Saturday, November 9, 2019

ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ: ಐತಿಹಾಸಿಕ ತೀರ್ಪು ಇಂದು

ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ: ಐತಿಹಾಸಿಕ ತೀರ್ಪು ಇಂದು
ನವದೆಹಲಿ: ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದದ ಮೇಲಿನ ತನ್ನ ಚಾರಿತ್ರಿಕ ತೀರ್ಪನ್ನು ಸುಪ್ರೀಂಕೋರ್ಟ್ 2019 ನವೆಂಬರ್ 09 ಶನಿವಾರ ಪ್ರಕಟಿಸಲು ದಿನ ನಿಗದಿ ಪಡಿಸಿತು.
ನ್ಯಾಯಾಲಯವು ಬೆಳಗ್ಗೆ 10.30ಕ್ಕೆ ತನ್ನ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಎಸ್. ಎ. ಬೋಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್.ಎ. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪಂಚ ಸದಸ್ಯ ಸಂವಿಧಾನ ಪೀಠವು  ತೀರ್ಪು ಪ್ರಕಟಿಸುವ ಬಗ್ಗೆ ಪ್ರಕಟಣೆಯನ್ನು ಸುಪ್ರೀಂಕೋರ್ಟ್ ವೆಬ್ ಸೈಟ್ ಶುಕ್ರವಾರ ತಡರಾತ್ರಿಯಲ್ಲಿ ಪ್ರಕಟಿಸಿತು.

ಪ್ರಕಟಣೆಗೆ ಕೆಲವು ಗಂಟೆಗಳ ಮುನ್ನ ಸಿಜೆಐ ಅವರು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್ ಸಿಂಗ್ ಅವರ ಜೊತೆಗೆ  ಮಾತುಕತೆ ನಡೆಸಿದರು.  ಇಬ್ಬರು ಅಧಿಕಾರಿಗಳೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಸಲುವಾಗಿ ಕೈಗೊಳ್ಳಲಾದ ಕ್ರಮಗಳ ವಿವರ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2019 ನವೆಂಬರ್ 08ರ ಶುಕ್ರವಾರತೀರ್ಪು ಯಾರಿಗೂ ವಿಜಯ ಅಥವಾ ಸೋಲು ಅಲ್ಲಎಂದು ಹೇಳಿದರು. ಸರಣಿ ಟ್ವೀಟ್ ಗಳನ್ನು ಮಾಡಿದ ಪ್ರಧಾನಿ ತೀರ್ಪ ಪ್ರಕಟಿಸಿದ ಬಳಿಕ ಶಾಂತಿ ಮತ್ತು ಸೌಹಾರ್ದ ಪಾಲನೆಯ ಭಾರತೀಯ ಪರಂಪರೆಯ ಬಲ ಪಡಿಸಲು ಅಗ್ರ ಪ್ರಾಶಸ್ತ್ಯ ನೀಡಬೇಕು ಎಂದು ಜನತೆಗೆ ಮನವಿ ಮಾಡಿದರು.

ಸಂವಿಧಾನ ಪೀಠವು ದಶಕಗಳಷ್ಟು ಹಳೆಯದಾದ ವಿವಾದದ ಮೇಲಿನ ಕೊನೆಯ 40 ದಿನಗಳ ದೈನಂದಿನ ವಿಚಾರಣೆಗಳನ್ನು ಮುಕ್ತಾಯಗೊಳಿಸಿದ ಬಳಿಕ ಅಕ್ಟೋಬರ್ 16ರಂದು ತನ್ನ ತೀರ್ಪನ್ನು ಕಾಯ್ದರಿಸಿತ್ತು. ದಶಕಗಳ ಕಾಲದ ಈ ದೇಗುಲ-ಮಸೀದಿ ವ್ಯಾಜ್ಯವು ತನ್ನ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ನ್ಯಾಯಾಂಗ ಕಲಾಪಗಳನ್ನು ಕಂಡಿತ್ತು.

No comments:

Advertisement