Tuesday, March 3, 2020

ಕೊರೋನಾವೈರಸ್ ಗಾಬರಿ ಬೇಡ: ಪ್ರಧಾನಿ ಮೋದಿ ಟ್ವೀಟ್


ಕೊರೋನಾವೈರಸ್ ಗಾಬರಿ ಬೇಡ: ಪ್ರಧಾನಿ ಮೋದಿ ಟ್ವೀಟ್
ನವದೆಹಲಿ: ಕೊರೋನಾವೈರಸ್ ಬಗ್ಗೆ ಜನರು ಭಯಭೀತರಾಗಬೇಕಾದ ಅಥವಾ ಗಾಬರಿಯಾಗಬೇಕಾದ ಅಗತ್ಯವಿಲ್ಲ ಎಂದು 2020 ಮಾರ್ಚ್ 03ರ ಮಂಗಳವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು.

ರಾಷ್ಟ್ರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಖಚಿತಪಟ್ಟ ಒಂದು ದಿನದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ, ಪರಿಸ್ಥಿತಿಯ ಬಗ್ಗೆ ತಾವು ಹಲವಾರು ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಜೊತೆ ವಿಶೇಷ ಸಮಾಲೋಚನೆ ನಡೆಸಿದ್ದು, ಕೊರೋನಾವೈರಸ್ ನಿಭಾಯಿಸಲು ವಿವಿಧ ಹಂತಗಳ ಸಿದ್ಧತೆ ಬಗ್ಗೆ ಅವಲೋಕಿಸಿರುವುದಾಗಿ ತಿಳಿಸಿದರು.

ಭಯಭೀತರಾಗಬೇಕಾದ ಅಥವಾ ಗಾಬರಿಗೊಳ್ಳಬೇಕಾದ ಅಗತ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ. ಸ್ವಯಂ ರಕ್ಷಣೆಗಾಗಿ ಕೆಲವು ಸಣ್ಣ ಆದರೆ ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಟ್ವಿಟ್ಟರ್ ಸಂದೇಶದಲ್ಲಿ ಸಲಹೆ ಮಾಡಿದರು.

ಮೂಲಭೂತ ರಕ್ಷಣಾತ್ಮಕ ಕ್ರಮಗಳನ್ನು ವಿವರಿಸುವ ಸೂಚನೆಗಳ ಚಿತ್ರವನ್ನು ಕೂಡಾ ಪ್ರಧಾನಿ ಟ್ವೀಟ್ ಮಾಡಿzರು. ಸೋಂಕು ಹರಡದಂತೆ ತಡೆಯಲು- ಆಗಾಗ ಕೈ ತೊಳೆದುಕೊಳ್ಳಬೇಕು ಮತ್ತು ಶೀನು ಮತ್ತು ಕೆಮ್ಮು ಬಂದಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ ಪೇಪರಿನಿಂದ ಮುಚ್ಚಿಕೊಳ್ಳಬೇಕು ಎಂಬ ಸೂಚನೆಗಳು ಮೂಲಭೂತ ರಕ್ಷಣಾತ್ಮಕ ಸೂತ್ರಗಳಲ್ಲಿ ಸೇರಿವೆ.

ವೀಸಾ ಅಮಾನತು: ಮಧ್ಯೆ, ಇಟಲಿ, ಇರಾನ್, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳ ನಾಗರಿಕರಿಗೆ ಮಂಗಳವಾರ ಅಥವಾ ಅದಕ್ಕೆ ಮುನ್ನ ನೀಡಿದ ಎಲ್ಲ ನಿಯಮಿತ ವೀಸಾಗಳನ್ನು ಭಾರತ ಸರ್ಕಾರವು ಅಮಾನತುಗೊಳಿಸಿದೆ.

ಫೆಬ್ರುವರಿ ಅಥವಾ ಅದಕ್ಕೆ ಮುನ್ನ ಚೀನೀ ಪ್ರಜೆಗಳಿಗೆ ನೀಡಲಾಗಿದ್ದ ವೀಸಾ ಅಮಾನತು ಕ್ರಮ ಹಾಗೆಯೇ ಮುಂದುವರೆಯುತ್ತದೆ. ಫೆಬ್ರುವರಿ ೧ರ ಬಳಿಕ ಕೊರೋನಾವೈರಸ್ ಸೋಂಕು ಹರಡಿರುವ ದೇಶಗಳ ಇತರ ಎಲ್ಲ ವಿದೇಶೀಯರಿಗೆ ನೀಡಲಾದ ಎಲ್ಲ ವೀಸಾಗಳನ್ನೂ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ನೋಯ್ಡಾದ ಇನ್ನೊಂದು ಶಾಲೆಯೂ ಬಂದ್: ನೋಯ್ಡಾದ ಶ್ರೀರಾಮ ಮಿಲೆನಿಯಂ ಶಾಲೆಯ ಮಕ್ಕಳನ್ನು ಏಕಾಂಗಿ ವಾಸಕ್ಕೆ ಕಳುಹಿಸಿ, ಶಾಲೆಯನ್ನು ಎರಡು ದಿನಗಳ ಅವಧಿಗೆ ಮುಚ್ಚಿದ ಬೆನ್ನಲ್ಲೇ ಅಲ್ಲಿಗೆ ಸಮೀಪದ ನೋಯ್ಡಾದ ಶಿವ ನಾಡಾರ್ ಶಾಲೆಯನ್ನೂ ಮಾರ್ಚ್ ೯ರವರೆಗೆ ಮುಚ್ಚಿ ಶುಚೀಕರಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ವೈರಸ್
ಹರಡದಂತೆ ತಡೆಯಲು ಸರ್ವ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಶಿವ ನಾಡಾರ್ ಶಾಲೆಯ ಹೇಳಿಕೆ ತಿಳಿಸಿದೆ.

ಚೀನಾದಲ್ಲಿ ಆರಂಭವಾದ ಮಾರಕ ಕೊರೋನಾವೈರಸ್ ವಿಶ್ವಾದ್ಯಂತ ೬೪ ದೇಶಗಳಿಗೆ ವ್ಯಾಪಿಸಿದ್ದು, ೩೦೦೦ಕ್ಕೂ ಹೆಚ್ಚು ಜೀವಗಳನ್ನು ಈಗಾಗಲೇ ಬಲಿ ತೆಗೆದುಕೊಂಡಿದೆ. ಸೋಮವಾರ ದೆಹಲಿ ಮತ್ತು ತೆಲಂಗಾಣದ ಹೈದರಾಬಾದಿನಲ್ಲೂ ಒಂದೊಂದು ಕೊರೋನಾವೈರಸ್ ಸೋಂಕು ದೃಢ ಪಟ್ಟ ವರದಿಗಳು ಬಂದಿವೆ. ಇದರೊಂದಿಗೆ ದೇಶದಲ್ಲಿ ಬೆಳಕಿಗೆ ಬಂದ ಕೊರೋನಾವೈರಸ್ ಸೋಂಕು ತಗುಲಿದವರ ಸಂಖ್ಯೆ ೬ಕ್ಕೆ ಏರಿದೆ.

ವೈರಸ್ ಕೇಂದ್ರಬಿಂದುವಾದ ಚೀನಾದ ವುಹಾನ್ ನಗರದಿಂದ ವಾಪಸಾದ ಕೇರಳದ ಮೂವರು ವಿದ್ಯಾರ್ಥಿಗಳಿಗೆ ಮೊದಲಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ವರದಿಯಾಗಿತ್ತು. ಆದರೆ ಸೋಂಕು ಮುಕ್ತರಾಗಿ ಚೇತರಿಸಿಕೊಂಡ ಬಳಿಕ ಅವರನ್ನು ಅಸ್ಪತ್ರೆಯಿಂದ ಬಿಡುಗಡೆ ಮಾqಲಾಗಿತ್ತು.

No comments:

Advertisement