My Blog List

Friday, October 3, 2014

ರೇಡಿಯೊ ಮೂಲಕ ಜನರೊಂದಿಗೆ ಸಂವಹನ: ಪ್ರಧಾನಿ ಮೋದಿ PM to interact with people through Radio

ರೇಡಿಯೊ ಮೂಲಕ ಇನ್ನು ಜನರೊಂದಿಗೆ ನಿಯಮಿತ ಸಂವಹನ: ಪ್ರಧಾನಿ ಮೋದಿ

ನವದೆಹಲಿ: ತಾವು ಇನ್ನುಮುಂದೆ ನಿಯಮಿತವಾಗಿ ಆಕಾಶವಾಣಿ / ರೇಡಿಯೋ ಮೂಲಕ ಜನತೆಯೊಂದಿಗೆ ಸಂವಹನ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ (3/10/2014) ಘೋಷಿಸಿದರು.

ಅಖಿಲ ಭಾರತ ಆಕಾಶವಾಣಿ ಮೂಲಕ ಈದಿನ  11 ಗಂಟೆಗೆ ತಮ್ಮ ‘ಮನದಾಳದ ಮಾತು’ ಆಡಿದ ಅವರು, ಸಾಮಾನ್ಯವಾಗಿ ಈ ಸಂವಹನವನ್ನು ಪ್ರತಿ ಭಾನುವಾರ ಮುಂಜಾನೆ 11 ಗಂಟೆಗೇ ಇಟ್ಟುಕೊಳ್ಳುವುದಾಗಿ ಹೇಳಿದರು.

‘ಕೊಳಕಿನ ವಿರುದ್ಧ ವಿಜಯ ಸಾಧಿಸಲು ‘ಸ್ವಚ್ಛ ಭಾರತ ಅಭಿಯಾನ’ದಲ್ಲಿ ಪಾಲ್ಗೊಳ್ಳಿ ಎಂದು ಜನತೆಗೆ ಪುನಃ ಮನವಿ ಮಾಡಿದ ಪ್ರಧಾನಿ, ‘ಈ ವಿಜಯದಶಮಿಯು ನಮಗೆ ಸುತ್ತಮುತ್ತಣ ಕೊಳಕಿನ ಮೇಲೆ ವಿಜಯ ತಂದುಕೊಡಲಿ’ ಎಂದು ಹಾರೈಸಿದರು.

ಜನತೆಗೆ ವಿಜಯದಶಮಿಯ ಶುಭ ಸಂದೇಶ ನೀಡಲು ಅವರು ಈ ಬಾನುಲಿ ಭಾಷಣದ ಅವಕಾಶವನ್ನು ಬಳಸಿಕೊಂಡರು.
‘ಕೊಳಕು ನಿರ್ಮೂಲನೆಗೆ ಪ್ರತಿಜ್ಞೆ ಮಾಡೋಣ. ನಿನ್ನೆ (ಅ.2ರ ಗಾಂಧಿ ಜಯಂತಿಯ ದಿನ) ನಾವು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದೇವೆ. ನೀವೆಲ್ಲರೂ ಈ ಅಭಿಯಾನದಲ್ಲಿ ಸೇರಿಕೊಳ್ಳಬೇಕು ಎಂದು ನಾನು ಬಯಸುವೆ’ ಎಂದು ಪ್ರಧಾನಿ ನುಡಿದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧಿಜಯಂತಿಯ ದಿನ ಚಾಲನೆ ನೀಡಿದ್ದ ಪ್ರಧಾನಿ ವಾರದಲ್ಲಿ ಎರಡು ಗಂಟೆಗಳನ್ನು ರಾಷ್ಟ್ರದ ಸ್ವಚ್ಛತೆಗಾಗಿ ಮೀಸಲಿಡುವುದಾಗಿ ಲಕ್ಷಾಂತರ ಜನರಿಂದ ಪ್ರತಿಜ್ಞೆ ಮಾಡಿಸಿದ್ದರು.

‘ಬಡ ಕುಟುಂಬಗಳ ಅನುಕೂಲಕ್ಕಾಗಿ ಕೆಲವಾದರೂ ಖಾದಿ ಉಡುಪುಗಳನ್ನು ಖರೀದಿಸಿ. ಬೆಡ್ ಶೀಟ್ ಇರಬಹುದು, ಕರವಸ್ತ್ರ ಇರಬಹುದು ಅಥವಾ ಬೇರೇನಾದರೂ ಇರಬಹುದು. ನೀವು ಒಂದು ವಸ್ತುವನ್ನು ಖರೀದಿಸಿದರೆ ಅದು ಒಂದು ಬಡ ಕುಟುಂಬದಲ್ಲಿ ಜ್ಯೋತಿಯನ್ನು ಬೆಳಗುತ್ತದೆ. ಹಬ್ಬದ ದಿನಗಳಲ್ಲಿ ಜನರ ಅನುಕೂಲಕ್ಕಾಗಿ ಖಾದಿ ಗ್ರಾಮೋದ್ಯೋಗ ಸಂಘಗಳು ಖಾದಿ ಬಟ್ಟೆಗಳಿಗೆ ರಿಯಾಯ್ತಿಯನ್ನೂ ನೀಡುತ್ತವೆ’ ಎಂದು ಪ್ರಧಾನಿ ‘ಮನ್ ಕೀ ಬಾತ್’ (ಮನದಾಳದ ಮಾತು) ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಪ್ರಧಾನಿಯವರ ‘ಮನದಾಳದ ಮಾತು’  ಕೇಳಬಹುದು.

Ever heard of Prime Minister Narendra Modi expressing his ‘Mann Ki Baat’ to the people of his country on a radio? Well, if you have not heard listen here:

No comments:

Advertisement