Tuesday, May 5, 2020

ಮರಳಿ ತಾಯ್ನಾಡಿಗೆ ವಿಮಾನ ಪಯಣ ಉಚಿತವಲ್ಲ: ಕೇಂದ್ರ ಸ್ಪಷ್ಟನೆ

ಮರಳಿ ತಾಯ್ನಾಡಿಗೆ ವಿಮಾನ ಪಯಣ ಉಚಿತವಲ್ಲ:
  
ಕೇಂದ್ರ ಸ್ಪಷ್ಟನೆ
ನವದೆಹಲಿ: ಕೊರೋನಾವೈರಸ್ ಪರಿಣಾಮವಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರು ಮರಳಿ ತಾಯ್ನಾಡಿಗೆ ತಮ್ಮನ್ನು ಒಯ್ಯುವ ವಿಮಾನಗಳಿಗೆ ಪಯಣದ ವೆಚ್ಚ ಪಾವತಿ ಮಾಡಬೇಕಾಗುತ್ತದೆ ಎಂದು ವಿಮಾನಯಾನ ಸಚಿವ ಹರದೀಪ್ ಪುರಿ ಅವರು 2020 ಮೇ 05ರ ಮಂಗಳವಾರ ಇಲ್ಲಿ ಪ್ರಕಟಿಸಿದರು.

ರೋಗ ಲಕ್ಷಣ ರಹಿತರಾದ ಎಲ್ಲ ಭಾರತೀಯರಿಗೂ ತಾಯ್ನಾಡು ತಲುಪಿದ ಬಳಿಕ ೧೪ ದಿನಗಳ ಸ್ವಯಂ ಕ್ವಾರಂಟೈನ್  ಮಾಡಿಕೊಳ್ಳಲು ಸೂಚಿಸಲಾಗುವುದು, ಕ್ವಾರಂಟೈನ್ ವ್ಯವಸ್ಥೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದೆ ಎಂದು ಅವರು ನುಡಿದರು.

ಮೇ ೭ರಿಂದ ಎಲ್ಲ ವಿಮಾನಗಳ ಹಾರಾಟ ವ್ಯವಸ್ಥೆಯನ್ನೂ ಏರ್ ಇಂಡಿಯಾ ಮಾಡುವುದು. ಖಾಸಗಿ ವಿಮಾನಗಳ ಬಳಕೆ ಬಗೆಗೂ ಪರಿಶೀಲಿಸಲಾಗುವುದು ಎಂದು ಸಚಿವರು ನುಡಿದರು.

ಅಮೆರಿಕ ಮತ್ತು ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸಾಗುವ ವೆಚ್ಚ ವ್ಯಕ್ತಿಯೊಬ್ಬರಿಗೆ ಕ್ರಮವಾಗಿ ಲಕ್ಷ ರೂಪಾಯಿ ಮತ್ತು ೫೦,೦೦೦ ರೂಪಾಯಿ ಆಗುತ್ತದೆ ಎಂದು ಪುರಿ ಹೇಳಿದರು.

ಸಿಂಗಾಪುರ-ದೆಹಲಿ/ಮುಂಬೈ ಪಯಣದ ವೆಚ್ಚ ೨೦,೦೦೦ ರೂಪಾಯಿ ಆಗುತ್ತದೆ. ಸಿಂಗಾಪುರ-ಬೆಂಗಳೂರು ಪಯಣದ ವೆಚ್ಚ ೧೮,೦೦೦ ರೂಪಾಯಿಗಳಾಗುತ್ತವೆ ಎಂದು ಎಚ್.ಎಸ್. ಪುರಿ ನುಡಿದರು.

ಪಯಣದ ದರವು ವಿಶೇಷ ವಿಮಾನಗಳನ್ನು ಓಡಿಸುವ ವೆZಕ್ಕಿಂತ ಕಡಿಮೆಯಾಗಿದೆ. ವಿದೇಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಕರೆತರಲು ಹೋಗುವ ವಿಮಾನಗಳು ಭಾಗಶಃ ಅಥವಾ ಖಾಲಿಯಾಗಿ ಅಲ್ಲಿಗೆ ಹೋಗಲಿವೆ ಎಂದು ಸಚಿವರು ವಿವರಿಸಿದರು.

ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಅಥವಾ ಗ್ರೀನ್ ಕಾರ್ಡ್ ಹೊಂದಿರುವ ಕೆಲವರು ಭಾರತದಲ್ಲಿ ಇದ್ದಾರೆ. ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತಗೊಂಡದ್ದರಿಂದ ಅವರು ಇಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅಂತಹವರು ಕೂಡಾ ಅಲ್ಲಿಗೆ ವಿಮಾನಗಳ ಮೂಲಕ ತೆರಳಬಹುದು. ಅವರು ಹಣ ಪಾವತಿ ಮಾಡಿ ಅಲ್ಲಿಗೆ ತೆರಳಬಯಸುತ್ತಿದ್ದಾರೆ ಎಂದು ಸಚಿವ ಪುರಿ ನುಡಿದರು.

ಮೇ ೭ರಿಂದ ೧೩ರ ನಡುವಣ ಅವಧಿಯ ಮೊದಲ ಕಂತಿನಲ್ಲಿ ಏರ್ ಇಂಡಿಯಾದ ೬೪ ವಿಮಾನಗಳು ೧೨ ರಾಷ್ಟ್ರಗಳಿಂದ ೧೫,೦೦೦ ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆ ತರುವ ನಿರೀಕ್ಷೆ ಇದೆ.
ಈಗಾಗಲೇ
ವಿದೇಶಗಳಲ್ಲಿ ಇರುವ ಲಕ್ಷ ಭಾರತೀಯರು ದೇಶಕ್ಕೆ ವಾಪಸಾಗಲು ಹೆಸರು ನೋಂದಣಿ ಮಾಡಿದ್ದಾರೆ.  ಅಂತಿಮ ಸಂಖ್ಯೆ ನಮಗೆ ಗೊತ್ತಿಲ್ಲ. ಇದು ಲಕ್ಷಕ್ಕೆ ಏರಲೂ ಬಹುದು. ಮೊದಲ ವಾರದ ಅನುಭವದ ಆಧಾರದಲ್ಲಿ ಮುಂದಿನ ಹಾರಾಟಗಳನ್ನು ನಾವು ಯೋಜಿಸಲಿದ್ದೇವೆ ಎಂದು ಅವರು ಹೇಳಿದರು.

ಇದು ವಿಶೇಷ ಸಂದರ್ಭದಲ್ಲಿ ಯೋಜಿಸಲಾಗಿರುವ ವಾಣಿಜ್ಯ ಸೇವೆ. ಇದರ ಸಂಪೂರ್ಣ ಹೊರೆಯನ್ನು ಬೊಕ್ಕಸವು ಹೊರಲು ಸಾಧ್ಯವಿಲ್ಲ ಎಂದು ಅವರು ನುಡಿದರು.

No comments:

Advertisement