My Blog List

Thursday, November 21, 2019

ಕುತೂಹಲ ಕೆರಳಿಸಿದ ಶರದ್ ಪವಾರ್- ಪ್ರಧಾನಿ ಮೋದಿ ೫೦ ನಿಮಿಷದ ಭೇಟಿ

 ಕುತೂಹಲ ಕೆರಳಿಸಿದ ಶರದ್ ಪವಾರ್- ಪ್ರಧಾನಿ ಮೋದಿ ೫೦ ನಿಮಿಷದ ಭೇಟಿ
ನವದೆಹಲಿ: ಮಹಾರಾಷ್ಟ್ರದ ಸರ್ಕಾರ ರಚನೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಂದಿನ ನಡೆ ಏನು ಎಂಬ ಕುರಿತ  ಪ್ರಶ್ನೆಗಳ ಮಧ್ಯೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು 2019 ನವೆಂಬರ್ 20ರ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ೫೦ ನಿಮಿಷಗಳ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಕೆರಳಿಸಿತು.
ಭೇಟಿಯ ಬಳಿಕ ಟ್ವೀಟ್ ಮಾಡಿದ ಶರದ್ ಪವಾರ್ ಅವರು ಭೇಟಿ ಕಾಲದಲ್ಲಿ ರಾಜ್ಯದ ರೈತರ ಸಂಕಷ್ಟ ನಿವಾರಣೆ ಸಲುವಾಗಿ ಮಧ್ಯಪ್ರವೇಶ ಮಾಡುವಂತೆ ತಾವು ಪ್ರಧಾನಿಯನ್ನು ಕೋರಿದ್ದಾಗಿ ತಿಳಿಸಿದರು.
ಮಹಾರಾಷ್ಟ್ರದ ಇತರ ರಾಜಕಾರಣಿಗಳಂತೆಯೇ ಶರದ್ ಪವಾರ್ ಅವರೂ ಕಳೆದ ಕೆಲವು ವಾರಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಸಂಕಷ್ಟಗಳ ಅಧ್ಯಯನ ನಡೆಸಿದ್ದರು.

ಮುಂಗಾರು
ಆಗಮನದ ಬಳಿಕ ರಾಜ್ಯದ ಪ್ರತಿಯೊಂದು ಬೆಳೆಯೂ ಬಹುತೇಕ ಭಾಗಗಳಲ್ಲಿ ತೀವ್ರ ಹಾನಿಗೀಡಾಗಿದೆ ಎಂದು ಅವರು ಹೇಳಿದ್ದರು.

ರಾಜ್ಯದ ತೀವ್ರ ಸಂಕಷ್ಟಮಯ ಸ್ಥಿತಿ ಬಗ್ಗೆ ನಾನು ಗೌರವಾನ್ವಿತ ಪ್ರಧಾನಿಯವರ ಗಮನ ಸೆಳೆದೆಎಂದು ಪವಾರ್ ಭೇಟಿಯ ಬಳಿಕ ಟ್ವೀಟ್ ಮಾಡಿದರು.

ಮಹಾರಾಷ್ಟ್ರದ ಸರ್ಕಾರ ರಚನೆ ಬಿಕ್ಕಟ್ಟಿನ ಮಧ್ಯೆ ನಡೆದ ಭೇಟಿ ಸುಮಾರು ೫೦ ನಿಮಿಷಗಳಷ್ಟು ಸಮಯ ತೆಗೆದುಕೊಂಡಿತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಸಾಮಾನ್ಯವಾಗಿ ಮನವಿ ಸಲ್ಲಿಸುವ ಸಲುವಾಗಿ ಪ್ರಧಾನಿಯವರ ಜೊತೆಗೆ ನಡೆಯುವ ಭೇಟಿ ಮಾತುಕತೆಗಳು ೨೦ ನಿಮಿಷ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ಮುಕ್ತಾಯವಾಗುತ್ತವೆ.

ಪ್ರಧಾನಿ ಜೊತೆಗಿನ ತಮ್ಮ ಭೇಟಿ ಬಗೆಗೆ ಪವಾರ್ ಅವರು ಯಾವುದೇ  ಮಾತನ್ನೂ ಆಡಿಲ್ಲ. ಆದರೆ ಟ್ವಿಟ್ಟರಿನಲ್ಲಿ ಮಾತ್ರ ನಾವು ಪ್ರಧಾನಿಯವರಿಗೆ ಎರತು ಪತ್ರಗಳನ್ನು ಒಪ್ಪಿಸಿದ್ದಾಗಿ ತಿಳಿಸಿದರು.
ಒಂದು ಪತ್ರದಲ್ಲಿ ಪವಾರ್ ಅವರು ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ನೆರವಾಗಲು ಮಧ್ಯಪ್ರವೇಶ ಮಾಡಬೇಕು ಎಂಬುದಾಗಿ ಮನವಿ ಮಾಡಿದ್ದಾರೆ. ಇನ್ನೊಂದು ಪತ್ರದಲ್ಲಿ ಪುಣೆಯ ವಸಂತದಾದಾ ಸಕ್ಕರೆ ಸಂಸ್ಥೆಯಲ್ಲಿ ನಡೆಯಲಿರುವ ಸಕ್ಕರೆ ಕೈಗಾರಿಕೆ ಸಂಬಂಧಿತ ಸಮ್ಮೇಳನಕ್ಕೆ ಪ್ರಧಾನಿಯವರನ್ನು ವಸಂತದಾದ ಸಕ್ಕರೆ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಶರದ್ ಪವಾರ್ ಆಹ್ವಾನಿಸಿದ್ದಾರೆ. ಮೂರು ದಿನಗಳ ಸಮ್ಮೇಳನ ಮುಂದಿನ ವರ್ಷ ಜನವರಿ ೩೧ರಂದು ಆರಂಭವಾಗುವುದು.

ಶರದ್ ಪವಾರ್ ಅವರ ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿಕೂಟ ಸರ್ಕಾರ ರಚಿಸಲು ಶಿವಸೇನೆ ತೀವ್ರ ಯತ್ನಗಳನ್ನು ನಡೆಸುತ್ತಿರುವುದರ ಮಧ್ಯೆಯೇ ಪವಾರ್ ಅವರು ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲವನ್ನು ಸೃಷ್ಟಿಸಿತು.
ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷದ (ಬಿಜೆಪಿ) ಮೈತ್ರಿಜೊತೆಗೆ ಸ್ಪರ್ಧಿಸಿದ್ದ ಶಿವಸೇನೆ, ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬ ತನ್ನ ಮನವಿಯನ್ನು ಬಿಜೆಪಿ ತಿರಸ್ಕರಿಸಿದ ಬಳಿಕ ಮೈತ್ರಿಕೂಟದಿಂದ ಹೊರಕ್ಕೆ ನಡೆದಿದೆ.

ಸೇನೆಯು ೨೮೮ ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂದಿ ಪಕ್ಷೇತರರು ಸೇರಿದಂತೆ ಒಟ್ಟು ೬೪ ಶಾಸಕರ ಬೆಂಬಲವನ್ನು ಹೊಂದಿದೆ. ಎನ್ಸಿಪಿಯ ೫೪ ಮತ್ತು ಕಾಂಗ್ರೆಸ್ ಪಕ್ಷದ ೪೪ ಸದಸ್ಯರ ಬೆಂಬಲದೊಂದಿಗೆ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ ೧೪೫ನ್ನು ತಾನು ದಾಟಬಲ್ಲೆ ಎಂಬ ಆಶಯ ಶಿವಸೇನೆಯದು.

ಸಂಜಯ್ ರಾವತ್ರಂತಹ ಶಿವಸೇನಾ ನಾಯಕರು ಮೈತ್ರಿಕೂಟದ ಮಾತುಕತೆಗಳು ಇನ್ನೂ ಹಳಿಯಲ್ಲಿಯೇ ಸಾಗುತ್ತಿದ್ದು, ಮೈತ್ರಿಕೂಟ ರಚನೆ ಕುರಿತು ಸ್ಪಷ್ಟ ಚಿತ್ರ ನಾಳೆಯ ವೇಳೆಗೆ ಸ್ಪಷ್ಟವಾಗಬಹುದು ಮತ್ತು ಮುಂದಿನ ಕೆಲವು ವಾರಗಳ ಒಳಗಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧವಾಗಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ.

ಆದರೆ, ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗಿನ ಭೇಟಿಯ ಬಳಕ ಶರದ್ ಪವಾರ್ ಅವರ ಒಪ್ಪಂದ ರೂಪಿಸಲು ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಯಾವ ಅವಸರವೂ ಇಲ್ಲ ಎಂಬುದಾಗಿ ಹೇಳಿದ್ದು ಎಲ್ಲರ ಹುಬ್ಬೇರಿಸಿದೆ.

ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಶರದ್ ಪವಾರ್ ಅವರ ಎನ್ಸಿಪಿಯನ್ನು ಸಂಸತ್ತಿನ ಘನತೆ ಕಾಪಾಡುತ್ತಿರುವುದಕ್ಕಾಗಿ ಮತ್ತು ಸದನದಲ್ಲಿ ಸಭಾಧ್ಯಕ್ಷರ ಪೀಠದತ್ತ ಧಾವಿಸಿ ಧರಣಿಯಂತಹ ಪ್ರತಿಭಟನೆ ನಡೆಸದೇ ಇರುವುದಕ್ಕಾಗಿ ಶ್ಲಾಘಿಸಿದರು. ಪ್ರಧಾನಿಯವರು ಪವಾರ್ ಅವರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಲಿಲ್ಲ, ಇದೇ ಅಂಶಕ್ಕಾಗಿ ಎನ್ಸಿಪಿಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ ಅದಕ್ಕೆ ಶರದ್ ಪವಾರ್ ಅವರ ಹೆಸರನ್ನು ಜೋಡಿಸಿದ್ದರು.

ಇದೇ ವೇಳೆಗೆ ಮಾಧ್ಯಮದ ಕೆಲವು ಮಾಧ್ಯಮಗಳು ಶರದ್ ಪವಾರ್ ಅವರಿಗೆ ರಾಜ್ಯಪಾಲ ಹುದ್ದೆ ನೀಡುವ ಸಾಧ್ಯತೆಗಳ ಬಗೆಗೂ ವರದಿ ಮಾಡಿವೆ.

ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಅವರು ಬುಧವಾರ ಮುಂದಿನ ವರ್ಷ ನಡೆಯಲಿರುವ ಸಮ್ಮೇಳದಲ್ಲಿ ಪಾಲ್ಗೊಳ್ಳುವಂತೆ ನೀಡಿದ ಆಹ್ವಾನವನ್ನು ಪ್ರದಾನಿ ಮೋದಿ ಅವರು ಅಂಗೀಕರಿಸಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸುಳಿವನ್ನೂ ನೀಡಲಿಲ್ಲ.

ಪವಾರ್ ಅವರ ಆಹ್ವಾನ ಪತ್ರವು ಪ್ರಧಾನಿ ಮೋದಿ ಅವರಿಗೆ ತಮ್ಮ ವಸಂತದಾದಾ ಸಕ್ಕರೆ ಸಂಸ್ಥೆಯು ಹಿಂದೆ ೨೦೧೬ರಲ್ಲಿ ನಡೆಸಿದ್ದ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದುದನ್ನು ನೆನಪಿಸಿದೆ.  ಸಮ್ಮೇಳನದಲ್ಲಿ ಗುಜರಾತಿನ ಮುಖ್ಯಮಂತ್ರಿಯಾದ ಮೊದಲ ವರ್ಷಗಳಲ್ಲಿ ಪವಾರ್ ಅವರು ತಮಗೆ ನೀಡಿದ್ದ ನೆರವನ್ನು ಮೋದಿ ಸ್ಮರಿಸಿಕೊಂಡಿದ್ದರು.

ಮೋದಿಯವರು ಆಗ ಶಾಸನಕರ್ತರಾಗಿ ೫೦ವರ್ಷ ಪೂರ್ಣಗೊಳಿಸಿದ್ದ ಶರದ್ ಪವಾರ್ ಅವರನ್ನುಭಾರತೀಯ ರಾಜಕೀಯದ ಆಸ್ತಿಎಂಬುದಾಗಿ ಬಣ್ಣಿಸಿದ್ದರು.

ಗುಜರಾತಿನಲ್ಲಿ ನನ್ನ ಮೊದಲ ದಿನಗಳಲ್ಲಿ ಪವಾರ್ ಅವರು ನನ್ನ ಕೈಹಿಡಿದು ನಡೆಯಲು ಕಲಿಸಿಕೊಟ್ಟಿದ್ದರೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯೂ ಇಲ್ಲಎಂದು ಪ್ರಧಾನಿ ಮೋದಿ ಆಗ ಹೇಳಿದ್ದರು.

ಸಮ್ಮೇಳನದ ಪ್ರತಿನಿಧಿಗಳು ಮತ್ತು ಟೆಲಿವಿಷನ್ ಕ್ಯಾಮರಾಗಳ ಮುಂದೆ ಇದಕ್ಕೆ ಉತ್ತರಿಸಿದ್ದ ಪವಾರ್ ಅವರು ಪ್ರಧಾನಿ ಮೋದಿಯವರು ಯಾವಾಗಲೂ ಹೇಗೆ ಕೆಲಸ ಮಾಡುತ್ತಾರೆ ಎಂದು ವಿವರಿಸಿದ್ದರು.
 ರಾಷ್ಟ್ರದ ಹಿತಕ್ಕಾಗಿ ಅವರಿಗೆ (ಪ್ರಧಾನಿ ಮೋದಿ) ಇರುವ ಸಂಪೂರ್ಣ ಬದ್ಧತೆಯನ್ನು ಇದು ತೋರಿಸುತ್ತದೆಎಂದು ಪವಾರ್ ಹೇಳಿದ್ದರು.

No comments:

Advertisement