My Blog List

Wednesday, November 27, 2019

ನವೆಂಬರ್ 28 ಗುರುವಾರ ಸಂಜೆ ಉದ್ಧವ್ ಠಾಕ್ರೆ ಪ್ರಮಾಣ ವಚನ

ನವೆಂಬರ್ 28 ಗುರುವಾರ  ಸಂಜೆ
ಉದ್ಧವ್ ಠಾಕ್ರೆ ಪ್ರಮಾಣ ವಚನ
ಮುಂಬೈ:ಮಹಾ ವಿಕಾಸ ಆಘಾಡಿಮೈತ್ರಿಕೂಟದ ನಾಯಕರಾಗಿ ಶಿವಸೇನೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷಗಳ ಶಾಸಕರ ಜಂಟಿ ಸಭೆಯಲ್ಲಿ 2019 ನವೆಂಬರ್ 26ರ ಮಂಗಳವಾರ ರಾತ್ರಿ ಆಯ್ಕೆಯಾದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನವೆಂಬರ್ 28ರ ಗುರುವಾರ ಸಂಜೆ 6.40 ಗಂಟೆಗೆ ಮುಂಬೈ ಶಿವಾಜಿ ಪಾರ್ಕಿನಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ತಮ್ಮನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಉದ್ಧವ್ ಠಾಕ್ರೆ ಅವರಿಗೆ ಸರ್ಕಾರ ರಚಿಸಲು ಆಮಂತ್ರಿಸಿ ಕಳುಹಿಸಿದ ಪತ್ರದಲ್ಲಿ ಉದ್ಧವ್ ಅವರು ನವೆಂಬರ್ 28ರ ಸಂಜೆ 6.40ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯುವುದಾಗಿ ತಿಳಿಸಿದರು. ಸದನದ ಸದಸ್ಯರಾಗಿ ಆಯ್ಕೆಯಾಗಲು ರಾಜ್ಯಪಾಲರು ಠಾಕ್ರೆ ಅವರಿಗೆ 6 ತಿಂಗಳ ಕಾಲಾವಕಾಶ ನೀಡಿದರು.

ಇದಕ್ಕೂ ಮುನ್ನ ಮುಂಬೈಯ ಟ್ರೈಡೆಂಟ್ ಹೋಟೆಲಿನಲ್ಲಿ ನಡೆದ ಸಭೆಯು ಮೈತ್ರಿಕೂಟಕ್ಕೆ ಹೆಸರು ಇಡುವ ಬಗ್ಗೆ ನಿರ್ಣಯವೊಂದನ್ನೂ ಅಂಗೀಕರಿಸಿದ ಬಳಿಕ ಡಿಸೆಂಬರ್ 1ರಂದು ಪ್ರಮಾಣ ವಚನ ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿತ್ತು.

ಸಭೆಯ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದರು.
ಎನ್ ಸಿಪಿ ನಾಯಕ ಜಯಂತ್ ಪಾಟೀಲ್ ಮತ್ತು ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿದವು.

ಮಹಾರಾಷ್ಟ್ರವು ೨೦ ವರ್ಷಗಳ ಬಳಿಕ ಶಿವಸೇನಾ ಮುಖ್ಯಮಂತ್ರಿಯನ್ನು ಹೊಂದಲಿದೆ. ಆದರೆ, ಠಾಕ್ರೆ ಕುಟುಂಬದ ಸದಸ್ಯರು ಮುಖ್ಯಮಂತ್ರಿ ಆಗುತ್ತಿರುವುದು ಇದೇ ಪ್ರಥಮ. ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ ಹಾಗೂ ಗೆದ್ದ ಕುಟುಂಬದ ಪ್ರಪ್ರಥಮ ಸದಸ್ಯರಾಗಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ನಡೆದ ಬೆಳವಣಿಗೆಗಳಲ್ಲಿ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ನವೆಂಬರ್ 27ರ ಬುಧವಾರ ಸಂಜೆಯ ಒಳಗಾಗಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಪಡೆಯುವಂತೆ ಫಡ್ನವಿಸ್ ಅವರಿಗೆ  ಮುಖ್ಯಮಂತ್ರಿ ದೇವೇಂದ್ರ ಫಢ್ನವಿಸ್ ಅವರಿಗೆ ಆಜ್ಞಾಪಿಸಿತ್ತು.  ಇದಾದ ಕೆಲವೇ ಗಂಟೆಗಳಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಮಧ್ಯಾಹ್ನ 3 ಗಂಟೆಗೆ ದೇವೇಂದ್ರ ಫಢ್ನವಿಸ್ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದರು. ಇದರೊಂದಿಗೆ 80 ಗಂಟೆಗಳ (3 ದಿನ) ಅವರ ಸರ್ಕಾರ ಪತನಗೊಂಡಿತ್ತು. ತನ್ಮೂಲಕ ಮಹಾರಾಷ್ಟ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಏರುವ ಬಿಜೆಪಿ ಕನಸು ಭಗ್ನಗೊಂಡಿತ್ತು.

No comments:

Advertisement