My Blog List

Wednesday, January 29, 2020

ಮದುವೆ ಮಂಟಪದಿಂದ ಹಿಂದೂ ವಧು ಅಪಹರಣ: ಭಾರತದ ಉಗ್ರ ಪ್ರತಿಭಟನೆ

ಮದುವೆ ಮಂಟಪದಿಂದ ಹಿಂದೂ ವಧು ಅಪಹರಣ:
ಭಾರತದ ಉಗ್ರ ಪ್ರತಿಭಟನೆ
 ಅಪಹರಣಕ್ಕೆ ಪೊಲೀಸರ ಕುಮ್ಮಕ್ಕು: ಕುಟುಂಬದ ಆರೋಪ
ನವದೆಹಲಿ: ಸಿಂಧ್ ಪ್ರಾಂತ್ಯದಲ್ಲಿ ಮದುವೆ ಮಂಟಪದಿಂದ ಹಿಂದೂ ವಧುವನ್ನು ಅಪಹರಿಸಿ, ಮತಾಂತರ ಮಾಡಿ ಮುಸ್ಲಿಮ್ ಪುರುಷನ ಜೊತೆಗೆ ಬಲಾತ್ಕಾರದ ಮದುವೆ ಮಾಡಿಸಿದ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಹೈಕಮೀಷನ್ ಅಧಿಕಾರಿಯನ್ನು  2020 ಜನವರಿ 28ರ ಮಂಗಳವಾರ  ಬುಲಾವ್ ನೀಡಿ ಕರೆಸಿಕೊಂಡ ಭಾರತ ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತು.

೨೪ರ ಹರೆಯದ ಹಿಂದೂ ಯುವತಿ ಭಾರತಿ ಬಾಯಿಯ ಕುಟುಂಬವು ಭಾರತಿ ಬಾಯಿಯನ್ನು ಅಪರಿಚಿತ ವ್ಯಕ್ತಿಗಳು ಮದುವೆ ಮಂಟಪದಿಂದ ಅಪಹರಿಸಿರುವುದಾಗಿಯೂ, ಕೃತ್ಯಕ್ಕೆ ಪೊಲೀಸರೇ ನೆರವಾದರು ಎಂದು ಆಪಾದಿಸಿತ್ತು. ಆಕೆಯನ್ನು ಕಳೆದ ಡಿಸೆಂಬರಿನಲ್ಲಿ ಇಸ್ಲಾಮಿಗೆ ಮತಾಂತರಿಸಲಾಗಿದ್ದು ತಾನು ಮದುವೆಯಾಗಿರುವುದಾಗಿ ಮುಸ್ಲಿಮ್ ಪುರುಷನೊಬ್ಬ ಪ್ರತಿಪಾದಿಸಿದ್ದ.
ಅಲ್ಪಸಂಖ್ಯಾತ ಹಿಂದೂ ಸಮುದಾಯ ಸೇರಿದಂತೆ ತನ್ನ ನಾಗರಿಕರ ಭದ್ರತೆ, ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಹಿಂದೂ ವಧು ಅಪಹರಣದ ಘಟನೆಯಂತಹ ಹೀನ ಕೃತ್ಯದ ಬಗ್ಗೆ ತನಿಖೆ ನಡೆಸುವಂತೆ ಭಾರತವು  ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿತು.

ಇಂತಹ ಖಂಡನಾರ್ಹ ಘೋರ ಕೃತ್ಯಗಳಲ್ಲಿ ಶಾಮೀಲಾದ ದುಷ್ಕರ್ಮಿಗಳನ್ನು ತ್ವರಿತವಾಗಿ ನ್ಯಾಯದ ಕಟಕಟೆಗೆ  ತರಲು ತತ್ ಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಪಾಕಿಸ್ತಾನವನ್ನು ಒತ್ತಾಯಿಸಿತು.

"ಭಾರತವು ಪಾಕಿಸ್ತಾನ ಹೈಕಮಿಷನ್ ಹಿರಿಯ ಅಧಿಕಾರಿಯನ್ನು ಕರೆದು ಜನವರಿ ೨೫ ರಂದು ಸಿಂಧ್ ಪ್ರಾಂತ್ಯದ ಹಲಾ ನಗರದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಹಿಂದೂ ಅಲ್ಪಸಂಖ್ಯಾತ ಬಾಲಕಿಯನ್ನು ಮದುವೆ ಮಂಟಪದಿಂದ ಅಪಹರಿಸಿದ ಪ್ರಕರಣ ವಿರುದ್ಧ ಪ್ರಬಲ ಪ್ರತಿಭಟನೆ ವ್ಯಕ್ತ ಪಡಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿದವು.

ಜನವರಿ ೨೬ ರಂದು ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ನಲ್ಲಿರುವ ಮಾತಾ ರಾಣಿ ಭಾಟಿಯಾನಿ ದೇವಾಲಯವನ್ನು ಅಪವಿತ್ರಗೊಳಿಸಿದ ಪ್ರಕರಣದ ಬಗೆಗೂ ಭಾರತವು ತೀವ್ರ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತು.

ಅಪಹರಣಕಾರ, ಶಾರುಖ್ ಗುಲ್, ಹಲವಾರು ವ್ಯಕ್ತಿಗಳು ಮತ್ತು ಪೊಲೀಸರೊಂದಿಗೆ ಬಂದು ಮದುವೆ ಸಮಾರಂಭದಲ್ಲಿದ್ದ  ತನ್ನ ಪುತ್ರಿ ಭಾರತಿ ಬಾಯಿಯನ್ನು ಅಪಹರಿಸಿದರು ಎಂದು ಭಾರತಿ ಬಾಯಿಯ ತಂದೆ ಕಿಶೋರ್ ದಾಸ್ ಹೇಳಿದ್ದರು. ಬಳಿಕ ಭಾರತಿ ಬಾಯಿ ಅವರು ಇಸ್ಲಾಂಗೆ ಮತಾಂತರಗೊಂಡ ಬಗ್ಗೆ ಮತ್ತು ಶಾರುಖ್ ಜೊತೆಗಿನ ವಿವಾಹದ ಬಗ್ಗೆ ದಾಖಲೆಗಳೊಂದಿಗೆ ತೋರಿಸಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಆದರೆ ಸೃಷ್ಟಿತ ದಾಖಲೆಗಳು ಕಳೆದ ವರ್ಷ ಡಿಸೆಂಬರ್ ರಂದು ಭಾರತಿ ಬಾಯಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ತೋರಿಸುತ್ತಿದ್ದು, ಕರಾಚಿಯ ಬನುರಿ ಪಟ್ಟಣದಲ್ಲಿರುವ ಜಮಿಯತ್-ಉಲ್-ಉಲೂಮ್ ಇಸ್ಲಾಮಿಯಾ ಮತಾಂತರ ಪ್ರಮಾಣಪತ್ರವನ್ನು ನೀಡಿದೆ.

ಛಚ್ರೊ ಪಟ್ಟಣ ಸಮೀಪದ ಹಳ್ಳಿಯೊಂದರ ಮಾತಾ ರಾಣಿ ಭಾಟಿಯಾನಿ ದೇವಸ್ಥಾನವನ್ನು ಅಪವಿತ್ರಗೊಳಿಸಿ ಧ್ವಂಸ ಮಾಡಿದ್ದಕ್ಕಾಗಿ ನಾಲ್ಕು ಜನರ ವಿರುದ್ಧ ಸೋಮವಾರ ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ. ಮೊದಲ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಭಾನುವಾರ ರಾತ್ರಿ ಅಪರಿಚಿತ ನಾಲ್ವರು ದೇವಾಲಯವನ್ನು ಅಪವಿತ್ರಗೊಳಿಸಿದರು ಎಂದು ಹೇಳಲಾಗಿತ್ತು.

ಹಲವಾರು ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಉಲ್ಬಣಗೊಂಡ ಉದ್ವಿಗ್ನ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುತ್ತಿರುವ ರೀತಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ಇತ್ತೀಚಿನ ವಾರಗಳಲ್ಲಿ ಕೋಪೋದ್ರಿಕ್ತ ಆರೋಪ- ಪ್ರತ್ಯಾರೋಪಗಳನ್ನು ವಿನಿಮಯ ಮಾಡಿಕೊಂಡಿವೆ.

ಪ್ರತಿ ವರ್ಷ, ೧೨ ರಿಂದ ೨೮ ವರ್ಷದೊಳಗಿನ ಸುಮಾರು ,೦೦೦ ಯುವ ಸಿಂಧಿ ಹಿಂದೂ ಬಾಲಕಿಯರನ್ನು ಅಪಹರಿಸಿ, ಬಲವಂತವಾಗಿ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ ಎಂದು ಅಮೆರಿಕ ಮೂಲದ ಸಿಂಧಿ ಫೌಂಡೇಶನ್ ಆಪಾದಿಸಿದೆ.

ಪಾಕಿಸ್ತಾನದಲ್ಲಿ, ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹುಡುಗಿಯರನ್ನು, ಮುಖ್ಯವಾಗಿ ಹಿಂದೂ, ಸಿಖ್ ಮತ್ತು ಕ್ರೈಸ್ತರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸ್ಲಿಂ ಪುರುಷರೊಂದಿಗೆ ವಿವಾಹ ಮಾಡುವ ಇಂತಹ ಅನೇಕ ಘಟನೆಗಳು ಆಗಾಗ ವರದಿಯಾಗುತ್ತವೆ.
ಕಳೆದ ಕೆಲವು ತಿಂಗಳುಗಳಲ್ಲಿ, ದೇಶದ ಅಲ್ಪಸಂಖ್ಯಾತರ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ ಎಂದು ಫೌಂಡೇಶನ್ ಹೇಳಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ೧೯ ವರ್ಷದ ಜಗ್ಜಿತ್ ಕೌರ್ ಹಲವಾರು ದಿನಗಳವರೆಗೆ ಕಾಣೆಯಾಗಿದ್ದರು. ನಂತರ, ಆಕೆ ಅಪಹರಣಕಾರರ ಬಲವಂತಕ್ಕೆ ಒಳಗಾಗಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದುದು ಬೆಳಕಿಗೆ ಬಂದಿತ್ತು.

ಗುರುದ್ವಾರ ತಂಬು ಸಾಹಿಬ್ಗ್ರಂಥಿ (ಅರ್ಚಕ್ರ) ಭಗವಾನ್ ಸಿಂಗ್ ಅವರ ಪುತ್ರಿಯನ್ನು ಬಂದೂಕು ತೋರಿಸಿ ಇಸ್ಲಾಂಗೆ ಮತಾಂತರ ಮಾಡಲಾಗಿತ್ತು.

ಘಟನೆಯು ಭಾರತದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ದೇಶಾದ್ಯಂತ ಹಲವಾರು ರಾಜಕೀಯ ಮುಖಂಡರು ಪಕ್ಷಾತೀತರಾಗಿ ಇಂತಹ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಪಾಕಿಸ್ತಾನದಲ್ಲಿ ನಡೆದಿರುವ ಅಲ್ಲಿನ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳ ಹಿನ್ನೆಲೆಯಲ್ಲಿ, ಭಾರತವು ಇತ್ತೀಚೆಗೆ ಮುಸ್ಲಿಮ್ ಬಾಹುಳ್ಯದ ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ನೆಲೆಯಲ್ಲಿ ಕಿರುಕುಳಕ್ಕೆ ಒಳಗಾಗಿ ೨೦೧೫ಕ್ಕೆ ಮುನ್ನ ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವ ಹಿಂದು, ಕ್ರೈಸ್ತ, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಗಳ ಸದಸ್ಯರಿಗೆ ಭಾರತೀಯ ಪೌರತ್ವ ನೀಡುವ ಲುವಾಗಿಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಸಮ್ಮತಿಯೊಂದಿಗೆ ಅದು ಕಾನೂನು ಆಗಿ ದೇಶದಲ್ಲಿ ಜಾರಿಗೆ ಬಂದಿದೆ. ದೇಶದ ವಿವಿಧ ಭಾಗಗಳಲ್ಲಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ.

No comments:

Advertisement