡೆಸಿದ ಹೋರಾಟದಲ್ಲಿ ಗಾಯಗೊಂಡರು ಎಂದು ಎಂದು ಸೇನಾ ಮೂಲಗಳು ತಿಳಿಸಿದವು.

2009: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಆಪ್ತ ಸಹಾಯಕರಾಗಿದ್ದ ಕ್ಯಾಪ್ಟನ್ ನಾರಾಯಣ ಸಿಂಗ್ ನೇಗಿ ಅವರು ಡೆಹ್ರಾಡೂನಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ನೇಗಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ನೇಗಿ, 1943ರಲ್ಲಿ ಆಜಾದ್ ಹಿಂದ್ ಫೌಜ್ ಸೇರಿದಾಗ ಬೋಸ್ ಸಂಪರ್ಕಕ್ಕೆ ಬಂದಿದ್ದರು. ನಂತರದಲ್ಲಿ ನೇತಾಜಿ ಇವರನ್ನು ತಮ್ಮ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದರು.

2009: ಉಳಿತಾಯ ಖಾತೆ ಹೊರತುಪಡಿಸಿ ಇತರ ಖಾತೆಯಿಂದ ಒಂದೇ ದಿನದಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚು ಮೊತ್ತದ ಹಣ ವಾಪಸ್ ಪಡೆಯುವುದರ ಮೇಲೆ ವಿಧಿಸಲಾಗುತ್ತಿದ್ದ ನಗದು (ಬ್ಯಾಂಕಿಂಗ್ ಕ್ಯಾಷ್) ವಹಿವಾಟು ತೆರಿಗೆಯನ್ನು (ಬಿಸಿಟಿಟಿ) ಸರ್ಕಾರ ತೆಗೆದುಹಾಕಿತು. ವೈಯಕ್ತಿಕ ಖಾತೆಯಿಂದ 50 ಸಾವಿರ, ಇತರ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ತೆಗೆದಲ್ಲಿ ಶೇ 0.1 ರಷ್ಟು ತೆರಿಗೆ ವಿಧಿಸುವ ಈ ಯೋಜನೆಯನ್ನು ಸರ್ಕಾರ 2005ರಲ್ಲಿ ಜಾರಿಗೆ ತಂದಿತ್ತು.

2009: ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ (ಎನ್‌ಎಸ್‌ಎ) ಬಂಧಿತರಾದ ಬಿಜೆಪಿ ಲೋಕಸಭಾ ಅಭ್ಯರ್ಥಿ ವರುಣ್ ಗಾಂಧಿ ಅವರ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಬಿಗಿ ಭದ್ರತೆಯ ಇಟಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ವರುಣ್ ಅವರನ್ನು ಕೊಲೆ ಮಾಡಲು ಭೂಗತ ಪಾತಕಿ ಛೋಟಾ ಶಕೀಲ್ ಸಂಚು ನಡೆಸಿರುವುದಾಗಿ ಬೇಹುಗಾರಿಕಾ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅವರನ್ನು ಜಿಲ್ಲಾ ಕಾರಾಗೃಹದಿಂದ ಇಟಾ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ಈದಿನ ತಿಳಿಸಿದವು.

2009: ಅತ್ಯಾಧುನಿಕ ಹಾಗೂ ಅತ್ಯಂತ ಸುರಕ್ಷಿತ ಎನ್ನಲಾದ ಬೋಯಿಂಗ್ ಬಿಸಿನೆಸ್ ಜೆಟ್‌ನ್ನು (ಬಿಬಿಜೆ) ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾರತೀಯ ವಾಯುಪಡೆಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿದರು. ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ, 934 ಕೋಟಿ ರೂಪಾಯಿಗಳ ಬಿಬಿಜೆಗಳನ್ನು ವಾಯುಪಡೆಯ ಸಂಪರ್ಕ ವಿಭಾಗಕ್ಕೆ ಸೇರಿಸುವ ಮುನ್ನ ರಾಷ್ಟ್ರಪತಿ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಉದ್ಘಾಟನಾ ಹಾರಾಟದಲ್ಲಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗಳಿಗೆ ಪ್ರಯಾಣಿಸಿದರು. ರತ್ನಗಂಬಳಿ ಹಾಸಿದ ಮೆಟ್ಟಿಲುಗಳ ಮೂಲಕ ವಿಮಾನವೇರಿದ ಪ್ರತಿಭಾ ಪಾಟೀಲ್ ನಂತರ ಅದರಲ್ಲಿರುವ ಹಲವಾರು ಸೌಲಭ್ಯಗಳನ್ನು ಹೊಂದಿದ 'ಅತಿಗಣ್ಯರ ಕ್ಯಾಬಿನ್' ಪ್ರವೇಶಿಸಿದರು. ವಿಡಿಯೊ ಸಂವಾದ ಸೌಲಭ್ಯ ಒಳಗೊಂಡಂತೆ ಅತ್ಯಾಧುನಿಕ ಕಚೇರಿ ಸವಲತ್ತುಗಳು ಇಲ್ಲಿವೆ. ಖಾಸಗಿ ಕೋಣೆ, ಡಬ್ಬಲ್ ಮಂಚ ಹಾಗೂ ಮನರಂಜನಾ ಸೌಲಭ್ಯಗಳು ಇದರಲ್ಲಿವೆ. ನ್ಯೂಕ್ಲಿಯರ್ ದಾಳಿಯಂತಹ ತುರ್ತು ಸಂದರ್ಭದಲ್ಲಿ ನಿರ್ದೇಶನ ಕೇಂದ್ರವಾಗಿ ಮತ್ತು ಸುಸಜ್ಜಿತ ಕಚೇರಿಯಾಗಿ ಕಾರ್ಯನಿರ್ವಹಿಸಲು ಈ ಬೋಯಿಂಗ್ ಅನುಕೂಲ ಕಲ್ಪಿಸುತ್ತದೆ. ಭಾರತದ ಅಗತ್ಯಕ್ಕೆ ತಕ್ಕಂತೆ ಅಮೆರಿಕವು ಇದನ್ನು ತಯಾರಿಸಿದ್ದು ಭಾರಿ ಪ್ರಮಾಣದ ಸರಕು ಹಾಗೂ ಗರಿಷ್ಠ 46 ಪ್ರಯಾಣಿಕರನ್ನು ಇದು ಹೊತ್ತೊಯ್ಯಬಲ್ಲುದು. ಅಮೆರಿಕದ ಅಧ್ಯಕ್ಷರಿಗೆ ಇರುವ 'ಏರ್‌ಫೋರ್ಸ್ ಒನ್' ಮಾದರಿಯಲ್ಲಿ ರೂಪಿಸಲಾಗಿದೆ.

2009: ಶ್ರೀಲಂಕಾ ಭದ್ರತಾ ಪಡೆಗಳ ಜತೆ ನಡೆದ ತೀವ್ರ ಕಾಳಗದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರ ಪುತ್ರ ಚಾರ್ಲ್ಸ್ ಆಂಟನಿ ಗಾಯಗೊಂಡರು. 24 ವರ್ಷ ವಯಸ್ಸಿನ ಚಾರ್ಲ್ಸ್, ಪ್ರಭಾಕರನ್ ಅವರ ಹಿರಿಯ ಪುತ್ರ. ಎಲ್‌ಟಿಟಿಇ ಪ್ರಾಬಲ್ಯದ ಪುದ್ದುಕ್ಕುಡಿಯಿರುಪ್ಪು ಪ್ರದೇಶದಲ್ಲಿ ಲಂಕಾ ಸೇನೆ ನಡೆಸಿದ ಹೋರಾಟದಲ್ಲಿ ಗಾಯಗೊಂಡರು ಎಂದು ಎಂದು ಸೇನಾ ಮೂಲಗಳು ತಿಳಿಸಿದವು. ತಮಿಳು ವ್ಯಾಘ್ರ ಪಡೆ ವಶದಲ್ಲಿರುವ ಇನ್ನಷ್ಟು ಪ್ರದೇಶಗಳನ್ನು ಲಂಕಾ ಸೇನೆ ನಿಯಂತ್ರಣಕ್ಕೆ ಪಡೆಯಲು ನಡೆಸಿದ ಹೋರಾಟದಲ್ಲಿ ಎಲ್‌ಟಿಟಿಇ ಪಡೆಗಳ ನೇತೃತ್ವವನ್ನು ವಹಿಸಿಕೊಂಡಿದ್ದ ಆಂಟನಿ ಮಾರ್ಚ್ 8 ರಂದು ಗಾಯಗೊಂಡಿದ್ದರು.

2008: ತಮಿಳುನಾಡು ಸರ್ಕಾರ ಅಕ್ರಮವಾಗಿ ಆರಂಭಿಸಿದ ಹೊಗೇನಕಲ್ ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಬಂದ್, ಹೊಗೇನಕಲ್ ಪ್ರದೇಶದಲ್ಲಿ ಕನ್ನಡಿಗರ ಬೃಹತ್ ಶಕ್ತಿ ಪ್ರದರ್ಶನ ನಡೆಸಲು ಈದಿನ ಬೆಂಗಳೂರಿನಲ್ಲಿ ನಡೆದ ವಿವಿಧ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಏಪ್ರಿಲ್ ತಿಂಗಳ 12 ಅಥವಾ 13ರಂದು ಕರ್ನಾಟಕ ಬಂದ್ ನಡೆಸಲು ಹಾಗೂ ಇದೇ ತಿಂಗಳ 9ರಂದು ಹೊಗೇನಕಲ್ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು.

2008: 1992ರ ಷೇರು ಹಗರಣದ ಅಪರಾಧಿಗಳಾದ ಷೇರು ದಲ್ಲಾಳಿ ಕೇತನ್ ಪಾರಿಖ್ ಮತ್ತು ಇತರ ಐವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿತು. ಕೆನರಾ ಬ್ಯಾಂಕಿನ ಅಂಗ ಸಂಸ್ಥೆ ಕ್ಯಾನ್ ಫಿನಾದ 487.70 ಕೋಟಿ ರೂಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ವಿ. ಕಾನಡೆ ಅವರು ಷೇರು ದಲ್ಲಾಳಿಗಳಾದ ಪಾರಿಖ್, ಹಿತೇನ್ ದಲಾಲ್, ಕ್ಯಾನ್ ಫಿನಾದ ಮಾಜಿ ಅಧಿಕಾರಿಗಳಾದ ಪಿ.ಆರ್. ಆಚಾರ್ಯ, ಎಸ್. ಕೆ. ಝವೇರಿ, ಪಲ್ಲವ್ ಸೇಥ್ ಮತ್ತು ಎಂ. ಕೆ. ಅಶೋಕ್ ಕುಮಾರ್ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದರು. ಇನ್ನಿಬ್ಬರು ಅಪರಾಧಿಗಳಾದ ಸಾಯಿನಾಥ್, ನವೀನ್ ಚಂದ್ರ ಪಾರಿಖ್ ಅವರಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆ ಪ್ರಕಟಿಸಿದರು.

2008: ದೇಶವನ್ನು ತಲ್ಲಣಗೊಳಿಸಿದ ನಿತಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯು ಆರೋಪಿಗಳಲ್ಲಿ ಒಬ್ಬನಾದ ಮೊನಿಂದರ್ ಸಿಂಗ್ ಪಂಧೇರನನ್ನು ದೋಷಮುಕ್ತಗೊಳಿಸಿತು. ದಿನಗೂಲಿ ನೌಕರ ಜೇಮ್ಸ್ ಎಂಬವರ 10 ವರ್ಷದ ಪುತ್ರಿ ನಿಷಾ ಎಂಬಾಕೆ 2006ರ ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದಳು. ಆಕೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲ್ಲಲಾಗಿದೆ ಎಂಬ ಆರೋಪವನ್ನು ಪಂಧೇರ್ ಮತ್ತು ಆತನ ಸೇವಕ ಸುರಿಂದರ್ ಕೋಲಿಮೇಲೆ ಹೊರಿಸಲಾಗಿತ್ತು. ಆದರೆ ಪಂಧೇರ್ ಪ್ರಕರಣದಲ್ಲಿ ಶಾಮೀಲಾದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಿದ ಸಿಬಿಐ, ಕೋಲಿ ಮಾತ್ರ ತಪ್ಪಿತಸ್ಥ ಎಂದು ನ್ಯಾಯಾಲಯಕ್ಕೆ ತಿಳಿಸಿತು.

2008: ಬ್ರಿಟನ್ನಿಗೆ ವಲಸೆ ಬರಲು ಆಸಕ್ತಿ ಹೊಂದಿದ ವೃತ್ತಿ ನಿಪುಣರು ಮತ್ತು ತಜ್ಞರಿಗಾಗಿ ಬ್ರಿಟನ್ ಸರ್ಕಾರ ವಿಶೇಷ ವೀಸಾ ವ್ಯವಸ್ಥೆಯೊಂದನ್ನು ರೂಪಿಸಿತು. ಈ ವ್ಯವಸ್ಥೆ ಈದಿನದಿಂದ ಭಾರತದಲ್ಲಿ ಜಾರಿಗೆ ಬಂದಿತು. ಪಾಯಿಂಟ್ ಆಧಾರಿತ ವೀಸಾ ವ್ಯವಸ್ಥೆ (ಪಿಬಿಎಸ್- ಟಿಒ) ಎಂದು ಕರೆಯಲಾಗುವ ಹೊಸ ವ್ಯವಸ್ಥೆಯಡಿ ಮೂರು ವರ್ಷಗಳಿಗೆ ಅನ್ವಯ ವಾಗುವಂತೆ ವೀಸಾ ನೀಡಲಾಗುವುದು. ಇದುವರೆಗೆ ಜಾರಿಯಲ್ಲಿದ್ದ ಎಚ್ ಎಸ್ ಎಂ (ನುರಿತ ತಜ್ಞರ ವಲಸೆ) ಕಾರ್ಯಕ್ರಮದಡಿ ಎರಡು ವರ್ಷಗಳಿಗೆ ಮಾತ್ರ ವೀಸಾ ನೀಡಲಾಗುತ್ತಿತ್ತು.

2008: ಮಹಾರಾಷ್ಟ್ರ ಸರ್ಕಾರವು 2010ರೊಳಗಾಗಿ ಬೃಹನ್ಮುಂಬೈ ಮಹಾನಗರದಲ್ಲಿ ಮಾನೊ ರೈಲು ಆರಂಭಿಸುವ ಯೋಜನೆ ಕೈಗೆತ್ತಿಕೊಂಡಿತು. ಸುಮಾರು 1800 ಕೋಟಿ ವೆಚ್ಚದಲ್ಲಿ ನಾಲ್ಕು ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸುವ ಯೋಜನೆಯಿದ್ದು ಇದರ ಸಂಚಾರಕ್ಕೆ ಅಲ್ಪ ಜಾಗ ಸಾಕಾಗುತ್ತದೆ. ಇದು ಮುಂಬೈ ಮಹಾ ನಗರದ ಹೊರ ವಲಯ ಮತ್ತು ಮೆಟ್ರೊ ರೈಲು ವ್ಯವಸ್ಥೆಗೆ ಪರ್ಯಾಯ ಮಾರ್ಗವಾಗಲಿದೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವರು ತಿಳಿಸಿದರು.

2008: ಇನ್ನು ಮುಂದೆ ಬೆಂಗಳೂರು ಸಂಜೆ ಸಮಯದಲ್ಲೂ ಅಂಚೆ ಇಲಾಖೆ ಮೂಲಕ ಕಾಗದ ಪತ್ರ ಹಾಗೂ ಇತರೆ ವಸ್ತುಗಳನ್ನು ರವಾನಿಸಬಹುದು. ಇದಕ್ಕಾಗಿ ಅಂಚೆ ಇಲಾಖೆ `ಸಂಜೆ ಸ್ಪೀಡ್ ಅಂಚೆ' ಎಂಬ ವಿನೂತನ ಯೋಜನೆಯನ್ನು ಆರಂಭಿಸಿತು. ಇದುವರೆಗೆ ಕೇವಲ ಬೆಳಿಗ್ಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿತ್ತು. ಇನ್ನು ಮುಂದೆ ಸಂಜೆ 6.30 ರವರೆಗೂ ಅಂಚೆ ಅಣ್ಣಂದಿರು ಕಾಗದ ಪತ್ರಗಳನ್ನು ತಲುಪಿಸಲು ಹಾಗೂ ಒಯ್ಯಲು ಮನೆಮನೆಗೆ ಬರಲಿದ್ದಾರೆ. ಪ್ರಧಾನ ಅಂಚೆ ಕಚೇರಿಯಲ್ಲಿ ಈ ಯೋಜನೆಗೆ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಮೀರಾ ದತ್ತ ಅವರು ಚಾಲನೆ ನೀಡಿದರು. ಬೆಂಗಳೂರಿನ 84 ಅಂಚೆ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯ ದೊರೆಯಲಿದ್ದು, 120 ಅಂಚೆ ಅಣ್ಣಂದಿರು ಕಾರ್ಯ ನಿರ್ವಹಿಸುವರು. ಈ ಹೊಸ ವ್ಯವಸ್ಥೆಯಲ್ಲಿ ರಿಜಿಸ್ಟರ್ಡ್ ಅಂಚೆ ಹಾಗೂ ಮನಿಯಾರ್ಡರ್ ಹೊರತು ಪಡಿಸಿ ಇತರ ಸ್ಪೀಡ್ ಪೋಸ್ಟ್ ಪತ್ರಗಳನ್ನು ಮನೆಮನೆಗೆ ತೆರಳಿ ಪಡೆಯಲಾಗುತ್ತದೆ.

2008: `ರಾವಲ್ಪಿಂಡಿ ಎಕ್ಸ್ಪ್ರೆಸ್' ಖ್ಯಾತಿಯ ವೇಗಿ ಶೋಯಬ್ ಅಖ್ತರ್ ಅವರ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಲಾಯಿತು. ಅಖ್ತರ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಹಾಗೂ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಈ ನಿರ್ಧಾರ ಕೈಗೊಂಡಿತು.

2008: ಹಿಂದಿನ ವಾರ ಗೃಹ ಬಂಧನದಿಂದ ಬಿಡುಗಡೆಗೊಂಡ ಪಾಕಿಸ್ಥಾನದ ಪದಚ್ಯುತ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮಹಮ್ಮದ್ ಚೌಧರಿ ಅವರು, ತಾವಿನ್ನೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂದು ಘೋಷಿಸಿದರು. ``ಸಂವಿಧಾನದ ಪ್ರಕಾರ, ತಾವಿನ್ನೂ ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿಯಾಗಿದ್ದು ಈ ಸಂಬಂಧ ಕರ್ತವ್ಯ ನಿರ್ವಹಣೆಗೆ ಯಾರೂ ಅಡ್ಡಿಪಡಿಸಲಾಗದು' ಎಂದು ಅವರು ಹೇಳಿದರು.

2008: ತುಟಿಗೆ ಲಿಪ್ ಸ್ಟಿಕ್ ಬಳಿದುಕೊಂಡ ಮತ್ತು ಹುಬ್ಬು ತೀಡಿಕೊಂಡ ಮಹಿಳೆ ಫಾಹ್ಮೀದಾ ಮಿರ್ಜಾ ಪಾಕಿಸ್ಥಾನದ ಸಂಸತ್ತಿನಲ್ಲಿ ಸ್ಪೀಕರ್ ಆಗಿ ದಾಖಲೆ ಮಾಡಿದರು. ಫಾಹ್ಮೀದಾ ಮಿರ್ಜಾ ಪಾಕಿಸ್ಥಾನ ಸಂಸತ್ತಿನಲ್ಲಿ ಮಹಿಳಾ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ಕಾಮನ್ವೆಲ್ತ್ ಮಹಾಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿರಿಯ ಭಾರತೀಯ ರಾಜತಂತ್ರಜ್ಞ ಕಮಲೇಶ್ ಶರ್ಮಾ ಅವರು ಈದಿನ ಲಂಡನ್ನಿನಲ್ಲಿ ಅಧಿಕಾರ ವಹಿಸಿಕೊಂಡರು.

2007: ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಗ್ರಾತ್ ಅವರು ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸರದಾರ ಎನಿಸಿಕೊಂಡು ಹೊಸ ದಾಖಲೆ ನಿರ್ಮಿಸಿದರು. ಬಾಂಗ್ಲಾದೇಶ ವಿರುದ್ಧ ನಡೆದ ಸೂಪರ್ 8ರ ಹಂತದ ಪಂದ್ಯದಲ್ಲಿ ಮೊಹಮ್ಮದ್ ಆಶ್ರಫುಲ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೆಗ್ರಾತ್, 33ನೇ ವಿಶ್ವಕಪ್ ಪಂದ್ಯದಲ್ಲಿ ವಿಕೆಟ್ ಸಂಪಾದನೆಯನ್ನು 56ಕ್ಕೆ ಹೆಚ್ಚಿಸಿಕೊಂಡು ಪಾಕಿಸ್ಥಾನದ ವೇಗಿ ವಾಸಿಂ ಅಕ್ರಂ ಹೆಸರಿನಲ್ಲಿ ಇದ್ದ (38 ಪಂದ್ಯಗಳಿಂದ 55 ವಿಕೆಟ್) ದಾಖಲೆಯನ್ನು ಬದಿಗೊತ್ತಿದರು.

2007: ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ತಂತ್ರಜ್ಞಾನದ ಪ್ರಥಮ ಅನ್ವೇಷಕ ಎಲ್. ಬೇಕರ್ (90) ಅವರು ತಿರುವನಂತಪುರದಲ್ಲಿ ನಿಧನರಾದರು. ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮಿನಲ್ಲಿ 1917ರ ಮಾರ್ಚ್ 2ರಂದು ಜನಿಸಿದ ಬೇಕರ್ ಅಲ್ಲಿನ ಬರ್ಮಿಂಗ್ ಹ್ಯಾಮ್ ಸ್ಕೂಲ್ ಆಫ್ ಆರ್ಕಿಟೆಕ್ಟಿನಲ್ಲಿ ಕಲಿತು ಧರ್ಮ ಪ್ರಚಾರ ಕೆಲಸಕ್ಕಾಗಿ 1945ರಲ್ಲಿ ಭಾರತಕ್ಕೆ ಬಂದಿದ್ದರು. ಅನಂತರ ಇಲ್ಲಿಯೇ ನೆಲೆಸಿದ ಅವರಿಗೆ 1989ರಲ್ಲಿ ಈ ದೇಶದ ಪೌರತ್ವ ದೊರಕಿತ್ತು. ಕೆಳಮಧ್ಯಮ ಮತ್ತು ಬಡ ಮಧ್ಯಮ ಜನರಿಗೆ ಸೂಕ್ತವಾಗುವಂತಹ ಅತ್ಯಂತ ಕಡಿಮೆ ವೆಚ್ಚದ ಮತ್ತು ಉತ್ತಮ ಗುಣಮಟ್ಟದ ಮನೆ ನಿರ್ಮಾಣದ ವಿನ್ಯಾಸ ಮಾಡಿ ಬೇಕರ್ ಖ್ಯಾತಿ ಪಡೆದಿದ್ದರು.

2007: ತುಮಕೂರಿನ ಸಿದ್ದಗಂಗೆಯ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅವರ ಜನ್ಮದಿನವಾದ ಈದಿನ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು `ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ 1908ರಲ್ಲಿ ಏಪ್ರಿಲ್ 1ರಂದು ಜನಿಸಿದ ಶಿವಕುಮಾರ ಸ್ವಾಮೀಜಿ ಅವರು ಹೊನ್ನೇಗೌಡ - ಗಂಗಮ್ಮ ದಂಪತಿಯ 13ನೇ ಹಾಗೂ ಕೊನೆಯ ಪುತ್ರ. ತುಮಕೂರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ಆಗಿನ ಕಾಲದಲ್ಲೇ ಬಿ.ಎ. ಆನರ್ಸ್ ಪದವಿ ಪಡೆದ ಮೇಧಾವಿ. 3.3.1930ರಲ್ಲಿ ವಿರಕ್ತಾಶ್ರಮ ದೀಕ್ಷೆ ಪಡೆದ ಸ್ವಾಮೀಜಿ, 11.1.1941ರಂದು ಸಿದ್ದಗಂಗಾ ಮಠದ ಮುಖ್ಯಸ್ಥರಾದರು.

2007: ಭಾರಿ ಒತ್ತಡಕ್ಕೆ ಮಣಿದ ಫಿಡೆ (ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್) ಕೊನೆಗೂ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಟ್ಟಿತು. ಭಾರತದ ಆನಂದ್ ವಿಶ್ವ ಚೆಸ್ನ ನಂಬರ್ 1 ಆಟಗಾರ ಎಂದು ಫಿಡೆ ರ್ಯಾಂಕಿಂಗ್ ಸಮಿತಿಯ ಅಧ್ಯಕ್ಷ ಕ್ಯಾಸ್ಟ್ರೊ ಅಂಬುಡೊ ಖಚಿತಪಡಿಸಿದರು.

2007: ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ ಕೊಯಿರಾಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಮಾವೋವಾದಿಗಳಿಂದ ಕೂಡಿದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾದರು.

2006: ಬಿಜೆಪಿ ಆಡಳಿತ ಇರುವ ಛತ್ತೀಸ್ ಗಢ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಹಾಗೂ ರಾಜಸ್ಥಾನ ಈ ಐದು ರಾಜ್ಯಗಳು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಪದ್ಧತಿ ಜಾರಿಗೊಳಿಸಿದವು. 22 ರಾಜ್ಯಗಳು ಕಳೆದ ವರ್ಷ ವ್ಯಾಟ್ ಪದ್ಧತಿ ಜಾರಿಗೆ ತಂದಿದ್ದು ತಮಿಳುನಾಡು ಮತ್ತು ಉತ್ತರ ಪ್ರದೇಶ ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳೂ ವ್ಯಾಟ್ ಪದ್ಧತಿ ಅಳವಡಿಸಿಕೊಂಡಂತಾಯಿತು.

2006: ಬ್ರೆಜಿಲ್ಲಿನ ಮೊತ್ತ ಮೊದಲ ಗಗನಯಾನಿ ಬ್ರೆಜಿಲ್ ವಾಯುಪಡೆ ಪೈಲಟ್ ಮಾರ್ಕೋಸ್ ಪಾಂಟೆಸ್, ರಷ್ಯ ಮತ್ತು ಅಮೆರಿಕದ ಗಗನಯಾನಿಗಳಾದ ಪಾವೆಲ್ ವಿನೊಗ್ರದೊವ್ ಹಾಗೂ ಜೆಫ್ರಿ ವಿಲಿಯಮ್ಸ್ ಅವರನ್ನು ಹೊತ್ತ ಸೋಯುಜ್ ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐ ಎಸ್ ಎಸ್) ತಲುಪಿತು. ಭೂಮಿಯಿಂದ ಹೊರಟ ಎರಡು ದಿನಗಳ ಹಿಂದೆ ಈ ಬಾಹ್ಯಾಕಾಶ ನೌಕೆ ಪಯಣ ಹೊರಟಿತ್ತು.

1943: ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಚಿತ್ರ ಕಲಾವಿದ ವಿ.ಬಿ. ಹಿರೇಗೌಡರ ಅವರು ಬಸವನಗೌಡ- ಗಂಗಮ್ಮ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದಲ್ಲಿ ಜನಿಸಿದರು. ಕುವೆಂಪು ವಿವಿ ಲಲಿತಾ ಕಲಾ ಆಧ್ಯಯನ ಮಂಡಳಿ ಅಧ್ಯಕ್ಷರಾಗಿ, ಸೆನೆಟ್ ಸದಸ್ಯರಾಗಿ, ಗುಲ್ಬರ್ಗ, ಬೆಂಗಳೂರು, ಮೈಸೂರು, ಕನ್ನಡ ವಿಶ್ವವಿದ್ಯಾಲಯಗಳ ಲಲಿತಕಲಾ ಅಧ್ಯಯನ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹಿರೇಗೌಡರ ಅವರು 25ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನ, ರಾಷ್ಟ್ರೀಯ ಮಟ್ಟದ ಹಲವಾರು ಚಿತ್ರ ಪ್ರದರ್ಶನಗಳಲ್ಲಿ ಪಾಲ್ಗೊಂಡರು.

1976: ಸ್ಟೀವ್ ಒಝ್ನಿಯಾಕ್ ಮತ್ತು ಸ್ಟೀವ್ ಜಾಬ್ಸ್ ಅವರು ಮೊತ್ತ ಮೊದಲ `ಏ(ಆ)ಪಲ್ 1' ಕಂಪ್ಯೂಟರ್ ಬಿಡುಗಡೆ ಮಾಡಿದರು. ಇದರೊಂದಿಗೆ `ಏ(ಆ)ಪಲ್' ಕಂಪ್ಯೂಟರುಗಳ ನಿರ್ಮಾಣ ಆರಂಭವಾಯಿತು. ಏ(ಆ)ಪಲ್ 1 ಕಂಪ್ಯೂಟರ್ ಮೊತ್ತ ಮೊದಲ ಸಿಂಗಲ್ ಸರ್ಕಿಟ್ ಬೋರ್ಡ್ ಕಂಪ್ಯೂಟರ್. ಅದರೆ ಬೆಲೆ 666.66 ಡಾಲರುಗಳಾಗಿದ್ದವು.

1955: ಜನರಲ್ ರಾಜೇಂದ್ರ ಸಿನ್ಹಜಿ ಭಾರತದ ಪ್ರಥಮ ಸೇನಾ ದಂಡ ನಾಯಕರಾದರು.

1954: ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಭಾರತದ ಪ್ರಥಮ ವಾಯುಪಡೆ ಮುಖ್ಯಸ್ಥರಾದರು.

1941: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅಜಿತ್ ವಾಡೇಕರ್ ಹುಟ್ಟಿದ ದಿನ. 1971ರಲ್ಲಿ ಇಂಗ್ಲೆಂಡಿನಲ್ಲಿ ಆ ದೇಶದ ವಿರುದ್ಧ ನಡೆದ ಪಂದ್ಯಗಳಲ್ಲಿ ಭಾರತಕ್ಕೆ ಮೊದಲ ಸರಣಿ ಜಯ ತಂದು ಕೊಟ್ಟ ಕ್ರಿಕೆಟ್ ಕ್ಯಾಪ್ಟನ್ ವಾಡೇಕರ್.

1936: ಬಿಹಾರಿನಿಂದ ಬೇರ್ಪಟ್ಟು ಒರಿಸ್ಸಾ ಭಾರತದ ಪ್ರತ್ಯೇಕ ರಾಜ್ಯವಾಯಿತು.

1935: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಭಾರತೀಯ ರಿಸರ್ವ್ ಬ್ಯಾಂಕ್) ಸ್ಥಾಪನೆಯಾಯಿತು. ಇದೇ ವರ್ಷ ಇಂಡಿಯನ್ ಪೋಸ್ಟಲ್ ಆರ್ಡರನ್ನು ಕೂಡಾ ಆರಂಭಿಸಲಾಯಿತು.

1883: ಲೋನ್ ಚಾನೆ (1883-1930) ಹುಟ್ಟಿದ ದಿನ. ಇವರು ಮೂಕಿ ಯುಗದ ಖ್ಯಾತ ಅಮೆರಿಕನ್ ಚಿತ್ರನಟ. ಇವರನ್ನು `ಸಹಸ್ರ ಮುಖಗಳ ಮನುಷ್ಯ' (ಮ್ಯಾನ್ ಆಫ್ ಥೌಸಂಡ್ ಫೇಸಸ್) ಎಂದು ಕರೆಯಲಾಗುತ್ತಿತ್ತು.

1578: ವಿಜ್ಞಾನಿ ವಿಲಿಯಂ ಹಾರ್ವೆ ಜನ್ಮದಿನ. ಹೃದಯವು ಪಂಪಿನಂತೆ ಕಾರ್ಯನಿರ್ವಹಿಸುತ್ತ ರಕ್ತಸಂಚಾರಕ್ಕೆ ನೆರವಾಗುತ್ತದೆ ಎಂದು ಈತ ಪತ್ತೆ ಹಚ್ಚಿ ಪ್ರದರ್ಶಿಸಿದ.

No comments:

Advertisement