Monday, April 27, 2020

ಲಾಕ್ ಡೌನ್ ನೆಪವೊಡ್ಡಿ ಪತ್ರಕರ್ತರಿಗೆ ಕೊಕ್: ಸುಪ್ರೀಂಕೋರ್ಟ್ ನೋಟಿಸ್

ಲಾಕ್ ಡೌನ್ ನೆಪವೊಡ್ಡಿ ಪತ್ರಕರ್ತರಿಗೆ ಕೊಕ್: ಸುಪ್ರೀಂಕೋರ್ಟ್ ನೋಟಿಸ್
ನವದೆಹಲಿ : ಕೋವಿಡ್ ವೈರಸ್ ಹಾವಳಿ ಹಿನ್ನೆಲೆಯಲ್ಲಿ ತೀವ್ರ ಮಟ್ಟದ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿ ಯಾವುದೇ ಮಾಧ್ಯಮ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಪತ್ರಕರ್ತರ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ,  ಇಂಡಿಯನ್ ನ್ಯೂಸ್ ಪೇಪರ್ಸ್ ಸೊಸೈಟಿ,  ಮತ್ತು ಸುದ್ದಿ ಪ್ರಸಾರಕರ ಸಂಘಕ್ಕೆ  ಸುಪ್ರೀಂಕೋರ್ಟ್ 2020 ಏಪ್ರಿಲ್ 27ರ ಸೋಮವಾರ ನೋಟಿಸ್ ಜಾರಿ ಮಾಡಿತು.

ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಷನ್ ಕೌಲ್ ಮತ್ತು ಬಿಆರ್. ಗವಾಯಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಪ್ರಕರಣವು ಹಲವಾರು ಗಂಭೀರ ವಿಷಯಗಳನ್ನು ಎತ್ತಿರುವುದರಿಂದ ಅದನ್ನು ಪರಿಗಣಿಸುವ  ಅಗತ್ಯವಿದೆ ಎಂದು ಹೇಳಿತು.

ಕೋವಿಡ್ ಕಾರಣ ನೀಡಿ ಕೆಲವು ಮಾಧ್ಯಮ ಸಂಸ್ಥೆಗಳು ಪತ್ರಕರ್ತರು,ಹಾಗೂ ಇತರೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ.ಅನೇಕರಿಗೆ ವೇತನ ಕಡಿತಗೊಳಿಸಲಾಗುತ್ತಿದೆ. ಇದರಿಂದ ಪತ್ರಕರ್ತರು ಹಾಗೂ ಅವರ ಕುಟುಂಬದವರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿ ಭಾರತೀಯ ಪತ್ರಕರ್ತರ ಸಂಘದ ಶೈಲೇಂದ್ರ ಕುಮಾರ್ ಪಾಂಡೆ, ದೆಹಲಿ ಕಾರ್ಯನಿರತ ಪತ್ರಕರ್ತರ ಸಂಘದ ಸುಜಾತ ಮಾಡೋಕ್,ಹಾಗೂ ಬೃಹನ್ ಮುಂಬೈ ಕಾರ್ಯ ನಿರತ ಪತ್ರಕರ್ತರ ಸಂಘದ ಇಂದ್ರಕುಮಾರ್ ಜೈನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಕೋವಿಡ್ ನೆಪ ಹೇಳಿ ಮುದ್ರಣ,ಇಲೆಕ್ಟ್ರಾನಿಕ್ ಸೇರಿದಂತೆ ಯಾವುದೇ ಮಾಧ್ಯಮ ಸಂಸ್ಥೆಗಳು ತಮ್ಮ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯದಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.

 
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಪ್ರಕರಣದಲ್ಲಿ ಪರಿಶೀಲಿಸಬೇಕಾದ ಮಹತ್ವದ ಅಂಶಗಳಿವೆ ಎಂದು ಹೇಳಿ ನೋಟಿಸ್ ಜಾರಿಗೊಳಿಸಿದ ಬಳಿಕ ವಿಚಾರಣೆಯನ್ನು ಎರಡು ವಾರಗಳ ಅವಧಿಗೆ ಮುಂದೂಡಿತು.

No comments:

Advertisement