My Blog List

Friday, March 13, 2020

ರಾಜ್ಯಸಭಾ ಚುನಾವಣೆ: ಜ್ಯೋತಿರಾದಿತ್ಯ ಸಿಂಧಿಯಾ ನಾಮಪತ್ರ ಸಲ್ಲಿಕೆ

ರಾಜ್ಯಸಭಾ ಚುನಾವಣೆ: ಜ್ಯೋತಿರಾದಿತ್ಯ ಸಿಂಧಿಯಾ ನಾಮಪತ್ರ ಸಲ್ಲಿಕೆ
ಭೋಪಾಲ್: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾರ್ಚ್ ೨೬ರ ರಾಜ್ಯಸಭಾ ಚುನಾವಣೆಗಳಿಗಾಗಿ 2020 ಮಾರ್ಚ್  13ರ ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಮಧ್ಯಪ್ರದೇಶ ಬಿಜೆಪಿ ಕಚೇರಿಯಿಂದ ಹೊರಟ ಸಿಂಧಿಯಾ ಅವರು ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಜ್ಯ ವಿಧಾನಸಭಾ ಸಚಿವಾಲಯಕ್ಕೆ ಆಗಮಿಸಿ ಚುನಾವಣಾ ಅಧಿಕಾರಿಯಾದ ವಿಧಾನಸಭಾ ಮುಖ್ಯ ಕಾರ್‍ಯದರ್ಶಿ ಎಪಿ ಸಿಂಗ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮ, ಹೊರಹೋಗುತ್ತಿರುವ ರಾಜ್ಯಸಭಾ ಸದಸ್ಯ ಪ್ರಭಾತ್ ಝಾ ಮತ್ತು ಬಿಜೆಪಿಯ ಇತರ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಜೆಪಿ ಕಚೇರಿ ತಲುಪುವ ಮುನ್ನ ಸಿಂಧಿಯಾ ಅವರು ಮಾಜಿ ಸಚಿವ ನರೋತ್ತಮ ಮಿಶ್ರ ಅವರ ನಿವಾಸದಲ್ಲಿ ಪಕ್ಷದ ಇತರ ನಾಯಕರ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.
ಗುನಾ ಕ್ಷೇತ್ರದ ಮಾಜಿ ಲೋಕಸಭಾ ಸದಸ್ಯರಾದ ಸಿಂಧಿಯಾ ಅವರು ತಮ್ಮ ಅತ್ತೆ  (ತಂದೆಯ ಸಹೋದರಿ) ಬಿಜೆಪಿ ಶಾಸಕಿ ಯಶೋಧರಾ ರಾಜೆ ಸಿಂಧಿಯಾ ಅವರನ್ನೂ ಬೆಳಗ್ಗೆ ಭೇಟಿ ಮಾಡಿದ್ದರು.
ಗುರುವಾರ ರಾತ್ರಿ ಸಿಂಧಿಯಾ ಅವರು ಚೌಹಾಣ್ ಅವರು ಏರ್ಪಡಿಸಿದ್ದ ಭೋಜನಕೋಟದಲ್ಲಿ ಭಾಗವಹಿಸಿದ್ದರು.
ಬುಧವಾರ ಸಿಂಧಿಯಾ ಅವರು ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ಅವರನ್ನು ಮಧ್ಯಪ್ರದೇಶದಿಂದ ತನ್ನ ರಾಜ್ಯಸಭಾ ಅಭ್ಯರ್ಥಿಯಾಗಿ ಹೆಸರಿಸಿತ್ತು.
ಮಂಗಳವಾರ ಬೆಳಗ್ಗೆ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಸಿಂಧಿಯಾ ಬುದವಾರ ದೆಹಲಿಯಲ್ಲಿ ಪಕ್ಷಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳನ್ನು ಪ್ರಸ್ತುತ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಬಿಜೆಪಿಯ ಪ್ರಭಾತ್ ಝಾ ಹಾಗೂ ಸತ್ಯನಾರಾಯಣ ಜತಿಯಾ ಹೊಂದಿದ್ದಾರೆ. ಈ ಮೂವರ ಅವಧಿ ಮುಂದಿನ ತಿಂಗಳು ಮುಗಿಯಲಿದ್ದು, ಈ ಸ್ಥಾನಗಳು ಖಾಲಿಯಾಗಲಿವೆ. ಕಾಂಗ್ರೆಸ್ ಪಕ್ಷವು ದಿಗ್ವಿಜಯ್ ಸಿಂಗ್ ಅವರನ್ನೇ ರಾಜ್ಯಸಭಾ ಅಭ್ಯರ್ಥಿಯಾಗಿ ಮರುನಾಮಕರಣ ಮಾಡಿದೆ.

No comments:

Advertisement