My Blog List

Friday, March 13, 2020

ಸಿಂಧಿಯಾ: ಹಳೆಯ ದಾಖಲೆ ತಿರುಚಿದ ಆರೋಪ ಪ್ರಕರಣಕ್ಕೆ ಮರುಜೀವ

ಸಿಂಧಿಯಾ:  ಹಳೆಯ ಪ್ರಕರಣಕ್ಕೆ ಮರುಜೀವ
ಬೆಂಗಳೂರಲ್ಲೇ ಠಿಕಾಣಿ: ಬಂಡಾಯ ಶಾಸಕರ ನಿರ್ಧಾರ
ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮರುದಿನವೇ  2020 ಮಾರ್ಚ್  13ರ ಶುಕ್ರವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿರುದ್ಧದ ಹಳೆಯ ಪ್ರಕರಣವೊಂದಕ್ಕೆ ಮಧ್ಯಪ್ರದೇಶದ ಕಮಲನಾಥ್ ಸರ್ಕಾರ ಮರುಜೀವ ನೀಡಿದೆ. ಇದೇ ವೇಳೆಗೆ ಸಿಂಧಿಯಾ ಬೆಂಬಲಿಗ ಬಂಡಾಯ ಶಾಸಕರು ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗಲು ಬೆಂಗಳೂರಿನಿಂದ ಭೋಪಾಲ್‌ಗೆ ಹೊರಡುವ ವಿಚಾರದಲ್ಲಿ ಮರುಚಿಂತನೆ ನಡೆಸಿದ್ದು, ತಮಗೆ ವಿಶೇಷ ಭದ್ರತೆ ಒದಗಿಸಬೇಕು ಎಂದು ಬೇಡಿಕೆ  ಇಟ್ಟರು.
ಭೂ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದಾಖಲೆಗಳನ್ನು ತಿರುಚಿದ ಆರೋಪವನ್ನು ಸಿಂಧಿಯಾ ಮತ್ತು ಅವರ ಕುಟುಂಬದ ವಿರುದ್ಧ ಹೊರಿಸಲಾಗಿದೆ. ರಾಜ್ಯದ ಆರ್ಥಿಕ ಅಪರಾಧಗಳ ವಿಭಾಗವು ಈ ಕುರಿತು ತನಿಖೆ ನಡೆಸಲಿದೆ ಎಂದು ಸುದ್ದಿ ಮೂಲಗಳೂ ತಿಳಿಸಿದವು.
‘ಸಿಂಧಿಯಾ ವಿರುದ್ಧ ಸುರೇಂದ್ರನಾಥ್ ಶ್ರೀವಾತ್ಸವ ಅವರು ದಾಖಲೆಗಳನ್ನು ತಿರುಚಿ ವಂಚನೆ ಎಸಗಿದ ಬಗ್ಗೆ ಗುರುವಾರ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಆರ್ಥಿಕ ಅಪರಾಧಗಳ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದರು.
ಸಿಂಧಿಯಾ ಮತ್ತು ಅವರ ಕುಟುಂಬ ೨೦೦೯ರಲ್ಲಿ ಮಾರಾಟ ಮಾಡಿದ ಆಸ್ತಿಯಲ್ಲಿ ೬,೦೦೦ ಚದರ ಅಡಿ ಕಡಿಮೆ ಇದೆ. ನಂತರ ಈ ಸಂಬಂಧ ದಾಖಲೆಗಳನ್ನು ತಿರುಚಲಾಗಿದೆ ಎಂಬುದಾಗಿ ಸುರೇಂದ್ರನಾಥ್ ಆಪಾದಿಸಿದ್ದಾರೆ. ಈ ಸಂಬಂಧ ಅವರು ೨೦೧೪ರ ಮಾರ್ಚ್ ೨೬ರಂದು ದೂರು ನೀಡಿದ್ದರು. ಆ ಬಗ್ಗೆ ತನಿಖೆ ನಡೆಸಿದಾಗ ಸಿಂಧಿಯಾ ಅವರಿಂದ ಯಾವುದೇ ತಪ್ಪು ನಡೆದಿಲ್ಲ ಎನ್ನುವುದು ದೃಢಪಟ್ಟಿತ್ತು. ಪ್ರಕರಣವನ್ನು ೨೦೧೮ರಲ್ಲಿ ಸಮಾಪನಗೊಳಿಸಲಾಗಿತ್ತು.
ಸಿಂಧಿಯಾ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಬಂಡೆದ್ದು ಮಂಗಳವಾರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ, ಬುಧವಾರ ಬಿಜೆಪಿ ಸೇರ್ಪಡೆಯಾದರು. ಅದರ ಬೆನ್ನಲ್ಲಿಯೇ ಸುರೇಂದ್ರನಾಥ್ ಮತ್ತೆ ದೂರು ನೀಡಿದ್ದು, ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ತಕ್ಷಣ ಆದೇಶಿಸಿದೆ.
‘ರಾಜಕೀಯ ದ್ವೇಷದಿಂದ ಕಮಲನಾಥ್ ಸರ್ಕಾರ ಹಳೆ ಪ್ರಕರಣವನ್ನು ಮತ್ತೆ ಕೆದಕುತ್ತಿದೆ. ಸಂವಿಧಾನ ಮತ್ತು ಕಾನೂನಿನಲ್ಲಿ ನಮಗೆ ನಂಬಿಕೆ ಇದೆ. ಕಮಲ್‌ನಾಥ್ ಸರ್ಕಾರದ ದ್ವೇಷದ ಕ್ರಮಕ್ಕೆ ಉತ್ತರ ಸಿಗಲಿದೆ ಎಂದು ಸಿಂಧಿಯಾ ಆಪ್ತ ಪಂಕಜ್ ಚತುರ್ವೇದಿ ತಿಳಿಸಿದರು.
ಬಂಡಾಯ ಶಾಸಕರ ನಿರ್ಧಾರ ಬದಲು:  ಈ ಮಧ್ಯೆ, ಬೆಂಗಳೂರು ಹೊರವಲಯದ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದ ಮಧ್ಯಪ್ರದೇಶದ ೧೯ ಶಾಸಕರು, ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವ ಸಲುವಾಗಿ ಶುಕ್ರವಾರ ಸಂಜೆ ವಿಶೇಷ ವಿಮಾನದಲ್ಲಿ ಭೋಪಾಲ್‌ಗೆ ತೆರಳಲು ನಿರ್ಧರಿಸಿದ್ದರು. ಆದರೆ, ಭೋಪಾಲ್‌ನಲ್ಲಿ ಕಾಂಗ್ರೆಸ್ ಪಕ್ಷವು ಅಪಹರಿಸುವ ಭೀತಿಯ ಹಿನ್ನೆಲೆಯಲ್ಲಿ  ಬೆಂಗಳೂರಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಸಚಿವರಾದ ಮಹೇಂದ್ರ ಸಿಂಗ್ ಸಿಸೋಡಿಯಾ, ತುಳಸಿ ಸಿಲಾವತ್, ಗೋವಿಂದ ಸಿಂಗ್ ರಜಪೂತ್, ಪ್ರದ್ಯುಮ್ನ ಸಿಂಗ್ ತೋಮರ್, ಪ್ರಭುರಾಮ್ ಚೌಧರಿ ಮತ್ತು ಇಮಾರ್ತಿ ದೇವಿ ಅವರು ಶುಕ್ರವಾರ ವಿಧಾನಸಭಾಧ್ಯಕ್ಷ ಪಿ.ಎನ್.ಪ್ರಜಾಪತಿ ಅವರನ್ನು ಭೇಟಿ ಮಾಡಬೇಕಿತ್ತು. ಆರು ಸಚಿವರೂ ಸೇರಿದಂತೆ ರಾಜೀನಾಮೆ ನೀಡಿರುವ ಎಲ್ಲ ೨೨ ಶಾಸಕರು ಖುದ್ದಾಗಿ ತಮ್ಮ ಎದುರು ಹಾಜರಾಗಿ ವಿವರಣೆ ನೀಡಬೇಕೆಂದು ವಿಧಾನಸಭಾಧ್ಯಕ್ಷರು ಸೂಚಿಸಿದ್ದರು. ಶುಕ್ರವಾರ ಆರು ಸಚಿವರು, ಶನಿವಾರ ೭ ಶಾಸಕರು ಹಾಗೂ ಭಾನುವಾರ ೯ ಶಾಸಕರು ಹಾಜರಾಗುವಂತೆ ಸೂಚಿಸಲಾಗಿತ್ತು.
ವಿಶ್ವಾಸಮತ ಕೋರಲು ಕಮಲನಾಥ್ ಸಿದ್ಧ: ರಾಜಕೀಯ ಅನಿಶ್ಚಿತತೆ ನಡುವೆಯೇ ಶುಕ್ರವಾರ ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ಬಜೆಟ್ ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ತಾವು ಸಿದ್ಧ ಎಂದು ತಿಳಿಸಿದರು.
ಹೋಳಿ ರಜೆ ಸಲುವಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದ ರಾಜ್ಯಪಾಲರು ಗುರುವಾರ ರಾತ್ರಿ ಭೋಪಾಲ್‌ಗೆ ಮರಳಿದ್ದಾರೆ. ಶುಕ್ರವಾರ ಬೆಳಗ್ಗೆಯೇ ಅವರನ್ನು ಭೇಟಿ ಮಾಡಿದ ಕಮಲನಾಥ್, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು. ನಾಟಕೀಯ ಬೆಳವಣಿಗೆಗಳು ಆರಂಭವಾದ ಮಾರ್ಚ್ ೩ರ ರಾತ್ರಿಯಿಂದ ಮಾರ್ಚ್ ೧೦ರವರೆಗೂ ಏನೇನು ನಡೆಯಿತು ಎಂಬುದನ್ನು ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಮುಖ್ಯಮಂತ್ರಿ ವಿವರಿಸಿದರು. ಒಂದು ವಾರದಲ್ಲಿ ನಡೆದ ಘಟನಾವಳಿಗಳನ್ನು ಅವಲೋಕಿಸಿದರೆ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿರುವುದು ಸ್ಪಷ್ಟವಾಗುತ್ತದೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಆರೋಪಿಸಿದರು.
‘ಬಜೆಟ್ ಅಧಿವೇಶನ ಆರಂಭವಾಗುವ ಮಾರ್ಚ್ ೧೬ರಂದೇ ವಿಶ್ವಾಸಮತ ಯಾಚಿಸಲು ಸಿದ್ಧ. ಆದರೆ ಆರು ಮಂದಿ ಸಚಿವರು ಸೇರಿದಂತೆ ೧೯ ಶಾಸಕರನ್ನು ಬಿಜೆಪಿಯಾಗಿ ಬೆಂಗಳೂರಿನಲ್ಲಿ ಒತ್ತೆಯಾಳಾಗಿ ಇರಿಸಿದೆ. ಅವರ ಸುರಕ್ಷಿತ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ರಾಜ್ಯಪಾಲರನ್ನು ಕೋರಿದರು.

No comments:

Advertisement