Tuesday, January 14, 2020

ಕಾಂಗ್ರೆಸ್ ರಾಜ್ಯಗಳಲ್ಲಿ ಎನ್ ಪಿಆರ್ ಸ್ಥಗಿತ: ವಿಪಕ್ಷ ಸಭೆಯ ನಿರ್ಧಾರ

ಕಾಂಗ್ರೆಸ್ ರಾಜ್ಯಗಳಲ್ಲಿ ಎನ್ ಪಿಆರ್ ಸ್ಥಗಿತ: ವಿಪಕ್ಷ ಸಭೆಯ ನಿರ್ಧಾರ
ನವದೆಹಲಿ: ಕಾಂಗ್ರೆಸ್ ನೇತೃತ್ವದಲ್ಲಿ 2020 ಜನವರಿ 13ರ  ಸೋಮವಾರ  ದೆಹಲಿಯಲ್ಲಿ ಸಭೆ ಸೇರಿದ ೨೦ ವಿರೋಧ ಪಕ್ಷಗಳು ರಾಷ್ಟ್ರೀಯ ಪೌರ ನೋಂದಣಿಯನ್ನು  (ಎನ್ಆರ್ಸಿ) ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ನಿರಾಕರಿಸಿದ ಎಲ್ಲ ಮುಖ್ಯಮಂತ್ರಿಗಳು ಪೌರರ ಪಟ್ಟಿಗೆ ಅಡಿಪಾಯವಾದ  ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆಯನ್ನು ಕೂಡಾ ಸ್ಥಗಿತಗೊಳಿಸಬೇಕು ಎಂದು ನಿರ್ಧರಿಸಿದವು.

ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಈಗಾಗಲೇ ಎನ್ಪಿಆರ್ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಕಾಂಗ್ರೆಸ್ ಆಳ್ವಿಕೆ ಇರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಕೂಡಾ ತಾವೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸೋಮವಾರ ಘೋಷಿಸಿದರು.

ವಿರೋಧ ಪಕ್ಷಗಳು ಸಹಿ ಹಾಕಿರುವ ನಿರ್ಣಯವು ಬಿಜೆಪಿ ಮಿತ್ರ ಪಕ್ಷಗಳಾದ ನಿತೀಶ್ ಕುಮಾರ್ ಮತ್ತು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾನ ಅಂತರ ಕಾಯ್ದುಕೊಂಡಿರುವ  ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯಂತಹವರಿಗೆ ಹಾಕಿರುವ ಸವಾಲು ಎಂಬುದಾಗಿ ಭಾವಿಸಲಾಗಿದೆ.

ಭವಿಷ್ಯದಲ್ಲಿ ರಾಷ್ಟ್ರೀಯ ಪೌರ ನೋಂದಣಿಗೆ ಅಡಿಪಾಯವಾಗಲಿದೆ ಎಂಬುದಾಗಿ ಭಾವಿಸಲಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ.

ಪೌರತ್ವ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎಲ್ಲವೂ ಒಂದಕ್ಕೊಂದು ಪೂರಕ ಎಂಬುದಾಗಿ ಬಣ್ಣಿಸಿ ಅವುಗಳನ್ನು ವಿರೋಧಿಸುವ ನಿರ್ಣಯವನ್ನು ಸಭೆಯ ಸಮಾವೇಶದ ಕೊನೆಗೆ ಅಂಗೀಕರಿಸಿತು.

No comments:

Advertisement